ಹುಡುಕಿ

2019.01.29 Aborto, feto, embrione, vita, interruzione gravidanza

“ಗರ್ಭಪಾತವು ಎಂದಿಗೂ ನಿಜವಾದ ಆಯ್ಕೆಯಾಗುವುದಿಲ್ಲ.”

ನಮ್ಮ ಉಪ ಸಂಪಾದಕೀಯ ನಿರ್ದೇಶಕರಾದ ಮಾಸ್ಸಿಮಿಲಿಯಾನೊ ಮೆನಿಕೆಟ್ಟಿರವರು ಮಾನವ ಜೀವದ ಮೌಲ್ಯದ ಕುರಿತು ಚಿಂತನೆ ನಡೆಸುತ್ತಾ, ಕೊಲಂಬಿಯಾದಲ್ಲಿ ಅವಶೇಷಗಳಡಿ ಸಿಲುಕಿದ್ದ ತಾಯಿಯೊಬ್ಬರನ್ನು ರಕ್ಷಿಸಿದ ಘಟನೆಯನ್ನು ಬದಲಾಗುತ್ತಿರುವ ಗರ್ಭಪಾತ ಕಾನೂನುಗಳೊಂದಿಗೆ ಹೋಲಿಸಿ, ನಿಜವಾದ ಆಯ್ಕೆ ಎಂದರೆ ಏನು ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.

ವ್ಯಾಟಿಕನ್ ವರದಿ

ವೈರಲ್ ಆಗುವ ಕೆಲವು ಚಿತ್ರಗಳು ಮತ್ತು ಕಥೆಗಳು ಸತ್ಯ, ಸೌಂದರ್ಯ ಹಾಗೂ ಸಹಬಾಳ್ವೆಯ ಮಹತ್ವವನ್ನು ಎತ್ತಿಹಿಡಿದು, ಭರವಸೆಯನ್ನು ಮೂಡಿಸುತ್ತವೆ. ಅಂತಹದ್ದೇ ಒಂದು ದೃಶ್ಯ ಕೊಲಂಬಿಯಾದಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಕ್ಯಾಲಿ ನಗರದ ಸಿಯುದಾದ್ ಕಾಪ್ರಿ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪದಿಂದ ಐದು ಅಂತಸ್ತಿನ ಕಟ್ಟಡವೊಂದು ಕುಸಿದ ಬಳಿಕ, ಅವಶೇಷಗಳಡಿ ಸಿಲುಕಿದ್ದ ತಾಯಿಯೊಬ್ಬಳು ತನ್ನ ನವಜಾತ ಮಗನನ್ನು ತನ್ನದೇ ದೇಹದಿಂದ ರಕ್ಷಿಸುತ್ತಿರುವ ದೃಶ್ಯ ಅದರಲ್ಲಿ ಕಾಣಿಸುತ್ತದೆ. ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಪ್ರಸಾರಗಳಲ್ಲಿ ಹರಿದಾಡುತ್ತಿರುವ ಈ ಚಿತ್ರಗಳು ವಿನಾಶದ ಭೀಕರತೆಯನ್ನು, ರಕ್ಷಣಾ ಕಾರ್ಯಕರ್ತರು ಅವಶೇಷಗಳ ನಡುವೆ ಹುಡುಕಾಟ ನಡೆಸುತ್ತಾ ಸಮಯದೊಂದಿಗೆ ಪೈಪೋಟಿ ನಡೆಸುತ್ತಿರುವುದನ್ನು, ಹಾಗೂ ಕೊನೆಗೆ ಆ ತಾಯಿ ಮತ್ತು ಆ ಪುಟ್ಟ ಮಗುವನ್ನು ಜೀವಂತವಾಗಿ ಹೊರತೆಗೆದು, ಈಗ ಅಪಾಯದಿಂದ ಪಾರು ಮಾಡಿರುವುದನ್ನು ತೋರಿಸುತ್ತವೆ.

ಈ ಚಿತ್ರವು ತನ್ನ ಸಂಪೂರ್ಣ ಭಾವನಾತ್ಮಕ ತೀವ್ರತೆಯಲ್ಲಿ, ಸಹೋದರತ್ವ ಮತ್ತು ಪರಸ್ಪರ ಸಹಕಾರದ ಮನೋಭಾವ ಹೊಂದಿರುವ ಇಡೀ ಸಮಾಜವೊಂದನ್ನು ಪ್ರತಿಬಿಂಬಿಸುತ್ತದೆ. ಮತ್ತೊಬ್ಬರನ್ನು ರಕ್ಷಿಸಲು, ಕಾಳಜಿ ವಹಿಸಲು, ಅವರ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಮತ್ತು ಆ ಮೂಲಕ ತನ್ನನ್ನೇ ರಕ್ಷಿಸಿಕೊಳ್ಳಲು ಅದು ಸಿದ್ಧವಾಗಿದೆ. ಎಷ್ಟು ಸಂಪನ್ಮೂಲಗಳು ಬೇಕಾದರೂ ಪರವಾಗಿಲ್ಲ, ಗುರಿ ಒಂದೇ — ಒಂದೇ ಒಂದು ಜೀವವಾಗಿದ್ದರೂ ಅದನ್ನು ಉಳಿಸುವುದು.

ಇದರಿಂದ ಸುಮಾರು 4,300 ಕಿಲೋಮೀಟರ್ ದೂರದಲ್ಲಿರುವ ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ದೃಶ್ಯ ಸಂಪೂರ್ಣ ವಿಭಿನ್ನವಾಗಿದೆ: ಇಲ್ಲಿ ನಡೆಯುವುದು ಒಂದು ಕಾಯ್ದೆಗೆ ಸಹಿ ಹಾಕುವ ಸಮಾರಂಭ. ಈ ಸಂದರ್ಭದಲ್ಲಿ ಮಗುವಿನ ಜೀವ — ತಾಯಿಯ ಗರ್ಭದಲ್ಲಿರುವ ಮಗುವಿನ ಜೀವ — ಅದೇ ರೀತಿಯಲ್ಲಿ ಕಾಣುವುದಿಲ್ಲ; ಬೇರೆಯದೇ ಒಂದು ದೃಷ್ಟಿಕೋನ ಮೇಲುಗೈ ಸಾಧಿಸುತ್ತದೆ.

ಇಲ್ಲಿ "ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಲಭ್ಯತೆಗೆ ಆದ್ಯತೆ ನೀಡುವ ಕಾಯ್ದೆ" ಎಂಬ ಕಾಯ್ದೆಗೆ ಸಹಿ ಹಾಕಲಾಗಿದೆ. ಈ ಕಾನೂನು ಗರ್ಭಧಾರಣೆಯನ್ನು ಸ್ವಯಂಪ್ರೇರಿತವಾಗಿ ಅಂತ್ಯಗೊಳಿಸಲು ಇದ್ದ 24ನೇ ವಾರದ ಮಿತಿಯನ್ನು ತೆಗೆದುಹಾಕುತ್ತದೆ ಮತ್ತು ವೈದ್ಯರ ವೃತ್ತಿಪರ ನಿರ್ಣಯಕ್ಕೆ ಹೆಚ್ಚಿನ ವಿವೇಚನಾ ಅಧಿಕಾರವನ್ನು ನೀಡುತ್ತದೆ. ಈ ಕಾನೂನಿನಲ್ಲೇ “ಆರೈಕೆ” ಎಂಬ ಪದವಿದೆ. ಆದರೆ ಇಲ್ಲಿ ಆ ಪದವು ಮರಣಕ್ಕೆ ಸಮಾನಾರ್ಥಕವಾಗುತ್ತದೆ.

ಈಗ ಅಮೆರಿಕದಲ್ಲಿ ಗರ್ಭಪಾತಕ್ಕೆ ಸಾಮಾನ್ಯ ಮಿತಿಗಳನ್ನು ವಿಧಿಸದ ಹತ್ತು ರಾಜ್ಯಗಳಿವೆ. ಈ ಸಂದರ್ಭದಲ್ಲಿ ಗೆದ್ದದ್ದು ಜೀವವಾಗಿರಲಿಲ್ಲ.

