ಜಗದ್ಗುರು XIVನೇ ಲಿಯೋರವರು: ‘ದೇವರ ಪ್ರೀತಿಯೊಂದೇ ನಮಗೆ ನಿಜವಾದ ಮತ್ತು ಪರಿಪೂರ್ಣ ಸಂತೋಷವನ್ನು ನೀಡಬಲ್ಲದು’.
ವ್ಯಾಟಿಕನ್ ವರದಿ
“ದೇವರ ಪ್ರೀತಿಯೊಂದೇ ನಮಗೆ ನಿಜವಾದ ಮತ್ತು ಪರಿಪೂರ್ಣ ಸಂತೋಷವನ್ನು ನೀಡಬಲ್ಲದು” ಎಂದು ಜಗದ್ಗುರು XIVನೇ ಲಿಯೋರವರು ಅಮೆರಿಕದ ಓಹಿಯೊ ರಾಜ್ಯದಲ್ಲಿರುವ ಸ್ಟ್ಯೂಬೆನ್ವಿಲ್ ಫ್ರಾನ್ಸಿಸ್ಕನ್ ವಿಶ್ವವಿದ್ಯಾಲಯದಲ್ಲಿ ನಡೆದ 50ನೇ ಸ್ಟ್ಯೂಬೆನ್ವಿಲ್ ಬೇಸಿಗೆ ಯುವ ಸಮಾವೇಶಕ್ಕೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಈ ವರ್ಷದ ಸಮಾವೇಶವು ಐವತ್ತು ವರ್ಷಗಳ ಸೇವಾ ಪಯಣವನ್ನು ಸ್ಮರಿಸುವ ವಿಶೇಷ ಸಂದರ್ಭವಾಗಿತ್ತು.
ಜಗದ್ಗುರುಗಳು, ಸಂತ ಫ್ರಾನ್ಸಿಸ್ ಅವರ ನಿಧನದ 800ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಂಡು, ಇಂದಿನ ಯುವಜನರಿಗೆ ಅವರು ನೀಡುವ ಸಂದೇಶದ ಕುರಿತು ಚಿಂತಿಸಿದರು. ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರು ಎಲ್ಲರನ್ನೂ “ಪಾಚೆ ಎ ಬೆನೆ” (ಶಾಂತಿ ಮತ್ತು ಒಳಿತು) ಎಂಬ ಆಶೀರ್ವಾದದೊಂದಿಗೆ ಸ್ವಾಗತಿಸುತ್ತಿದ್ದರು ಎಂದು ಹೇಳಿದ ಜಗದ್ಗುರುಗಳು, ನಿಜವಾದ ಶಾಂತಿ ದೇವರ ವರವಾಗಿದ್ದು, ದೇವರನ್ನು ಹೃದಯದಲ್ಲಿ ಸ್ವೀಕರಿಸಿದಾಗ ಮಾತ್ರ ಅದನ್ನು ಅನುಭವಿಸಬಹುದು ಎಂದು ತಿಳಿಸಿದರು. ಕ್ರೈಸ್ತರು ತಮ್ಮ ಕುಟುಂಬ, ಸಮುದಾಯ ಮತ್ತು ಜಗತ್ತಿಗೆ ಶಾಂತಿಯ ಸಾಧನಗಳಾಗಲು ಕರೆಯಲ್ಪಟ್ಟಿದ್ದಾರೆ ಎಂದರು.
ಜೀವನದ ಕಷ್ಟಕರ ಸಂದರ್ಭಗಳಲ್ಲಿಯೂ ಸಂತೋಷವಾಗಿರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ದೇವರನ್ನು ಪ್ರೀತಿಯ ತಂದೆಯಾಗಿ ಅನುಭವಿಸುವ ಸಂಬಂಧದ ಮೇಲೆ ಜೀವನ ನೆಲೆಗೊಂಡಿದ್ದರೆ ಅದು ಸಾಧ್ಯವೆಂದರು. ನಿಜವಾದ ಸಂತೋಷವು ಮೊಬೈಲ್, ಸಾಮಾಜಿಕ ಜಾಲತಾಣಗಳು ಅಥವಾ ಮನರಂಜನೆಯ ಅತಿಯಾದ ಬಳಕೆಯಲ್ಲಿ ದೊರೆಯುವುದಿಲ್ಲ; ಅವು ಪ್ರಾರ್ಥನೆ, ಸ್ನೇಹ, ಕುಟುಂಬ ಜೀವನ ಮತ್ತು ಆತ್ಮಿಕ ಬೆಳವಣಿಗೆಗೆ ಮೀಸಲಾಗಬಹುದಾದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತವೆ ಎಂದು ಎಚ್ಚರಿಸಿದರು.
