ಜಗದ್ಗುರುಗಳು ಕಾರ್ಡಿನಲ್ ರೂಯಿನಿಯನ್ನು ‘ವಿವೇಕಿ ಮತ್ತು ಕರ್ತವ್ಯನಿಷ್ಠ ಕುರುಬ’ ಎಂದು ಸ್ಮರಿಸಿದರು.
ವ್ಯಾಟಿಕನ್ ವರದಿ
ಕಾರ್ಡಿನಲ್ ಕಾಮಿಲ್ಲೋ ರೂಯಿನಿರವರ ಅಂತ್ಯಕ್ರಿಯೆಯ ಬಲಿಪೂಜೆಯಲ್ಲಿ ಜಗದ್ಗುರು XIVನೇ ಲಿಯೋರವರು ಅವರನ್ನು “ವಿವೇಕಿ ಮತ್ತು ಕರ್ತವ್ಯನಿಷ್ಠ ಕುರುಬ” ಎಂದು ಸ್ಮರಿಸಿದರು. ಧರ್ಮ ಸಭೆಯಲ್ಲಿ ಅತಿ ಸರಳವಾದ ಜವಾಬ್ದಾರಿಗಳಿಂದ ಹಿಡಿದು ಅತ್ಯಂತ ಮಹತ್ವದ ಹೊಣೆಗಾರಿಕೆಗಳವರೆಗೆ ಅವರು ನಿಷ್ಠೆಯಿಂದ ಸೇವೆ ಸಲ್ಲಿಸಿದರು ಎಂದು ಜಗದ್ಗುರುಗಳು ಹೇಳಿದರು. ದೇವರ ಜನರಿಗೆ ಹಾಗೂ ಸಹೋದರ ಬಿಷಪ್ಗಳಿಗೆ ಮಾರ್ಗದರ್ಶಕರಾಗಿ, ವಿಶೇಷವಾಗಿ ಸೂಕ್ಷ್ಮ ಮತ್ತು ಮಹತ್ವದ ಸಂದರ್ಭಗಳಲ್ಲಿ ಅವರು ದಿಕ್ಕು ತೋರಿದ ವ್ಯಕ್ತಿಯಾಗಿದ್ದರು ಎಂದು ಜಗದ್ಗುರುಗಳು ನೆನಪಿಸಿಕೊಂಡರು.
95ನೇ ವಯಸ್ಸಿನಲ್ಲಿ ಜೂನ್ 16ರಂದು ನಿಧನರಾದ ಕಾರ್ಡಿನಲ್ ರೂಯಿನಿರವರು 1991ರಿಂದ 2008ರವರೆಗೆ ರೋಮಿನ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಸೇಂಟ್ ಜಾನ್ ಲ್ಯಾಟರನ್ ಬಸಿಲಿಕಾದ ಪ್ರಧಾನ ಧರ್ಮಗುರುವಾಗಿಯೂ, 1991ರಿಂದ 2007ರವರೆಗೆ ಇಟಾಲಿಯನ್ ಬಿಷಪ್ಗಳ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಧರ್ಮ ಸಭೆಗಾಗಿ ಅವರು ಕೈಗೊಂಡ ಯೋಜನೆಗಳು, ದೂರದೃಷ್ಟಿಯ ಚಿಂತನೆಗಳು ಮತ್ತು ವಿವಿಧ ಉಪಕ್ರಮಗಳನ್ನು ಜಗದ್ಗುರುಗಳು ಕೃತಜ್ಞತೆಯಿಂದ ಸ್ಮರಿಸಿದರು.
ಬಲಿಪೀಠದ ಮುಂಭಾಗದಲ್ಲಿ ಇರಿಸಲಾಗಿದ್ದ ಕಾರ್ಡಿನಲ್ ಅವರ ಶವಪೆಟ್ಟಿಗೆಯ ಮೇಲೆ ತೆರೆದ ಸುವಾರ್ತೆಗಳ ಗ್ರಂಥವನ್ನು ಇರಿಸಲಾಗಿತ್ತು. ಇದು ಅವರು ತಮ್ಮ ಸಂಪೂರ್ಣ ಜೀವನವನ್ನು ದೇವರ ವಾಕ್ಯದ ಸೇವೆಗೆ ಅರ್ಪಿಸಿದ್ದರ ಸಂಕೇತವಾಗಿತ್ತು. ದಿನದ ಆರಾಧನೆಯಲ್ಲಿ ಆಯ್ಕೆ ಮಾಡಲಾದ ವಾಚನಗಳು ಕ್ರಿಸ್ತನಿಗೂ ಧರ್ಮ ಸಭೆಗೂ ನಿಷ್ಠರಾಗಿರುವ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಮತ್ತು ಕಾರ್ಡಿನಲ್ ರೂಯಿನಿ ಅದಕ್ಕೆ ಸಂತೋಷಭರಿತ ಮಾದರಿಯಾಗಿದ್ದರು ಎಂದು ಜಗದ್ಗುರುಗಳು ಹೇಳಿದರು.
