ಮೆಡ್ಜುಗೊರ್ಜೆಯ ಯುವಜನರು ಪ್ರಭುವನ್ನು ಭೇಟಿಯಾಗುವ ಸೌಂದರ್ಯವನ್ನು ಮರುಶೋಧಿಸಿಕೊಳ್ಳುವಂತೆ ಜಗದ್ಗುರುಗಳ ಪ್ರೋತ್ಸಾಹ.
ವ್ಯಾಟಿಕನ್ ವರದಿ
ಸುಲಭವಾಗಿ ಮತ್ತು ತಕ್ಷಣವೇ ದೊರೆಯುವ ಸಂತೋಷದ ಭರವಸೆಗಳು ಆಕರ್ಷಕವಾಗಿರುತ್ತವೆ. ಆದರೆ ಅವು ಬಹುಸಾರಿ ಯಾವುದೇ ಶಾಶ್ವತ ಗುರುತು ಮೂಡಿಸದೆ ಮಾಸಿಹೋಗುತ್ತವೆ. ಉಳಿಯುವುದು ಇನ್ನಷ್ಟು ಆಳವಾದ ಪ್ರಶ್ನೆಗಳು, ಮಾನವ ಹೃದಯದಲ್ಲಿ ನೆಲೆಸಿರುವ ಆತಂಕಗಳು ಮತ್ತು ಶಾಶ್ವತವಾಗಿ ಉಳಿಯುವ ಸಂತೋಷಕ್ಕಾಗಿ ಇರುವ ಹಂಬಲ. “ಪ್ರತಿಯೊಂದು ಹೃದಯದ ದಾಹವನ್ನು ತಣಿಸಿ, ಸದಾ ಹೊಸದಾಗಿ ಆರಂಭಿಸಲು ಶಕ್ತಿಯನ್ನು ನೀಡುವ” ದೇವರೊಂದಿಗಿನ ಭೇಟಿಯ ಮೂಲಕ, ನಂಬಿಕೆಯ ನಿಜವಾದ ಪಯಣವು ಇದೇ ದುರ್ಬಲತೆಗಳಿಂದ ಆರಂಭವಾಗಬಹುದು.
ಇದೇ ಜಗದ್ಗುರು XIVನೇ ಲಿಯೋರವರು ಸಂದೇಶದ ಹೃದಯಭಾಗವಾಗಿದೆ. ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೊಲಿನ್ ರವರ ಸಹಿಯೊಂದಿಗೆ ಜಗದ್ಗುರುಗಳು ಈ ಸಂದೇಶವನ್ನು ಅಂತರರಾಷ್ಟ್ರೀಯ ಯುವಜನ ಉತ್ಸವವಾದ ಮ್ಲಾಡಿಫೆಸ್ಟ್ ನ ಉದ್ಘಾಟನೆಗಾಗಿ ಮೆಡ್ಜುಗೊರ್ಜೆಯಲ್ಲಿ 73 ದೇಶಗಳಿಂದ ಒಂದಾಗಿ ಸೇರಿದ್ದ ಯುವಜನರನ್ನುದ್ದೇಶಿಸಿ ಕಳುಹಿಸಿದ್ದಾರೆ. 1989ರಿಂದ ಆರಂಭಗೊಂಡ ಈ ಉತ್ಸವವು ಪ್ರತಿವರ್ಷ ನಡೆಯುತ್ತದೆ. ಸಂತ ಜೇಮ್ಸ್ ಧರ್ಮ ಕೇಂದ್ರದ ಹೊರಾಂಗಣ ಬಲಿಪೀಠದಲ್ಲಿ ಯೂಕರಿಸ್ಟಿಕ್ ಆಚರಣೆ ನಡೆಯುತ್ತದೆ.
ಪ್ರತಿಯೊಂದು ಹೃದಯದ ದಾಹವನ್ನು ತಣಿಸುವ ಪ್ರಭುವನ್ನು ಭೇಟಿಯಾಗುವುದು
ಮೆಡ್ಜುಗೊರ್ಜೆ ಧರ್ಮ ಕೇಂದ್ರದ ವಿಶೇಷ ಜವಾಬ್ದಾರಿಯೊಂದಿಗೆ ನೇಮಕಗೊಂಡ ಪ್ರೇಷಿತರ ಸಂದರ್ಶಕರಾದ ಆರ್ಚ್ಬಿಷಪ್ ಅಲ್ಡೊ ಕವಾಲ್ಲಿ ರವರು, ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ಹಾಗೂ ಮಾಂಟೆನೆಗ್ರೊ ದೇಶಗಳಿಗೆ ಪ್ರೇಷಿತರ ರಾಯಭಾರಿಯಾಗಿರುವ ಆರ್ಚ್ಬಿಷಪ್ ಫ್ರಾನ್ಸಿಸ್ ಅಸ್ಸಿಸಿ ಚುಲ್ಲಿಕಾಟ್ ರವರು ಅರ್ಪಿಸಿದ ದಿವ್ಯಬಲಿಪೂಜೆಗೆ ಸ್ವಲ್ಪ ಮುನ್ನ ಈ ಸಂದೇಶವನ್ನು ವಾಚಿಸಿದರು.
