South Sudanese asylum seekers queue to receive fortified biscuits as part of WFP food assistance at the Matar refugee camp in Gambella region South Sudanese asylum seekers queue to receive fortified biscuits as part of WFP food assistance at the Matar refugee camp in Gambella region 

ಪೂರ್ಣ ಅಂತರ್ಯುದ್ಧದತ್ತ ಜಾರುವ ಅಪಾಯದಲ್ಲಿರುವ ದಕ್ಷಿಣ ಸುಡಾನ್

ದಕ್ಷಿಣ ಸುಡಾನಿನ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರು ಎಚ್ಚರಿಕೆ ನೀಡಿದ್ದು, ತಕ್ಷಣವೇ ಯುದ್ಧ ನಿಲ್ಲಿಸಲು ಮತ್ತು ಶಾಂತಿ ಒಪ್ಪಂದದತ್ತ ಹೊಸ ಬದ್ಧತೆಯನ್ನು ತೋರಿಸಲು ಕರೆ ನೀಡಿದ್ದಾರೆ.

ಲೇಖಕರು: ಲಿಂಡಾ ಬೋರ್ಡೋನಿ

ಸುಡಾನಿನಲ್ಲಿ ಅಂತರ್ಯುದ್ಧವು ಸಾವು, ನಾಶ ಮತ್ತು ಜನರ ಸ್ಥಳಾಂತರವನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ, ಅದರ ಪಕ್ಕದ ರಾಷ್ಟ್ರವಾದ ದಕ್ಷಿಣ ಸುಡಾನ್ ಕೂಡ ಮತ್ತೆ ಸಂಪೂರ್ಣ ಅಂತರ್ಯುದ್ಧದತ್ತ ಜಾರುವ ಅಪಾಯದಲ್ಲಿದೆ ಎಂದು ವೀಕ್ಷಕರು ಎಚ್ಚರಿಸಿದ್ದಾರೆ.

2011ರಲ್ಲಿ ಸುಡಾನಿನಿಂದ ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ವಿಶ್ವದ ಅತಿ ಕಿರಿಯ ರಾಷ್ಟ್ರವಾಗಿದೆ. ಆರಂಭದಿಂದಲೇ ಸ್ಥಿರತೆ ಕಂಡುಕೊಳ್ಳಲು ಅದು ಹೋರಾಟ ನಡೆಸಿತು. ವಿರೋಧ ಪಕ್ಷಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಡುವೆ ಅಧಿಕಾರದ ಸಂಘರ್ಷ ಉಂಟಾಗಿ, ಭೀಕರ ಯುದ್ಧಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.

ವಿಶ್ವ ಸಂಸ್ಥೆಯ ತನಿಖೆ

2018ರ “‘ಸಂಘರ್ಷ ಪರಿಹಾರದ ಕುರಿತು ನವೀಕರಿಸಿದ ಒಪ್ಪಂದ(R-ARCSS)’’” ಕ್ರಮೇಣ ದುರ್ಬಲವಾಗುತ್ತಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಪ್ರಕಟವಾದ ವಿಶ್ವ ಸಂಸ್ಥೆಯ ತನಿಖಾ ವರದಿ, ದೇಶದ ರಾಜಕೀಯ ಮತ್ತು ಸೈನಿಕ ನಾಯಕರು ದೇಶವನ್ನು ಸಂಪೂರ್ಣ ಯುದ್ಧದತ್ತ ಹಾಗೂ ಭಾರೀ ದೌರ್ಜನ್ಯಗಳತ್ತ ಒಯ್ಯುತ್ತಿದ್ದಾರೆ ಎಂದು ತಿಳಿಸಿದೆ.

ದಕ್ಷಿಣ ಸುಡಾನ್ “ಅಪಾಯಕರ ಹಂತ”ದಲ್ಲಿದ್ದು, ಹಿಂಸಾಚಾರ ಹೆಚ್ಚುತ್ತಿರುವ ಮತ್ತು ದುರ್ಬಲ ಶಾಂತಿ ಒಪ್ಪಂದದ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಮತ್ತೆ ಸಂಪೂರ್ಣ ಅಂತರ್ಯುದ್ಧಕ್ಕೆ ಜಾರುವ ಅಪಾಯವಿದೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ಶುಕ್ರವಾರ ಎಚ್ಚರಿಸಿದರು.

