ಜಗದ್ಗುರು ಲಿಯೋರವರು: ಯುದ್ಧದಿಂದ ನರಳುತ್ತಿರುವವರನ್ನು ಮತ್ತು ಪ್ರಾಣ ಕಳೆದುಕೊಳ್ಳುತ್ತಿರುವವರನ್ನು ನಾವು ಎಂದಿಗೂ ಮರೆಯಬಾರದು.
ವ್ಯಾಟಿಕನ್ ವರದಿ
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿನ ಪ್ರೇಷಿತರ ಅರಮನೆಯ ಪ್ರವೇಶದ್ವಾರದಿಂದ, ಅಲ್ಲಿ ಕೆಲ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಭಾನುವಾರದ ತ್ರಿಕಾಲ ಪ್ರಾರ್ಥನೆಯೊಂದಿಗೆ ತಮ್ಮ ವಿಶ್ರಾಂತಿ ಅವಧಿಯನ್ನು ಕಳೆಯುತ್ತಿರುವ ಜಗದ್ಗುರು XIVನೇ ಲಿಯೋರವರು, ಮತ್ತೊಮ್ಮೆ ವಿಶ್ವದ ವಿವಿಧ ಭಾಗಗಳಲ್ಲಿ ಮುಂದುವರಿಯುತ್ತಿರುವ ಸಂಘರ್ಷಗಳತ್ತ ತಮ್ಮ ಕಳವಳ ಮತ್ತು ಪ್ರಾರ್ಥನೆಯನ್ನು ವ್ಯಕ್ತಪಡಿಸಿದರು.
"ಯುದ್ಧ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಇನ್ನೂ ತೀವ್ರ ಕಳವಳದಿಂದ ಗಮನಿಸುತ್ತಿದ್ದೇವೆ. ಈ ಸಂಘರ್ಷಗಳಿಂದ ನರಳುತ್ತಿರುವವರನ್ನು ಮತ್ತು ಪ್ರಾಣ ಕಳೆದುಕೊಳ್ಳುತ್ತಿರುವವರನ್ನು ನಾವು ಮರೆಯಬಾರದು. ಶಾಂತಿಗಾಗಿ ನಡೆಯುತ್ತಿರುವ ಉದಾರ ಪ್ರಯತ್ನಗಳೊಂದಿಗೆ ನಮ್ಮ ನಿರಂತರ ಪ್ರಾರ್ಥನೆಗಳನ್ನೂ ಸೇರಿಸೋಣ," ಎಂದು ಜಗದ್ಗುರುಗಳು ಹೇಳಿದರು.
ಇದೇ ಸಂದರ್ಭದಲ್ಲಿ, ಉಕ್ರೇನ್ನಲ್ಲಿ ಮತ್ತೊಮ್ಮೆ ಸಂಭವಿಸಿರುವ ದಾಳಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ರಾಜಧಾನಿ ಕೀವ್ ಮೇಲೆ ನಡೆದ ಭಾರೀ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಇದೇ ವೇಳೆ, ಉಕ್ರೇನಿನ ಸೇನೆಯು ಕಪ್ಪು ಸಮುದ್ರ ಮತ್ತು ಅಜೋವ್ ಸಮುದ್ರ ಪ್ರದೇಶಗಳಲ್ಲಿನ ರಷ್ಯಾದ ಸೇನಾ ಗುರಿಗಳ ಮೇಲೆ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದೆ. ಮತ್ತೊಂದೆಡೆ, ದಕ್ಷಿಣ ಇರಾನ್ನಲ್ಲಿ ಅಮೆರಿಕ ನಡೆಸಿದ ಹೊಸ ವೈಮಾನಿಕ ದಾಳಿಗಳ ನಂತರ, ಟೆಹ್ರಾನ್ ಕುವೈತ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಸಂಘರ್ಷದ ಪರಿಣಾಮ ಇರಾಕ್ನ ಕುರ್ಡಿಸ್ತಾನ್ ಪ್ರದೇಶಕ್ಕೂ ತಟ್ಟಿದೆ. ಕಳೆದ ಶುಕ್ರವಾರ ಜೋರ್ಡನ್ನ ಮುವಾಫಕ್ ಅಲ್ ಸಾಲ್ತಿ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಅಮೆರಿಕದ ಸೈನಿಕರು ಮೃತಪಟ್ಟಿದ್ದು, ಮತ್ತೋರ್ವ ಇನ್ನೂ ನಾಪತ್ತೆಯಾಗಿರುವ ಘಟನೆಯ ಹಿನ್ನೆಲೆಯಲ್ಲಿ ಈ ಹೊಸ ಕಾರ್ಯಾಚರಣೆಯನ್ನು ಅಮೆರಿಕ ಸಮರ್ಥಿಸಿಕೊಂಡಿದೆ.
