ಜಗದ್ಗುರು XIVನೇ ಲಿಯೋರವರು: "ಹಿರಿಯರು ಜೀವನದ ಅಮೂಲ್ಯ ಪಾಠಗಳನ್ನು ಕಲಿಸುವ ಶಿಕ್ಷಕರು".
ವ್ಯಾಟಿಕನ್ ವರದಿ
"ಹಾದುಹೋಗುವ ವರ್ಷಗಳು ವಿಧಿಸುವ ಮಿತಿಗಳನ್ನು ಮರೆಮಾಚದೆ ಅಥವಾ ಅವುಗಳ ಬಗ್ಗೆ ನಾಚಿಕೆಪಡದೆ, ಶಾಂತ ಮನಸ್ಸಿನಿಂದ ಸ್ವೀಕರಿಸುವ ಹಿರಿಯರು ಜೀವನದ ಶಿಕ್ಷಕರಾಗಬಹುದು. ಜೀವನದ ಮೌಲ್ಯವು ಕಾರ್ಯಕ್ಷಮತೆ ಅಥವಾ ಸ್ವಾವಲಂಬನೆಯಿಂದ ಅಳೆಯಲ್ಪಡುವುದಿಲ್ಲ, ಬದಲಾಗಿ ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ, ಕೊಡುವ ಮತ್ತು ಸ್ವೀಕರಿಸುವ ಸಾಮರ್ಥ್ಯದಿಂದ ಅಳೆಯಲ್ಪಡುತ್ತದೆ ಎಂಬುದನ್ನು ಅವರು ಎಲ್ಲರಿಗೂ—ವಿಶೇಷವಾಗಿ ಯುವಜನರಿಗೆ—ತೋರಿಸಬಲ್ಲರು."
ಹಿರಿಯರ ಪಾಸ್ತೋರಲ್ ಆರೈಕೆಯ ಕುರಿತು ನಡೆದ ಸಭೆಯ ಸಂದರ್ಭದಲ್ಲಿ, ಸಾಮಾನ್ಯ ಕ್ರೈಸ್ತರು, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಫ್ಯಾರೆಲ್ ರವರಿಗೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರ ಮೂಲಕ ಕಳುಹಿಸಲಾದ ಪತ್ರದಲ್ಲಿ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ವ್ಯಕ್ತಪಡಿಸಿದರು.
"ಶಕ್ತಿಯ ಯುಗದಲ್ಲಿ ದುರ್ಬಲತೆಯ ಬೋಧನಾ ಅಧಿಕಾರ: ಸ್ವರ್ಗದತ್ತ ಒಂದು ಸೇತುವೆ" ಎಂಬುದು ಈ ಸಭೆಯ ಧ್ಯೇಯವಾಗಿತ್ತು.
ಇಂದಿನ ಸಮಾಜದಲ್ಲಿ ವೃದ್ಧಾಪ್ಯವು ಜೀವನದ ಸಂಕೀರ್ಣವಾದ ಹಂತವಾಗಿದ್ದರೂ, ಅದು ಅನೇಕ ಸಾಧ್ಯತೆಗಳಿಂದ ಸಮೃದ್ಧವಾಗಿದೆ ಎಂದು ಜಗದ್ಗುರುಗಳು ಹೇಳಿದರು. ಹಿರಿಯರಲ್ಲಿ ಮಹತ್ವದ ಉಪಸ್ಥಿತಿಯನ್ನು ಸದಾ ಗುರುತಿಸಿಕೊಂಡಿರುವ ಧರ್ಮ ಸಭೆಗೆ ಇಂತಹ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಹಿರಿಯರು ಸಮಾಜಕ್ಕೆ ಇನ್ನೂ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ
"ಇಂದು ಜಗತ್ತಿನ ಅನೇಕ ಭಾಗಗಳಲ್ಲಿ ಹಿರಿಯರು ಇನ್ನೂ ಸಮುದಾಯದ ಸೇವೆಗೆ ತಮ್ಮ ಅಪಾರ ಶಕ್ತಿ ಮತ್ತು ಸಾಮರ್ಥ್ಯವನ್ನು ಅರ್ಪಿಸುತ್ತಿದ್ದಾರೆ" ಎಂದು ಜಗದ್ಗುರುಗಳು ನೆನಪಿಸಿದರು.
