ಜಗದ್ಗುರು ಲಿಯೋರವರು: "ಸೌಂದರ್ಯವು ನಮ್ಮ ಮನಸ್ಸು ಮತ್ತು ದೃಷ್ಟಿಯನ್ನು ಸ್ವರ್ಗದತ್ತ ಉನ್ನತಿಗೇರಿಸುತ್ತದೆ."
ವ್ಯಾಟಿಕನ್ ವರದಿ
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿನ ತಮ್ಮ ಬೇಸಿಗೆ ವಾಸ್ತವ್ಯದ ಅಂಗವಾಗಿ, ಅಲ್ಬಾನೊ ಧರ್ಮಪ್ರಾಂತ್ಯವು ಜಗದ್ಗುರು XIVನೇ ಲಿಯೋರವರು ಗೌರವಾರ್ಥ ಪ್ರೇಷಿತರ ಅರಮನೆಯ ಪ್ರಾಂಗಣದಲ್ಲಿ ವಿಶೇಷ ಸಂಗೀತ ಕಚೇರಿಯನ್ನು ಆಯೋಜಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಜಗದ್ಗುರುಗಳು, "ನಾವು ಸೌಂದರ್ಯದ ಕೊರತೆಯಿರುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಯುದ್ಧಗಳು, ದ್ವೇಷ, ಹಿಂಸಾಚಾರ ಮತ್ತು ಅನೇಕ ಸಂಕಷ್ಟಗಳ ನಡುವೆ ಇಂತಹ ಸಂದರ್ಭದಲ್ಲಿ ಒಂದಾಗಿ ಸೇರುವುದು ದೇವರ ಅಮೂಲ್ಯ ವರವಾಗಿದೆ" ಎಂದು ಹೇಳಿದರು.
ಸಂಗೀತ, ಕಲೆ ಮತ್ತು ಸೌಂದರ್ಯವು ಮಾನವನ ದೃಷ್ಟಿಯನ್ನು ಭೂಮಿಯ ಸಮಸ್ಯೆಗಳಿಂದ ಮೇಲಕ್ಕೆತ್ತಿ ದೇವರತ್ತ ಕೊಂಡೊಯ್ಯುವ ಅಮೂಲ್ಯ ಸಾಧನಗಳಾಗಿವೆ ಎಂದು ಜಗದ್ಗುರುಗಳು ಹೇಳಿದರು. ಇತ್ತೀಚೆಗೆ ಸ್ಪೇನಿಗೆ ತಾವು ಕೈಗೊಂಡಿದ್ದ ಧರ್ಮಪ್ರಯಾಣದ ಉದ್ದೇಶವೂ ಜನರ ದೃಷ್ಟಿಯನ್ನು ಸ್ವರ್ಗದತ್ತ ಎತ್ತುವುದಾಗಿತ್ತು ಎಂದು ಅವರು ನೆನಪಿಸಿದರು. "ಸೌಂದರ್ಯವು ಹೃದಯದಿಂದ ಹೃದಯಕ್ಕೆ ಮಾತನಾಡಿ, ನಮ್ಮ ದೃಷ್ಟಿಯನ್ನು ಸ್ವರ್ಗದತ್ತ ಎತ್ತಲು ನೆರವಾಗುತ್ತದೆ" ಎಂಬ ಸಂದೇಶವನ್ನು ಅವರು ನೀಡಿದರು.
ಈ ಸಂಗೀತ ಕಚೇರಿಯಲ್ಲಿ ಖ್ಯಾತ ಕಲಾವಿದರು ನಿಕ್ಕೊಲೊ ಪಗಾನಿನಿ ಮತ್ತು ವಿನ್ಚೆನ್ಸೊ ಬೆಲ್ಲಿನಿ ರವರ ಸಂಗೀತ ಕೃತಿಗಳನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಬಳಿಕ ಸಂಗೀತಗಾರರಿಗೆ ಕೃತಜ್ಞತೆ ಸಲ್ಲಿಸಿದ ಜಗದ್ಗುರುಗಳು, ಅವರ ಸಂಗೀತವು ದೇವರು ಸೃಷ್ಟಿಯಲ್ಲಿ ಅಡಗಿಸಿರುವ ಸೌಂದರ್ಯವನ್ನು ಅನುಭವಿಸುವಂತೆ ಮಾಡಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅಲ್ಬಾನೊ ಧರ್ಮಪ್ರಾಂತ್ಯದ ಬಿಷಪ್ ವಿನ್ಚೆನ್ಸೊ ವಿವಾ ರವರು ಜಗದ್ಗುರುಗಳನ್ನು ಸ್ವಾಗತಿಸಿ, ಈ ಸಂಗೀತ ಕಚೇರಿಯು ಜಗದ್ಗುರುಗಳ ಮೇಲಿನ ಪ್ರೀತಿ ಮತ್ತು ಕೃತಜ್ಞತೆಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ಬೆಲ್ಲಿನಿಯ ನಾರ್ಮಾ ಸಂಗೀತ ಕೃತಿಯನ್ನು ಉಲ್ಲೇಖಿಸಿದ ಅವರು, ವಿಶ್ವದ ವಿವಿಧ ಯುದ್ಧಗಳಲ್ಲಿ ತಮ್ಮ ಮಕ್ಕಳೊಂದಿಗೆ ಅಪಾರ ನೋವನ್ನು ಅನುಭವಿಸುತ್ತಿರುವ ತಾಯಂದಿರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಂತಿ ಮತ್ತು ಸೌಹಾರ್ದತೆಯ ಅಗತ್ಯವನ್ನು ಒತ್ತಿಹೇಳಿದರು.
ಪಗಾನಿನಿ ಮತ್ತು ಬೆಲ್ಲಿನಿರವರ ಸಂಗೀತ ಕೃತಿಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ವೈಯಕ್ತಿಕ ನೋವಿನಿಂದ ಕ್ಷಮೆ, ತ್ಯಾಗ ಮತ್ತು ಪ್ರೀತಿಯತ್ತ ಸಾಗುವ ಸಂದೇಶವನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಕ್ಷತ್ರಗಳಿಂದ ತುಂಬಿದ ಆಕಾಶದ ದೃಶ್ಯವನ್ನು ಪ್ರದರ್ಶಿಸುವ ಮೂಲಕ, ಯುದ್ಧದ ಕತ್ತಲೆಯ ನಡುವೆಯೂ ಸೌಂದರ್ಯ, ಪ್ರೀತಿ ಮತ್ತು ಶಾಂತಿಯ ಬೆಳಕು ಇಡೀ ಜಗತ್ತಿಗೆ ಭರವಸೆಯ ಸಂದೇಶವಾಗಲಿ ಎಂಬ ಭರವಸೆಯನ್ನು ವ್ಯಕ್ತಪಡಿಸಲಾಯಿತು.