ಮರೆತುಹೋಗಿರುವ ಸಂಕಟ

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ವೋಲ್ಕರ್ ಟರ್ಕ್, ದಕ್ಷಿಣ ಸುಡಾನಿನ ಮಾನವ ಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಇದನ್ನು ವಿಶ್ವದ “ಮರೆತುಹೋಗಿರುವ ಸಂಕಟಗಳಲ್ಲಿ” ಒಂದೆಂದು ವಿವರಿಸಿದರು.

ಇತ್ತೀಚೆಗೆ ಪ್ರಕಟವಾದ ತನಿಖಾ ವರದಿಯ ನಂತರ ಅವರು ಈ ಎಚ್ಚರಿಕೆಯನ್ನು ನೀಡಿದರು. ಆ ವರದಿ ಪ್ರಕಾರ ದೇಶದ ರಾಜಕೀಯ ಮತ್ತು ಸೈನಿಕ ನಾಯಕರು 2018ರ ‘ಸಂಘರ್ಷ ಪರಿಹಾರದ ಕುರಿತು ನವೀಕರಿಸಿದ ಒಪ್ಪಂದವನ್ನು(R-ARCSS)’’ ಕ್ರಮಬದ್ಧವಾಗಿ ದುರ್ಬಲಗೊಳಿಸುತ್ತಿದ್ದಾರೆ, ಆಡಳಿತ ವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ ಮತ್ತು ನಾಗರಿಕರನ್ನು ಹೊಸ ಸಶಸ್ತ್ರ ಸಂಘರ್ಷಗಳ, ಭಾರೀ ದೌರ್ಜನ್ಯಗಳ ಹಾಗೂ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳ ಅಪಾಯಕ್ಕೆ ಒಳಪಡಿಸುತ್ತಿದ್ದಾರೆ.

ಸರ್ಕಾರಿ ಹಾಗೂ ವಿರೋಧಪಕ್ಷದ ಪಡೆಗಳು ಮತ್ತು ಮೈತ್ರಿ ಮಿಲಿಷಾಗಳು ಹಲವಾರು ರಾಜ್ಯಗಳಲ್ಲಿ ವಾಸಸ್ಥಾನ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ವ್ಯಾಪಕ ಮಟ್ಟದ ಸ್ಥಳಾಂತರಕ್ಕೆ ಕಾರಣವಾಗಿದೆ ಎಂದು ಟರ್ಕ್ ಹೇಳಿದರು. ಉತ್ತರ ಜೋಂಗ್ಲೈ ಪ್ರದೇಶದಲ್ಲೇ 2.8 ಲಕ್ಷಕ್ಕೂ ಹೆಚ್ಚು ಜನರು ಮನೆಬಿಟ್ಟು ಓಡಿಹೋಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ವಿವೇಚನೆಯಿಲ್ಲದ ದಾಳಿಗಳ ಏರಿಕೆ

ಜನವರಿ ತಿಂಗಳಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ನಾಗರಿಕರು ವಿವೇಚನೆಯಿಲ್ಲದ ದಾಳಿಗಳ ಬಲಿಯಾಗಿದ್ದಾರೆ. ವಾಯುಮಾರ್ಗದ ಬಾಂಬ್ ದಾಳಿ, ಉದ್ದೇಶಿತ ಹತ್ಯೆಗಳು, ಅಪಹರಣೆಗಳು ಮತ್ತು ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸಾಚಾರ ಹೆಚ್ಚಿರುವುದು ಗಮನಾರ್ಹವಾಗಿದೆ.

“ಮಾನವ ಹಕ್ಕುಗಳ ಮೇಲ್ವಿಚಾರಣೆ ಒಂದು ಎಚ್ಚರಿಕೆ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಸುಡಾನಿಗಾಗಿ ಆ ವ್ಯವಸ್ಥೆ ಈಗ ಕೆಂಪು ಎಚ್ಚರಿಕೆಯನ್ನು ನೀಡುತ್ತಿದೆ,” ಎಂದು ವೋಲ್ಕರ್ ಟರ್ಕ್ ಹೇಳಿದರು. ಅವರು ತಕ್ಷಣವೇ ಯುದ್ಧ ನಿಲ್ಲಿಸಲು ಮತ್ತು ಶಾಂತಿ ಒಪ್ಪಂದದತ್ತ ಹೊಸ ಬದ್ಧತೆಯನ್ನು ತೋರಿಸಲು ಕರೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಫೆಬ್ರವರಿ 2026, 00:20