ಧರ್ಮ ಸಭೆಯ ಜೀವನದ ಅನೇಕ ಕ್ಷೇತ್ರಗಳಲ್ಲಿ ಅತ್ಯಗತ್ಯವಾಗಿರುವ ವಿವಿಧ ಸ್ವಯಂಸೇವಾ ಕಾರ್ಯಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು.
ಆದರೆ ಇದರಾಚೆಗೆ, ವೃದ್ಧಾಪ್ಯವು ಕ್ರೈಸ್ತ ಜೀವನದ ಇನ್ನೂ ಆಳವಾದ ಮತ್ತು ಮಹತ್ವದ ಅಂಶವಾದ ದುರ್ಬಲತೆಯ ಮೌಲ್ಯವನ್ನು ನಮ್ಮ ಗಮನಕ್ಕೆ ತರುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಸರಾಸರಿ ಆಯುಷ್ಯ ಹೆಚ್ಚುತ್ತಿರುವುದರಿಂದ ವೃದ್ಧಾಪ್ಯದ ದುರ್ಬಲ ಅವಧಿಯೂ ದೀರ್ಘವಾಗುತ್ತಿದೆ. ಇದು ಜೀವನದ ಈ ಹಂತದ ಅರ್ಥದ ಬಗ್ಗೆ ಗಂಭೀರವಾಗಿ ಚಿಂತಿಸುವ ಸವಾಲನ್ನು ನಮ್ಮ ಮುಂದೆ ಇಡುತ್ತದೆ ಎಂದು ಅವರು ಸೂಚಿಸಿದರು.
ಪ್ರಾರ್ಥನೆ, ಸೇವೆ ಮತ್ತು ಮೃದುತ್ವದಲ್ಲಿ ಬದುಕಬೇಕಾದ ಕೃಪೆಯ ಕಾಲ
ಜಗದ್ಗುರುಗಳು ಪ್ರಶ್ನಿಸಿದರು:
"ದೈಹಿಕ ಅಥವಾ ಮಾನಸಿಕ ದುರ್ಬಲತೆಯ ಸ್ಥಿತಿಯಲ್ಲಿ ಒಬ್ಬ ಪುರುಷ ಅಥವಾ ಮಹಿಳೆ ಬದುಕುವ ದೀರ್ಘ ವರ್ಷಗಳಿಗೆ ಯಾವ ಮೌಲ್ಯವನ್ನು ನೀಡಬೇಕು? ಈ ಸಮಯವನ್ನು ಬದುಕಲು ಕ್ರೈಸ್ತ ದೃಷ್ಟಿಕೋನವೇನು? ಮಾನವ ಜೀವನವು ಪ್ರತಿಯೊಂದು ಹಂತದಲ್ಲಿಯೂ ತನ್ನ ‘ಅನಂತ ಘನತೆ’ಯನ್ನು ಉಳಿಸಿಕೊಂಡಿರುತ್ತದೆ ಎಂಬುದನ್ನು ನಾವು ಹೇಗೆ ಘೋಷಿಸಬಹುದು?"
ಈ ಸಭೆಯಲ್ಲಿ ನಡೆಯುತ್ತಿರುವ ಚಿಂತನೆಗಳು ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಸಹಾಯ ಮಾಡಬಹುದು ಎಂದು ಅವರು ಹೇಳಿದರು.
ದುರ್ಬಲತೆಯು ಆಧ್ಯಾತ್ಮಿಕ ಮತ್ತು ಸಮುದಾಯದ ಮೌಲ್ಯವನ್ನು ಹೊಂದಿದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಅದು ನಾವು ಪರಸ್ಪರ ಅವಲಂಬಿತರಾಗಿದ್ದೇವೆ ಮತ್ತು ದೇವರ ಅಗತ್ಯವಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿ, ದುರ್ಬಲತೆಯನ್ನು ಅವರು "ಬೋಧನಾ ಅಧಿಕಾರ" ಎಂದು ವರ್ಣಿಸಿದರು ಇದು ಇಂದಿನ ಮಾನವಕುಲಕ್ಕೆ ಅನೇಕ ಪಾಠಗಳನ್ನು ಕಲಿಸಬಲ್ಲದು.