ತ್ರಿಕಾಲ ಪ್ರಾರ್ಥನೆಯ ಬಳಿಕ ಜಗದ್ಗುರು XIVನೇ ಲಿಯೋರವರು ಕ್ಯಾಸ್ಟೆಲ್ ಗಾಂಡೋಲ್ಫೊ ನಿವಾಸಿಗಳಿಗೆ ತಮ್ಮ ಆತ್ಮೀಯ ಶುಭಾಶಯಗಳು ಹಾಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೆ, "ವಿಶ್ವದ ಎಲ್ಲ ಭಾಗಗಳಿಂದ ಆಗಮಿಸಿರುವ ಯಾತ್ರಿಕರಿಗೆ" ಹೃತ್ಪೂರ್ವಕ ಸ್ವಾಗತ ಕೋರಿದರು.
ವಿಶೇಷವಾಗಿ, ಮದರ್ ಎಲ್ವಿರಾ ಸ್ಥಾಪಿಸಿದ ಸೆನಾಕೊಲೊ ಸಮುದಾಯ, ಫೋಕೊಲಾರೆ ಚಳವಳಿಯ ನ್ಯೂ ಫ್ಯಾಮಿಲೀಸ್ ಮೂವ್ಮೆಂಟ್, ಎಪಿಆರ್ಎ ಬೇಸಿಗೆ ಅಧ್ಯಯನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮೆಕ್ಸಿಕೋ ವಿದ್ಯಾರ್ಥಿಗಳು ಹಾಗೂ ಕಥೊಲಿಕ ವರ್ಲ್ಡ್ವ್ಯೂ ಫೆಲೋಶಿಪ್ ಸದಸ್ಯರಿಗೆ ಅವರು ವಿಶೇಷ ಶುಭಾಶಯಗಳನ್ನು ತಿಳಿಸಿದರು.
ಇಂಗ್ಲಿಷ್ನಲ್ಲಿ ಮಾತನಾಡಿದ ಜಗದ್ಗುರುಗಳು, ರೆಗ್ನುಮ್ ಕ್ರಿಸ್ತಿ ಸಂಘಟನೆಯ ಯುವ ಸದಸ್ಯರು, ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರೂಪಕರಿಗೆ ಹಾಗೂ ಸಿಡ್ನಿಯ ಸಹಾಯಕ ಬಿಷಪ್ ಆಂಥನಿ ಪರ್ಸಿರವರ ನೇತೃತ್ವದಲ್ಲಿ "ದಿ ಲಯನ್ ಪಿಲ್ಗ್ರಿಮೇಜ್" ಯಾತ್ರೆಯಲ್ಲಿ ಭಾಗವಹಿಸಿರುವ ಆಸ್ಟ್ರೇಲಿಯಾದ ಯಾತ್ರಿಕರಿಗೂ ಆತ್ಮೀಯ ಶುಭಾಶಯಗಳನ್ನು ಅರ್ಪಿಸಿದರು.
