ಅಲ್ಲೆಲೂಯಾ ಕಥೋಲಿಕ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿರುವ ಬ್ರೆಜಿಲ್‌ನ ಯುವಜನರಿಗೆ ಜಗದ್ಗುರು XIVನೇ ಲಿಯೋರವರ ವೀಡಿಯೊ ಸಂದೇಶ. ಅಲ್ಲೆಲೂಯಾ ಕಥೋಲಿಕ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿರುವ ಬ್ರೆಜಿಲ್‌ನ ಯುವಜನರಿಗೆ ಜಗದ್ಗುರು XIVನೇ ಲಿಯೋರವರ ವೀಡಿಯೊ ಸಂದೇಶ. 

ಜಗದ್ಗುರುಗಳು ಬ್ರೆಜಿಲ್‌ನ ಯುವಕರಿಗೆ: ಹೆಚ್ಚಿನ ಪ್ರೀತಿ ಮತ್ತು ಸಮರ್ಪಣೆಯಿಂದ ದೇವರ ನಗರವನ್ನು ನಿರ್ಮಿಸಿರಿ.

ಬ್ರೆಜಿಲಿನ ಕಥೋಲಿಕ ಸಂಗೀತ ಉತ್ಸವ "ಹಲ್ಲೆಲೂಯಾ"ಗಾಗಿ ಕಳುಹಿಸಿದ ವೀಡಿಯೊ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಯುವಜನರಿಗೆ ತಮ್ಮ ಯೌವನವನ್ನು ಸುವಾರ್ತಾ ಪ್ರಚಾರದ ಶಕ್ತಿಯಾಗಿ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಇದರಿಂದ ಇತರರು ಯೇಸು ಕ್ರಿಸ್ತನನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ ಯೇಸು ಮಾನವನ ಹೃದಯದ ಆಳವಾದ ಹಂಬಲಗಳಿಗೆ ಉತ್ತರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ನಿಜವಾದ ಅಸ್ತಿತ್ವದ ಸತ್ಯವನ್ನು ಅನಾವರಣಗೊಳಿಸುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ವ್ಯಾಟಿಕನ್ ವರದಿ

ಜುಲೈ 26, ಭಾನುವಾರದಂದು ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಬ್ರೆಜಿಲಿನ ಯುವಜನರಿಗೆ, ದೇವರ ಪ್ರೀತಿಯು ಸುವಾರ್ತಾ ಪ್ರಚಾರದ ಶಕ್ತಿಯಾಗಿ ಕಾರ್ಯನಿರ್ವಹಿಸಿ, ಉತ್ತಮ ಜಗತ್ತನ್ನು ನಿರ್ಮಿಸಲು ತಮ್ಮನ್ನು ಪ್ರೇರೇಪಿಸುವಂತೆ ಕರೆ ನೀಡಿದರು.

"ಪವಿತ್ರಾತ್ಮನು ನಿಮ್ಮೊಳಗೆ ಇನ್ನಷ್ಟು ಆಳವಾದ ಪ್ರೀತಿಯನ್ನು ಪುನರುಜ್ಜೀವನಗೊಳಿಸಲಿ. ಆ ಪ್ರೀತಿಯು ನಿಮ್ಮ ಯೌವನವನ್ನು ಸುವಾರ್ತಾ ಪ್ರಚಾರದ ಶಕ್ತಿಯಾಗಿ ಪರಿವರ್ತಿಸಲಿ. ಹೀಗೆ ನಿಮ್ಮಲ್ಲಿ ಪ್ರತಿಯೊಬ್ಬರೂ ನಾವು ಹೃತ್ಪೂರ್ವಕವಾಗಿ ಹಂಬಲಿಸುವ 'ಶಾಂತಿಯ ನಗರ'ದ ನಿರ್ಮಾಣದಲ್ಲಿ ಜೀವಂತ ಕಲ್ಲುಗಳಾಗಲಿ. ಅಥವಾ, ಸಂತ ಆಗಸ್ಟಿನ್ ಹೇಳುವಂತೆ, ಮಾನವನ ನಗರದ ಮಧ್ಯದಲ್ಲಿಯೇ ನೆಲೆಸಿರುವ 'ದೇವರ ನಗರ'ದ ನಿರ್ಮಾಣದಲ್ಲಿ ಪಾಲುದಾರರಾಗಲಿ," ಎಂದು ಜಗದ್ಗುರುಗಳು ಹೇಳಿದರು.

