ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ತ್ರಿಕಾಲ ಪ್ರಾರ್ಥನೆಯ ವೇಳೆ ಜಗದ್ಗುರುಗಳ ಕರೆ: ದ್ವೇಷವನ್ನು ಪ್ರೀತಿಯಿಂದ ಜಯಿಸಲು ಕ್ರೈಸ್ತರು ಮುಂದಾಗಬೇಕು.

ಜಗದ್ಗುರು XIVನೇ ಲಿಯೋರವರು ಕ್ರೈಸ್ತರು ತಮ್ಮ ಧರ್ಮಸೇವೆಯ ಬೇರುಗಳನ್ನು ಕ್ರಿಸ್ತನೊಂದಿಗಿನ ವೈಯಕ್ತಿಕ ಭೇಟಿ ಮತ್ತು ಆಳವಾದ ಧ್ಯಾನ-ಚಿಂತನೆಗಳಲ್ಲಿ ನೆಡಬೇಕು ಎಂದು ಕರೆ ನೀಡಿದರು. ಕ್ರಿಸ್ತನೊಂದಿಗೆ ಇರುವ ಆತ್ಮೀಯ ಸಂಬಂಧದಿಂದ ಶಕ್ತಿ ಪಡೆದು, ಪ್ರತಿಯೊಂದು ಸಂದರ್ಭದಲ್ಲೂ ಆಶೆ, ಪ್ರೀತಿ ಮತ್ತು ಸ್ಥೈರ್ಯದಿಂದ ಸುವಾರ್ತೆಗೆ ಸಾಕ್ಷಿಯಾಗುವಂತೆ ಅವರು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಸೇಂಟ್ ಪೇತ್ರರ ಚೌಕದಲ್ಲಿ ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ನಿಜವಾದ ಸುವಾರ್ತಾ ಪ್ರಚಾರವು ತಂತ್ರಗಳು ಅಥವಾ ಕಾರ್ಯವಿಧಾನಗಳಿಂದ ಹುಟ್ಟುವುದಿಲ್ಲ, ಬದಲಾಗಿ ಪ್ರಾರ್ಥನೆ, ಮೌನ ಮತ್ತು ಧ್ಯಾನ-ಚಿಂತನೆಯ ಮೂಲಕ ಬೆಳೆಸಿಕೊಳ್ಳುವ ಕ್ರಿಸ್ತನೊಂದಿಗಿನ ವೈಯಕ್ತಿಕ ಭೇಟಿಯಿಂದ ಉದ್ಭವಿಸುತ್ತದೆ ಎಂದು ಕ್ರೈಸ್ತರಿಗೆ ನೆನಪಿಸಿದರು.

ಸಂತ ಮತ್ತಾಯನ ಸುವಾರ್ತೆಯಲ್ಲಿ ಯೇಸು ತಮ್ಮ ಶಿಷ್ಯರನ್ನು ಧರ್ಮಸೇವೆಗೆ ಕಳುಹಿಸುವ ಘಟನೆಯನ್ನು ಆಧರಿಸಿ ಚಿಂತನೆ ನಡೆಸಿದ ಜಗದ್ಗುರುಗಳು, ಹೃದಯದ ಆಳದಲ್ಲಿ ಸ್ವೀಕರಿಸಿದ ಸಂದೇಶವನ್ನು ಬೆಳಕಿಗೆ ತರುವಂತೆ ಯೇಸು ನೀಡಿದ ಆಹ್ವಾನವನ್ನು ವಿಶೇಷವಾಗಿ ಉಲ್ಲೇಖಿಸಿದರು.

“ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ಬೆಳಕಿನಲ್ಲಿ ಹೇಳಿರಿ; ನಿಮ್ಮ ಕಿವಿಗೆ ಗುಟ್ಟಾಗಿ ಹೇಳುವುದನ್ನು ಮನೆಯ ಮೇಲ್ಛಾವಣಿಗಳಿಂದ ಘೋಷಿಸಿರಿ” ಎಂದು ಯೇಸು ತಮ್ಮ ಶಿಷ್ಯರಿಗೆ ಹೇಳುತ್ತಾರೆ.

“ಖಾಸಗಿಯಾಗಿ ಕೇಳುವುದು” ಮತ್ತು “ಸಾರ್ವಜನಿಕವಾಗಿ ಘೋಷಿಸುವುದು” ಎಂಬ ಎರಡರ ನಡುವಿನ ವ್ಯತ್ಯಾಸವನ್ನು ವಿವರಿಸಿದ ಜಗದ್ಗುರುಗಳು, ಸುವಾರ್ತೆಯನ್ನು ನಂಬಿಕಾರ್ಹವಾಗಿ ಘೋಷಿಸಲು ಮೊದಲು ಅದನ್ನು ವೈಯಕ್ತಿಕವಾಗಿ ಅನುಭವಿಸಿರಬೇಕು ಎಂದು ಹೇಳಿದರು.

