ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಜಗದ್ಗುರುಗಳು: ಬೇಸಿಗೆಯ ಅವಧಿಯಲ್ಲಿ ಅತ್ಯಂತ ಅಗತ್ಯದಲ್ಲಿರುವವರನ್ನು ಮರೆಯಬೇಡಿ.

ಪಿಯಾಝಾ ಸಾನ್ ಪಿಯೆತ್ರೋ ನಿಯತಕಾಲಿಕೆಯ ಜುಲೈ–ಆಗಸ್ಟ್ ಸಂಚಿಕೆಯಲ್ಲಿ, ಬೇಸಿಗೆಯ ಅವಧಿಯಲ್ಲಿ ತಮ್ಮ ನಂಬಿಕೆಯ ಜೀವನವನ್ನು ಹೇಗೆ ಸಮೃದ್ಧಗೊಳಿಸಬಹುದು ಎಂದು ಪ್ರಶ್ನಿಸಿದ ಇಟಲಿಯೊಬ್ಬ ವ್ಯಕ್ತಿಯ ಪತ್ರಕ್ಕೆ ಜಗದ್ಗುರು XIVನೇ ಲಿಯೋರವರು ಉತ್ತರ ನೀಡಿದ್ದಾರೆ. ತಮ್ಮ ಉತ್ತರದಲ್ಲಿ, ಶಾಂತಿ ಮತ್ತು ಕರುಣೆಯ ಸುವಾರ್ತೆಯನ್ನು ಜೀವನದಲ್ಲಿ ಆಚರಿಸುವ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳುತ್ತಾರೆ. ಜೊತೆಗೆ, ದುಃಖ ಮತ್ತು ಸಂಕಷ್ಟದಲ್ಲಿರುವವರನ್ನು ಎಂದಿಗೂ ಮರೆಯಬಾರದು ಎಂದು ಅವರು ನೆನಪಿಸುತ್ತಾರೆ.

ವ್ಯಾಟಿಕನ್ ವರದಿ

ಇಟಾಲಿಯನ್ ನಿಯತಕಾಲಿಕೆಯಾದ _ಪಿಯಾಝಾ ಸಾನ್ ಪಿಯೆತ್ರೋ_ಯ ಜುಲೈ–ಆಗಸ್ಟ್ ಸಂಚಿಕೆಯಲ್ಲಿ, ಬೇಸಿಗೆಯ ಅವಧಿಯಲ್ಲಿ ರೋಗಿಗಳು, ವೃದ್ಧರು ಹಾಗೂ ಸಂಕಷ್ಟದಲ್ಲಿರುವವರನ್ನು ಮರೆಯಬಾರದು ಎಂದು ಜಗದ್ಗುರು XIVನೇ ಲಿಯೋರವರು ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದಾರೆ.

ಈ ಲೇಖನದಲ್ಲಿ, ರೋಮಿನ ಮೌರಿಜಿಯೋ ಎಂಬ ವ್ಯಕ್ತಿಯೊಬ್ಬರು ಬರೆದ ಪತ್ರಕ್ಕೆ ಜಗದ್ಗುರುಗಳು ಉತ್ತರ ನೀಡಿದ್ದಾರೆ. ಬೇಸಿಗೆಯ ತಿಂಗಳುಗಳನ್ನು ತಮ್ಮ ನಂಬಿಕೆಯನ್ನು ಇನ್ನಷ್ಟು ಆಳಗೊಳಿಸಿ ಸಮೃದ್ಧಗೊಳಿಸುವ ರೀತಿಯಲ್ಲಿ ಹೇಗೆ ಜೀವಿಸಬಹುದು ಎಂದು ಅವರು ಪ್ರಶ್ನಿಸಿದ್ದರು.

ವೇಗದ ಜಗತ್ತಿನಲ್ಲಿ ಆಧ್ಯಾತ್ಮಿಕತೆಯನ್ನು ಹೇಗೆ ಪೋಷಿಸಬೇಕು?