ಜುಲೈ 22ರಿಂದ 26ರವರೆಗೆ ಬ್ರೆಜಿಲಿನ ಈಶಾನ್ಯ ಭಾಗದ ಫೋರ್ಟಲೆಝಾ ನಗರದಲ್ಲಿ ನಡೆದ "ಹಲ್ಲೆಲೂಯಾ ಉತ್ಸವ"ದ ಪ್ರಯುಕ್ತ ಅವರು ಈ ವೀಡಿಯೊ ಸಂದೇಶವನ್ನು ಕಳುಹಿಸಿದರು. ಇದು ಶಲೋಮ್ ಕಥೋಲಿಕ ಸಮುದಾಯ ಎಂಬ ವಿಶ್ವಾಸಿಗಳ ಖಾಸಗಿ ಸಂಘಟನೆಯು ಪ್ರತಿವರ್ಷ ಆಯೋಜಿಸುವ ಕಥೋಲಿಕ ಸಂಗೀತ ಉತ್ಸವವಾಗಿದೆ.

ದೇವರು ನಮ್ಮ ನಿಜಸ್ವರೂಪವನ್ನು ನಮಗೆ ಪ್ರಕಟಿಸುತ್ತಾರೆ

"ಯುವಜನರೊಂದಿಗೆ ಇರುವುದು ಎಷ್ಟು ಅದ್ಭುತವಾದ ಅನುಭವ!" ಎಂದು ಹೇಳಿದ ಜಗದ್ಗುರುಗಳು, ಅವರ ಉತ್ಸಾಹವು "ಸಾಂಕ್ರಾಮಿಕದಂತೆ ಇತರರಿಗೂ ಹರಡಿ, ನಮ್ಮೆಲ್ಲರಲ್ಲೂ ಹೊಸ ಮಿಷನರಿ ಉತ್ಸಾಹವನ್ನು ಜಾಗೃತಗೊಳಿಸುತ್ತದೆ" ಎಂದು ಹೇಳಿದರು.

ಜಗತ್ತನ್ನು ಪರಿವರ್ತಿಸಲು ಈ ಮಿಷನರಿ ಮನೋಭಾವ ಅತ್ಯಗತ್ಯವಾಗಿದೆ ಮತ್ತು ಪ್ರತಿಯೊಬ್ಬ ಕ್ರೈಸ್ತನಿಂದ ದೇವರು ಇದೇ ಮನೋಭಾವವನ್ನು ನಿರೀಕ್ಷಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು.

"ಇಂದಿಗೂ ಅನೇಕ ಜನರು ಯೇಸುವನ್ನು ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಮಾನವನ ಹೃದಯದ ಆಳವಾದ ಹಂಬಲಗಳಿಗೆ ಉತ್ತರವಾಗಿರುವವರು ಯೇಸುವೇ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ನಿಜಸ್ವರೂಪದ ಸತ್ಯವನ್ನು ಪ್ರಕಟಿಸುವವರೂ ಅವರೇ," ಎಂದು ಅವರು ಹೇಳಿದರು.

"ಆದ್ದರಿಂದ ಧೈರ್ಯದಿಂದ ಘೋಷಿಸಿ ಕ್ರಿಸ್ತನಿಲ್ಲದ ಜೀವನವು ಕೃಪೆಯಿಲ್ಲದ ಜೀವನವಾಗಿದೆ. ಅವರೇ ಮಾರ್ಗ, ಸತ್ಯ ಮತ್ತು ಜೀವ. ನಮ್ಮ ಜೀವನಕ್ಕೂ ಸಮಸ್ತ ಸೃಷ್ಟಿಗೂ ಅರ್ಥವನ್ನು ನೀಡುವವರು ಅವರೇ. ನಮ್ಮನ್ನು ಚಲಿಸುವಂತೆ ಮಾಡುವ ಈ ನಂಬಿಕೆಯನ್ನು ನಾವು ಪ್ರೀತಿಸುವವರೊಂದಿಗೂ, ಅದರ ಅತ್ಯಂತ ಅಗತ್ಯವಿರುವವರೊಂದಿಗೂ ಹಂಚಿಕೊಳ್ಳುವುದು ಅಮೂಲ್ಯವಾಗಿದೆ," ಎಂದು ಜಗದ್ಗುರುಗಳು ಹೇಳಿದರು.

ನಂಬಿಕೆಯ ಜ್ವಾಲೆಯನ್ನು ಸದಾ ಪ್ರಜ್ವಲಿತವಾಗಿರಿಸಿರಿ

ಧಾರ್ಮಿಕ ಯುವಜನ ಸಮಾವೇಶಗಳಲ್ಲಿ ಅನುಭವಿಸಿದ ಉತ್ಸಾಹವು ಕಾಲಕ್ರಮೇಣ ಕಡಿಮೆಯಾಗಬಹುದು ಎಂದು ಜಗದ್ಗುರುಗಳು ಒಪ್ಪಿಕೊಂಡರು. ಆದರೆ ನಂಬಿಕೆಯ ಜ್ವಾಲೆಯನ್ನು ಜೀವಂತವಾಗಿರಿಸಲು ಮತ್ತು ಪುನರುತ್ಥಾನದ ಸಾಕ್ಷಿಗಳಾಗಿರಲು ಪ್ರಾರ್ಥನೆಯು ಅತ್ಯಗತ್ಯವೆಂದು ಅವರು ಒತ್ತಿ ಹೇಳಿದರು.

