Pope Leo leads the Angelus prayer in Piazza della Liberta in Castel Gandolfo

ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರುಗಳು: ನಿಜವಾದ ಪರಿಪೂರ್ಣತೆಯನ್ನು ನೀಡುವುದು ದೇವರೇ, ಉಪಭೋಗವಾದವಲ್ಲ.

ಕ್ಯಾಸ್ಟೆಲ್ ಗಾಂಡೋಲ್ಫೊದಿಂದ ನೀಡಿದ ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು, ದೇವರ ರಾಜ್ಯವು ಮಾನವನ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಅಮೂಲ್ಯ ನಿಧಿಯಾಗಿದೆ ಎಂದು ಪ್ರತಿಬಿಂಬಿಸಿದರು. ನಿಜವಾಗಿ ಜೀವನದಲ್ಲಿ ಅತ್ಯಂತ ಮಹತ್ವವುಳ್ಳದ್ದು ಯಾವುದು ಎಂಬುದನ್ನು ಗುರುತಿಸಿ ಅದರಂತೆ ಬದುಕುವಂತೆ ಅವರು ಕ್ರೈಸ್ತರಿಗೆ ಕರೆ ನೀಡಿದರು.

ವ್ಯಾಟಿಕನ್ ವರದಿ

ಬೇಸಿಗೆ ವಿಶ್ರಾಂತಿಗಾಗಿ ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ತಂಗಿರುವ ಜಗದ್ಗುರು XIVನೇ ಲಿಯೋರವರು, ಜುಲೈ 26ರ ಭಾನುವಾರದಂದು ಅಲ್ಲಿಂದಲೇ ನೀಡಿದ ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ, ದೇವರ ರಾಜ್ಯವು ಮಾನವ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಅಮೂಲ್ಯ ನಿಧಿಯಾಗಿದೆ ಎಂಬ ರಹಸ್ಯದ ಕುರಿತು ಧ್ಯಾನಿಸಿದರು.

ಸುವಾರ್ತೆಯಲ್ಲಿ ಬರುವ ಗುಪ್ತ ನಿಧಿ ಮತ್ತು ಅಮೂಲ್ಯ ಮುತ್ತಿನ (ಮತ್ತಾಯ 13:44–52) ದೃಷ್ಟಾಂತಗಳನ್ನು ವಿವರಿಸಿದ ಜಗದ್ಗುರುಗಳು, ದೇವರ ರಾಜ್ಯವು ಎಷ್ಟೊಂದು ಆಳವಾದ ಆನಂದವನ್ನು ನೀಡುತ್ತದೆ ಎಂದರೆ, ಅದರ ನಿಮಿತ್ತ ಎಲ್ಲವನ್ನೂ ತ್ಯಜಿಸುವುದು ನಷ್ಟವೆಂದು ಭಾಸವಾಗುವುದಿಲ್ಲ ಬದಲಾಗಿ ಅದು ಮಹತ್ತರ ಲಾಭವೆಂದು ಅನುಭವವಾಗುತ್ತದೆ ಎಂದು ಹೇಳಿದರು.

"ದೇವರ ರಾಜ್ಯದೊಂದಿಗೆ ಮುಖಾಮುಖಿಯಾಗುವುದು ಮಾನವನ ಜೀವನದಲ್ಲಿ ಒಂದು ಮಹತ್ವದ ತಿರುವನ್ನು ಉಂಟುಮಾಡುತ್ತದೆ. ಅದು ಜೀವನವನ್ನು ಸೀಮಿತಗೊಳಿಸುವುದಿಲ್ಲ ಬದಲಾಗಿ ಅದನ್ನು ಇನ್ನಷ್ಟು ವಿಶಾಲಗೊಳಿಸುತ್ತದೆ," ಎಂದು ಜಗದ್ಗುರುಗಳು ಹೇಳಿದರು. "ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಅಗತ್ಯವಿದ್ದರೆ, ಅದು ನಮ್ಮ ಜೀವನವು ಕಡಿಮೆ ಅವಕಾಶಗಳಿಗೆ ಅಲ್ಲ, ಇನ್ನಷ್ಟು ವಿಶಾಲವಾದ ಅವಕಾಶಗಳಿಗೆ ತೆರೆದುಕೊಳ್ಳುವಂತಿರಬೇಕು."