ಜಗತ್ತಿನಾದ್ಯಂತ, ಹಂತ ಹಂತವಾಗಿ, ರಾಜಕೀಯ ಸರಿಯಾಗಿರುವಿಕೆಯ ಮೌನದಲ್ಲಾಗಲಿ ಅಥವಾ ಸೈದ್ಧಾಂತಿಕ ಸಂಘರ್ಷ ಮತ್ತು ವಿರೋಧದ ಗದ್ದಲದಲ್ಲಾಗಲಿ, ಮಾನವನ ವಿರುದ್ಧದ ಮರಣದ ಗಾಳಿಗಳು ಹರಡುತ್ತಿವೆ. ಉದಾಹರಣೆಗೆ, ಈ ಒಂದು ವರ್ಷದಲ್ಲೇ ಲಕ್ಸೆಂಬರ್ಗ್ ತನ್ನ ಸಂವಿಧಾನದಲ್ಲಿ ಗರ್ಭಪಾತಕ್ಕೆ ಮೊರೆಹೋಗುವ ಸ್ವಾತಂತ್ರ್ಯವನ್ನು ಸೇರಿಸಿದೆ. ತನ್ನ ಮೂಲಭೂತ ಸಂವಿಧಾನಿಕ ದಾಖಲೆಯಲ್ಲಿ ಗರ್ಭಪಾತದ ಕುರಿತು ಸ್ಪಷ್ಟ ಉಲ್ಲೇಖವನ್ನು ಸೇರಿಸಿದ ಫ್ರಾನ್ಸ್ ನಂತರದ ಎರಡನೇ ದೇಶ ಲಕ್ಸೆಂಬರ್ಗ್. ಹಾಗೆಯೇ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಿಯಮಾವಳಿಗಳ ವ್ಯಾಪ್ತಿಯ ಹೊರಗೆ ನಡೆಸಲಾಗುವ ಗರ್ಭಪಾತವನ್ನು ಅಪರಾಧವೆಂದು ಪರಿಗಣಿಸುವುದನ್ನು ರದ್ದುಗೊಳಿಸಲಾಗಿದೆ.

ಮಹಿಳೆಯ ಗರ್ಭದಲ್ಲಿರುವ ಮಗುವನ್ನು ಕೊಲ್ಲಲು ಅನುಮತಿಸುವ ಕಾನೂನುಗಳನ್ನು ಅಂಗೀಕರಿಸಿರುವ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ, ಆ ಹತ್ಯೆಯನ್ನು ತಡೆಯುವ ಉದ್ದೇಶದ ಕೆಲವು ವಿಧಿಗಳೂ ಇವೆ — ನೆರವು, ಆರೈಕೆ, ಸಾನ್ನಿಧ್ಯ ಮತ್ತು ಬೆಂಬಲದ ಮೂಲಕ. ಆದರೆ ವಾಸ್ತವದಲ್ಲಿ, ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ಅಥವಾ ಕನಿಷ್ಠ ಬಹುಪಾಲು ಸಂದರ್ಭಗಳಲ್ಲಿಯೂ ಈ ವಿಧಿಗಳು ಜಾರಿಗೆ ಬರುವುದಿಲ್ಲ. ಏಕೆಂದರೆ ಅವು ತುಂಬಾ ಹೆಚ್ಚಿನ ಹೊರೆ ಮತ್ತು ವೆಚ್ಚವನ್ನು ಬೇಡುತ್ತವೆ.

ಮಹಿಳೆಯ ಆಯ್ಕೆಯ ಬಗ್ಗೆ, ಆರೈಕೆಯ ಬಗ್ಗೆ ಮಾತನಾಡಲಾಗುತ್ತದೆ. ಆದರೆ ನಿಜವಾದ ಆಯ್ಕೆಯ ಅವಕಾಶವನ್ನು ಎಂದಿಗೂ ಒದಗಿಸಲಾಗುವುದಿಲ್ಲ. ಏಕೆಂದರೆ ಹೊರನೋಟಕ್ಕೆ ಸುಲಭವೆನಿಸುವ ದಾರಿಯನ್ನೇ ಮುಂದಿಡಲಾಗುತ್ತದೆ; ಆದರೆ ನಂತರ ಅದು ಸುಲಭವಾದ ದಾರಿಯಾಗಿರುವುದಿಲ್ಲ. ತಕ್ಷಣವೇ ಮಧ್ಯಪ್ರವೇಶಿಸಿ, “ಸಮಸ್ಯೆಯನ್ನು” ತೆಗೆದುಹಾಕಿ, ಕಣ್ಣುಮುಚ್ಚಿ, ಗರ್ಭಧಾರಣೆಯ ಕ್ಷಣದಿಂದಲೇ ವ್ಯಕ್ತಿಯೊಬ್ಬನನ್ನು ರೂಪಿಸುವ, ತಡೆಯಲಾಗದ ಜೀವ ಪ್ರಕ್ರಿಯೆ ಆರಂಭವಾಗುತ್ತದೆ ಎಂಬುದನ್ನು ತೋರಿಸುವ ಪ್ರತಿಯೊಂದು ವೈಜ್ಞಾನಿಕ ಸತ್ಯವನ್ನೂ ನಿರಾಕರಿಸುವಂತೆ ಹೇಳಲಾಗುತ್ತದೆ.

ಹತ್ಯೆ ಮಾಡಲಾಗುತ್ತದೆ — ಆದರೆ ಅದನ್ನು ಹಾಗೆಂದು ಎಂದಿಗೂ ಹೇಳಲಾಗುವುದಿಲ್ಲ.