ವೃದ್ಧಾಪ್ಯವು ಒಂದು ಆಶೀರ್ವಾದ
ವೃದ್ಧಾಪ್ಯವು ಪ್ರಾರ್ಥನೆ, ಸೇವೆ, ಮೃದುತ್ವ ಮತ್ತು ಸಂರಕ್ಷಿಸಲ್ಪಟ್ಟ ಹಾಗೂ ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸಲ್ಪಡುವ ನೆನಪುಗಳೊಂದಿಗೆ ಬದುಕಬೇಕಾದ ಕೃಪೆಯ ಸಮಯ ಎಂದು ಜಗದ್ಗುರು ಲಿಯೋರವರು ಹೇಳಿದರು. ಇದು ಭವಿಷ್ಯದ ಪೀಳಿಗೆಗಳಿಗೆ ಒಂದು ಆಶೀರ್ವಾದವಾಗಿದೆ.
ನಾವು ಬದುಕುತ್ತಿರುವ ಸಮಾಜವು ಸಾಧನೆ ಮತ್ತು ಸ್ಪರ್ಧೆಯ ತರ್ಕದಿಂದ ಆಳಲ್ಪಟ್ಟಿದೆ. ಶಕ್ತಿಯನ್ನು ಅಧಿಕಾರದ ಪ್ರದರ್ಶನವಾಗಿ ಕಾಣಲಾಗುತ್ತದೆ ಮತ್ತು ಅದು ಅನೇಕ ಬಾರಿ ಪ್ರಾಬಲ್ಯಕ್ಕೆ ತಿರುಗುತ್ತದೆ. ಆದರೆ ಧರ್ಮ ಸಭೆ ಮಾತ್ರ ಸೌಮ್ಯತೆ, ವಿನಯ ಮತ್ತು ಶಾಂತಿಯ ಸುವಾರ್ತಾ ಸಂದೇಶವನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಅವರು ಹೇಳಿದರು.
ಅನುಭವ ಮತ್ತು ಜ್ಞಾನದ ಸಾಕ್ಷಿಗಳು
"ನಮ್ಮ ಸಮುದಾಯಗಳ ಹಿರಿಯ ಸದಸ್ಯರು ತಮ್ಮ ಜೀವನಾನುಭವ ಮತ್ತು ಜ್ಞಾನದ ಮೂಲಕ ಮಾನವತೆಯ ಈ ಕ್ರೈಸ್ತ ದೃಷ್ಟಿಕೋನದ ಮೊದಲ ಮತ್ತು ಅತ್ಯಂತ ಅಧಿಕೃತ ಸಾಕ್ಷಿಗಳಾಗಿದ್ದಾರೆ" ಎಂದು ಜಗದ್ಗುರುಗಳು ಹೇಳಿದರು.
ಹಿರಿಯರ ಬಗ್ಗೆ ಮತ್ತು ವೃದ್ಧಾಪ್ಯದ ಆಶೀರ್ವಾದದ ಸಮಯದ ಬಗ್ಗೆ ಹೊಸ ಮನೋಭಾವಗಳನ್ನು ಬೆಳೆಸಲು ಈ ಸಭೆಯ ಕಾರ್ಯಗಳು ಸಹಾಯ ಮಾಡಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಜೊತೆಗೆ, ವಯೋವೃದ್ಧರಲ್ಲಿ ಭವಿಷ್ಯದ ಪೀಳಿಗೆಗಳಿಗೆ ಆರೋಗ್ಯಕರ ಮತ್ತು ದೃಢವಾದ ಮೌಲ್ಯಗಳನ್ನು ಹಸ್ತಾಂತರಿಸುವ ಜವಾಬ್ದಾರಿಯ ಅರಿವನ್ನು ಜಾಗೃತಗೊಳಿಸಲಿ ಎಂದು ಅವರು ಆಶಿಸಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಕನ್ಯಾ ಮರಿಯಮ್ಮನ ತಾಯಿಯ ಮಧ್ಯಸ್ಥಿಕೆಯನ್ನು ಬೇಡಿ ಪ್ರಾರ್ಥಿಸಿದರು ಮತ್ತು ಎಲ್ಲರ ಮೇಲೂ ತಮ್ಮ ಪ್ರೇಷಿತರ ಆಶೀರ್ವಾದವನ್ನು ಹೃತ್ಪೂರ್ವಕವಾಗಿ ನೀಡಿದರು.