ರೋಮನ್ನರಿಗೆ ಬರೆದ ಸಂತ ಪೌಲರ ಪತ್ರಿಕೆಯಲ್ಲಿ ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದು ಎಂಬ ಸತ್ಯವನ್ನು ನೆನಪಿಸಲಾಗುತ್ತದೆ. ಇದೇ ನಂಬಿಕೆ ಕಾರ್ಡಿನಲ್ ರೂಯಿನಿ ಅವರ ಜೀವನಕ್ಕೂ ಪ್ರೇರಣೆಯಾಗಿತ್ತು ಎಂದು ಜಗದ್ಗುರುಗಳು ವಿವರಿಸಿದರು. ಯೋಹಾನನ ಸುವಾರ್ತೆಯಲ್ಲಿನ ಯೇಸುವಿನ ಪ್ರಾರ್ಥನೆ—“ನೀವು ನನಗೆ ಕೊಟ್ಟವರು ನಾನು ಇರುವಲ್ಲಿಯೇ ಇರಲಿ”—ಎಂಬ ಮಾತುಗಳು ಅವರ ಜೀವನದ ಮಾರ್ಗದರ್ಶಕ ತತ್ವವಾಗಿದ್ದವು ಎಂದರು.
ಕಾರ್ಡಿನಲ್ ರೂಯಿನಿರವರು ತಮ್ಮ ಜೀವನದಲ್ಲಿ ದೇವರ ಯೋಜನೆಗಳನ್ನು ಅರಿತು, ತಮ್ಮ ಸಹೋದರರ ಒಳಿತಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರು ಸಂತ VIನೇ ಪೌಲ್ ಹಾಗೂ ಸಂತ ದ್ವಿತೀಯ ಜಾನ್ ಪೌಲ್ ರವರಂತಹ ಮಹಾನ್ ಪವಿತ್ರರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿದ್ದರು. ವಿಶೇಷವಾಗಿ ಸಂತ ದ್ವಿತೀಯ ಜಾನ್ ಪೌಲ್ ರವರಿಂದ ಅವರು ಆಳವಾದ ಪ್ರೇರಣೆ ಮತ್ತು ಮಾರ್ಗದರ್ಶನವನ್ನು ಪಡೆದಿದ್ದರು ಎಂದು ಜಗದ್ಗುರುಗಳು ನೆನಪಿಸಿದರು.
ಪ್ರಭೋಧನೆಯ ಕೊನೆಯಲ್ಲಿ, ಕಾರ್ಡಿನಲ್ ರೂಯಿನಿರವರ ಬಿಷಪ್ ಧ್ಯೇಯವಾಕ್ಯವಾದ “ಸತ್ಯವು ನಿಮ್ಮನ್ನು ಮುಕ್ತಗೊಳಿಸುತ್ತದೆ” ಎಂಬುದನ್ನು ಜಗದ್ಗುರುಗಳು ಉಲ್ಲೇಖಿಸಿದರು. ಇಂದಿನ ಗೊಂದಲ ಮತ್ತು ಅನಿಶ್ಚಿತತೆಯ ಕಾಲದಲ್ಲಿ ಈ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಅಂತಿಮವಾಗಿ, ದೇವರು ಅವರಿಗೆ ಅಂತ್ಯವಿಲ್ಲದ ಶಾಂತಿಯ ಪ್ರತಿಫಲವನ್ನು ನೀಡಲಿ ಎಂದು ಪ್ರಾರ್ಥಿಸಿದ ಜಗದ್ಗುರುಗಳು, ಅವರ ವೃದ್ಧಾಪ್ಯ ಮತ್ತು ಅನಾರೋಗ್ಯದ ವರ್ಷಗಳಲ್ಲಿಯೂ ಅವರನ್ನು ಪ್ರೀತಿಯಿಂದ ನೋಡಿಕೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