ತಮ್ಮ ಪತ್ರದಲ್ಲಿ ಮೌರಿಜಿಯೋ ಅವರು, ಯುದ್ಧಗಳು ಮತ್ತು ಅಸ್ಥಿರತೆಯಿಂದ ಕಂಗೆಟ್ಟಿರುವ ಇಂದಿನ ಜಗತ್ತಿನ ಕುರಿತು ಉಲ್ಲೇಖಿಸುತ್ತಾರೆ. ಜೊತೆಗೆ, "ಇಂದಿನ ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಮತ್ತು ಕಾರ್ಯಕ್ಷಮವಾಗಿ ಸಾಗುತ್ತಿದೆ; ಆದರೆ ಅನೇಕ ಸಂದರ್ಭಗಳಲ್ಲಿ ಅದು ಮೇಲ್ನೋಟದ ಹಾಗೂ ಅಲಕ್ಷ್ಯಭರಿತವಾಗಿದೆ" ಎಂದು ಅವರು ಬರೆಯುತ್ತಾರೆ.

"ಹೆಚ್ಚು ಜಾಗೃತಿಯುತ ಮತ್ತು ನೈಜವಾದ ಆಧ್ಯಾತ್ಮಿಕ ಜೀವನವನ್ನು ಹೇಗೆ ನಡೆಸಬಹುದು? ಅದು ಇತರರ ಮೇಲಿನ ಪ್ರೀತಿ ಮತ್ತು ಜವಾಬ್ದಾರಿಯುತ ಗೌರವದ ಸ್ಪಷ್ಟ ಕಾರ್ಯಗಳಲ್ಲಿ ಹೇಗೆ ವ್ಯಕ್ತವಾಗಬಹುದು? ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತದೆ," ಎಂದು ಮೌರಿಜಿಯೋ ಚಿಂತಿಸುತ್ತಾರೆ.

ಬೇಸಿಗೆಯ ರಜಾದಿನಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅವುಗಳನ್ನು ಕೇವಲ ವಿಶ್ರಾಂತಿಯ ಸಮಯವಾಗಿ ಅಲ್ಲ, ಆದರೆ ತಮ್ಮ ಅಂತರಂಗವನ್ನು "ಮತ್ತಷ್ಟು ಆಳವಾಗಿ ಮರುಶೋಧಿಸುವ ಅವಕಾಶವಾಗಿ" ಜೀವಿಸಲು ಬಯಸುವುದಾಗಿ ಅವರು ಹೇಳುತ್ತಾರೆ. ಅದರ ಮೂಲಕ "ದೇವರಾದ ತಂದೆಯೊಂದಿಗೆ ನಿಜವಾದ ಭೇಟಿಯ ಸ್ಥಳವನ್ನು ಮರುಕಂಡುಕೊಳ್ಳಲು" ತಮ್ಮ ಆಶಯವಿದೆ ಎಂದು ತಿಳಿಸುತ್ತಾರೆ.

ಕೊನೆಯಲ್ಲಿ, ಈ ಕುರಿತು ತಮ್ಮ ಚಿಂತನೆ ಮತ್ತು ಮಾರ್ಗದರ್ಶನವನ್ನು ನೀಡುವಂತೆ ಅವರು ಜಗದ್ಗುರುಗಳನ್ನು ವಿನಂತಿಸುತ್ತಾರೆ.

ಜಗದ್ಗುರುಗಳ ಉತ್ತರ: ಶಾಂತಿ ಮತ್ತು ಕರುಣೆಯ ಸುವಾರ್ತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ

ತಮ್ಮ ಉತ್ತರದಲ್ಲಿ ಜಗದ್ಗುರುಗಳು ಮೊದಲಿಗೆ, "ಯಾವುದೇ ರೀತಿಯ ವಿಶ್ರಾಂತಿಯನ್ನು ಅನುಭವಿಸಲು ಸಾಧ್ಯವಾಗದಷ್ಟು ಜೀವನದ ಭಾರದಿಂದ ನಲುಗಿರುವವರನ್ನು ನೆನಪಿಸಿಕೊಳ್ಳೋಣ" ಎಂದು ಕರೆ ನೀಡುತ್ತಾರೆ.

