ಮಾನವ ಘನತೆಯ ರಕ್ಷಕ ಜೆರೋಮ್ ಲೆಜ್ಯೂನ್ ರವರಿಗೆ ಜಗದ್ಗುರು ಲಿಯೋರವರು ಗೌರವ ನಮನ ಸಲ್ಲಿಸಿದರು.
ವ್ಯಾಟಿಕನ್ ವರದಿ
ಪೂಜ್ಯನೀಯ ಪ್ರೊಫೆಸರ್ ಜೆರೋಮ್ ಲೆಜ್ಯೂನ್ ರವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಅವರ ಹೆಸರನ್ನು ಧರಿಸಿರುವ ಹಾಗೂ ಅವರ ಕಾರ್ಯವನ್ನು ಮುಂದುವರಿಸುತ್ತಿರುವ ಪ್ರತಿಷ್ಠಾನದ ಸದಸ್ಯರನ್ನು ಭೇಟಿಯಾದರು.
ತಮ್ಮ ಭಾಷಣದಲ್ಲಿ ಜಗದ್ಗುರುಗಳು ಲೆಜ್ಯೂನ್ ಅವರನ್ನು ಆಧುನಿಕ ತಳಿಶಾಸ್ತ್ರದ (ಜೆನೆಟಿಕ್ಸ್) ಮುಂಚೂಣಿ ವಿಜ್ಞಾನಿ, ಅತ್ಯಂತ ದುರ್ಬಲರಿಗಾಗಿ ಸಮರ್ಪಿತರಾಗಿದ್ದ ವೈದ್ಯ, ಹಾಗೂ ಜೀವದ ನಿರಂತರ ರಕ್ಷಕರಾಗಿ ಸ್ಮರಿಸಿದರು.
ಅವರು ಪ್ರತಿಷ್ಠಾನದ ಸದಸ್ಯರನ್ನು ಲೆಜ್ಯೂನ್ ರವರ ಮಾದರಿಯನ್ನು ಅನುಸರಿಸುವಂತೆ ಪ್ರೋತ್ಸಾಹಿಸಿ, “ಸಮಾಜದಲ್ಲಿ ಸಾಮೂಹಿಕ ಹಿತದ ನಿರಂತರ ಅನ್ವೇಷಣೆಯ ಸೇವೆಯಲ್ಲಿ ತೊಡಗಿರುವ ಬದ್ಧ ಸಾಕ್ಷಿಗಳಾಗಿರಿ” ಎಂದು ಕರೆ ನೀಡಿದರು.
ಟ್ರೈಸೊಮಿ 21 (ಡೌನ್ ಸಿಂಡ್ರೋಮ್) ಗೆ ಕಾರಣವಾಗುವ ಕ್ರೋಮೋಸೋಮ್ ಅಸಹಜತೆಯನ್ನು ಪತ್ತೆಹಚ್ಚಿದ ಪ್ರೊಫೆಸರ್ ಜೆರೋಮ್ ಲೆಜ್ಯೂನ್ ರವರು ಆಧುನಿಕ ವೈದ್ಯಕೀಯದ ಇತಿಹಾಸದಲ್ಲಿ ಅಳಿಸಲಾಗದ ಗುರುತು ಮೂಡಿಸಿದರು.
ಸಮಕಾಲೀನ ತಳಿಶಾಸ್ತ್ರದ ಪಿತಾಮಹರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಅವರು, ತಮ್ಮ ಜೀವನವನ್ನು ಸಂಶೋಧನೆಗೂ ಹಾಗೂ ಬೌದ್ಧಿಕ ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಆರೈಕೆಗೂ ಸಮರ್ಪಿಸಿದರು.
