ಪಾರೊಲಿನ್: ನಿಮ್ಮ ಹೃದಯದಲ್ಲಿ ಪ್ರತಿದಿನ ಕ್ರಿಸ್ತನ ಜನನಕ್ಕೆ ಆಹ್ವಾನಿಸಿ
ಕಾರ್ಡಿನಲ್ ಪಿಯೆತ್ರೊ ಪಾರೊಲಿನ್ ಅವರು ಡಿಸೆಂಬರ್ 16ರ ಬೆಳಿಗ್ಗೆ ರೋಮಿನ ಇಮ್ಮಾಕ್ಯುಲೇಟ್ ಕನ್ಸೆಪ್ಶನ್ ಡರ್ಮೋಪಾಥಿಕ್ ಇನ್ಸ್ಟಿಟ್ಯೂಟ್ನ ಚಾಪೆಲ್ನಲ್ಲಿ ಪವಿತ್ರ ಬಲಿಯನ್ನು ಅರ್ಪಿಸಿದರು. ತಮ್ಮ ಉಪದೇಶದಲ್ಲಿ ಪವಿತ್ರ ಪೀಠದ ರಾಜ್ಯ ಕಾರ್ಯದರ್ಶಿಯಾಗಿರುವ ಅವರು, ಕ್ರಿಸ್ಮಸ್ಗೆ ಮುನ್ನದ ದಿನಗಳು ನಿರೀಕ್ಷೆ ಮತ್ತು ಆಕಾಂಕ್ಷೆಯಿಂದ ತುಂಬಿರುವವು ಎಂದು ಹೇಳಿದರು. ಈ ದಿನಗಳನ್ನು ಪವಿತ್ರ ಸೇವಾ ಧರ್ಮ ಧಾರಾಳವಾಗಿ ಬೆಂಬಲಿಸುತ್ತದೆ; ಅದು ಸಂಪೂರ್ಣ ಸಭಾಸಮುದಾಯವನ್ನು ಕೈಹಿಡಿದು ನಿಧಾನವಾಗಿ ರಕ್ಷಕನ ಜನನದ ರಹಸ್ಯದತ್ತ ನಡೆಸುತ್ತದೆ ಎಂದು ಹೇಳಿದರು. ಆದ್ದರಿಂದ ಆಗಮನ ಕಾಲವು ಕಾಯುವ ಸಮಯವಾಗಿದ್ದು, ಯೇಸು ಕ್ರಿಸ್ತನ ಎರಡನೇ ಆಗಮನದತ್ತವೂ ದೃಷ್ಠಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಡಿನಲ್ ಅವರು ಕ್ರಿಸ್ತನ ಆಗಮನ ಮೂರು ರೀತಿಯದು ಎಂದು ನೆನಪಿಸಿದರು. ಮೊದಲನೆಯದು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಬೆಥ್ಲೆಹೇಮ್ನಲ್ಲಿ ನಡೆದದ್ದು. ಎರಡನೆಯದು ಕಾಲಾಂತ್ಯದಲ್ಲಿ ಸಂಭವಿಸಲಿರುವುದು. ಮೂರನೆಯದು ಪ್ರತಿದಿನ ನಂಬಿಗಸ್ತರ ಹಾಗೂ ಕ್ರೈಸ್ತ ಸಮುದಾಯದ ಹೃದಯಗಳಲ್ಲಿ ವಾಕ್ಯ ಮತ್ತು ಸಂಸ್ಕಾರಗಳ ಮೂಲಕ ನೆಲೆಸುವ ಆಗಮನವಾಗಿದೆ.
ಕಾರ್ಡಿನಲ್ ಪಾರೊಲಿನ್ ಅವರು ಕ್ಯಾನ್ಸರ್ ವಿಭಾಗದ ರೋಗಿಗಳಿಗೆ ಭೇಟಿ ನೀಡಿದರು.