ತಮ್ಮ ಸಂದೇಶದಲ್ಲಿ ಜಗದ್ಗುರುಗಳು ಯುವಜನರಿಗೆ ಮೂಲಕ್ಕೆ —ಅಂದರೆ, ಹೊಸ ಜೀವನ ಮತ್ತು ನಿಜವಾದ ಸಂತೋಷದ ಮೂಲವಾದ ಕ್ರಿಸ್ತನ ಬಳಿಗೆ ಮರಳುವಂತೆ ಪ್ರೋತ್ಸಾಹಿಸಿದರು. ಪ್ರಾರ್ಥನೆ, ದೇವರ ವಾಕ್ಯಕ್ಕೆ ಕಿವಿಗೊಡುವುದು ಮತ್ತು ಸಂಸ್ಕಾರಗಳ ಮೂಲಕ “ಪ್ರತಿಯೊಂದು ಹೃದಯದ ದಾಹವನ್ನು ತಣಿಸಿ, ಸದಾ ಹೊಸದಾಗಿ ಆರಂಭಿಸಲು ಶಕ್ತಿಯನ್ನು ನೀಡುವ ಕರ್ತನೊಂದಿಗಿನ ವೈಯಕ್ತಿಕ ಭೇಟಿಯ ಸೌಂದರ್ಯವನ್ನು” ಮರುಶೋಧಿಸಿಕೊಳ್ಳುವಂತೆ ಅವರು ಆಹ್ವಾನಿಸಿದರು.
ನಮ್ಮನ್ನು ಮುಕ್ತಗೊಳಿಸುವ ಸತ್ಯವನ್ನು ಹುಡುಕಿರಿ
ಯುವಜನರು ಪ್ರಾಮಾಣಿಕವಾಗಿ “ತಮ್ಮನ್ನು ಮುಕ್ತಗೊಳಿಸುವ ಸತ್ಯವನ್ನು” ಹುಡುಕಬೇಕು ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು. “ಕ್ಷಣಿಕ ಸಂತೋಷದ ಭ್ರಮೆಗಳಿಗೆ” ಮರುಳಾಗದಂತೆ ಅವರು ಎಚ್ಚರಿಸಿದರು.
ಯೇಸುವನ್ನು ಅನುಸರಿಸುವಾಗ, ಅತ್ಯಂತ ಕಠಿಣವಾದ ಪ್ರಶ್ನೆಗಳನ್ನೂ ಹೃದಯದ ಆತಂಕಗಳನ್ನೂ ವಿವೇಚನೆ ಮತ್ತು ನಂಬಿಕೆಯಲ್ಲಿ ಬೆಳವಣಿಗೆಗೆ ಅವಕಾಶಗಳಾಗಿ ಸ್ವೀಕರಿಸಲು ಪ್ರತಿಯೊಬ್ಬರಿಗೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪವಿತ್ರಾತ್ಮ ಮತ್ತು ಮರಿಯಳಲ್ಲಿ ವಿಶ್ವಾಸವಿಡಿರಿ
“ಪವಿತ್ರಾತ್ಮನಿಂದ ಮುನ್ನಡೆಸಲ್ಪಡಲು” ತಮ್ಮನ್ನು ಒಪ್ಪಿಸಿಕೊಳ್ಳುವಂತೆ ಹಾಗೂ ಮರಿಯಳ ಮಧ್ಯಸ್ಥಿಕೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಜಗದ್ಗುರುಗಳು ತಮ್ಮ ಸಂದೇಶದ ಕೊನೆಯಲ್ಲಿ ಯುವಜನರಿಗೆ ಕರೆ ನೀಡಿದರು.
ಇದರ ಮೂಲಕ ಅವರು “ಸುವಾರ್ತೆಯ ಪ್ರಕಾಶಮಾನ ಸಾಕ್ಷಿಗಳಾಗಿ, ಸಹೋದರತ್ವದ ಪ್ರವರ್ತಕರಾಗಿ ಮತ್ತು ಸಮಾಜದಲ್ಲಿ ಶಾಂತಿಯ ನಿರ್ಮಾತೃಗಳಾಗಿ” ರೂಪುಗೊಳ್ಳಲಿ ಎಂದು ಅವರು ಆಶಿಸಿದರು.