“ವೈದ್ಯಕೀಯವೆಂದರೆ ರೋಗದ ಮೇಲಿನ ದ್ವೇಷ ಮತ್ತು ರೋಗಿಯ ಮೇಲಿನ ಪ್ರೀತಿ” ಎಂದು ಅವರು ಹೇಳಲು ಇಷ್ಟಪಡುತ್ತಿದ್ದರು ಎಂದು ಜಗದ್ಗುರು XIVನೇ ಲಿಯೋರವರು ನೆನಪಿಸಿದರು. ಈ ನಂಬಿಕೆಯೇ ಲೆಜ್ಯೂನ್ ರವರ ಸೇವೆಗೆ ಮಾರ್ಗದರ್ಶನ ನೀಡಿತು; ಅವರು ಪ್ರೀತಿಯಿಂದ “ಬಡವರಲ್ಲಿಯೇ ಬಡವರು” ಎಂದು ಕರೆಯುತ್ತಿದ್ದವರಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಜಗದ್ಗುರುಗಳು ಹೇಳಿದರು.
ಧರ್ಮ ಸಭೆಯ ಮಾನ್ಯತೆ ನೀಡಿದ ವ್ಯಕ್ತಿತ್ವ
ಪ್ರೊಫೆಸರ್ ಲೆಜ್ಯೂನ್ ರವರ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಧರ್ಮ ಸಭೆಗೆ ಸಲ್ಲಿಸಿದ ದಣಿವರಿಯದ ಸೇವೆಯನ್ನು ಗುರುತಿಸಿ, ಸಂತ ಜಗದ್ಗುರು VIನೇ ಪೌಲ್ ರವರು ಅವರನ್ನು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿ ನೇಮಿಸಿದ್ದರು ಎಂದು ಜಗದ್ಗುರು ಲಿಯೋರವರು ಸ್ಮರಿಸಿದರು.
ಸಂತ ದ್ವಿತೀಯ ಜಾನ್ ಪಾಲ್ ರವರೊಂದಿಗೆ ಲೆಜ್ಯೂನ್ ಬೆಳೆಸಿಕೊಂಡಿದ್ದ ಆಳವಾದ ಸ್ನೇಹ ಮತ್ತು ಜೀವದ ರಕ್ಷಣೆಯ ಕುರಿತಾದ ಅವರ ಹಂಚಿಕೊಂಡ ಬದ್ಧತೆಯು, ನಂತರ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು ಎಂದು ಅವರು ಹೇಳಿದರು.
ಲೆಜ್ಯೂನ್ ರವರು ಆ ಅಕಾಡೆಮಿಯನ್ನು “ಜೀವದ ವಿರುದ್ಧ ಹೆಚ್ಚಾಗುತ್ತಿರುವ ಬೆದರಿಕೆಗಳ ಎದುರು ಅತ್ಯಗತ್ಯವಾದ ಸಂಸ್ಥೆ” ಎಂದು ಪರಿಗಣಿಸಿದ್ದರು.
“ವಿಜ್ಞಾನ ಮತ್ತು ಜ್ಞಾನದ ವ್ಯಕ್ತಿ”ಯಾಗಿದ್ದ ಲೆಜ್ಯೂನ್ ರವರು, ತಮ್ಮ ವೈಜ್ಞಾನಿಕ ಆವಿಷ್ಕಾರವನ್ನು “ಟ್ರೈಸೊಮಿ 21 ಹೊಂದಿರುವ ವ್ಯಕ್ತಿಗಳನ್ನು ಜನನಕ್ಕೂ ಮುನ್ನವೇ ನಿರ್ಮೂಲನೆ ಮಾಡಲು ಬಳಸಲಾಗುವುದು” ಎಂಬುದನ್ನು ಶೀಘ್ರದಲ್ಲೇ ಅರಿತುಕೊಂಡರು ಎಂದು ಜಗದ್ಗುರುಗಳು ಹೇಳಿದರು.
ಆ ಕಾರಣದಿಂದಲೇ ಅವರು ಹಿಂಜರಿಯದೆ “ಅವರ ಪರ ವಕೀಲ”ರಾದರು; “ಹಿಪ್ಪೋಕ್ರಾಟಿಕ್ ಪ್ರಮಾಣದ ಉಲ್ಲಂಘನೆ” ಹಾಗೂ “ಈ ಹೊಸ ಸುಜನನಶಾಸ್ತ್ರವನ್ನು (ಯೂಜೆನಿಕ್ಸ್)” ಖಂಡಿಸಿದರು. ಅದನ್ನು ಅವರು “ಕ್ರೋಮೋಸೋಮಲ್ ವರ್ಣಭೇದ” ಎಂದು ಕರೆದಿದ್ದರು.