ಇದಕ್ಕೆ ಬದಲಾಗಿ, ಮಹಿಳೆಗೆ ನಿಜವಾದ ಆಯ್ಕೆಯ ಅವಕಾಶ ನೀಡುವುದು ಎಂದರೆ ಮಾನಸಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ನೆರವಿನ ಮಾರ್ಗಗಳನ್ನು ಸಕ್ರಿಯಗೊಳಿಸುವುದು ಎಂದರ್ಥ. ಆದರೆ ಇದಕ್ಕೆ ಹಣ ಮತ್ತು ಸಂಪನ್ಮೂಲಗಳ ದೃಷ್ಟಿಯಿಂದ ಅನಂತವಾಗಿ ಹೆಚ್ಚಿನ ವೆಚ್ಚವಾಗುತ್ತದೆ. ಆದ್ದರಿಂದ ಮೌನವಾಗಿರುವುದೇ ಉತ್ತಮವೆಂದು ಪರಿಗಣಿಸಲಾಗುತ್ತದೆ.

ಒಂದು ರಾಜ್ಯವು ತನ್ನ ದೂರದೃಷ್ಟಿ ಮತ್ತು ವಿಶಾಲವಾದ ದೃಷ್ಟಿಕೋನವನ್ನು ತೋರಿಸುವುದು ತನ್ನ ನಾಗರಿಕರ ಬಗ್ಗೆ ಕಾಳಜಿ ವಹಿಸುವಾಗ, ಶಾಂತಿ, ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವಾಗ, ಜೀವವನ್ನು ರಕ್ಷಿಸುವಾಗ, ನಾಗರಿಕರು ಮತ್ತೊಬ್ಬರನ್ನು ಗುರುತಿಸಿ, ಅವರಿಗೆ ಸಹಾಯ ಮಾಡಿ, ಬೆಂಬಲ ನೀಡಿ, ಅವರೊಂದಿಗೆ ಹೆಜ್ಜೆ ಹಾಕಿ, ಅವರನ್ನು ಪ್ರೀತಿಸುವಂತಹ ಸಮಾಜವನ್ನು ನಿರ್ಮಿಸುವಾಗ,ವರ್ತಮಾನದಲ್ಲಿಯೇ ಭವಿಷ್ಯದ ಬೇರುಗಳನ್ನು ನೆಡುವಾಗ.

ಹೀಗಾಗಿ, ಗರ್ಭಪಾತವು ಯಾವುದು ಸರಿ ಮತ್ತು ಯಾವುದು ತಪ್ಪು, ಯಾವುದು ಜೀವಕ್ಕೆ ವಿರುದ್ಧ ಮತ್ತು ಯಾವುದು ಜೀವದ ಪರ ಎಂಬುದನ್ನು ದೃಢಪಡಿಸುವುದಾಗಲಿ ಅಥವಾ ವಿಕೃತಗೊಳಿಸುವುದಾಗಲಿ ಆಗುತ್ತದೆ.

ಸತ್ಯದ ವಿಕೃತಿ ಎಂದರೆ ದುಃಖ, ಸಂಕಷ್ಟ ಮತ್ತು ನೋವನ್ನು ಮರೆಮಾಚಲು ಬಯಸುವುದು; ಬದಲಾಗಿ, ಅತ್ಯಂತ ಸಂಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಹೊರಬರುವ ದಾರಿ ಕಾಣದವರನ್ನು ಅಪ್ಪಿಕೊಳ್ಳಲು ಬಯಸದಿರುವುದು.

ಇಲ್ಲಿಯೇ ಮಾನವೀಯತೆಯ ನಿಜವಾದ ಅಳತೆ ನಡೆಯುತ್ತದೆ: ಕೊಲ್ಲದ, ಬದಲಾಗಿ ಪ್ರೀತಿಸುವ ಮತ್ತು ಜವಾಬ್ದಾರಿ ಹೊರುವ ಮಾನವೀಯತೆ,ಒಂದು ಜೀವವನ್ನು ಉಳಿಸಲು ಅವಶೇಷಗಳ ನಡುವೆಯೂ ಸಾಗಲು ಸಿದ್ಧವಾಗಿರುವ, ಮತ್ತು ಆ ಜೀವವನ್ನು ಉಳಿಸಿದಾಗ ಹೃದಯಪೂರ್ವಕವಾಗಿ ಸಂತೋಷಪಡುವ ಮಾನವೀಯತೆ.

13 ಆಗಸ್ಟ್ 2026, 21:15