ಜಗದ್ಗುರು ಲಿಯೋರವರ ಪಾಂಟಿಫಿಕೆಟ್ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಅವರನ್ನು ಸ್ವಾಗತಿಸಲು ಪೊಂಪೇಯಿ ಸಿದ್ಧವಾಗುತ್ತಿದೆ.
ವ್ಯಾಟಿಕನ್ ವರದಿ
ಆರ್ಚ್ಬಿಷಪ್ ಟೊಮಾಸೊ ಕ್ಯಾಪುಟೊರವರು 2026 ಮೇ 8 ರಂದು ಜಗದ್ಗುರು XIVನೇ ಲಿಯೋರವರು ಪೊಂಪೇಯಿ ನಗರಕ್ಕೆ ಭೇಟಿ ನೀಡಲಿರುವುದನ್ನು ಸಂತೋಷ ಹಾಗೂ ಕೃತಜ್ಞತೆಯಿಂದ ಸ್ವಾಗತಿಸಿದ್ದಾರೆ. ಜಗದ್ಗುರುಗಳು ಪಾಂಟಿಫಿಕೆಟ್ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಈ ಭೇಟಿ “ವಿಶೇಷವಾದ ವರ” ಎಂದು ಅವರು ಹೇಳಿದ್ದಾರೆ. ಈ ಭೇಟಿಯ ಮೂಲಕ ಸಮುದಾಯವು ಬೆಳಕಿನ ಮಂದಿರವಾಗಿಯೂ, ಪ್ರಾರ್ಥನೆಯ ಶಾಲೆಯಾಗಿಯೂ, ಶಾಂತಿಯ ಕೋಟೆಯಾಗಿಯೂ ರೂಪುಗೊಳ್ಳಲಿ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ವ್ಯಾಟಿಕನ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಭಕ್ತರು ಉತ್ಸಾಹ ಮತ್ತು ಆನಂದದಿಂದ ಈ ಭೇಟಿಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಆದರೆ ಸ್ಥಳದ ಮಿತಿಯ ಕಾರಣದಿಂದ ಎಲ್ಲರಿಗೂ ಭಾಗವಹಿಸುವ ಅವಕಾಶ ದೊರೆಯುವುದಿಲ್ಲ ಎಂದು ಹೇಳಿದರು. ಈ ಭೇಟಿಯು 2015ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ಯಾತ್ರೆಯ ನಂತರ 11 ವರ್ಷಗಳ ಬಳಿಕ ನಡೆಯುತ್ತಿದೆ. ಇದರ ಮೊದಲು ಸಂತ ದ್ವಿತೀಯ ಜಾನ್ ಪಾಲ್ (1979, 2003) ಹಾಗೂ ಜಗದ್ಗುರು XVIನೇ ಬೆನೆಡಿಕ್ಟ್ ರವರು(2008) ಕೂಡ ಪೊಂಪೇಯಿಯನ್ನು ಭೇಟಿ ಮಾಡಿದ್ದರು.
ಈ ದಿನ ಪೊಂಪೇಯಿ ನಗರದ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಲಿದೆ. ಜಗದ್ಗುರುಗಳು ಧರ್ಮಕ್ಷೇತ್ರದ ಮುಂಭಾಗದಲ್ಲಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಮತ್ತು ನಂತರ “ಸಪ್ಪ್ಲಿಕಾ” ಪ್ರಾರ್ಥನೆಯನ್ನು ನಡೆಸಲಿದ್ದಾರೆ. ಈ ಪ್ರಾರ್ಥನೆಯನ್ನು 1883ರಲ್ಲಿ ಸಂತ ಬಾರ್ಟೊಲೊ ಲಾಂಗೊ ರಚಿಸಿದ್ದರು. ಸಾವಿರಾರು ಭಕ್ತರು ಜಗದ್ಗುರುಗಳನ್ನು ಸ್ವಾಗತಿಸುವ ನಿರೀಕ್ಷೆಯಿದ್ದು, ಅವರು ಅಸ್ವಸ್ಥರು, ಅಂಗವಿಕಲರು ಮತ್ತು ವೃದ್ಧರನ್ನು ಭೇಟಿಯಾಗಲಿದ್ದಾರೆ.
ಮಹಾಧರ್ಮಾಧ್ಯಕ್ಷರು ಈ ಭೇಟಿಗೆ ಮುಖ್ಯ ಸಿದ್ಧತೆ ಆತ್ಮೀಯತೆಯದ್ದೇ ಎಂದು ಒತ್ತಿಹೇಳಿದರು. ವಿಶೇಷವಾಗಿ ಮೇರಿಯನ್ ನಗರವಾದ ಪೊಂಪೇಯಿಯಲ್ಲಿ ಪವಿತ್ರ ಜಪಮಾಲೆ ಪ್ರಾರ್ಥನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೊತೆಗೆ, ನಾಗರಿಕ ಆಡಳಿತ ಮತ್ತು ಸ್ವಯಂಸೇವಕರ ಸಹಕಾರದೊಂದಿಗೆ ವಿಸ್ತೃತ ವ್ಯವಸ್ಥಾಪನಾ ಸಿದ್ಧತೆಗಳೂ ನಡೆಯುತ್ತಿವೆ.
ಪೊಂಪೇಯಿ ಸುಮಾರು 25,000 ಜನಸಂಖ್ಯೆಯ ಆಧುನಿಕ ನಗರವಾಗಿದ್ದು, ಪ್ರತಿವರ್ಷ ಸುಮಾರು 60 ಲಕ್ಷ ಪ್ರವಾಸಿಗರು ಮತ್ತು ಲಕ್ಷಾಂತರ ಯಾತ್ರಿಕರನ್ನು ಸ್ವಾಗತಿಸುತ್ತದೆ. ಆದರೂ, ದಕ್ಷಿಣ ಇಟಲಿಯ ಇತರ ಭಾಗಗಳಂತೆ ಇಲ್ಲಿ ಉದ್ಯೋಗದ ಅಸ್ಥಿರತೆ ಮತ್ತು ಕಡಿಮೆ ವೇತನದಂತಹ ಸಾಮಾಜಿಕ ಸಮಸ್ಯೆಗಳಿವೆ. ಯುವಕರು ಸ್ಥಿರ ಉದ್ಯೋಗ ಪಡೆಯಲು ಕಷ್ಟಪಡುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ಜಗದ್ಗುರುಗಳ ಈ ಭೇಟಿ ಸಮುದಾಯದ ನಂಬಿಕೆಯನ್ನು ಬಲಪಡಿಸಿ, ನಿರೀಕ್ಷೆಯನ್ನು ಜೀವಂತಗೊಳಿಸಿ, ದಾನಧರ್ಮದ ಕಾರ್ಯಗಳಿಗೆ ಹೊಸ ಉತ್ಸಾಹ ನೀಡಲಿ ಎಂಬ ಭರವಸೆಯನ್ನು ಮಹಾಧರ್ಮಾಧ್ಯಕ್ಷರು ವ್ಯಕ್ತಪಡಿಸಿದರು. ಸಂತ ಬಾರ್ಟೊಲೊ ಲಾಂಗೊರವರ ಜೀವನ ಉದಾಹರಣೆ ಇಂದಿನ ಜಗತ್ತಿಗೆ ಮಹತ್ವದ್ದಾಗಿದ್ದು, ದೇವರ ಪ್ರೀತಿ ಎಲ್ಲರಿಗೂ ಲಭ್ಯವೆಂಬ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