ಲೆಜ್ಯೂನ್ ರವರ ಪ್ರವಾದಿಯಂತಹ ಮಾತುಗಳು, ದೇವರ ಸೃಷ್ಟಿಕಾರ್ಯದಲ್ಲಿ ಮೂಲ ಹೊಂದಿರುವ ಮತ್ತು ಯಾರಿಂದಲೂ ಕಸಿದುಕೊಳ್ಳಲಾಗದ ಘನತೆಯ ಆಧಾರದ ಮೇಲೆ, ಪ್ರತಿಯೊಬ್ಬ ಮಾನವ ವ್ಯಕ್ತಿಯ ಜೀವವನ್ನು ರಕ್ಷಿಸುವಂತೆ ಅವರನ್ನು ಪ್ರೇರೇಪಿಸಿದವು ಎಂದು ಜಗದ್ಗುರುಗಳು ಹೇಳಿದರು.
ಈ ಬದ್ಧತೆಯು ಅವರನ್ನು ಜಗತ್ತಿನಾದ್ಯಂತದ ಸಂಸ್ಥೆಗಳು ಮತ್ತು ನಾಯಕರಿಗೆ ಸವಾಲು ಹಾಕಲು ಹಾಗೂ ಸಲಹೆ ನೀಡಲು ಪ್ರೇರೇಪಿಸಿತು, ಆದರೆ ಅದೇ ಸಮಯದಲ್ಲಿ ಕೆಲವು ವೈಜ್ಞಾನಿಕ ವಲಯಗಳಲ್ಲಿ ಅವರು ತಿರಸ್ಕಾರ ಮತ್ತು ಕಿರುಕುಳಕ್ಕೂ ಒಳಗಾಗಬೇಕಾಯಿತು.
ತಂತ್ರಜ್ಞಾನವು ನೀತಿಶಾಸ್ತ್ರವನ್ನು ಬದಲಿಸಲು ಸಾಧ್ಯವಿಲ್ಲ
ತಂತ್ರಜ್ಞಾನವು ವೈದ್ಯಕೀಯಕ್ಕೆ ಸಹಾಯ ಮಾಡಬಲ್ಲದು, ಆದರೆ ಅದನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರೊಫೆಸರ್ ಲೆಜ್ಯೂನ್ ಸ್ಪಷ್ಟವಾಗಿ ಅರಿತಿದ್ದರು ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು.
ತಂತ್ರಜ್ಞಾನವನ್ನು ವೈದ್ಯಕೀಯದ ವಿರುದ್ಧವೂ ಬಳಸಬಹುದು ಎಂಬುದನ್ನು ಅವರು ತಿಳಿದಿದ್ದರು, ಆದರೆ ವೈದ್ಯಕೀಯವು ತನ್ನ ಸ್ವಭಾವತಃ ಜೀವದ ಸೇವೆಗಾಗಿ ಅಸ್ತಿತ್ವದಲ್ಲಿದೆ ಎಂದು ಜಗದ್ಗುರುಗಳು ಹೇಳಿದರು.
ವ್ಯಕ್ತಿಯ ಮೌಲ್ಯವು ಎಂದಿಗೂ ಅವನ ಕಾರ್ಯಕ್ಷಮತೆ, ಸ್ವಾಯತ್ತತೆ ಅಥವಾ ಸಾಮಾಜಿಕ ಉಪಯುಕ್ತತೆಯ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಅವರು ಮುಂದುವರಿಸಿದರು.
“ಪ್ರಯೋಗಾಲಯದ ಅಲ್ಗಾರಿದಮ್ಗಳ ಆಧಾರದ ಮೇಲೆ ಈ ಭ್ರೂಣ ಬದುಕಬೇಕೋ ಅಥವಾ ಆ ವೃದ್ಧ ವ್ಯಕ್ತಿ ಬದುಕಬೇಕೋ ಎಂದು ಯಾವುದೇ ವೈದ್ಯರು ನಿರ್ಧರಿಸಲು ತಮ್ಮನ್ನು ತಾವು ಅನುಮತಿಸಬಾರದು!” ಎಂದು ಜಗದ್ಗುರು ಲಿಯೋರವರು ಎಚ್ಚರಿಕೆ ನೀಡಿದರು.
