ಜಗದ್ಗುರುಗಳು ಮ್ಯಾಡ್ರಿಡ್ನಲ್ಲಿ: ಸಮಾಜದ ಆತ್ಮವನ್ನು ಕಾಪಾಡಲು ಪರಸ್ಪರ ಬಾಂಧವ್ಯಗಳ ಜಾಲವನ್ನು ನಿರ್ಮಿಸುವ ಅಗತ್ಯವಿದೆ.
ವ್ಯಾಟಿಕನ್ ವರದಿ
ಸ್ಪೇನಿಗೆ ಕೈಗೊಂಡಿರುವ ತಮ್ಮ ಪ್ರೇಷಿತರ ಯಾತ್ರೆಯ ಎರಡನೇ ದಿನವಾದ ಭಾನುವಾರ, ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್ನ ಮೊವಿಸ್ಟಾರ್ ಅರೆನಾದಲ್ಲಿ ಸಂಸ್ಕೃತಿ, ಕಲೆ, ಶಿಕ್ಷಣ, ಆರ್ಥಿಕತೆ ಮತ್ತು ಕ್ರೀಡಾ ಕ್ಷೇತ್ರಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. "ಸಂಸ್ಕೃತಿ, ಕಲೆ, ಆರ್ಥಿಕತೆ ಮತ್ತು ಕ್ರೀಡಾ ಕ್ಷೇತ್ರಗಳೊಂದಿಗೆ ಹೊಸ ಬಾಂಧವ್ಯಗಳನ್ನು ಹೆಣೆಯುವುದು" ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಅವರು ಇಂದಿನ ವಿಭಜಿತ ಜಗತ್ತಿನಲ್ಲಿ ಐಕ್ಯತೆ, ಸಂವಾದ ಮತ್ತು ಭರವಸೆಯ ಹೊಸ ಸೇತುವೆಗಳನ್ನು ನಿರ್ಮಿಸಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಯು ಮಾನವನ ಘನತೆಯಿಂದ ದೂರವಾದರೆ ಅದರ ನಿಜವಾದ ಉದ್ದೇಶ ಕಳೆದುಹೋಗುತ್ತದೆ ಎಂದು ಜಗದ್ಗುರುಗಳು ಎಚ್ಚರಿಸಿದರು. "ನಾವು ಪರಿಣಾಮಕಾರಿ ಉತ್ಪಾದಕರಾಗಬಹುದು, ಆದರೆ ಏಕೆ, ಯಾರಿಗಾಗಿ ಮತ್ತು ಯಾವ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ" ಎಂದು ಅವರು ಹೇಳಿದರು. ಮಾನವ ವ್ಯಕ್ತಿಯೇ ಸಮಾಜದ ಅಭಿವೃದ್ಧಿಯ ಕೇಂದ್ರಬಿಂದುವಾಗಿರಬೇಕು ಎಂದು ಅವರು ಒತ್ತಿಹೇಳಿದರು.
ಧರ್ಮ ಸಭೆಯ ಸಮಕಾಲೀನ ಜಗತ್ತಿನೊಂದಿಗೆ ನಿರಂತರ ಸಂವಾದ ನಡೆಸಲು ಬದ್ಧವಾಗಿದೆ ಎಂದು ಜಗದ್ಗುರುಗಳು ಹೇಳಿದರು. ಸಂಸ್ಕೃತಿಯು ಮಾನವನ ಅಸ್ತಿತ್ವ ಮತ್ತು ಗುರುತನ್ನು ರೂಪಿಸುವ ಪ್ರಮುಖ ಸಾಧನವಾಗಿರುವುದರಿಂದ, ಅದರಿಂದ ಧರ್ಮಸಭೆ ದೂರ ಉಳಿಯಲು ಸಾಧ್ಯವಿಲ್ಲ ಎಂದರು. "ನಾವು ಮುಂದಿನ ಪೀಳಿಗೆಗಾಗಿ ಯಾವ ಮೌಲ್ಯಗಳನ್ನು ಬೆಳೆಸುತ್ತಿದ್ದೇವೆ ಮತ್ತು ಯಾವುದನ್ನು ಕಳೆದುಕೊಳ್ಳುತ್ತಿದ್ದೇವೆ?" ಎಂಬ ಆತ್ಮಾವಲೋಕನದ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಸಂಜೆಯ ಕಾರ್ಯಕ್ರಮದ ಪ್ರಮುಖ ವಿಷಯವಾಗಿದ್ದ "ಬಾಂಧವ್ಯಗಳನ್ನು ಹೆಣೆಯುವುದು" ಎಂಬ ಪರಿಕಲ್ಪನೆಯನ್ನು ವಿವರಿಸಿದ ಜಗದ್ಗುರುಗಳು, ವಿಶ್ವವಿದ್ಯಾಲಯಗಳು ಸತ್ಯದ ಅನ್ವೇಷಣೆಯನ್ನು ಕೈಬಿಡಬಾರದು, ಉದ್ಯಮಗಳು ಕಾರ್ಮಿಕರನ್ನು ಕೇವಲ ಆರ್ಥಿಕ ಸಂಪನ್ಮೂಲವೆಂದು ಪರಿಗಣಿಸಬಾರದು, ಕಲೆ ಕೆಲವರ ಸ್ವತ್ತಾಗಬಾರದು ಹಾಗೂ ಕ್ರೀಡೆಯು ಕೇವಲ ಮನರಂಜನೆ ಅಥವಾ ಲಾಭದ ಸಾಧನವಾಗಬಾರದು ಎಂದು ಹೇಳಿದರು. ಸಂವಾದ ಮತ್ತು ಪರಸ್ಪರ ಗೌರವದ ಮೂಲಕವೇ ಆರೋಗ್ಯಕರ ಸಮಾಜವನ್ನು ಕಟ್ಟಬಹುದು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಮಾನವನೂ ದೇವರ ಪ್ರತಿರೂಪದಲ್ಲಿ ಸೃಷ್ಟಿಯಾಗಿರುವುದರಿಂದ ಆತನಿಗೆ ಅಂತರ್ಗತವಾದ ಘನತೆಯಿದೆ ಎಂದು ಜಗದ್ಗುರುಗಳು ನೆನಪಿಸಿದರು. ಈ ಘನತೆಯನ್ನು ಯಾವುದೇ ಸರ್ಕಾರ ಅಥವಾ ಸಂಸ್ಥೆ ನೀಡುವುದಿಲ್ಲ, ಅದು ಸಹಜವಾದ ಮತ್ತು ಯಾರಿಂದಲೂ ಕಸಿದುಕೊಳ್ಳಲಾಗದ ಹಕ್ಕು ಎಂದು ಅವರು ಹೇಳಿದರು. ಅಲ್ಲದೆ, ಬಡವರು ಮತ್ತು ಸಮಾಜದಿಂದ ಹೊರಗುಳಿದವರ ನೋವನ್ನು ಮರೆಯಬಾರದು ಎಂದು ಕರೆ ನೀಡಿದ ಅವರು, ನ್ಯಾಯಯುತ ಸಮಾಜವು ಪ್ರತಿಯೊಬ್ಬರ ಸಮಗ್ರ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ತಮ್ಮ ಭಾಷಣದ ಕೊನೆಯಲ್ಲಿ ಕ್ರೀಡೆಯು ಜೀವನದ ಮಹತ್ವದ ಮೌಲ್ಯಗಳನ್ನು ಕಲಿಸುವ ಶಾಲೆಯಾಗಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಕ್ರೀಡೆಯು ಸೋಲನ್ನು ಘನತೆಯಿಂದ ಸ್ವೀಕರಿಸುವುದು, ಗೆಲುವಿನಲ್ಲಿ ವಿನಯ ತೋರಿಸುವುದು ಮತ್ತು ವೈಫಲ್ಯದ ನಂತರ ಮತ್ತೆ ಎದ್ದು ನಿಲ್ಲುವುದನ್ನು ಕಲಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಂತಿಮವಾಗಿ, "ಜೀವನದ ಎಲ್ಲ ಕ್ಷೇತ್ರಗಳನ್ನು ಸಮನ್ವಯಗೊಳಿಸುವ ಹೊಸ ಬಾಂಧವ್ಯಗಳನ್ನು ಹೆಣೆಯುವ ಹೊಸ ನಾಯಕಪಾತ್ರಗಳಾಗೋಣ" ಎಂದು ಎಲ್ಲರಿಗೂ ಅವರು ಕರೆ ನೀಡಿದರು.
