Pope Leo leads the Angelus prayer in Piazza della Liberta in Castel Gandolfo

ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರುಗಳು: "ದೇವರ ರಾಜ್ಯವು ಬಲದಿಂದಲ್ಲ, ಪ್ರೀತಿಯ ಶಕ್ತಿಯಿಂದ ಮೌನವಾಗಿ ವಿಸ್ತರಿಸುತ್ತದೆ."

ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ತಮ್ಮ ಸಂದೇಶದಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ದೇವರ ರಾಜ್ಯವು ಅಧಿಕಾರ, ಬಲಪ್ರಯೋಗ ಅಥವಾ ಪ್ರಭಾವದ ಮೂಲಕವಲ್ಲ; ಬದಲಾಗಿ ನಮ್ರತೆ, ತಾಳ್ಮೆ ಮತ್ತು ಪ್ರೀತಿಯ ಮೂಲಕ ಮೌನವಾಗಿ ಬೆಳೆಯುತ್ತದೆ ಎಂದು ಹೇಳಿದರು. ದೇವರ ಅಪ್ರತ್ಯಕ್ಷ ಕಾರ್ಯದ ಮೇಲೆ ಸಂಪೂರ್ಣ ವಿಶ್ವಾಸವಿರಿಸಿ, ಲೋಕದಲ್ಲಿ "ಸುವಾರ್ತೆಯ ಪುಟ್ಟ ಬೀಜಗಳಾಗಿ" ಬದುಕುವಂತೆ ಅವರು ಕ್ರೈಸ್ತರನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ದೇವರ ಶಕ್ತಿಯ ಅದ್ಭುತ ಪ್ರದರ್ಶನಗಳನ್ನು ನಿರೀಕ್ಷಿಸುವ ಮನೋಭಾವವನ್ನು ತ್ಯಜಿಸುವಂತೆ ಕ್ರೈಸ್ತರಿಗೆ ಕರೆ ನೀಡಿದರು. ದೇವರ ರಾಜ್ಯವು ಸಾಸಿವೆಯ ಕಾಳಿನಂತೆ ಹಾಗೂ ಹಿಟ್ಟಿನಲ್ಲಿರುವ ಹುಳಿಯಂತೆ ಮೌನವಾಗಿ ಮತ್ತು ತಾಳ್ಮೆಯಿಂದ ಬೆಳೆಯುತ್ತದೆ ಎಂದು ಅವರು ನೆನಪಿಸಿದರು.

ಸಂತ ಮತ್ತಾಯರ ಸುವಾರ್ತೆಯಲ್ಲಿರುವ ಮೂರು ಸಾಮ್ಯಗಳಾದ ಗೋಧಿ ಮತ್ತು ಕಳೆ, ಸಾಸಿವೆ ಕಾಳು ಹಾಗೂ ಹುಳಿ ಕುರಿತು ಧ್ಯಾನಿಸಿದ ಜಗದ್ಗುರುಗಳು, ದೇವರು ಇತಿಹಾಸದಲ್ಲಿಯೂ ಮತ್ತು ಪ್ರತಿಯೊಬ್ಬರ ಜೀವನದಲ್ಲಿಯೂ ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದನ್ನು ಈ ಸಾಮ್ಯಗಳು ಬಿಚ್ಚಿಡುತ್ತವೆ ಎಂದು ಹೇಳಿದರು. ದೇವರು ತನ್ನನ್ನು ಬಲಪ್ರಯೋಗದಿಂದ ಅಥವಾ ವೈಭವದಿಂದ ಪ್ರಕಟಿಸಿಕೊಳ್ಳುವುದಿಲ್ಲ; ಬದಲಾಗಿ, "ಸಣ್ಣತನವನ್ನೇ" ತನ್ನ ಮೌನ ಮತ್ತು ತಾಳ್ಮೆಯ ಪ್ರೀತಿಯ ಸಂಕೇತವಾಗಿ ಆರಿಸಿಕೊಳ್ಳುತ್ತಾನೆ ಎಂದು ಅವರು ತಿಳಿಸಿದರು.

