ವ್ಯಾಟಿಕನ್ನ ಕೃಷಿ-ಸೌರಶಕ್ತಿ (ಅಗ್ರಿವೋಲ್ಟಾಯಿಕ್) ಯೋಜನೆಯ ಅನುಷ್ಠಾನಕ್ಕಾಗಿ ಜಗದ್ಗುರುಗಳ ಪ್ರತಿಷ್ಠಾನವನ್ನು ಸ್ಥಾಪಿಸಿದರು.
ವ್ಯಾಟಿಕನ್ ವರದಿ
ವ್ಯಾಟಿಕನ್ನ ಅಗ್ರಿವೋಲ್ಟಾಯಿಕ್ ಯೋಜನೆಯ ಅನುಷ್ಠಾನಕ್ಕಾಗಿ “ಫ್ರಾತೆಲ್ಲೊ ಸೊಲೆ” ಪ್ರತಿಷ್ಠಾನ ಸ್ಥಾಪನೆ
“ಸಾಂತಾ ಮಾರಿಯಾ ದಿ ಗಲೇರಿಯಾ”ದ ವ್ಯಾಟಿಕನ್ನ ಬಹಿರ್ದೇಶೀಯ ಪ್ರದೇಶದಲ್ಲಿ ಅಗ್ರಿವೋಲ್ಟಾಯಿಕ್ ಸ್ಥಾವರವನ್ನು ಸ್ಥಾಪಿಸುವ ಬದ್ಧತೆಯನ್ನು ವಿಳಂಬವಿಲ್ಲದೆ ದೃಶ್ಯ ಮತ್ತು ವಾಸ್ತವ ರೂಪದಲ್ಲಿ ಕಾರ್ಯಗತಗೊಳಿಸುವುದು ಅದು ಅಲ್ಲಿರುವ ರೇಡಿಯೋ ಪ್ರಸಾರ ಕೇಂದ್ರಕ್ಕೆ ಮಾತ್ರವಲ್ಲದೆ, ವ್ಯಾಟಿಕನ್ ನಗರ ರಾಜ್ಯದ ಸಂಪೂರ್ಣ ಇಂಧನ ಸ್ವಾವಲಂಬನೆಯನ್ನು ಖಚಿತಪಡಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು.
ಇದು 2026ರ ಜೂನ್ 1ರಂದು ದಿನಾಂಕಿತವಾದ ಕೈರೋಗ್ರಾಫ್ ಮೂಲಕ ಜಗದ್ಗುರು XIVನೇ ಲಿಯೋರವರು ಸ್ಥಾಪಿಸಿರುವ “ಫ್ರಾತೆಲ್ಲೊ ಸೊಲೆ” (ಸಹೋದರ ಸೂರ್ಯ) ಪ್ರತಿಷ್ಠಾನದ ಉದ್ದೇಶವಾಗಿದೆ. ಈ ಪ್ರತಿಷ್ಠಾನವನ್ನು “ಸುಸ್ಥಿರ ಅಭಿವೃದ್ಧಿಯ ಮಾದರಿಯತ್ತ ಸಾಗುವ ಪರಿವರ್ತನೆಯನ್ನು ಉತ್ತೇಜಿಸುವ” ಧ್ಯೇಯದೊಂದಿಗೆ ಸ್ಥಾಪಿಸಲಾಗಿದೆ.
ಈ ಯೋಜನೆಯನ್ನು ಈಗಾಗಲೇ ಜಗದ್ಗುರು ಫ್ರಾನ್ಸಿಸ್ ರವರು 2024ರ ಜೂನ್ 21ರಂದು ಪ್ರಕಟಿಸಿದ ಮೊಟು ಪ್ರೊಪ್ರಿಯೊ ರೂಪದ ತಮ್ಮ ಪ್ರೇಷಿತರ ಪತ್ರ “ಫ್ರಾತೆಲ್ಲೊ ಸೊಲೆ” ಮೂಲಕ ಪ್ರೋತ್ಸಾಹಿಸಿದ್ದರು. ಈ ಪ್ರತಿಷ್ಠಾನದ ಸ್ಥಾಪನೆಯು “ಮೇಲೆ ಉಲ್ಲೇಖಿಸಲಾದ ಮೊಟು ಪ್ರೊಪ್ರಿಯೊ ಹಾಗೂ 2025ರ ಜುಲೈ 31ರಂದು ಇಟಾಲಿಯನ್ ಅಧಿಕಾರಿಗಳೊಂದಿಗೆ ಸಹಿ ಮಾಡಲಾದ ಮತ್ತು 2026ರ ಮೇ 27ರಂದು ಜಾರಿಗೆ ಬಂದ ಒಪ್ಪಂದವನ್ನು” ಪರಿಗಣಿಸಿ ಕೈಗೊಳ್ಳಲಾಗಿದೆ ಎಂದು ಜಗದ್ಗುರುಗಳು ಉಲ್ಲೇಖಿಸಿದ್ದಾರೆ.
