ಹುಡುಕಿ

ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪ್ಯಾರೊಲಿನ್ ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪ್ಯಾರೊಲಿನ್  (ANSA)

ಕಾರ್ಡಿನಲ್ ಪ್ಯಾರೊಲಿನ್: ಪಾಸ್ಖ ಕಾಲವು ಯುದ್ಧದ ಮೂರ್ಖತನವನ್ನು ಅಂತ್ಯಗೊಳಿಸುವ ಕಾಲವಾಗಿದೆ

ವ್ಯಾಟಿಕನ್ ಪ್ರೇಷಿತರ ಗ್ರಂಥಾಲಯದಲ್ಲಿ ನಡೆದ ಅಧ್ಯಯನ ದಿನದ ಪಾರ್ಶ್ವದಲ್ಲಿ, ಕಾರ್ಡಿನಲ್ ಪಿಯೆತ್ರೊ ಪ್ಯಾರೊಲಿನ್ ರವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಪವಿತ್ರ ಭೂಮಿಯಲ್ಲಿ ಕನಿಷ್ಠ ಪವಿತ್ರ ವಾರದ ಆಚರಣೆಗಳನ್ನು ಪವಿತ್ರ ಸ್ಥಳಗಳ ಒಳಗೆ ಆದರೂ ಆಚರಿಸಲು ಸಾಧ್ಯವಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಯುದ್ಧವೆಂಬ ಈ ಮೂರ್ಖತನಕ್ಕೆ ಅಂತ್ಯ ಬರಲಿ ಎಂದು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪ್ಯಾರೊಲಿನ್ ಪತ್ರಕರ್ತರಿಗೆ ಮನವಿ ಮಾಡಿದರು. ಮಾರ್ಚ್ 26ರಂದು ವ್ಯಾಟಿಕನ್ ಪ್ರೇಷಿತರ ಗ್ರಂಥಾಲಯದಲ್ಲಿ ನಡೆದ ಇಟಾಲಿಯನ್ ನಾಯಕ ಅಲ್ಚಿದೆ ಡೆ ಗ್ಯಾಸ್ಪೇರಿ ರವರಿಗೆ ಸಮರ್ಪಿತವಾದ ಅಧ್ಯಯನ ದಿನದ ಪಾರ್ಶ್ವದಲ್ಲಿ ಅವರು ಈ ಮಾತುಗಳನ್ನು ಹೇಳಿದರು. ಪವಿತ್ರ ಭೂಮಿಯಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿಯೇ ಈ ವರ್ಷದ ಪವಿತ್ರ ವಾರವು ಅನೇಕ ನಿರ್ಬಂಧಗಳೊಂದಿಗೆ ನಡೆಯಲಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಆದರೂ ಕನಿಷ್ಠ ಪವಿತ್ರ ಸ್ಥಳಗಳ ಒಳಗೆ, ವಿಶೇಷವಾಗಿ ಹೋಲಿ ಸೆಪಲ್ಕರ್ ದೇವಾಲಯದಲ್ಲಿ, ಧಾರ್ಮಿಕ ಆಚರಣೆಗಳು ನಡೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಪುನರುತ್ಥಾನ ಹಬ್ಬದತ್ತ ಗಮನ ಹರಿಸಿ, ಕಾರ್ಡಿನಲ್ ಪ್ಯಾರೊಲಿನ್ ರವರು ಶಾಂತಿಯ ಸಂದೇಶವನ್ನು ಮತ್ತೊಮ್ಮೆ ಒತ್ತಿಹೇಳಿದರು. “ಪಾಸ್ಖ ಹಬ್ಬ ಎಂದರೆ ಪುನರುತ್ಥಾನಗೊಂಡ ಪ್ರಭುವಿನ ಶಾಂತಿಯ ಹಬ್ಬ,” ಎಂದು ಅವರು ಹೇಳಿ, ಯುದ್ಧದ ಈ ಮೂರ್ಖತನವನ್ನು ಅಂತ್ಯಗೊಳಿಸಲು ಇದು ವಿಶೇಷ ಸಂದರ್ಭ ಎಂದು ಹೇಳಿದರು. ವಿಶ್ವದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಈ ಹಬ್ಬವು ಪ್ರೇರಣೆಯಾಗಬೇಕು ಎಂದು ಅವರು ಮನವಿ ಮಾಡಿದರು.

