ಹುಡುಕಿ

ಮಾರ್ಚ್ 26ರಂದು ಇಸ್ರೇಲ್ ಗಡಿಯ ಸಮೀಪದ ದಕ್ಷಿಣ ಲೆಬನಾನ್‌ನಲ್ಲಿ ಧ್ವಂಸಗೊಂಡ ಕಟ್ಟಡಗಳ ಪಕ್ಕದಲ್ಲಿ ಇಸ್ರೇಲಿನ ಸೇನಾ ವಾಹನಗಳು ಸಾಗುತ್ತಿವೆ. ಮಾರ್ಚ್ 26ರಂದು ಇಸ್ರೇಲ್ ಗಡಿಯ ಸಮೀಪದ ದಕ್ಷಿಣ ಲೆಬನಾನ್‌ನಲ್ಲಿ ಧ್ವಂಸಗೊಂಡ ಕಟ್ಟಡಗಳ ಪಕ್ಕದಲ್ಲಿ ಇಸ್ರೇಲಿನ ಸೇನಾ ವಾಹನಗಳು ಸಾಗುತ್ತಿವೆ.  (ANSA)

ಜಗದ್ಗುರುಗಳ ಅಧಿಕಾರ ಸ್ಥಳವು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಕರೆ ನೀಡುತ್ತದೆ

ಜೆನೀವಾದಲ್ಲಿರುವ ಐಕ್ಯರಾಷ್ಟ್ರ ಸಂಘವನ್ನು ಉದ್ದೇಶಿಸಿ ಮಾತನಾಡಿದ ಆರ್ಚ್‌ಬಿಷಪ್ ಬಾಲೆಸ್ಟ್ರೆರೊ, ನಾಗರಿಕರು ಮತ್ತು ಶರಣಾರ್ಥಿಗಳ ಮೇಲೆ ಬೀರುವ ಪರಿಣಾಮವನ್ನು ಒತ್ತಿಹೇಳುತ್ತಾ, ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಕರೆ ನೀಡಿದರು.

ವ್ಯಾಟಿಕನ್ ವರದಿ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಜಗದ್ಗುರುಗಳ ಅಧಿಕಾರ ಸ್ಥಳವು ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದೆ. ಇದರ ಪರಿಣಾಮವಾಗಿ ಉಂಟಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವೀಯ ಸಂಕಟಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮಾರ್ಚ್ 26ರಂದು ಜೆನೀವಾದಲ್ಲಿರುವ ಐಕ್ಯರಾಷ್ಟ್ರ ಸಂಸ್ಥೆಯಲ್ಲಿ ನಡೆದ ವಿವಿಧ ಹಸ್ತಕ್ಷೇಪಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು.

ಮಾನವ ಹಕ್ಕುಗಳ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳವು ಪ್ರೇಷಿತರ ರಾಯಭಾರಿ  ಹಾಗೂ ಶಾಶ್ವತ ವೀಕ್ಷಕರಾದ ಆರ್ಚ್‌ಬಿಷಪ್ ಎತ್ತೊರೆ ಬಾಲೆಸ್ಟ್ರೆರೊ, ಈ ಗಂಭೀರ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದುಃಖಕರ ಘಟನೆಗಳು ಬಗ್ಗೆ ಉಲ್ಲೇಖಿಸಿದರು. ಅವರು ನಿರಪರಾಧಿ ಬಲಿಯಾಗಿರುವ ಅನೇಕ ಜನರಿಗಾಗಿ, ವಿಶೇಷವಾಗಿ ಮಕ್ಕಳಿಗಾಗಿ ಮತ್ತು ತಮ್ಮ ಮನೆಗಳಿಂದ ವಲಸೆ ಹೋಗಬೇಕಾದ ಕುಟುಂಬಗಳಿಗಾಗಿ ಆಳವಾದ ದುಃಖವನ್ನು ವ್ಯಕ್ತಪಡಿಸಿದರು.

ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಗಂಭೀರತೆಯನ್ನು ಅವರು ಒತ್ತಿಹೇಳಿದರು. ಆಸ್ಪತ್ರೆಗಳು, ಶಾಲೆಗಳು ಮತ್ತು ವಾಸಸ್ಥಾನ ಪ್ರದೇಶಗಳು ಗುರಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಎಂದು ಹೇಳಿದರು. ಕೆಲವು ದಾಳಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ನಡೆಸಲ್ಪಡುತ್ತಿವೆ ಎಂಬ ವರದಿಗಳೂ ಬಂದಿವೆ ಎಂದು ಅವರು ಸೂಚಿಸಿದರು.

ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿದ ಆರ್ಚ್‌ಬಿಷಪ್, ಈ ಹಿಂಸಾಚಾರದಿಂದ ಉಂಟಾಗುತ್ತಿರುವ ನೋವನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ ಎಂದು ಹೇಳಿದರು ಈ ಸಂಘರ್ಷಗಳ ಬಲಿಯಾಗಿರುವ ಅಸಹಾಯಕರ ನೋವಿನ ಮುಂದೆ ನಾವು ಮೌನವಾಗಿರಲು ಸಾಧ್ಯವಿಲ್ಲ. ಅವರಿಗೆ ಆಗುವ ನೋವು ಸಂಪೂರ್ಣ ಮಾನವಕುಲಕ್ಕೂ ನೋವಾಗುತ್ತದೆ. ಅವರು ಮತ್ತೆ ಒತ್ತಿಹೇಳಿದ್ದು, ಶಾಂತಿ ಮತ್ತು ಸ್ಥಿರತೆ ಶಸ್ತ್ರಾಸ್ತ್ರಗಳು ಅಥವಾ ಪ್ರತೀಕಾರದ ಮೂಲಕ ಸಾಧ್ಯವಿಲ್ಲ ಅವು ಕೇವಲ ಮರಣ ಮತ್ತು ನಾಶವನ್ನು ಉಂಟುಮಾಡುತ್ತವೆ. ಬದಲಾಗಿ, ರಾಜತಾಂತ್ರಿಕತೆ ಮತ್ತು ಸಂವಾದದ ಮೂಲಕ, ಹಾಗೂ ಅಂತರರಾಷ್ಟ್ರೀಯ ಕಾನೂನು ಪಾಲನೆಯ ಮೂಲಕ ಶಾಂತಿಯನ್ನು ಸಾಧಿಸಬೇಕು ಎಂದು ಕರೆ ನೀಡಿದರು. ಹಿಂಸಾಚಾರದ ಈ ಚಕ್ರವನ್ನು ತಕ್ಷಣ ನಿಲ್ಲಿಸಲು ಎಲ್ಲಾ ಪಕ್ಷಗಳು ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಅದೇ ದಿನದ ಮೊದಲಿನ ಸಭೆಯಲ್ಲಿ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಕಾರ್ಯಾಚರಣೆಗಳ ಕುರಿತು ನಡೆದ ಯುಎನ್‌ಎಚ್‌ಸಿಆರ್‌ನ 95ನೇ ಸಭೆಯಲ್ಲಿ ಮಾತನಾಡಿದ ಆರ್ಚ್‌ಬಿಷಪ್ ಬಾಲೆಸ್ಟ್ರೆರೊ, ಶರಣಾರ್ಥಿಗಳ ಸಂಕಷ್ಟದ ಬಗ್ಗೆ ಗಮನ ಸೆಳೆದರು. ಮಾನವೀಯ ಅಗತ್ಯಗಳು ಹೆಚ್ಚುತ್ತಿರುವಾಗ ಸಹಾಯಕ್ಕಾಗಿ ಲಭ್ಯವಿರುವ ಸಂಪನ್ಮೂಲಗಳು ಕಡಿಮೆಯಾಗುತ್ತಿರುವುದನ್ನು ಅವರು ಸೂಚಿಸಿದರು. ಯುದ್ಧ ಮತ್ತು ಶಸ್ತ್ರಾಸ್ತ್ರಗಳಿಗೆ ಮೀಸಲಾದ ಸಂಪನ್ಮೂಲಗಳು ಮತ್ತು ಮಾನವ ಸೇವೆಗೆ ಮೀಸಲಾಗಿರುವ ಸಂಪನ್ಮೂಲಗಳ ನಡುವಿನ ಅಸಮಾನತೆಯನ್ನು ಅವರು ಖಂಡಿಸಿದರು.

