ಹುಡುಕಿ

ಪಿತಾಮಹ ಎಲಿಯಾಸ್ ಹೋಯೆಕ್. ಪಿತಾಮಹ ಎಲಿಯಾಸ್ ಹೋಯೆಕ್. 

ಜಗದ್ಗುರು ಲಿಯೋರವರು ನೂತನ ಮರೋನೈಟ್ ಧನ್ಯರನ್ನು ಅಭಿನಂದಿಸಿದರು.

ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಪಿತಾಮಹ ಎಲಿಯಾಸ್ ಹೋಯೆಕ್ ರವರ ಧನ್ಯಪದವಿ ಘೋಷಣೆಯನ್ನು ಹರ್ಷದಿಂದ ಸ್ವಾಗತಿಸಿದರು. ನೂತನ ಧನ್ಯರ ಮಧ್ಯಸ್ಥಿಕೆಯ ಮೂಲಕ ಲೆಬನಾನ್‌ನಲ್ಲಿ ಶಾಂತಿ ನೆಲೆಸಲಿ ಹಾಗೂ ವಿಶ್ವದಾದ್ಯಂತ ಇರುವ ಮರೋನೈಟ್ ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಮತ್ತಷ್ಟು ದೃಢರಾಗಲಿ ಎಂದು ಅವರು ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಭಾನುವಾರದಂದು ಜಗದ್ಗುರು XIVನೇ ಲಿಯೋರವರು ನೂತನ ಧನ್ಯರಾದ ಎಲಿಯಾಸ್ ಹೋಯೆಕ್ ರವರಿಗೆ ಗೌರವ ನಮನ ಸಲ್ಲಿಸಿದರು. ಅವರ ಜೀವನಸಾಕ್ಷಿ ಮತ್ತು ಮಧ್ಯಸ್ಥಿಕೆಯ ಮೂಲಕ ಲೆಬನಾನ್‌ನಲ್ಲಿ ಶಾಂತಿ ನೆಲೆಸಲಿ ಹಾಗೂ ವಿಶ್ವದಾದ್ಯಂತ ಇರುವ ಮರೋನೈಟ್ ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಇನ್ನಷ್ಟು ದೃಢರಾಗಲಿ ಎಂದು ಅವರು ಪ್ರಾರ್ಥಿಸಿದರು.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ತ್ರಿಕಾಲ ಪ್ರಾರ್ಥನೆಯ ಬಳಿಕ ಮಾತನಾಡಿದ ಜಗದ್ಗುರುಗಳು, 1899ರಿಂದ 1931ರವರೆಗೆ ಮರೋನೈಟ್‌ಗಳ ಅಂತಿಯೋಕ್ಯಾದ ಪಿತಾಮಹರಾಗಿದ್ದ ಹಾಗೂ "ಮರೋನೈಟ್ ಪವಿತ್ರ ಕುಟುಂಬದ ಸಹೋದರಿಯರ ಸಭೆ"ಯ ಸಂಸ್ಥಾಪಕರಾದ ಧನ್ಯ ಎಲಿಯಾಸ್ ಹೋಯೆಕ್, ಲೆಬನಾನ್‌ನಲ್ಲಿ ಹಿಂದಿನ ದಿನ ಧನ್ಯಪದವಿಗೆ ಏರಿಸಲ್ಪಟ್ಟಿರುವುದನ್ನು ಸ್ಮರಿಸಿದರು.

ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಅವರು ಅಪಾರ ಸಮರ್ಪಣೆ ಮತ್ತು ಸೂಕ್ಷ್ಮವಾದ ಧರ್ಮಾಧ್ಯಕ್ಷೀಯ ಕಾಳಜಿಯೊಂದಿಗೆ ಮರೋನೈಟ್ ಧರ್ಮ ಸಭೆಗೆ ನಾಯಕತ್ವ ನೀಡಿದರು ಎಂದು ಜಗದ್ಗುರುಗಳು ಹೇಳಿದರು.

ಧನ್ಯ ಎಲಿಯಾಸ್ ಹೋಯೆಕ್ ರವರನ್ನು "ಸಂವಾದ ಮತ್ತು ಭರವಸೆಯ ವ್ಯಕ್ತಿ" ಎಂದು ಬಣ್ಣಿಸಿದ ಜಗದ್ಗುರುಗಳು, ಅವರು "ಧರ್ಮ ಸಭೆಯ, ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಪ್ರಕಾಶಮಾನವಾದ ಆದರ್ಶ ವ್ಯಕ್ತಿಯಾಗಿದ್ದರು" ಎಂದು ಹೇಳಿದರು. ಇದೇ ಕಾರಣಕ್ಕಾಗಿ ಅವರು "ಮಹಾ ಲೆಬನಾನ್‌ನ ಪಿತಾಮಹ"ಎಂಬ ಗೌರವಕ್ಕೆ ಪಾತ್ರರಾದರು ಎಂದು ಜಗದ್ಗುರುಗಳು ನೆನಪಿಸಿದರು.