"ಪ್ರಭುವಿನೊಂದಿಗೆ ನಿಜವಾದ ಸಂಬಂಧವನ್ನು ಹೊಂದಲು ಸ್ಥಿರತೆ, ಪರಿಶ್ರಮ ಮತ್ತು ನಮ್ಮ ಪರಲೋಕದ ತಂದೆಯು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ ಎಂಬ ದೃಢ ವಿಶ್ವಾಸ ಅಗತ್ಯ. ಬದಲಾಗಿ, ಅವರು ತಮ್ಮ ಪುತ್ರನ ಮೂಲಕ ನಮ್ಮನ್ನು ಎದುರುಗೊಳ್ಳಲು ಬರುತ್ತಾರೆ. ಆದ್ದರಿಂದ ಕ್ರಿಸ್ತನಿಗೆ ಹೆದರಬೇಡಿ! ಅವರು ನಮ್ಮಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ ಬದಲಾಗಿ ಎಲ್ಲವನ್ನೂ ದಯಪಾಲಿಸುತ್ತಾರೆ," ಎಂದು ಜಗದ್ಗುರುಗಳು ಹೇಳಿದರು.

ಪ್ರಭುವಿನಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವವರು ನೂರುಪಟ್ಟು ಪ್ರತಿಫಲವನ್ನು ಪಡೆಯುತ್ತಾರೆ ಎಂದೂ ಅವರು ಹೇಳಿದರು.

"ಕ್ರೀಡೆಯಲ್ಲಿ ಗೆದ್ದವರ ಸಂತೋಷವನ್ನೂ, ಸೋತವರ ದುಃಖವನ್ನೂ ನಾವು ನೋಡುತ್ತೇವೆ. ಆದರೆ ಕ್ರಿಸ್ತನೊಂದಿಗೆ ಇದ್ದಾಗ ನಾವು ಯಾವಾಗಲೂ ವಿಜಯಿಗಳಾಗಿರುತ್ತೇವೆ," ಎಂದು ಅವರು ಹೇಳಿದರು.

ತಂತ್ರಜ್ಞಾನವನ್ನು ವಿವೇಕದಿಂದ ಬಳಸಿ

ತಮ್ಮ ಸಂದೇಶದ ಕೊನೆಯಲ್ಲಿ, ಅಂತರ್ಜಾಲದ ಮೂಲಕ ಸುವಾರ್ತೆಯನ್ನು ಸಾರಲು ಶ್ರಮಿಸಿದ ಯುವ ಸಂತ ಕಾರ್ಲೊ ಅಕುತಿಸ್ ರವರನ್ನು ಜಗದ್ಗುರುಗಳು ಉದಾಹರಣೆಯಾಗಿ ಉಲ್ಲೇಖಿಸಿದರು.

ಅವರಿಂದ ಪ್ರೇರಣೆ ಪಡೆಯುವಂತೆ ಯುವಕರನ್ನು ಆಹ್ವಾನಿಸಿದ ಜಗದ್ಗುರುಗಳು, "ಸಾಮಾಜಿಕ ಜಾಲತಾಣಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ವಿವೇಕದಿಂದ, ಸಂಯಮದಿಂದ ಮತ್ತು ಶಿಸ್ತಿನಿಂದ ಬಳಸಿ. ಏಕೆಂದರೆ ಇವು ನಮ್ಮನ್ನು ನೈಜವಲ್ಲದ ಲೋಕದತ್ತ ಸೆಳೆಯುವ ಸಾಧ್ಯತೆಯಿದೆ. ಅಲ್ಲಿ ಕ್ಷಣಿಕವಾದವುಗಳು, ಕೇವಲ ಬಾಹ್ಯ ಪ್ರದರ್ಶನ ಮತ್ತು ಮೋಸಗಳು ನಿಜವಾದ ಮೌಲ್ಯಗಳನ್ನೂ, ನಿಜವಾಗಿಯೂ ಮುಖ್ಯವಾದ ಸಂಗತಿಗಳನ್ನೂ ಬದಲಿಸುವ ಅಪಾಯವಿದೆ," ಎಂದು ಎಚ್ಚರಿಸಿದರು.

26 ಜುಲೈ 2026, 17:15