ಇಟಲಿಯ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಕಾರ್ಡಿನಲ್ ರವರು, ನ್ಯಾಯಾಂಗ ಸಂಬಂಧಿತ ಜನಮತ ಚಲಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿರುವುದು ಗಮನಾರ್ಹ ಸಂಗತಿ ಎಂದು ಅವರು ಹೇಳಿದರು. ವಿಭಿನ್ನ ಅಭಿಪ್ರಾಯಗಳು ಇದ್ದರೂ, ಈ ಪರಿಸ್ಥಿತಿಯನ್ನು ಎಲ್ಲರೂ ತಮ್ಮ ತಮ್ಮ ದೃಷ್ಟಿಕೋನದಿಂದ ಸಮರ್ಥವಾಗಿ ಉಪಯೋಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇಟಲಿಯ ರಾಜಕೀಯ ವಲಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಕುರಿತು ಅವರು ಚಿಂತೆ ವ್ಯಕ್ತಪಡಿಸಿ, ಇದು ಸಮಾಜ ಮತ್ತು ದೇಶದ ಹಿತಕ್ಕೆ ಸಹಕಾರಿಯಾಗುವುದಿಲ್ಲ ಎಂದು ಹೇಳಿದರು. ಬದಲಾಗಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಸಾಮಾನ್ಯ ಹಿತಕ್ಕಾಗಿ ಸಹಕಾರವನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲೂ ಸಂಕೀರ್ಣ ಮತ್ತು ನೋವುತುಂಬಿದ ಸಂದರ್ಭವಿರುವುದರಿಂದ, ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯನ್ನು ನಿರ್ಮಿಸಲು ಈ ಸಮಯವನ್ನು ಉಪಯೋಗಿಸಬೇಕು ಎಂದು ಹೇಳಿದರು.

ಯುವಜನತೆ ಕುರಿತು ಮಾತನಾಡಿದ ಕಾರ್ಡಿನಲ್, ಬೆರ್ಗಾಮೊದಲ್ಲಿ 13 ವರ್ಷದ ವಿದ್ಯಾರ್ಥಿಯೊಬ್ಬ ಶಿಕ್ಷಕನ ಮೇಲೆ ದಾಳಿ ನಡೆಸಿದ ಘಟನೆಯನ್ನು ಉಲ್ಲೇಖಿಸಿದರು. ಇಂತಹ ಘಟನೆಗಳನ್ನು ತಡೆಯಲು ಕಾನೂನು ಕ್ರಮಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವೂ ಅಗತ್ಯವೆಂದು ಅವರು ಹೇಳಿದರು. ನಮ್ಮ ಯುವಕರು ಯಾವ ಮೌಲ್ಯಗಳಿಂದ ಪ್ರೇರಿತರಾಗಿದ್ದಾರೆ ಮತ್ತು ನಾವು ಅವರಿಗೆ ಯಾವ ಮೌಲ್ಯಗಳನ್ನು ನೀಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.

ಅಂತಿಮವಾಗಿ, ಪೂಜಾವಿಧಿ ಕುರಿತು ಮಾತನಾಡಿದ ಕಾರ್ಡಿನಲ್ ರವರು, ಅದು ಭಿನ್ನಾಭಿಪ್ರಾಯ ಮತ್ತು ಸಂಘರ್ಷದ ಕಾರಣವಾಗಬಾರದು ಎಂದು ಒತ್ತಿಹೇಳಿದರು. ಎಲ್ಲರಿಗೂ ಸ್ವೀಕಾರಾರ್ಹವಾಗುವ ಮಾರ್ಗವನ್ನು ಕಂಡುಹಿಡಿಯಬೇಕು ಮತ್ತು ಧಾರ್ಮಿಕ ಆಚರಣೆಗಳನ್ನು ವಿವಾದದ ಕ್ಷೇತ್ರವನ್ನಾಗಿ ಮಾಡಬಾರದು ಎಂದು ಅವರು ಹೇಳಿದರು. ಶಿಕ್ಷಣ ಮತ್ತು ಪರಸ್ಪರ ಗೌರವದ ಮೂಲಕ ಸಮುದಾಯದಲ್ಲಿ ಏಕತೆ ಮತ್ತು ಶಾಂತಿಯನ್ನು ಬೆಳೆಸಬೇಕು ಎಂಬುದೇ ಅವರ ಸಂದೇಶವಾಗಿತ್ತು.

26 ಮಾರ್ಚ್ 2026, 09:54