ಯೇಸು ಸಾಮಾನ್ಯ ಜನರ ದೈನಂದಿನ ಬದುಕಿನ ಚಿತ್ರಣಗಳ ಮೂಲಕ ದೇವರ ರಾಜ್ಯದ ಸೌಂದರ್ಯವನ್ನು ಪ್ರಕಟಿಸುತ್ತಾನೆ ಎಂದು ಜಗದ್ಗುರುಗಳು ಹೇಳಿದರು. ರೈತರು, ವ್ಯಾಪಾರಿಗಳು, ಮೀನುಗಾರರು, ಧರ್ಮಶಾಸ್ತ್ರಿಗಳು, ರೊಟ್ಟಿ ತಯಾರಿಸುವ ಮಹಿಳೆಯರು, ಕಟ್ಟಡ ನಿರ್ಮಿಸುವವರು, ನಿರ್ವಾಹಕರು, ಕುರುಬರು ಮತ್ತು ಕೃಷಿಕರ ಜೀವನದ ಉದಾಹರಣೆಗಳನ್ನು ಬಳಸಿಕೊಂಡು ಯೇಸು ದೇವರ ರಾಜ್ಯವನ್ನು ವಿವರಿಸುತ್ತಾರೆ ಎಂದು ಅವರು ನೆನಪಿಸಿದರು.

ಈ ಎಲ್ಲ ಉದಾಹರಣೆಗಳ ಮೂಲಕ ದೇವರ ರಾಜ್ಯವನ್ನು ಜೀವನದ ವಿವಿಧ ಸಂದರ್ಭಗಳಲ್ಲಿ ಕಂಡುಕೊಳ್ಳಬಹುದು ಮತ್ತು ಅದು ಪುರುಷರು ಹಾಗೂ ಮಹಿಳೆಯರು, ಯುವಕರು ಮತ್ತು ವೃದ್ಧರು, ಬಡವರು ಮತ್ತು ಶ್ರೀಮಂತರು ಎಲ್ಲರನ್ನೂ ಆಳವಾದ ಅಂತರಂಗದ ನವೀಕರಣಕ್ಕೆ ಕರೆಯುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಕ್ರಿಸ್ತನಲ್ಲಿ ಒಂದಾಗಿರುವ ಧರ್ಮ ಸಭೆ

ಇಂದಿನ ಧರ್ಮ ಸಭೆ ಕೂಡ ಇದೇ ವೈವಿಧ್ಯತೆಯ ಪ್ರತಿಬಿಂಬವಾಗಿದೆ ಎಂದು ಜಗದ್ಗುರುಗಳು ಹೇಳಿದರು. ವಿಭಿನ್ನ ಹಿನ್ನೆಲೆಗಳು, ಸಂಸ್ಕೃತಿಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಜನರು ಧರ್ಮ ಸಭೆಯಲ್ಲಿ ಒಂದಾಗುತ್ತಾರೆ ಆದರೆ ಎಲ್ಲರೂ ಯೇಸು ಕ್ರಿಸ್ತನಲ್ಲಿ ತಮ್ಮ ಏಕತೆಯನ್ನು ಅರಿತುಕೊಳ್ಳಲು ಕರೆಯಲ್ಪಟ್ಟವರಾಗಿದ್ದಾರೆ.

"ಅವರೇ ಅಡಗಿರುವ ಅಮೂಲ್ಯ ನಿಧಿ ಅವರೇ ಅಪಾರ ಮೌಲ್ಯದ ಮುತ್ತು ಚದುರಿಹೋಗಿರುವ ಎಲ್ಲರನ್ನು ಒಟ್ಟುಗೂಡಿಸುವ ಬಲೆಯೂ ಅವರೇ," ಎಂದು ಜಗದ್ಗುರುಗಳು ಹೇಳಿದರು.