"ರೋಗಿಗಳನ್ನು, ಬದುಕಿನ ಮೇಲಿನ ಭರವಸೆಯನ್ನು ಕಳೆದುಕೊಂಡವರನ್ನು, ತಮ್ಮ ಆತ್ಮೀಯರನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿರುವವರನ್ನು, ಯುದ್ಧ, ದ್ವೇಷ, ಭಯೋತ್ಪಾದನೆ ಮತ್ತು ಹಿಂಸೆಯ ಬಲಿಪಶುಗಳನ್ನು, ತಮ್ಮ ನಂಬಿಕೆ ಹಾಗೂ ನ್ಯಾಯಕ್ಕಾಗಿ ಹಿಂಸೆ ಅನುಭವಿಸುವವರನ್ನು, ಕೈದಿಗಳನ್ನು, ಉದ್ಯೋಗ ಅಥವಾ ಮನೆ ಕಳೆದುಕೊಂಡವರನ್ನು ಮತ್ತು ಮಾನವೀಯ ಸ್ವಾಗತದಿಂದ ವಂಚಿತರಾಗಿರುವ ವಲಸಿಗರನ್ನು ನೆನಪಿಸಿಕೊಳ್ಳೋಣ," ಎಂದು ಜಗದ್ಗುರುಗಳು ಒತ್ತಿಹೇಳುತ್ತಾರೆ.

ರಜಾದಿನಗಳು ಪ್ರತಿಯೊಬ್ಬರಿಗೂ ಕೆಲಸದ ಒತ್ತಡ ಮತ್ತು ಚಿಂತೆಗಳಿಂದ ವಿರಾಮ ಪಡೆದು, ನಿಜವಾದ ಸ್ನೇಹ ಮತ್ತು ಸಹವಾಸವನ್ನು ಅನುಭವಿಸುವ ಸಮಯವಾಗಬೇಕು ಎಂದು ಅವರು ಹೇಳುತ್ತಾರೆ. ಅದು ದೇವರ ರಾಜ್ಯದಲ್ಲಿನ ಐಕ್ಯತೆಯ ಮುನ್ನುಡಿಯಾಗಿರಬೇಕು ಎಂದೂ ಅವರು ತಿಳಿಸುತ್ತಾರೆ.

ನಂಬಿಕೆಯನ್ನು ಬಲಪಡಿಸಿಕೊಳ್ಳಲು, "ಈ ಬೇಸಿಗೆಯ ಸಮಯವನ್ನು ಶಾಂತಿ ಮತ್ತು ಕರುಣೆಯ ಸುವಾರ್ತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಉಪಯೋಗಿಸಿರಿ" ಎಂದು ಅವರು ಎಲ್ಲ ಕ್ರೈಸ್ತರನ್ನು ಆಹ್ವಾನಿಸುತ್ತಾರೆ.

"ಕುಟುಂಬಗಳಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ, ಯುವಕರಿಗೆ ಹಾಗೂ ವೃದ್ಧರಿಗೆ — ಈ ಬೇಸಿಗೆ ಚರ್ಚೆಯಲ್ಲಿಯೂ ಸಮಾಜದಲ್ಲಿಯೂ ತಮ್ಮ ಧ್ಯೇಯವನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ಹಾಗೂ ಫಲಪ್ರದ ಸಾಮಾಜಿಕ ಮತ್ತು ಧಾರ್ಮಿಕ ಅನುಭವಗಳನ್ನು ಪಡೆಯಲು ಒಂದು ಅಮೂಲ್ಯ ಅವಕಾಶವಾಗಲಿ" ಎಂದು ಅವರು ಆಶಿಸಿದರು.

ರೋಗಿಗಳು ತಮ್ಮ ಕುಟುಂಬಸ್ಥರು ಮತ್ತು ಸ್ವಯಂಸೇವಕರ ಸಾನ್ನಿಧ್ಯದಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು. ಅದೇ ರೀತಿ, ಕುಟುಂಬಗಳು ತಮ್ಮ ವಯೋವೃದ್ಧರನ್ನು ಒಂಟಿಯಾಗಿ ಬಿಡಬಾರದು ಎಂದು ಮನವಿ ಮಾಡಿದರು.

