ಜಗದ್ಗುರು ಲಿಯೋರವರು ಚಾರಿಸ್ ರವರನ್ನು ಭೇಟಿಯಾಗುತ್ತಾರೆ. ಜಗದ್ಗುರು ಲಿಯೋರವರು ಚಾರಿಸ್ ರವರನ್ನು ಭೇಟಿಯಾಗುತ್ತಾರೆ.  (AFP or licensors)

ಜಗದ್ಗುರುಗಳು: ಪವಿತ್ರಾತ್ಮನು ನಿಮ್ಮನ್ನು ಐಕ್ಯತೆ, ಪ್ರೀತಿಯ ಸೇವೆ ಮತ್ತು ಸುವಾರ್ತಾ ಧರ್ಮಪ್ರಚಾರದತ್ತ ಮುನ್ನಡೆಸಲಿ — ಕೃಪಾಭರಿತ ನವೀಕರಣ ಚಳವಳಿಗೆ ಜಗದ್ಗುರುಗಳ ಕರೆ.

ತಮ್ಮ ಜಗದ್ಗುರುಗಳ ಪದಗ್ರಹಣದ ಬಳಿಕ ಮೊದಲ ಬಾರಿಗೆ ಕಥೋಲಿಕ ಕೃಪಾಭರಿತ ನವೀಕರಣ ಚಳವಳಿಯ ಸದಸ್ಯರನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು, ಈ ಚಳವಳಿಯ ಆಧ್ಯಾತ್ಮಿಕ ಅಡಿಪಾಯಗಳ ಕುರಿತು ಚಿಂತನೆ ಹಂಚಿಕೊಂಡರು. ಅಲ್ಲದೆ, ತಮ್ಮ ಆತ್ಮೀಯ ವರಗಳು ಮತ್ತು ಕೃಪೆಗಳನ್ನು ಇಡೀ ಧರ್ಮ ಸಭೆಯ ಸೇವೆಗೆ ಸಮರ್ಪಿಸುವಂತೆ ಅವರು ಸದಸ್ಯರನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶನಿವಾರ ವ್ಯಾಟಿಕನ್‌ನಲ್ಲಿ ಕಥೋಲಿಕ ಕೃಪಾಭರಿತ ನವೀಕರಣ ಚಳವಳಿಯ ಪ್ರತಿನಿಧಿಗಳನ್ನು ಸ್ವಾಗತಿಸಿದರು. ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಾರ್ಥನಾ ಗುಂಪುಗಳು, ಸಮುದಾಯಗಳು, ಸುವಾರ್ತಾ ಪ್ರಚಾರ ಶಾಲೆಗಳ ಸದಸ್ಯರು ಹಾಗೂ ಚಾರಿಸ್ ಸಂಸ್ಥೆಯ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಕೃಪಾಭರಿತ ನವೀಕರಣವು ದೇವರು ಧರ್ಮ ಸಭೆಗೆ ನೀಡಿರುವ ಅಮೂಲ್ಯ ಆಧ್ಯಾತ್ಮಿಕ ವರಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಕೃಪಾಭರಿತ ನವೀಕರಣ ಚಳವಳಿಯು ದ್ವಿತೀಯ ವ್ಯಾಟಿಕನ್ ಮಹಾಸಭೆಯ ನಂತರ ಬೆಳವಣಿಗೆ ಹೊಂದಿದ್ದು, ಪವಿತ್ರಾತ್ಮನ ಕಾರ್ಯಕ್ಕೆ ವಿಶೇಷ ