ಸಿರೋ-ಮಲಂಕರ ಕಥೋಲಿಕ್ ಧರ್ಮ ಸಭೆಯ ಪ್ರತಿನಿಧಿ ನಿಯೋಗದೊಂದಿಗೆ ಜಗದ್ಗುರು ಲಿಯೋರವರ ಭೇಟಿ. ಸಿರೋ-ಮಲಂಕರ ಕಥೋಲಿಕ್ ಧರ್ಮ ಸಭೆಯ ಪ್ರತಿನಿಧಿ ನಿಯೋಗದೊಂದಿಗೆ ಜಗದ್ಗುರು ಲಿಯೋರವರ ಭೇಟಿ.  (ANSA)

ಭರವಸೆಯ ದೂತರಾಗಿರಿ: ಯುರೋಪಿನ ಸಿರೋ-ಮಲಂಕರ ವಿಶ್ವಾಸಿಗಳಿಗೆ ಜಗದ್ಗುರುಗಳ ಕರೆ.

ಯುರೋಪಿನಲ್ಲಿ ವಾಸಿಸುತ್ತಿರುವ ಸಿರೋ-ಮಲಂಕರ ಕಥೋಲಿಕರನ್ನು ತಮ್ಮ ಧರ್ಮ ಸಭೆಯ ಪರಂಪರೆ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ದೃಢವಾಗಿ ಬೇರೂರಿರಲು ಜಗದ್ಗುರು ಲಿಯೋರವರು ಪ್ರೋತ್ಸಾಹಿಸಿದರು. ತಮ್ಮ ಧರ್ಮ ಸಭೆಯ ಶತಮಾನೋತ್ಸವ ಆಚರಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ಅವರು “ಭರವಸೆಯ ಸಂದೇಶವಾಹಕರಾಗಬೇಕು” ಎಂದು ಜಗದ್ಗುರುಗಳು ಕರೆ ನೀಡಿದರು.

ವ್ಯಾಟಿಕನ್ ವರದಿ

ಯುರೋಪಿನಲ್ಲಿ ವಾಸಿಸುವ ಸಿರೋ-ಮಲಂಕರ ಕಥೋಲಿಕರ ಮೊದಲ ಸಮಾವೇಶದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಸೋಮವಾರ ವ್ಯಾಟಿಕನ್‌ನಲ್ಲಿ ಸಿರೋ-ಮಲಂಕರ ಧರ್ಮ ಸಭೆಯ ಯಾಜಕರು, ಧಾರ್ಮಿಕರು ಮತ್ತು ವಿಶ್ವಾಸಿಗಳ ನಿಯೋಗವನ್ನು ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ, ಸಿರೋ-ಮಲಂಕರ ಧರ್ಮ ಸಭೆಯು ತನ್ನ ಶತಮಾನೋತ್ಸವದ ಸಿದ್ಧತೆಯ ಅಂಗವಾಗಿ ಹಲವು ವರ್ಷಗಳ ಆಧ್ಯಾತ್ಮಿಕ ನವೀಕರಣದ ಪಯಣವನ್ನು ಆರಂಭಿಸಿದೆ ಎಂದು ಅವರು ತಿಳಿಸಿದರು. ಈ ಶತಮಾನೋತ್ಸವವು ಧರ್ಮ ಸಭೆಯ ಪೂರ್ಣ ಐಕ್ಯತೆಯ ಸ್ಥಾಪನೆಯ ನೂರು ವರ್ಷಗಳನ್ನು ಸ್ಮರಿಸುತ್ತದೆ.