"ದೇವರು ನಮ್ಮನ್ನು ಸ್ವತಂತ್ರರನ್ನಾಗಿ ಬಿಡುತ್ತಾನೆ, ಆತನನ್ನು ಸ್ವೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಆಯ್ಕೆಯನ್ನು ನಮ್ಮ ಕೈಯಲ್ಲೇ ಇಡುತ್ತಾನೆ," ಎಂದು ಜಗದ್ಗುರುಗಳು ಹೇಳಿದರು. ಕಳೆಯ ನಡುವೆಯೂ ದೇವರ ಪ್ರೀತಿ ಕಾರ್ಯನಿರ್ವಹಿಸುತ್ತದೆ; ಅತಿ ಸಣ್ಣ ಬೀಜದಂತೆ ಅದು ಕಾಣಿಸದೆ ಬೆಳೆಯುತ್ತದೆ ಮತ್ತು ಹಿಟ್ಟಿನಲ್ಲಿರುವ ಹುಳಿಯಂತೆ ಜಗತ್ತನ್ನು ಮೌನವಾಗಿ ರೂಪಾಂತರಗೊಳಿಸುತ್ತದೆ ಎಂದು ಅವರು ವಿವರಿಸಿದರು.

ಅನೇಕರು ದೇವರು ತಕ್ಷಣವೇ ಮಧ್ಯಪ್ರವೇಶಿಸಿ ಜಗತ್ತಿನಲ್ಲಿರುವ ಕೆಟ್ಟದ್ದನ್ನೆಲ್ಲ ದೂರಮಾಡಬೇಕು ಎಂದು ನಿರೀಕ್ಷಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು. ಆದರೆ ಕ್ರೈಸ್ತ ಜೀವನ ಮತ್ತು ಧರ್ಮ ಸಭೆಯ ಕುರಿತು ಇಂತಹ ನಿರೀಕ್ಷೆಗಳು ತಪ್ಪು ಕಲ್ಪನೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು. ದುಷ್ಟತನದ ನಡುವೆಯೂ ದೇವರ ರಾಜ್ಯವು ಬೆಳೆಯುತ್ತಲೇ ಇರುತ್ತದೆ ಎಂಬುದನ್ನು ಗುರುತಿಸುವುದು, ಕತ್ತಲೆಯ ನಡುವೆಯೂ ಮೊಳೆಯುತ್ತಿರುವ ಒಳ್ಳೆಯದನ್ನು ಕಾಣುವುದು ಹಾಗೂ ದೇವರ ಕೃಪೆಯ ಕಾರ್ಯಕ್ಕೆ ತಾಳ್ಮೆಯಿಂದ ಸಹಕರಿಸುವುದು ಕ್ರೈಸ್ತರ ಕರ್ತವ್ಯವಾಗಿದೆ ಎಂದು ಹೇಳಿದರು.

ದೈನಂದಿನ ಜೀವನದ ಸಾಮಾನ್ಯ ಕ್ಷಣಗಳಲ್ಲಿಯೇ ದೇವರ ರಾಜ್ಯವು ಮೌನವಾಗಿ ಬೆಳೆಯುತ್ತದೆ ಎಂದು ಜಗದ್ಗುರುಗಳು ನೆನಪಿಸಿದರು. ದೇವರು ದೂರವಾಗಿರುವಂತೆ ತೋರಿದರೂ, ಆತನು ಸದಾ ನಮ್ಮೊಂದಿಗಿದ್ದು, ತನ್ನ ಪ್ರೀತಿಯ ಮೂಲಕ ನಮ್ಮನ್ನು ನೆರವೇರಿಸುತ್ತಾನೆ ಎಂದು ಅವರು ವಿಶ್ವಾಸ ತುಂಬಿದರು. ದೇವರ ಈ ಕಾರ್ಯವಿಧಾನವೇ ಪ್ರತಿಯೊಬ್ಬ ಕ್ರೈಸ್ತನ ಮತ್ತು ಇಡೀ ಧರ್ಮ ಸಭೆಯ ಜೀವನಶೈಲಿಯಾಗಬೇಕು ಎಂದೂ ಅವರು ಹೇಳಿದರು.