ರೋಗದ ಎದುರಿನಲ್ಲಿ ಅಶಕ್ತತೆ
ನಂತರ ಕಾರ್ಡಿನಲ್ ಪಾರೊಲಿನ್ ಅವರು ಇಂದು ಮತ್ತಾಯ ಸುವಾರ್ತೆಯಲ್ಲಿ ಬಂದಿರುವ ಘಟನೆಯನ್ನು ಚಿಂತಿಸಿದರು. ಅದರಲ್ಲಿ ಯೇಸು ಎರಡು ಪುತ್ರರ ಸಾಮತಿಯನ್ನು ಹೇಳುತ್ತಾರೆ. ಮೊದಲ ಮಗನು ದ್ರಾಕ್ಷಿತೋಟದಲ್ಲಿ ಕೆಲಸ ಮಾಡಲು ಮೊದಲಿಗೆ ನಿರಾಕರಿಸುತ್ತಾನೆ, ಆದರೆ ನಂತರ ಪಶ್ಚಾತ್ತಾಪಪಟ್ಟು ಹೋಗುತ್ತಾನೆ; ಎರಡನೇ ಮಗನು ಹೋಗುವುದಾಗಿ ವಾಗ್ದಾನ ನೀಡುತ್ತಾನೆ, ಆದರೆ ತನ್ನ ಮಾತನ್ನು ಉಳಿಸಿಕೊಳ್ಳುವುದಿಲ್ಲ. ತಂದೆಯ ಇಚ್ಛೆಯನ್ನು ನೆರವೇರಿಸುವವನು ಮೊದಲ ಮಗನೇ ಎಂದು ಯೇಸು ಹೇಳುತ್ತಾರೆ.
ಕರ್ತನು ತನ್ನ ಕಾರ್ಯಕ್ಕಾಗಿ ಪ್ರಾಮಾಣಿಕ ಹೃದಯಗಳನ್ನು ಹುಡುಕುತ್ತಾನೆ ಎಂದು ಪಾರೊಲಿನ್ ವಿವರಿಸಿದರು. ಈ ಕಾರ್ಯವು ಸಂಸ್ಥೆಯ ಗೋಡೆಗಳೊಳಗೆ ಪ್ರತಿದಿನ ನಡೆಯುತ್ತದೆ ಅಲ್ಲಿ ರೋಗದ ಎದುರಿನಲ್ಲಿ ಅಶಕ್ತತೆ ಎಂಬ ಅನುಭವವನ್ನು ದಿನನಿತ್ಯ ಎದುರಿಸಬೇಕಾಗುತ್ತದೆ.
ರೋಗಿಗಳಿಗೆ ಭೇಟಿ
ಕ್ರಿಸ್ತನು ನಿಮ್ಮ ಹೃದಯದಲ್ಲಿ ಪ್ರತಿದಿನ ಜನಿಸದಿದ್ದರೆ, ಬೆಥ್ಲೆಹೇಮ್ನಲ್ಲಿ ನಡೆದ ಅವರ ಜನನಕ್ಕೂ ಯಾವುದೇ ಮೌಲ್ಯವಿಲ್ಲ ಎಂದು ಕಾರ್ಡಿನಲ್ ಪಾರೊಲಿನ್ ಹೇಳಿದರು, ಆದ್ದರಿಂದ, ಸಂಸ್ಥೆಯನ್ನು ನಿಜವಾದ ಕೊಟ್ಟಿಗೆ ಆಗಿ ಮಾಡಿಕೊಳ್ಳುವಂತೆ ಅವರು ಕೇಳುಗರನ್ನು ಆಹ್ವಾನಿಸಿದರು.
ಪವಿತ್ರ ಬಲಿಯ ಅಂತ್ಯದಲ್ಲಿ, ಕಾರ್ಡಿನಲ್ ಅವರು ಸಂಸ್ಥೆಯ ಪ್ರವೇಶದ್ವಾರದಲ್ಲಿ ಸ್ಥಾಪಿಸಿದ ಕ್ರಿಸ್ಮಸ್ ಮರದ ಕೆಳಗೆ ಮಗು ಯೇಸುವಿನ ಪ್ರತಿಮೆಯನ್ನು ಇಟ್ಟರು. ನಂತರ ಅವರು ಕ್ಯಾನ್ಸರ್ ವಿಭಾಗಕ್ಕೆ ತೆರಳಿ ರೋಗಿಗಳಿಗೆ ತಮ್ಮ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದರು.