"ಈಗ ನಾನು ಜಗದ್ಗುರು ಲಿಯೋರವರಿಗಾಗಿ ಕಾಯುತ್ತಿದ್ದೇನೆ," ಎಂದು ಜಗದ್ಗುರು ಫ್ರಾನ್ಸಿಸ್ ರವರ ಮನಸ್ಸನ್ನು ಮುಟ್ಟಿದ ಕ್ಯಾನರಿ ದ್ವೀಪಗಳ ವಲಸಿಗ ಹೇಳುತ್ತಾನೆ.
ವ್ಯಾಟಿಕನ್ ವರದಿ
ಗಾಳಿ, ದಾಹ, ನಿಧಾನವಾಗಿ ನೀರು ತುಂಬಿಕೊಳ್ಳುತ್ತಿದ್ದ ಕಯುಕೊ ದೋಣಿ, ಪ್ರಬಲ ಅಲೆಗಳು, ಕತ್ತಲೆ, ಸಮುದ್ರದಲ್ಲೇ ಪ್ರಾಣ ಕಳೆದುಕೊಂಡ ಜನರು—ಅವರಲ್ಲಿ ಅವನ ಸ್ವಂತ ಸಹೋದರನೂ ಇದ್ದನು. ಆದರೆ ಆ ಭೀಕರ ಅನುಭವದ ನಂತರ ಅವನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಆತ್ಮೀಯ ಸ್ವಾಗತ, ಅಡುಗೆಗಾರನಾಗಿ ಉದ್ಯೋಗ ಮತ್ತು ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡುವಂತೆ ಜಗದ್ಗುರುಗಳನ್ನು ಆಹ್ವಾನಿಸುವ ಅವಕಾಶ. ಅಲ್ಲದೆ, ಅರ್ಗುನೆಗಿನ್ ಬಂದರಿನಲ್ಲಿ ಸ್ವತಃ ಜಗದ್ಗುರುಗಳಿಗೆ ಮಾರ್ಗದರ್ಶನ ನೀಡುವ ಆಸೆಯನ್ನೂ ಅವನು ವ್ಯಕ್ತಪಡಿಸಿದ್ದನು. ಸಾವಿರಾರು ವಲಸಿಗರು ಅತಿ ಕಷ್ಟಕರ ಹಾಗೂ ಕಿಕ್ಕಿರಿದ ಪರಿಸ್ಥಿತಿಯಲ್ಲಿ ಬದುಕಬೇಕಾಗಿದ್ದ ಕಾರಣದಿಂದ ಈ ಬಂದರನ್ನು ಹಲವು ವರ್ಷಗಳ ಕಾಲ "ಅವಮಾನದ ತೀರ" ಎಂದು ಕರೆಯಲಾಗುತ್ತಿತ್ತು.
ಈ ಮಾತುಗಳನ್ನು ಓದಿದಾಗ ಜಗದ್ಗುರು ಫ್ರಾನ್ಸಿಸ್ ರವರ ಹೃದಯ ಸ್ಪರ್ಶಿತವಾಯಿತು. ಈ ಪತ್ರ ಬರೆದಿದ್ದವರು ಸೆನೆಗಲ್ನಿಂದ ಪಲಾಯನ ಮಾಡಿ ಈಗ ಗ್ರಾನ್ ಕ್ಯಾನರಿಯಾದಲ್ಲಿ ನೆಲೆಸಿರುವ ಮಾಜಿ ಮೀನುಗಾರ ಔಸೆನೂ ಫಾಲ್. ತನ್ನ ಪತ್ರದಲ್ಲಿ, ಆಫ್ರಿಕಾದ ತನ್ನ ತಾಯ್ನಾಡನ್ನು ತೊರೆದು ಕ್ಯಾನರಿ ದ್ವೀಪಗಳಲ್ಲಿ ಹೊಸ ಬದುಕು ಆರಂಭಿಸಿದ ತನ್ನ ಜೀವನಗಾಥೆಯನ್ನು ಅವನು ಹಂಚಿಕೊಂಡಿದ್ದನು. ಇದು ದುರಂತದ ನಡುವೆಯೂ ಮಾನವೀಯತೆ ಮತ್ತು ನಿಸ್ವಾರ್ಥ ಸಹಾಯ ಹೇಗೆ ಆಶಾಕಿರಣವಾಗಬಹುದು ಎಂಬುದನ್ನು ತೋರಿಸುವ ಕಥೆಯಾಗಿತ್ತು. ಅಟ್ಲಾಂಟಿಕ್ ವಲಸೆ ಮಾರ್ಗದಲ್ಲಿ ಬದುಕುಳಿದು ಕ್ಯಾನರಿ ದ್ವೀಪಗಳನ್ನು ತಲುಪಿದ ಅನೇಕ ವಲಸಿಗರ ಕಥೆಯೂ ಇದೇ ಆಗಿದೆ ಆದರೆ ಅನೇಕರಿಗೆ ಆ ಅವಕಾಶವೇ ದೊರಕಲಿಲ್ಲ.
ವಲಸಿಗರ ಸಮಸ್ಯೆಯನ್ನು ತಮ್ಮ ಜಗದ್ಗುರುಗಳ ಪದವಿಯ ಪ್ರಮುಖ ಆದ್ಯತೆಯನ್ನಾಗಿಸಿದ್ದ ಜಗದ್ಗುರು ಫ್ರಾನ್ಸಿಸ್ ರವರನ್ನು ಔಸೆನೂ ಮತ್ತು ಇತರ ಕೆಲವು ಯುವ ವಲಸಿಗರು ಕ್ಯಾನರಿ ದ್ವೀಪಗಳಿಗೆ ಆಹ್ವಾನಿಸಿದ್ದರು. ಸ್ಪೇನ್ನ ರೇಡಿಯೊ ಸಿಒಪಿಇ ಪತ್ರಕರ್ತೆ ಈವಾ ಫೆರ್ನಾಂಡೆಸ್ ರವರ ಮೂಲಕ ಜಗದ್ಗುರುಗಳಿಗೆ ತಲುಪಿಸಲಾದ ಪತ್ರದಲ್ಲಿ, "ನಿಮ್ಮ ಭೇಟಿ ನಮಗೂ ನಮ್ಮ ಸಹಯಾತ್ರಿಗಳಿಗೂ ಅಪಾರ ಸಾಂತ್ವನವಾಗಲಿದೆ" ಎಂದು ಔಸೆನೂ ಬರೆದಿದ್ದನು. ಅವರ ಕಥೆಗಳಿಂದ ಭಾವುಕರಾದ ಜಗದ್ಗುರು ಫ್ರಾನ್ಸಿಸ್ರವರು, ಲಾಂಪೆಡುಸಾ ಮತ್ತು ಲೆಸ್ಬೋಸ್ ನಂತರ ವಲಸೆಗೆ ಸಮರ್ಪಿತ ಮೂರನೇ ಯಾತ್ರೆಯಾಗಿ ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಅನಾರೋಗ್ಯ ಮತ್ತು ನಂತರ ಅವರ ನಿಧನದಿಂದ ಆ ಕನಸು ನನಸಾಗಲಿಲ್ಲ.
ಈಗ ಜಗದ್ಗುರು XIVನೇ ಲಿಯೋರವರು ತಮ್ಮ ಪೂರ್ವಾಧಿಕಾರಿಯ ಆ ಆಶಯವನ್ನು ಈಡೇರಿಸುತ್ತಿದ್ದು, ಸ್ಪೇನ್ ನ ಪ್ರೇಷಿತರ ಯಾತ್ರೆಯ ಕೊನೆಯಲ್ಲಿ ಜೂನ್ 11 ಮತ್ತು 12ರಂದು ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಔಸೆನೂ, ಇತರ ವಲಸಿಗರು, ಸಮುದ್ರದಲ್ಲಿ ನಾಪತ್ತೆಯಾದವರ ಕುಟುಂಬಸ್ಥರು, ರಕ್ಷಣಾ ಸಿಬ್ಬಂದಿ ಮತ್ತು ಸ್ವಯಂಸೇವಕರೊಂದಿಗೆ ಸೇರಿ ಜಗದ್ಗುರುಗಳನ್ನು ಸ್ವಾಗತಿಸಲಿದ್ದಾನೆ. ಆರು ವರ್ಷಗಳ ಹಿಂದೆ ಚಳಿಯಿಂದ ನಡುಗುತ್ತಾ, ಹಸಿವು ಮತ್ತು ದಾಹದಿಂದ ಬಳಲುತ್ತಾ ಇದೇ ಬಂದರಿಗೆ ಬಂದಿದ್ದ ಅವರು, ಮೊದಲಿಗೆ ಅಲ್ಲಿನ ತೀರದಲ್ಲೇ ಮಲಗಬೇಕಾಗಿತ್ತು. ಆದರೆ ಸ್ಥಳೀಯ ಸಮುದಾಯದ ಮಾನವೀಯತೆ ಮತ್ತು ಪ್ರೀತಿಯೇ ಅವರಿಗೆ ಹೊಸ ಬದುಕನ್ನು ನೀಡಿತು.