“ವೈದ್ಯಕೀಯವು ಎಂದಿಗೂ ಯೋಜಿತ ಮರಣದ ಸೇವಕನಾಗಬಾರದು!”
ಸಾಮೂಹಿಕ ಹಿತದ ಸೇವೆ
ಭಾಷಣದ ಕೊನೆಯಲ್ಲಿ, ಸ್ಪೇನ್, ಅರ್ಜೆಂಟಿನಾ, ಅಮೇರಿಕಾ ಸಂಯುಕ್ತ ಸಂಸ್ಥಾನ, ಪೋರ್ಚುಗಲ್, ಇಟಲಿ, ಟುನೀಶಿಯಾ, ಕೋಟ್ ದಿವ್ವಾರ್ ಹಾಗೂ ಕೊರಿಯಾ ಸೇರಿದಂತೆ ಅನೇಕ ದೇಶಗಳಿಂದ ಆಗಮಿಸಿದ್ದ ಪ್ರತಿಷ್ಠಾನದ ಸದಸ್ಯರು ಮತ್ತು ಕುಟುಂಬಗಳನ್ನು ಜಗದ್ಗುರುಗಳು ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ತಮ್ಮ ಬದ್ಧತೆಯನ್ನು ಮುಂದುವರಿಸುವಂತೆ ಅವರನ್ನು ಪ್ರೋತ್ಸಾಹಿಸಿದ ಅವರು, ಸಾಮೂಹಿಕ ಹಿತವು ಯಾರನ್ನೂ ಹೊರತುಪಡಿಸಬಾರದು, ವಿಶೇಷವಾಗಿ ದುರ್ಬಲತೆ ಅಥವಾ ಅಂಗವೈಕಲ್ಯದೊಂದಿಗೆ ಬದುಕುತ್ತಿರುವವರನ್ನು ಎಂದಿಗೂ ಕಡೆಗಣಿಸಬಾರದು ಎಂದು ನೆನಪಿಸಿದರು.
ತರ್ಕ ಮತ್ತು ಹೃದಯದ ಸಾರ್ವತ್ರಿಕತೆಯಲ್ಲಿ ಬೇರೂರಿರುವ ಪೂಜ್ಯನೀಯ ಜೆರೋಮ್ ಲೆಜ್ಯೂನ್ ರವರ ಸಂದೇಶ ಮತ್ತು ಕಾರ್ಯವು, ಜೀವನದಲ್ಲಿ ಸಮ್ಮತತೆ ಮತ್ತು ನೈಜತೆಯನ್ನು ಹುಡುಕುತ್ತಿರುವ ಅನೇಕ ಯುವಕರು ಹಾಗೂ ವೃತ್ತಿಪರರಲ್ಲಿ “ಸತ್ಯಕ್ಕಾಗಿ ಧೈರ್ಯ”ವನ್ನು ಪ್ರೇರೇಪಿಸಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.
ಅಲ್ಲದೆ, ಪ್ರೊಫೆಸರ್ ಲೆಜ್ಯೂನ್ ರವರ ಮಾದರಿಯು “ಕಠೋರತೆಯಿಲ್ಲದೆ ತರ್ಕ ಮತ್ತು ನಂಬಿಕೆಯನ್ನು, ಮಾತು ಮತ್ತು ಕಾರ್ಯವನ್ನು, ವ್ಯಕ್ತಿಗಳ ಬಗ್ಗೆ ತೀರ್ಪು ನೀಡದ ಮನೋಭಾವವನ್ನು ಹಾಗೂ ಅಸತ್ಯದ ನಿರಾಕರಣೆಯನ್ನು” ಒಂದಾಗಿಸಲು ಸಹಾಯ ಮಾಡಲಿ ಎಂದು ಅವರು ಪ್ರಾರ್ಥಿಸಿದರು.