ಈ ಪ್ರತಿಷ್ಠಾನವು ಭವಿಷ್ಯದ ಆಶಾಕಿರಣವಾಗಿದ್ದು, ಪರಿಸರವನ್ನು ಗೌರವಿಸಿ ಮತ್ತು ರಕ್ಷಿಸುತ್ತಾ ಇಂಧನ ಉತ್ಪಾದನೆ ಹಾಗೂ ಕೃಷಿಯನ್ನು ಹೇಗೆ ಸಮನ್ವಯಗೊಳಿಸಬಹುದು ಎಂಬುದಕ್ಕೆ ಒಂದು ಮಾದರಿಯಾಗಿದೆ. ಇದು ಪರಿಸರ ಸುಸ್ಥಿರತೆ ಹಾಗೂ ನಮ್ಮ ಸಾಮಾನ್ಯ ನಿವಾಸವಾದ ಭೂಮಿಯ ಆರೈಕೆಯ ತತ್ವಗಳಿಗೆ ಅನುಗುಣವಾಗಿದ್ದು, ಅವುಗಳನ್ನು “ಲೌದಾತೋ ಸಿ’” ಎಂಬ ಪರಿಪತ್ರಿಕೆ, “ಲೌದಾತೆ ಡೆಯುಮ್” ಎಂಬ ಪ್ರೇಷಿತರ ಪ್ರಬೋಧನೆ, “ಫ್ರಾತೆಲ್ಲೊ ಸೊಲೆ” ಎಂಬ ಮೊಟು ಪ್ರೊಪ್ರಿಯೊ ಹಾಗೂ ಧರ್ಮ ಸಭೆಯ ಸಾಮಾಜಿಕ ಬೋಧನೆಗಳು ವ್ಯಾಪಕವಾಗಿ ಪ್ರತಿಪಾದಿಸಿವೆ.
ಕೈರೋಗ್ರಾಫ್ನಲ್ಲಿ ಹೀಗೆ ಹೇಳಲಾಗಿದೆ:
ಈ ಪ್ರತಿಷ್ಠಾನವು ತನ್ನ ಕಾನೂನುಬದ್ಧ ಕೇಂದ್ರವನ್ನು ವ್ಯಾಟಿಕನ್ ನಗರ ರಾಜ್ಯದಲ್ಲಿ ಹೊಂದಿದ್ದು, ತನ್ನ ಸಂಪೂರ್ಣ ಕಾರ್ಯಾಚರಣೆಯನ್ನು ಸಾಂತಾ ಮಾರಿಯಾ ದಿ ಗಲೇರಿಯಾದ ಬಹಿರ್ದೇಶೀಯ ಪ್ರದೇಶದಲ್ಲಿ ನಡೆಸುತ್ತದೆ.
ಹೊಸದಾಗಿ ಸ್ಥಾಪಿಸಲಾದ ಈ ಸಂಸ್ಥೆಯು ತನ್ನದೇ ಆದ ನಿಯಮಾವಳಿಗಳ ಪ್ರಕಾರ ಕಾರ್ಯನಿರ್ವಹಿಸಲಿದ್ದು, ಅವುಗಳನ್ನು ಜಗದ್ಗುರುಗಳು ಇದೇ ಕೈರೋಗ್ರಾಫ್ ಮೂಲಕ ಅನುಮೋದಿಸಿ ಜಾರಿಗೆ ತಂದಿದ್ದಾರೆ.
ಪ್ರತಿಷ್ಠಾನದ ಮೊದಲ ಮೂರು ವರ್ಷಗಳ ಅವಧಿಗೆ, ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್ನ ಅಧ್ಯಕ್ಷೆ ಸಿಸ್ಟರ್ ರಫೆಲ್ಲಾ ಪೆಟ್ರಿನಿರವರನ್ನು ಅಧ್ಯಕ್ಷೆಯಾಗಿ ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳದ ಆಸ್ತಿಗಳ ಆಡಳಿತ ಸಂಸ್ಥೆ (ಎಪಿಎಸ್ಎ) ಯ ಅಧ್ಯಕ್ಷರಾದ ಬಿಷಪ್ ಗಿಯೋರ್ಡಾನೊ ಪಿಚ್ಚಿನೋಟ್ಟಿ ರವರನ್ನು ಉಪಾಧ್ಯಕ್ಷರಾಗಿ ಜಗದ್ಗುರುಗಳು ನೇಮಿಸಿದ್ದಾರೆ.
ಹೀಗೆ, “ಫ್ರಾತೆಲ್ಲೊ ಸೊಲೆ” ಪ್ರತಿಷ್ಠಾನವು ವ್ಯಾಟಿಕನ್ನ ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಕಾರ್ಯರೂಪಕ್ಕೆ ತರುವ ಮಹತ್ವದ ಹೆಜ್ಜೆಯಾಗಿ ಹೊರಹೊಮ್ಮಿದೆ.