“ಸುವಾರ್ತೆಯನ್ನು ಘೋಷಿಸುವುದು ಎಂದರೆ ಮೊದಲನೆಯದಾಗಿ ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಕ್ರಿಸ್ತನೊಂದಿಗಿನ ವೈಯಕ್ತಿಕ ಭೇಟಿಯನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಿದೆ” ಎಂದು ಅವರು ಹೇಳಿದರು.

ತಂತ್ರಗಳಿಗಿಂತ ಪ್ರಾಮಾಣಿಕತೆ ಮುಖ್ಯ

ಕ್ರೈಸ್ತ ಸಾಕ್ಷ್ಯದ ಫಲಪ್ರದತೆ ಮುಖ್ಯವಾಗಿ ವಿಧಾನಗಳು, ಸಂಪನ್ಮೂಲಗಳು ಅಥವಾ ಮಾನವ ಪ್ರಯತ್ನಗಳ ಮೇಲೆ ಅವಲಂಬಿತವಾಗಿಲ್ಲ ಎಂದು ಜಗದ್ಗುರುಗಳು ವಿವರಿಸಿದರು. ಅದು ಪವಿತ್ರಾತ್ಮನ ಕಾರ್ಯ ಮತ್ತು ದೇವರ ಕೃಪೆಗೆ ವಿಶ್ವಾಸಿಗಳು ನೀಡುವ ಪ್ರಾಮಾಣಿಕ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದೆ ಎಂದರು.

“ಯಾವುದೇ ಪ್ರೇಷಿತರ ಕಾರ್ಯದ ಶಕ್ತಿ ತಂತ್ರಗಳು ಮತ್ತು ಸಾಧನಗಳನ್ನು ಮೀರಿಸಿ ನಮ್ಮೊಳಗೆ ಕಾರ್ಯನಿರ್ವಹಿಸುವ ಪವಿತ್ರಾತ್ಮನಿಂದ ಮತ್ತು ದೇವರ ಕೃಪೆಗೆ ನಾವು ನೀಡುವ ನಿಷ್ಠಾವಂತ ಪ್ರತಿಕ್ರಿಯೆಯಿಂದ ಬರುತ್ತದೆ” ಎಂದು ಅವರು ಹೇಳಿದರು.

ಸಂತ ಥೋಮಸ್ ಅಕ್ವಿನಾಸ್ ರವರ ಬೋಧನೆಯನ್ನು ಸ್ಮರಿಸಿದ ಜಗದ್ಗುರುಗಳು, ಬೋಧನೆ ಎಂದರೆ “ನಾವು ಧ್ಯಾನ-ಚಿಂತನೆಯಲ್ಲಿ ಕಂಡುಕೊಂಡುದನ್ನು ಇತರರಿಗೆ ಹಂಚುವುದು” ಎಂದು ವಿವರಿಸಿದರು.

ಪ್ರತಿಯೊಬ್ಬರಿಗೂ ಧ್ಯಾನ-ಚಿಂತನೆಯ ಕರೆ

ಧ್ಯಾನ-ಚಿಂತನೆ ಎನ್ನುವುದು ಕೆಲವೇ ಸಂತರಿಗೆ, ಸನ್ಯಾಸಿಗಳಿಗೆ ಅಥವಾ ಏಕಾಂತವಾಸಿಗಳಿಗೆ ಮೀಸಲಾದ ಅನುಭವವಲ್ಲ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು.

“ಧ್ಯಾನ-ಚಿಂತನೆ ಕೆಲವೇ ಆಯ್ದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾದ ಅನುಭವ ಎಂದು ನಾವು ಭಾವಿಸಬಾರದು” ಎಂದು ಅವರು ಹೇಳಿದರು.

ಬದಲಾಗಿ, ಪ್ರತಿಯೊಬ್ಬ ಕ್ರೈಸ್ತರೂ ತಮ್ಮ ದೈನಂದಿನ ಜವಾಬ್ದಾರಿಗಳ ಮಧ್ಯೆ ಸ್ವಲ್ಪ ಸಮಯವನ್ನು ಮೌನಕ್ಕಾಗಿ ಮೀಸಲಿಟ್ಟು, ದೇವರ ಧ್ವನಿಯನ್ನು ಆಲಿಸಬೇಕು; ತಮ್ಮ ಸಂತೋಷಗಳು ಮತ್ತು ಚಿಂತೆಗಳನ್ನು ದೇವರಿಗೆ ಒಪ್ಪಿಸಬೇಕು ಹಾಗೂ ತಮ್ಮ ಜೀವನವನ್ನು ದೇವರ ಸನ್ನಿಧಿಯಲ್ಲಿ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

ಇಂತಹ ಕ್ಷಣಗಳು ವಿಶ್ವಾಸಿಗಳನ್ನು ಹೆಚ್ಚು ದೃಢವಾದ ಮತ್ತು ಜಾಗೃತ ನಂಬಿಕೆಯಲ್ಲಿ ಬೆಳೆಯಲು ಸಹಾಯ ಮಾಡುತ್ತವೆ. ಇದರಿಂದ ಅವರು ಪ್ರತಿಯೊಂದು ಸಂದರ್ಭದಲ್ಲೂ ಸುವಾರ್ತೆಯ ಬೆಳಕನ್ನು ಪ್ರತಿಬಿಂಬಿಸುವ “ನಂಬಲರ್ಹ ಮತ್ತು ಸ್ವತಂತ್ರ ಶಿಷ್ಯರು” ಆಗುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

ವಿರೋಧದ ಮಧ್ಯೆಯೂ ಸ್ಥೈರ್ಯ

ನಂತರ ಸಂತ ಮತ್ತಾಯನ ಸುವಾರ್ತೆಯ ಐತಿಹಾಸಿಕ ಹಿನ್ನೆಲೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಸುವಾರ್ತಿಕನು ವಿರೋಧ ಮತ್ತು ಹಿಂಸೆಯನ್ನು ಅನುಭವಿಸುತ್ತಿದ್ದ ಕ್ರೈಸ್ತ ಸಮುದಾಯಗಳಿಗೆ ಬರೆಯುತ್ತಿದ್ದನು ಎಂದು ನೆನಪಿಸಿದರು.

ಆ ಆರಂಭಿಕ ಕ್ರೈಸ್ತರು ಎದುರಿಸಿದ ಅನೇಕ ಸವಾಲುಗಳು ಇಂದಿಗೂ ಜಗತ್ತಿನ ಕೆಲವು ಭಾಗಗಳಲ್ಲಿ ಕ್ರೈಸ್ತರು ಎದುರಿಸುತ್ತಿರುವ ಸವಾಲುಗಳಂತೆಯೇ ಇವೆ ಎಂದು ಅವರು ಹೇಳಿದರು. “ನಿರುತ್ಸಾಹಕ್ಕೆ ಒಳಗಾಗುವುದು, ಆಯಾಸ ಅಥವಾ ಭಯಕ್ಕೆ ಮಣಿಯುವುದು ಎಂಬ ಪ್ರಲೋಭನೆ ಅವರಿಗೆ ಬಹಳ ದೊಡ್ಡದಾಗಿತ್ತು” ಎಂದು ಅವರು ವಿವರಿಸಿದರು.

ಆದಾಗ್ಯೂ, ಇಂದಿಗೂ ಸವಾಲು ಅದೇ ಆಗಿದೆ ಎಂದು ಜಗದ್ಗುರುಗಳು ಹೇಳಿದರು. “ಆಗಿದ್ದಂತೆ ಈಗಲೂ ಯೇಸುವಿನ ಬೋಧನೆಗಳಿಗೆ ನಿಷ್ಠರಾಗಿರುವುದು ಮತ್ತು ಅವರ ವಾಕ್ಯವನ್ನು ಘೋಷಿಸುವುದು ಒಂದು ಸವಾಲಾಗಿದೆ. ದ್ವೇಷಕ್ಕೆ ಪ್ರೀತಿಯಿಂದ, ಅಹಂಕಾರಕ್ಕೆ ಸೌಮ್ಯತೆಯಿಂದ ಮತ್ತು ನಿರುತ್ಸಾಹಕ್ಕೆ ಸ್ಥೈರ್ಯದಿಂದ ಪ್ರತಿಕ್ರಿಯಿಸುವುದು” ಎಂದು ಅವರು ಹೇಳಿದರು.

ಭರವಸೆ, ಪ್ರೀತಿ ಮತ್ತು ಶಾಂತಿಯ ಸಂದೇಶ

ಕೊನೆಯಲ್ಲಿ, ಜಗದ್ಗುರು ಫ್ರಾನ್ಸಿಸ್ ರವರ ಇವಾಂಜೆಲಿ ಗೌಡಿಯಮ್ ಬೋಧನೆಯನ್ನು ಸ್ಮರಿಸಿದ ಜಗದ್ಗುರು XIVನೇ ಲಿಯೋರವರು, ಕ್ರೈಸ್ತರು ತಮ್ಮ ನಂಬಿಕೆ ಮತ್ತು ಧರ್ಮಸೇವೆಯ ಬೇರುಗಳನ್ನು ಪ್ರಭುವಿನೊಂದಿಗಿನ ಆಪ್ತ ಸಂಬಂಧದಲ್ಲಿ ಇನ್ನಷ್ಟು ಆಳವಾಗಿ ನೆಡಬೇಕು ಎಂದು ಪ್ರೋತ್ಸಾಹಿಸಿದರು.

“ಜಗತ್ತಿಗೆ ಇದರ ಅತ್ಯಂತ ಅಗತ್ಯವಿದೆ,” ಎಂದು ಅವರು ಹೇಳಿದರು. ಕ್ರಿಸ್ತನ “ಭರವಸೆ, ಪ್ರೀತಿ ಮತ್ತು ಶಾಂತಿ”ಯ ಸಂದೇಶವನ್ನು ಲೋಕಕ್ಕೆ ತಲುಪಿಸುವುದೇ ಇಂದಿನ ಕ್ರೈಸ್ತರ ಮಹತ್ತರ ಕರ್ತವ್ಯವಾಗಿದೆ ಎಂದು ಅವರು ಒತ್ತಿಹೇಳಿದರು.

21 ಜೂನ್ 2026, 16:19