ಹುಡುಕಿ

Alle Canarie il Papa si inchina per i migranti

“ತೆನೆರಿಫೆಗೆ ಜಗದ್ಗುರು ಲಿಯೋರವರ ಭೇಟಿ: ವಲಸಿಗರ ಬಿಕ್ಕಟ್ಟಿನತ್ತ ಗಮನ ಸೆಳೆದ ಸಂದೇಶ”..

ಸ್ಪೇನಿಗೆ ತಮ್ಮ ಪ್ರೇಷಿತರ ಯಾತ್ರೆಯ ಅಂತಿಮ ದಿನದಲ್ಲಿ, ಜಗದ್ಗುರು ಲಿಯೋರವರು ತೆನೆರಿಫೆಗೆ ಭೇಟಿ ನೀಡಿದರು. ವಲಸೆಯು ಇಂದಿಗೂ ಆ ಪ್ರದೇಶದ ಜೀವನವನ್ನು ಆಳವಾಗಿ ರೂಪಿಸುತ್ತಿರುವ ಪ್ರಮುಖ ವಾಸ್ತವಿಕತೆಯಾಗಿದೆ. ಅಪಾಯಕಾರಿ ಅಟ್ಲಾಂಟಿಕ್ ಸಮುದ್ರ ಮಾರ್ಗವನ್ನು ದಾಟಿ ಯುರೋಪ್ ತಲುಪಲು ಪ್ರಾಣ ಪಣಕ್ಕಿಟ್ಟು ಪ್ರಯಾಣಿಸುವ ಆಫ್ರಿಕಾದ ವಲಸಿಗರ ಪ್ರಮುಖ ಪ್ರವೇಶ ಕೇಂದ್ರಗಳಲ್ಲಿ ಒಂದಾದ ಈ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ, ವಲಸೆಯ ಅಂಕಿಅಂಶಗಳ ಹಿಂದೆ ಅಡಗಿರುವ ಮಾನವೀಯ ನೋವು ಮತ್ತು ಸಂಕಷ್ಟಗಳತ್ತ ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಸೆಳೆಯಲು ಜಗದ್ಗುರುಗಳು ಪ್ರಯತ್ನಿಸಿದರು.

ವ್ಯಾಟಿಕನ್ ವರದಿ

ಸ್ಪೇನಿಗೆ ತಮ್ಮ ಪ್ರೇಷಿತರ ಯಾತ್ರೆಯ ಅಂತಿಮ ಹಂತದಲ್ಲಿ, ಜಗದ್ಗುರು ಲಿಯೋರವರು ಯುರೋಪಿನ ದಕ್ಷಿಣದ ಅತ್ಯಂತ ತುದಿಯಲ್ಲಿರುವ ತೆನೆರಿಫೆ ದ್ವೀಪದಲ್ಲಿ ದಿನವಿಡೀ ಕಾಲ ಕಳೆದರು.

ಸಾರ್ವತ್ರಿಕ ಧರ್ಮ ಸಭೆಯ ಕುರುಬನಾಗಿ, ವರ್ಷಪೂರ್ತಿ ಮೃದುವಾದ ಉಪಉಷ್ಣವಲಯದ ಹವಾಮಾನದಿಂದ ಆಶೀರ್ವದಿಸಲ್ಪಟ್ಟಿರುವ ಈ ದ್ವೀಪದ ವಿಶ್ವಾಸಿಗಳನ್ನು ದೃಢಪಡಿಸಲು ಜಗದ್ಗುರು ಲಿಯೋ ರವರು ಇಲ್ಲಿ ಬಂದಿದ್ದರು.

ಆದರೆ ಅನಿವಾರ್ಯವಾಗಿ, ಈ ದ್ವೀಪಕ್ಕೆ ಅವರ ಭೇಟಿಯ ಕೇಂದ್ರಬಿಂದುವಾಗಿದ್ದ ವಿಷಯವೆಂದರೆ ವಲಸೆ.

ಹಲವಾರು ವರ್ಷಗಳಿಂದ, ಭೌಗೋಳಿಕ ಸ್ಥಾನಮಾನದ ಕಾರಣದಿಂದಾಗಿ ತೆನೆರಿಫೆ ಉತ್ತರ ಮತ್ತು ಪಶ್ಚಿಮ ಆಫ್ರಿಕಾದ ವಲಸಿಗರ ಪ್ರಮುಖ ಗಮ್ಯಸ್ಥಾನವಾಗಿದೆ.

ಆಫ್ರಿಕಾದ ವಾಯವ್ಯ ಕರಾವಳಿಯ ಸಮೀಪದಲ್ಲಿರುವ ತೆನೆರಿಫೆಯ ಸ್ಥಾನಮಾನವು, ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಬರುವ ವಲಸಿಗರಿಗೆ ಯುರೋಪಿನ ಅತ್ಯಂತ ಸಮೀಪದ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.

ಆದರೆ ಈ ಸಮುದ್ರಯಾನವು ಆಫ್ರಿಕಾದ ವಲಸಿಗರಿಗೆ ಅತ್ಯಂತ ಮಾರಕವಾದ ಮಾರ್ಗಗಳಲ್ಲಿ ಒಂದಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ದೇಶಗಳಲ್ಲಿನ ಯುದ್ಧಗಳು, ಆರ್ಥಿಕ ಅಸ್ಥಿರತೆ, ರಾಜಕೀಯ ಸಂಘರ್ಷಗಳು ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ. ಪ್ರಕ್ಷುಬ್ಧ ಸಮುದ್ರವನ್ನು ದಾಟಲು ಯತ್ನಿಸಿದ ಅನೇಕರ ಜೀವಗಳು ಈ ಪ್ರಯಾಣದಲ್ಲಿ ಕಳೆದುಹೋಗಿವೆ. ಬದುಕುಳಿದ ಕೆಲವೇ ಮಂದಿ ತೆನೆರಿಫೆಯಂತಹ ಸ್ಥಳಗಳನ್ನು ತಲುಪುತ್ತಾರೆ.

ಇವು ತಮ್ಮ ತಾಯ್ನಾಡಿನಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ಜನರು ಕೈಗೊಳ್ಳುವ ಹತಾಶೆಯ ಪ್ರಯಾಣಗಳಾಗಿವೆ. ತಮ್ಮ ದೇಶವನ್ನು ತೊರೆದು ಹೋಗುವುದೇ ಏಕೈಕ ಆಯ್ಕೆಯಾಗಿದೆ ಎಂದು ಭಾವಿಸಿ, ಅಪಾಯಕಾರಿ, ಹಿಂಸಾತ್ಮಕ ಮತ್ತು ಸುರಕ್ಷತೆಯಿಲ್ಲದ ಮಾರ್ಗಗಳ ಮೂಲಕ ಅವರನ್ನು ಕಳ್ಳಸಾಗಣೆ ಮಾಡುವ ಕ್ರೂರ ಅಪರಾಧಿ ಗುಂಪುಗಳ ಕೈಗೆ ತಮ್ಮ ಜೀವವನ್ನು ಒಪ್ಪಿಸುತ್ತಾರೆ.

ತೆನೆರಿಫೆಗೆ ಜಗದ್ಗುರು ಲಿಯೋರವರು ಬಂದದ್ದರ ಉದ್ದೇಶ, ಇಲ್ಲಿ ನಡೆಯುತ್ತಿರುವ ಈ ಮಾನವೀಯ ದುರಂತದತ್ತ ಜಗತ್ತು ಬೆನ್ನು ತಿರುಗಿಸದಿರಲಿ ಎಂಬುದಾಗಿತ್ತು. ಯುರೋಪಿಯನ್ ಒಕ್ಕೂಟದ ನಿಯಂತ್ರಣ ಕ್ರಮಗಳ ಪರಿಣಾಮವಾಗಿ, ತೆನೆರಿಫೆಗೆ ಆಗಮಿಸುವ ವಲಸಿಗರ ಸಂಖ್ಯೆ ಸುಮಾರು 65 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ.

ಗಮನಾರ್ಹವಾಗಿ, ವಲಸಿಗರ ದುಸ್ಥಿತಿಯತ್ತ ಜಗತ್ತಿನ ಗಮನ ಸೆಳೆಯಲು ಜಗದ್ಗುರು ಫ್ರಾನ್ಸಿಸ್ ರವರು ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡುವ ಆಶಯವನ್ನು ಹೊಂದಿದ್ದರು. ಇಂದು ಅವರು ಸ್ವರ್ಗದಲ್ಲೆಲ್ಲಿದ್ದರೂ, ತಮ್ಮ ಉತ್ತರಾಧಿಕಾರಿಯಾದ ಜಗದ್ಗುರು ಲಿಯೋರವರು ಈ ಯಾತ್ರೆಯನ್ನು ಕೈಗೊಂಡಿರುವುದನ್ನು ನೋಡಿ ಖಂಡಿತವಾಗಿಯೂ ಸಂತೋಷಪಡುತ್ತಿರುತ್ತಾರೆ.

12 ಜೂನ್ 2026, 21:22