ಆರಂಭದಿಂದಲೇ ಯೇಸು, ಸಾಮಾನ್ಯವಾಗಿ ಪರಸ್ಪರ ಭೇಟಿಯಾಗದವರನ್ನೂ ತನ್ನ ಸುತ್ತ ಒಟ್ಟುಗೂಡಿಸಿದರು. ಹೀಗೆ ದೇವರು ಯಾರನ್ನೂ ಪಕ್ಷಪಾತದಿಂದ ನೋಡುವುದಿಲ್ಲ ಮತ್ತು ಅವರ ಪ್ರೀತಿಯು ವಿಶೇಷವಾಗಿ ಚಿಕ್ಕವರು, ನಿರ್ಲಕ್ಷಿಸಲ್ಪಟ್ಟವರು ಹಾಗೂ ಸಮಾಜದಿಂದ ಕಡೆಗಣಿಸಲ್ಪಟ್ಟವರ ಕಡೆಗೆ ಹರಿಯುತ್ತದೆ ಎಂಬುದನ್ನು ಅವರು ತೋರಿಸಿದರು.

ನಿಜವಾಗಿಯೂ ಮಹತ್ವವುಳ್ಳದ್ದನ್ನು ಗುರುತಿಸುವುದು

ನಿಜವಾದ ಮೌಲ್ಯವುಳ್ಳದ್ದನ್ನು ಗುರುತಿಸುವ ಜ್ಞಾನವನ್ನು ನೀಡುವಂತೆ ಯುವರಾಜ ಸೊಲೊಮೋನನು ಬೇಡಿಕೊಂಡ ವರವನ್ನೇ ನಾವು ಕೂಡ ದೇವರಲ್ಲಿ ಕೋರಿ ಪಡೆಯಬೇಕೆಂದು ಜಗದ್ಗುರುಗಳು ವಿಶ್ವಾಸಿಗಳನ್ನು ಆಹ್ವಾನಿಸಿದರು.

ಉಪಭೋಗವಾದದ ಸಂಸ್ಕೃತಿಯು ಮಾನವನಲ್ಲಿ ನಿರಂತರವಾಗಿ ಹೊಸ ಹೊಸ ಆಸೆಗಳನ್ನು ಹುಟ್ಟಿಸುತ್ತದೆ. ಅವುಗಳಿಗೆ ಪರಿಹಾರಗಳನ್ನೂ ನೀಡುವಂತೆ ತೋರುತ್ತದೆ. ಆದರೆ ಅವು ಮಾನವನಿಗೆ ಶಾಶ್ವತ ತೃಪ್ತಿಯನ್ನು ನೀಡುವುದಿಲ್ಲ ಬದಲಾಗಿ ಮಾನವ ಹೃದಯಕ್ಕೆ ಹಾನಿಯನ್ನೇ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.

ಕ್ರೈಸ್ತರು ನಿಜವಾದ ಅಮೂಲ್ಯ ನಿಧಿಯನ್ನು ಗುರುತಿಸಲು ಕಲಿಯಬೇಕು ಎಂದು ಜಗದ್ಗುರುಗಳು ಹೇಳಿದರು. ಆ ನಿಜವಾದ ನಿಧಿಯೆಂದರೆ ದೇವರೊಂದಿಗಿನ ಜೀವಂತ ಸಂಬಂಧ. ಆ ಸಂಬಂಧವೇ ಮಾನವನ ಹೃದಯವನ್ನು ನಿಜವಾದ ಸಂತೋಷದಿಂದ ತುಂಬಿಸುತ್ತದೆ ಮತ್ತು ಪರಸ್ಪರ ಉತ್ತಮ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

26 ಜುಲೈ 2026, 17:19