1932ರಲ್ಲಿ ಜಗದ್ಗುರು XI ನೇ ಪಿಯಸ್ ರವರು ಪ್ರಕಟಿಸಿದ ಕ್ರಿಸ್ಟೋ ಪ್ಯಾಸ್ಟೋರಮ್ ಪ್ರಿನ್ಸಿಪಿ ಪ್ರೇಷಿತರ ಸಂವಿಧಾನವನ್ನು ಉಲ್ಲೇಖಿಸಿದ ಜಗದ್ಗುರುಗಳು, ಪೂಜ್ಯ ಮಾರ್ ಇವಾನಿಯೊಸ್ ಮತ್ತು ಮಾರ್ ಥಿಯೋಫಿಲೋಸ್ ಅವರ ಸಾಕ್ಷ್ಯಜೀವನಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರು ಯಾಜಕರು, ಧಾರ್ಮಿಕರು ಮತ್ತು ವಿಶ್ವಾಸಿಗಳನ್ನು ಪೇತ್ರನ ಉತ್ತರಾಧಿಕಾರಿಯೊಂದಿಗಿನ ಐಕ್ಯತೆಯತ್ತ ಮುನ್ನಡೆಸಿದ ಮಹಾನ್ ನಾಯಕರಾಗಿದ್ದರು. ಮಾರ್ ಇವಾನಿಯೊಸ್ ರವರನ್ನು “ಯೇಸುವಿನ ಹೃದಯದಂತೆ ಬದುಕಿದ ನಿಜವಾದ ಕುರುಬ” ಎಂದು ಬಣ್ಣಿಸಿದ ಜಗದ್ಗುರುಗಳು, ಅವರು ಐಕ್ಯತೆ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಧರ್ಮ ಸಭೆಯ ಕನಸನ್ನು ಸಾಕಾರಗೊಳಿಸಲು ಶ್ರಮಿಸಿದರು ಎಂದು ಹೇಳಿದರು.

ಸುವಾರ್ತಾ ಪ್ರಸಾರದ ಕುರಿತು ಮಾತನಾಡಿದ ಜಗದ್ಗುರುಗಳು, ಯುವ ಯಾಜಕರಾಗಿದ್ದಾಗಲೇ ಮಾರ್ ಇವಾನಿಯೊಸ್ ತಮ್ಮ ಸಮುದಾಯದ ಗಡಿಗಳನ್ನು ಮೀರಿ ಚಿಂತಿಸಿದ್ದರು ಎಂದು ಹೇಳಿದರು. ಸಂತ ಥೋಮರ ಬೋಧನೆಯ ಮೂಲಕ ಭಾರತದಲ್ಲಿ ಬಿತ್ತಲ್ಪಟ್ಟ ಮಿಷನರಿ ಚೈತನ್ಯವನ್ನು ಪುನರುಜ್ಜೀವನಗೊಳಿಸುವ ಅಗತ್ಯವನ್ನು ಅವರು ಅರಿತಿದ್ದರು. ಮಿಷನರಿ ಕಾರ್ಯವು ಕೇವಲ ಮಾತುಗಳ ಮೂಲಕವಲ್ಲ, ಪವಿತ್ರ ಜೀವನ ಮತ್ತು ನಿಸ್ವಾರ್ಥ ಸೇವೆಯ ಮೂಲಕ ನಡೆಯಬೇಕು ಎಂಬುದನ್ನು ಅವರು ಬೋಧಿಸಿದರು. ಈ ಕಾರಣದಿಂದ ಸಿರೋ-ಮಲಂಕರ ಧರ್ಮ ಸಭೆಯ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಮಾನವ ಅಭಿವೃದ್ಧಿಯ ಮೂಲಕ ಸಮಾಜದ ಅಂಚಿನಲ್ಲಿರುವವರಿಗೆ ಸೇವೆ ಸಲ್ಲಿಸುತ್ತಿರುವ ಸುವಾರ್ತಾ ಶಕ್ತಿಯ ದೀಪಸ್ತಂಭವಾಗಿ ಬೆಳೆಯಿತು ಎಂದು ಜಗದ್ಗುರುಗಳು ಪ್ರಶಂಸಿಸಿದರು.