ಅದೇ ರೀತಿ, ಮದ್ಯಪಾನ, ಮಾದಕ ವಸ್ತುಗಳ ಬಳಕೆ, ಮೇಲ್ನೋಟದ ಸಂಬಂಧಗಳು, ಖ್ಯಾತಿ, ಸೌಂದರ್ಯ ಅಥವಾ ಸಂಪತ್ತಿನಲ್ಲಿಯೂ ಶಾಶ್ವತ ಸಂತೋಷ ಸಿಗುವುದಿಲ್ಲ ಎಂದು ಅವರು ಹೇಳಿದರು. ಮಾನವನ ಹೃದಯವನ್ನು ನಿಜವಾದ ಆನಂದದಿಂದ ತುಂಬಬಲ್ಲದು ದೇವರ ಪ್ರೀತಿಯೊಂದೇ. “ದೇವರು ನಮ್ಮನ್ನು ತನ್ನ ಪ್ರೀತಿಯ ಮಕ್ಕಳಾಗಿ ಕಾಳಜಿ ವಹಿಸುತ್ತಾನೆ ಎಂಬ ಆಳವಾದ ನಂಬಿಕೆ ನಮಗಿದ್ದರೆ, ಕಷ್ಟಗಳ ನಡುವೆಯೂ ನಾವು ನಿರುತ್ಸಾಹಗೊಳ್ಳುವುದಿಲ್ಲ” ಎಂದು ಜಗದ್ಗುರುಗಳು ಹೇಳಿದರು.
ಯುವಜನರಿಗೆ ದೇವರ ಮೇಲಿನ ವಿಶ್ವಾಸವನ್ನು ಬೆಳೆಸಲು, ನಿಯಮಿತ ಪ್ರಾರ್ಥನೆ ಹಾಗೂ ಸಂಸ್ಕಾರಗಳ ಮೂಲಕ ಆತನೊಂದಿಗೆ ಆಪ್ತ ಸಂಬಂಧವನ್ನು ಹೊಂದಲು ಅವರು ಪ್ರೋತ್ಸಾಹಿಸಿದರು. ದೇವರ ಕೃಪೆ ನಮ್ಮನ್ನು ತುಂಬಿದಾಗ ಆತಂಕ, ದುಃಖ ಮತ್ತು ಏಕಾಂತತೆ ದೂರವಾಗುತ್ತವೆ. ಸವಾಲುಗಳ ನಡುವೆಯೂ ನಗುನಗುತ್ತ ಬದುಕುವ “ರಹಸ್ಯ” ಇದೇ ಎಂದು ಜಗದ್ಗುರುಗಳು ವಿವರಿಸಿದರು.
ಕೊನೆಯಲ್ಲಿ, ದೇವರು ತನ್ನ ರಾಜ್ಯಕ್ಕಾಗಿ ಪವಿತ್ರ ಪುರುಷರು ಮತ್ತು ಮಹಿಳೆಯರು, ಕುಟುಂಬಗಳು, ಯಾಜಕರು ಹಾಗೂ ಧಾರ್ಮಿಕ ಜೀವನಕ್ಕೆ ಸಾಕ್ಷಿಗಳಾಗುವವರನ್ನು ಕರೆಯುತ್ತಾನೆ ಎಂದು ಜಗದ್ಗುರುಗಳು ಹೇಳಿದರು. ದೇವರ ಕರೆಯನ್ನು ಅನುಭವಿಸುವ ಯುವಕರು ಭಯಪಡದೆ “ಇಗೋ ನಾನು ಇದ್ದೇನೆ, ನನ್ನನ್ನು ಕಳುಹಿಸು” ಎಂದು ಪ್ರತಿಕ್ರಿಯಿಸಬೇಕು ಎಂದು ಅವರು ಉತ್ತೇಜಿಸಿದರು. ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರೂ ಕ್ರಿಸ್ತನ ಪ್ರೀತಿಯಿಂದ ತುಂಬಿ, ನಿಜವಾದ ಸಂತೋಷವನ್ನು ಕಂಡುಕೊಳ್ಳಲಿ ಎಂದು ಅವರು ಪ್ರಾರ್ಥಿಸಿದರು.