ಕ್ರೈಸ್ತರು "ಸುವಾರ್ತೆ-ಕೇಂದ್ರಿತ ಜೀವನ ವಿಧಾನ"ವನ್ನು ಅಳವಡಿಸಿಕೊಳ್ಳಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಅಹಂಕಾರ, ಇತರರ ಮೇಲೆ ಪ್ರಭುತ್ವ ಸಾಧಿಸುವ ಮನೋಭಾವ ಅಥವಾ ಅಧಿಕಾರದ ಮೂಲಕ ನಂಬಿಕೆಯನ್ನು ಹೇರಲು ಪ್ರಯತ್ನಿಸುವುದನ್ನು ತ್ಯಜಿಸಿ, ದೇವರ ಮೌನ ಕಾರ್ಯದ ಮೇಲೆ ಸಂಪೂರ್ಣ ವಿಶ್ವಾಸವಿಡಬೇಕು ಎಂದು ಅವರು ಹೇಳಿದರು. ಬಳಿಕ, ನಂತರದ ಜಗದ್ಗುರು XVIನೇ ಬೆನೆಡಿಕ್ಟ್  ಆಗಿದ್ದ ಕಾರ್ಡಿನಲ್ ಜೋಸೆಫ್ ರಾಟ್ಸಿಂಗರ್ ರವರ ಮಾತುಗಳನ್ನು ಉಲ್ಲೇಖಿಸಿದ ಅವರು, "ಕ್ರೈಸ್ತರು ಯಶಸ್ಸು ಮತ್ತು ವೈಭವದ ತರ್ಕವನ್ನು ಅನುಸರಿಸುವವರಲ್ಲ; ಬೀಜದ ತರ್ಕವನ್ನು ಅನುಸರಿಸುವವರು. ಅಂದರೆ, ತಮ್ಮನ್ನು ತಾವು ಚಿಕ್ಕವರನ್ನಾಗಿ ಮಾಡಿಕೊಂಡು ಇತರರಿಗೆ ಸೇವೆ ಸಲ್ಲಿಸುವವರಾಗಿರಬೇಕು" ಎಂದು ಹೇಳಿದರು.

ಕೊನೆಯಲ್ಲಿ, "ಸುವಾರ್ತೆಯ ಪುಟ್ಟ ಬೀಜಗಳಾಗಿ" ಮತ್ತು "ಪ್ರೀತಿಯ ಹುಳಿಯಾಗಿ" ಲೋಕವನ್ನು ಒಳಗಿನಿಂದಲೇ ರೂಪಾಂತರಗೊಳಿಸುವವರಾಗಲು ಕ್ರೈಸ್ತರನ್ನು ಜಗದ್ಗುರುಗಳು ಪ್ರೋತ್ಸಾಹಿಸಿದರು. ದೇವರ ವಾಕ್ಯದ ಬೀಜವನ್ನು ನಮ್ರತೆಯಿಂದ ಸ್ವೀಕರಿಸಿದ ಧನ್ಯ ಕನ್ಯಾಮರಿಯ ಮಧ್ಯಸ್ಥಿಕೆಗೆ ಎಲ್ಲ ವಿಶ್ವಾಸಿಗಳನ್ನು ಸಮರ್ಪಿಸುತ್ತಾ, ನಂಬಿಕೆಯ ಪಯಣದಲ್ಲಿ ಅವರು ನಮ್ಮನ್ನು ಸದಾ ಬೆಂಬಲಿಸಲಿ ಎಂದು ಪ್ರಾರ್ಥಿಸಿದರು.

19 ಜುಲೈ 2026, 20:57