“ಪವಿತ್ರ ವಾರದ ವೇಳೆ, ಜಗದ್ಗುರುಗಳ ಅಧಕಾರ ಸ್ಥಳದೊಂದಿಗೆ ನಡೆದ ಮಾತುಕತೆಗಳ ನಂತರ ಕ್ಯೂಬಾದ 51 ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ವ್ಯಾಟಿಕನ್ ವರದಿ
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮ್ಯಾಟಿಯೊ ಬ್ರೂನಿ, ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ನಿರ್ದೇಶಕರು, ಶುಕ್ರವಾರ ಇತ್ತೀಚಿನ ದಿನಗಳಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಕ್ಯೂಬಾ ಅಧಿಕಾರಿಗಳ ನಡುವೆ ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡುವ ವಿಷಯದ ಕುರಿತು ಮಾತುಕತೆಗಳು ನಡೆದಿವೆ ಎಂದು ದೃಢಪಡಿಸಿದರು.
ಇದು ಗುರುವಾರ ಕ್ಯೂಬಾ ಅಧಿಕಾರಿಗಳು ಬಿಡುಗಡೆ ಮಾಡಿದ ಪ್ರಕಟಣೆಯ ನಂತರ ಬಂದಿದೆ. ಆ ಪ್ರಕಟಣೆಯಲ್ಲಿ ಹೀಗೆ ಹೇಳಲಾಗಿದೆ ಕ್ಯೂಬಾ ರಾಜ್ಯ ಮತ್ತು ವ್ಯಾಟಿಕನ್ ನಡುವೆ ಇರುವ ಉತ್ತಮ ಮನೋಭಾವ ಮತ್ತು ನಿಕಟ ಹಾಗೂ ಸುಗಮ ಸಂಬಂಧಗಳ ಆತ್ಮದಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ವ್ಯಕ್ತಿಗಳ ಪ್ರಕರಣಗಳ ಪರಿಶೀಲನೆ ಮತ್ತು ಬಿಡುಗಡೆ ಕುರಿತು ಇತಿಹಾಸದಿಂದಲೂ ಸಂವಹನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಯೂಬಾ ಸರ್ಕಾರ ಮುಂದಿನ ದಿನಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ 51 ಮಂದಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಪ್ರಕಟಣೆಯ ಪ್ರಕಾರ, ಬಿಡುಗಡೆಗೊಳ್ಳುವ ಎಲ್ಲ ಕೈದಿಗಳು ತಮ್ಮ ಶಿಕ್ಷೆಯ ಗಣನೀಯ ಭಾಗವನ್ನು ಈಗಾಗಲೇ ಪೂರ್ಣಗೊಳಿಸಿರುವವರಾಗಿದ್ದು, ಜೈಲಿನಲ್ಲಿ ಉತ್ತಮ ವರ್ತನೆ ತೋರಿದ್ದಾರೆ.
ಕ್ಯೂಬಾದಲ್ಲಿ ಅನುಸರಿಸಲ್ಪಡುವ ಪದ್ಧತಿ
ಕ್ಯೂಬಾ ಸರ್ಕಾರದ ವಿವರದಂತೆ, 2010ರಿಂದ ಇದುವರೆಗೆ 9,900 ಕ್ಕೂ ಹೆಚ್ಚು ಕೈದಿಗಳು ಕ್ಷಮಾದಾನಗಳ ಮೂಲಕ ಬಿಡುಗಡೆಗೊಂಡಿದ್ದಾರೆ.
ಇದಕ್ಕೂ ಹೆಚ್ಚಾಗಿ, ಕಳೆದ ಮೂರು ವರ್ಷಗಳಲ್ಲಿ ಕ್ಯೂಬಾದ ಕಾನೂನು ನಿಯಮಗಳ ಪ್ರಕಾರ ಮತ್ತು ಸಾಮಾನ್ಯ ನ್ಯಾಯಪದ್ಧತಿಯ ಭಾಗವಾಗಿ, ವಿವಿಧ ಕಾನೂನು ಸೌಲಭ್ಯಗಳ ಮೂಲಕ ಮತ್ತಷ್ಟು 10,000 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪವಿತ್ರ ವಾರದ ಸಂದರ್ಭ
ಕೊನೆಯಲ್ಲಿ ಪ್ರಕಟಣೆ ತಿಳಿಸುವಂತೆ, ಈ ನಿರ್ಧಾರವು ಕ್ಯೂಬಾದ ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಅನುಸರಿಸಲ್ಪಡುವ ಪದ್ಧತಿಯ ಭಾಗವಾಗಿದ್ದು, ಕ್ರಾಂತಿಯ ಮಾನವೀಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಇದೇ ಸಮಯದಲ್ಲಿ ಇದು ಕ್ರೈಸ್ತ ಧಾರ್ಮಿಕ ಆಚರಣೆಗಳಾದ ಪವಿತ್ರ ವಾರ ಸಮೀಪಿಸುತ್ತಿರುವ ಸಂದರ್ಭಕ್ಕೂ ಹೊಂದಿಕೆಯಾಗುತ್ತದೆ ಎಂದು ಹೇಳಲಾಗಿದೆ.