ತಮ್ಮ ಸಂದೇಶದ ಕೊನೆಯಲ್ಲಿ, "ನೂತನ ಧನ್ಯರ ಪ್ರಾರ್ಥನೆ ಮತ್ತು ಮಧ್ಯಸ್ಥಿಕೆಯು ವಿಶ್ವದಾದ್ಯಂತ ಇರುವ ಮರೋನೈಟ್ ವಿಶ್ವಾಸಿಗಳನ್ನು ಸದಾ ಜೊತೆಯಾಗಿರಲಿ ಹಾಗೂ ನನಗೆ ಅತ್ಯಂತ ಪ್ರಿಯವಾದ ಲೆಬನಾನ್ ದೇಶದ ಸಮಸ್ತ ಜನರಿಗೆ ಶಾಂತಿಯ ವರವನ್ನು ದೊರಕಿಸಿಕೊಡಲಿ" ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಧನ್ಯಪದವಿ ಘೋಷಣೆಯ ಪವಿತ್ರ ಬಲಿಪೂಜೆ

ಧನ್ಯಪದವಿ ಘೋಷಣೆಯ ಪವಿತ್ರ ಬಲಿಪೂಜೆಯನ್ನು ಶನಿವಾರ ಮರೋನೈಟ್ ಪಿತಾಮಹರ ಬೇಸಿಗೆ ನಿವಾಸವಾದ ಡಿಮಾನೆಯಲ್ಲಿ ಅರ್ಪಿಸಲಾಯಿತು. ಜಗದ್ಗುರು ಲಿಯೋರವರ ವಿಶೇಷ ಪ್ರತಿನಿಧಿಯಾಗಿ ಕಾರ್ಡಿನಲ್ ಮಾರ್ಚೆಲ್ಲೊ ಸೆಮೆರಾರೋ ರವರು ಈ ಧಾರ್ಮಿಕ ವಿಧಿಗೆ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಪ್ರಭೋಧನೆಯಲ್ಲಿ ಮರೋನೈಟ್ ಪಿತಾಮಹ ಕಾರ್ಡಿನಲ್ ಬೆಚಾರಾ ಬೂಟ್ರೋಸ್ ರೈ ರವರು, ಧನ್ಯ ಎಲಿಯಾಸ್ ಹೋಯೆಕ್ ರವರನ್ನು ಧರ್ಮ ಸಭೆಗೂ ಲೆಬನಾನ್ ರಾಷ್ಟ್ರಕ್ಕೂ ಸಲ್ಲಿಸಿದ ಸೇವೆಯಿಂದ ಬೇರ್ಪಡಿಸಲಾಗದ ಪವಿತ್ರ ಜೀವನ ನಡೆಸಿದ ಮೇಷಪಾಲಕರಾಗಿ ಬಣ್ಣಿಸಿದರು.

ಅವರು ನೂತನ ಧನ್ಯರನ್ನು "ದೇವರ ಮನುಷ್ಯ," "ಬಡವರ ಮತ್ತು ಶೋಷಿತರ ಪಿತಾಮಹ" ಹಾಗೂ ದೈವಿಕ ದೈವಾನುಗ್ರಹದ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ ನಾಯಕ ಎಂದು ವರ್ಣಿಸಿದರು.

1916ರ ಭೀಕರ ಕ್ಷಾಮದ ಸಮಯದಲ್ಲಿ ಹಸಿವಿನಿಂದ ಬಳಲುತ್ತಿದ್ದ ಜನರಿಗೆ ಆಹಾರ ಒದಗಿಸಲು ಅವರು ಮಾಡಿದ ಅವಿರತ ಪ್ರಯತ್ನಗಳನ್ನು, 1919ರ ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಲೆಬನಾನ್‌ನ ಗುರುತು ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಅವರು ತೋರಿದ ದೃಢ ಸಂಕಲ್ಪವನ್ನು ಹಾಗೂ ಶಿಕ್ಷಣ, ದಾನಧರ್ಮದ ಕಾರ್ಯಗಳು ಮತ್ತು ಮರೋನೈಟ್ ಧರ್ಮ ಸಭೆಯ ನವೀಕರಣಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಕಾರ್ಡಿನಲ್ ರೈ ಸ್ಮರಿಸಿದರು.

"ಧನ್ಯ ಎಲಿಯಾಸ್ ಹೋಯೆಕ್ ರವರು ಮೇಷಪಾಲಕರ ಜಾಗರೂಕತೆ, ನಾಯಕನ ವಿವೇಕ, ತಂದೆಯ ಹೃದಯ ಮತ್ತು ಸಂತನ ನಂಬಿಕೆ—ಇವೆಲ್ಲವನ್ನೂ ತಮ್ಮ ವ್ಯಕ್ತಿತ್ವದಲ್ಲಿ ಒಗ್ಗೂಡಿಸಿದ್ದರು" ಎಂದು ಕಾರ್ಡಿನಲ್ ರೈ ಹೇಳಿದರು. ನಂಬಿಕೆ, ಭರವಸೆ ಮತ್ತು ರಾಷ್ಟ್ರೀಯ ಏಕತೆಯ ಅಮೂಲ್ಯ ಪರಂಪರೆಯನ್ನು ಅವರು ಲೆಬನಾನ್‌ಗೆ ಬಿಟ್ಟುಹೋಗಿದ್ದು, ಅದು ಇಂದಿಗೂ ದೇಶಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ಹೇಳಿದರು.

26 ಜುಲೈ 2026, 17:31