ಸೆನೆಗಲ್ನ ಕರಾವಳಿ ನಗರವಾದ ಸೇಂಟ್-ಲೂಯಿಸ್ ಮೂಲದ ಔಸೆನೂ, ಸ್ಥಳೀಯ ಮೀನುಗಾರಿಕಾ ಕ್ಷೇತ್ರದಲ್ಲಿನ ಸಂಕಷ್ಟದಿಂದ ತನ್ನ ಸಹೋದರನೊಂದಿಗೆ ದೇಶ ತೊರೆಯಲು ನಿರ್ಧರಿಸಿದ್ದನು. 2020ರ ನವೆಂಬರ್ 12ರಂದು ಸಾಂಪ್ರದಾಯಿಕ ಮರದ ದೋಣಿ ಕಯುಕೊ ಮೂಲಕ ಭೀಕರ ಸಮುದ್ರಯಾನ ನಡೆಸಿ ಗ್ರಾನ್ ಕ್ಯಾನರಿಯಾಕ್ಕೆ ತಲುಪಿದನು. ತೀವ್ರ ದಾಹ, ಭಯ, ಅಳಲು ಮತ್ತು ಸಹಯಾತ್ರಿಗಳ ಸಾವಿನಿಂದ ಕೂಡಿದ್ದ ಆ ಯಾನದಲ್ಲಿ ಅವನ ಸಹೋದರವೂ ಪ್ರಾಣ ಕಳೆದುಕೊಂಡನು. "ಜಗದ್ಗುರುಗಳು ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕರೆ, ಮಾರ್ಗ ಮಧ್ಯೆ ಪ್ರಾಣ ಕಳೆದುಕೊಳ್ಳುವ ವಲಸಿಗರಿಗಾಗಿ ನಾವು ಇನ್ನಷ್ಟು ಮಾಡಲು ಸಹಾಯ ಮಾಡಿ ಎಂದು ಕೇಳುತ್ತೇನೆ. ನನ್ನ ಸಹೋದರನೂ ಆ ಪ್ರಯಾಣದಲ್ಲೇ ಮೃತಪಟ್ಟನು ಇನ್ನೂ ಅನೇಕರೂ ಹಾಗೆಯೇ ಜೀವ ಕಳೆದುಕೊಂಡಿದ್ದಾರೆ," ಎಂದು ಔಸೆನೂ ಹೇಳುತ್ತಾರೆ.
ಅರ್ಗುನೆಗಿನ್ ತಲುಪಿದ ಕೆಲವೇ ದಿನಗಳ ಬಳಿಕ ರೆಡ್ ಕ್ರಾಸ್ ಅವರನ್ನು ಒಂದು ಹೋಟೆಲ್ಗೆ ಸ್ಥಳಾಂತರಿಸಿತು. ಆಹಾರ ಮತ್ತು ಬಟ್ಟೆ ಹುಡುಕುತ್ತಿದ್ದಾಗ ಫೆರ್ಮಿನಾ ಮತ್ತು ಕ್ರಿಸ್ಟೊಬಾಲ್ ಎಂಬ ದಂಪತಿಯನ್ನು ಭೇಟಿಯಾದನು. ಇಂದು ಅವರನ್ನು ಅವರು ಪ್ರೀತಿಯಿಂದ "ಅಮ್ಮ" ಮತ್ತು "ಅಪ್ಪ" ಎಂದು ಕರೆಯುತ್ತಾರೆ. ಅವರು ಅವನನ್ನು ತಮ್ಮ ಮನೆಯ ಸದಸ್ಯನನ್ನಾಗಿ ಸ್ವೀಕರಿಸಿ, ಯಾವ ಕೊರತೆಯೂ ಇಲ್ಲದಂತೆ ನೋಡಿಕೊಂಡರು. ಸ್ಥಳೀಯ ಸಹಾಯ ಸಂಘಟನೆ ಮತ್ತು ಅರ್ಗುನೆಗಿನ್ ಧರ್ಮ ಕೇಂದ್ರದ ನೆರವಿನಿಂದ ಔಸೆನೂ ಸ್ಪ್ಯಾನಿಷ್ ಭಾಷೆ ಕಲಿತನು. ಬಂದಾಗ ಓದಲು-ಬರೆಯಲೂ ತಿಳಿಯದಿದ್ದ ಅವನು, ಇಂದು ಭಾಷೆಯನ್ನೂ ವೃತ್ತಿಯನ್ನೂ ಕಲಿತು ಅಡುಗೆಗಾರನಾಗಿ ದುಡಿಯುತ್ತಾ ಗ್ರಾನ್ ಕ್ಯಾನರಿಯಾದ ಸಮಾಜದ ಅವಿಭಾಜ್ಯ ಭಾಗವಾಗಿದ್ದಾನೆ.
ಈಗಲೂ ಅವನು ಕೆಲವೊಮ್ಮೆ ಭೇಟಿ ನೀಡುವ ಆ ಬಂದರಿನಲ್ಲೇ, ಜೂನ್ 11ರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾನೆ. ಕೇವಲ ಒಬ್ಬ ವಲಸಿಗನಾಗಿ ಅಲ್ಲ, ಬದಲಾಗಿ ತನ್ನ ಜೀವ ಉಳಿಸಲ್ಪಟ್ಟ, ತನ್ನ ಮಾನವ ಘನತೆ ಮರುಸ್ಥಾಪಿಸಲ್ಪಟ್ಟ, ಸ್ವತಂತ್ರ ನಾಗರಿಕನಾಗಿ.