ಶರಣಾರ್ಥಿಗಳು ಕೇವಲ ಅಂಕಿಅಂಶಗಳಲ್ಲ ಅವರು ಹೆಸರು, ಮುಖ ಮತ್ತು ಕಥೆ ಹೊಂದಿರುವ ವ್ಯಕ್ತಿಗಳು ಎಂದು ಅವರು ಹೇಳಿದರು. ಅನೇಕ ಮಕ್ಕಳು ಸ್ಥಿರ ಕುಟುಂಬ ವಾತಾವರಣ, ಶಿಕ್ಷಣ ಮತ್ತು ಆಟದ ಸರಳ ಸಂತೋಷಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅವರು ವಿಷಾದಿಸಿದರು.

ಜಗದ್ಗುರುಗಳ ಅಧಿಕಾರ ಸ್ಥಳವು ಅಂತರರಾಷ್ಟ್ರೀಯ ಸಮುದಾಯವನ್ನು ಹೆಚ್ಚಿನ ಐಕ್ಯತೆಯನ್ನು ತೋರಿಸಲು ಕರೆ ನೀಡಿತು, ವಿಶೇಷವಾಗಿ ಹೆಚ್ಚಿನ ಶರಣಾರ್ಥಿಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಆಶ್ರಯ ನೀಡುತ್ತಿರುವ ಹಿನ್ನೆಲೆಯಲ್ಲಿಯೇ. ಸ್ಥಿರ ಹಣಕಾಸು ನೆರವು ಮತ್ತು ಪುನರ್ವಸತಿ ಅವಕಾಶಗಳನ್ನು ಹೆಚ್ಚಿಸಲು ಅವರು ಮನವಿ ಮಾಡಿದರು. ಯುದ್ಧ ಮತ್ತು ಹಿಂಸಾಚಾರ ಅನಿವಾರ್ಯವಲ್ಲ ಅವು ತಪ್ಪು ನೀತಿಗಳು ಮತ್ತು ನಿರ್ಧಾರಗಳಿಂದ ಉಂಟಾಗುತ್ತವೆ ಎಂದು ಅವರು ಹೇಳಿದರು. ದ್ವೇಷ ಮತ್ತು ಪ್ರತೀಕಾರದ ಭಾಷೆಯನ್ನು ನಿಲ್ಲಿಸಿ, ಪ್ರಾಮಾಣಿಕ ಸಂವಾದವನ್ನು ಪುನಃ ಆರಂಭಿಸಬೇಕು ಎಂದು ಅವರು ಕರೆ ನೀಡಿದರು.

ಯುರೋಪಿನ ಕುರಿತು ಮಾತನಾಡಿದಾಗ, ಉಕ್ರೇನ್ ಯುದ್ಧ ಆರಂಭವಾದ ನಾಲ್ಕು ವರ್ಷಗಳಾದರೂ ಅದರ ಮಾನವೀಯ ಪರಿಣಾಮಗಳು ಇನ್ನೂ ಗಂಭೀರವಾಗಿವೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ತಿಳಿಸಿದೆ. ತಕ್ಷಣವೇ ಯುದ್ಧ ವಿರಾಮ ಘೋಷಿಸಿ ಶಾಂತಿಯನ್ನು ಸ್ಥಾಪಿಸಬೇಕು ಎಂದು ಪುನರುಚ್ಚರಿಸಿ, ಶರಣಾರ್ಥಿಗಳಿಗೆ ಆಶ್ರಯ ಮತ್ತು ತಾತ್ಕಾಲಿಕ ರಕ್ಷಣೆಯನ್ನು ನೀಡುತ್ತಿರುವ ರಾಷ್ಟ್ರಗಳ ಪ್ರಯತ್ನಗಳನ್ನು ಸ್ವಾಗತಿಸಿದೆ.

26 ಮಾರ್ಚ್ 2026, 09:58