ಸ್ವಯಂಸೇವಕರಿಗೂ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದರು:

"ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ಮತ್ತು ಭರವಸೆಯನ್ನು ತಲುಪಿಸುವ ಕಾರ್ಯಕ್ಕೆ ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಿ. ಆಗ ನೀವು ದೇವರ ಕೃಪೆಯ ಫಲಗಳನ್ನು ಕಾಣುವಿರಿ. ನಿಮ್ಮ ಜೀವನವು ಎಷ್ಟೊಂದು ಪ್ರೀತಿಯಿಂದ, ಸಂತೋಷದಿಂದ ಮತ್ತು ಆನಂದದಿಂದ ತುಂಬಿಕೊಳ್ಳುತ್ತದೆ ಎಂಬುದನ್ನು ಅನುಭವಿಸುವಿರಿ."

ಬಡವರ ಸೇವೆ ಮಾಡುವಾಗ, ತಮಗೆ ದೊರೆತಿರುವ ವಿಶೇಷ ಅವಕಾಶವನ್ನು ಅರಿತು "ಸುವಾರ್ತೆಯ ಬಡತನಕ್ಕೆ ಸಾಕ್ಷಿಯಾಗಿರಿ" ಎಂದು ಅವರು ಕ್ರೈಸ್ತರನ್ನು ಕರೆದರು. ಏಕೆಂದರೆ "ಬಡವರಿಗೆ ಸಲ್ಲಿಸುವ ಸೇವೆಯೇ ಕ್ರಿಸ್ತನಿಗೆ ಸಲ್ಲಿಸುವ ಸೇವೆಯಾಗಿದೆ" ಎಂದು ಅವರು ನೆನಪಿಸಿದರು.

"ಅತಿಯಾದ ವೈಭವ, ವ್ಯರ್ಥ ವ್ಯಯ, ಭೌತಿಕವಾದ ಮತ್ತು ಉಪಭೋಗವಾದವನ್ನು ತೊರೆದು, ಸರಳತೆ ಮತ್ತು ಸಂಯಮವನ್ನು ರೂಢಿಸಿಕೊಳ್ಳೋಣ," ಎಂದು ಅವರು ಹೇಳಿದರು. "ಸಂಪತ್ತಿನ ಸಂಗ್ರಹವು ಸುವಾರ್ತೆಯ ಪ್ರಸಾರಕ್ಕೆ ಅಡ್ಡಿಯಾಗುತ್ತದೆ" ಎಂದೂ ಅವರು ಎಚ್ಚರಿಸಿದರು.

ಕೊನೆಯಲ್ಲಿ, "ನಮ್ಮ ರಜಾದಿನಗಳು ಕ್ರೈಸ್ತ ಜೀವನಶೈಲಿಗೆ ಅನುಗುಣವಾಗಿರಲಿ" ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

"ದೇವರ ಪ್ರೀತಿ ಮತ್ತು ಕೃಪೆ ಪ್ರತಿದಿನವೂ, ಸದಾ ನಮ್ಮನ್ನು ತಲುಪುತ್ತವೆ," ಎಂದು ಅವರು ಸಮಾರೋಪದಲ್ಲಿ ಹೇಳಿದರು. "ಯುದ್ಧದ ಬೆದರಿಕೆಗೆ ಒಳಗಾಗಿರುವ ಈ ಜಗತ್ತಿಗೆ ಭವಿಷ್ಯವನ್ನು ನೀಡಬಲ್ಲ ಏಕೈಕ ಭರವಸೆಯಾಗಿರುವ ಮಾನವೀಯತೆ ಮತ್ತು ಶಾಂತಿಯ ಈ ಅಮೂಲ್ಯ ಪರಂಪರೆಯನ್ನು ವ್ಯರ್ಥಗೊಳಿಸದಂತೆ ಪ್ರತಿಯೊಂದು ಸಮುದಾಯದಲ್ಲೂ ನಾವು ಪರಸ್ಪರ ಸಹಾಯ ಮಾಡೋಣ ಎಂದರು."

22 ಜುಲೈ 2026, 17:18