ಭಾರತದ ಹೊರಗೆ ಸಿರೋ-ಮಲಂಕರ ಧರ್ಮ ಸಭೆಯು ಬೆಳೆಯುತ್ತಿರುವ ಉಪಸ್ಥಿತಿಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಪೂರ್ವ ಕಥೋಲಿಕ ಧರ್ಮ ಸಭೆಗಳ ಆಧ್ಯಾತ್ಮಿಕ ಮತ್ತು ಆರಾಧನಾ ಪರಂಪರೆಯನ್ನು, ವಿಶೇಷವಾಗಿ ವಿದೇಶಗಳಲ್ಲಿ ವಾಸಿಸುವ ವಿಶ್ವಾಸಿಗಳಲ್ಲಿ, ಸಂರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದರು. ಈ ಹಿನ್ನೆಲೆಯಲ್ಲಿ, ಯುರೋಪಿನಾದ್ಯಂತ ಸಿರೋ-ಮಲಂಕರ ಕಥೋಲಿಕರಿಗಾಗಿ ಪೂರ್ಣಕಾಲಿಕ ಪ್ರೇಷಿತರ ವಿಸಿಟೇಟರ್ ಆಗಿ ಬಿಷಪ್ ಮಾರ್ ಒಸ್ತಾಥಿಯೊಸ್ ಅವರನ್ನು ನೇಮಿಸಿರುವುದನ್ನು ಅವರು ನೆನಪಿಸಿದರು.

ಈ ಮಿಷನ್‌ನ ಉದ್ದೇಶವು ಯುರೋಪಿನಲ್ಲಿರುವ ಸಿರೋ-ಮಲಂಕರ ಸಮುದಾಯಗಳ ಧಾರ್ಮಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಭವಿಷ್ಯದ ಪೀಳಿಗೆಗಳು ತಮ್ಮ ವಿಶಿಷ್ಟ ಪರಂಪರೆಯ ಮೂಲಕ ಯೇಸು ಕ್ರಿಸ್ತನೊಂದಿಗೆ ಸ್ನೇಹವನ್ನು ಗಾಢಗೊಳಿಸಿಕೊಳ್ಳಲು ದೃಢವಾದ ಅಡಿಪಾಯವನ್ನು ನಿರ್ಮಿಸುವುದಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಅಲ್ಲದೆ, ಪೂರ್ವ ಧರ್ಮ ಸಭೆಗಳ ಧರ್ಮಾಧಿಕರಣವು ಲ್ಯಾಟಿನ್ ವಿಧಿಯ ಬಿಷಪ್‌ಗಳು ಪೂರ್ವ ಕಥೋಲಿಕರಿಗೆ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಹೇಗೆ ನೆರವಾಗಬಹುದು ಎಂಬುದನ್ನು ಪರಿಶೀಲಿಸಬೇಕೆಂದು ಸೂಚಿಸಿರುವುದಾಗಿ ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರು ಲಿಯೋರವರು ವಿಶ್ವಾಸಿಗಳನ್ನು ಸಿರೋ-ಮಲಂಕರ ಧರ್ಮ ಸಭೆಯ ಅಮೂಲ್ಯ ಗುರುತಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಧರ್ಮ ಸಭೆಯ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದರು. ತಮ್ಮ ಮೇಜರ್ ಆರ್ಚ್‌ಬಿಷಪ್ ಮತ್ತು ಬಿಷಪ್‌ಗಳ ಸಿನೋಡ್‌ನೊಂದಿಗೆ ಐಕ್ಯತೆಯಲ್ಲಿ ಉಳಿಯುವಂತೆ ಹಾಗೂ ತಮ್ಮ ಪೂರ್ವಜರಿಂದ ಪಡೆದ ಪರಂಪರೆಯನ್ನು ಪ್ರೀತಿಯಿಂದ ಕಾಪಾಡಿಕೊಳ್ಳುವಂತೆ ಅವರು ಕರೆ ನೀಡಿದರು. ಸಂತ ಥೋಮರ ಕ್ರೈಸ್ತ ಸಮುದಾಯಗಳ ಬಲವಾದ ಕುಟುಂಬ ಜೀವನವನ್ನು ಸ್ಮರಿಸಿದ ಜಗದ್ಗುರುಗಳು, ವಿಶೇಷವಾಗಿ ಯುವಜನರಲ್ಲಿ ದೃಢವಾದ ನಂಬಿಕೆ ಮನೆಮನೆಗಳಲ್ಲಿ ಮತ್ತು ಹೃದಯಗಳಲ್ಲಿ ಮುಂದುವರಿಯಲಿ ಎಂದು ಪ್ರಾರ್ಥಿಸಿದರು.

 

 

 

 

 

 

15 ಜೂನ್ 2026, 11:53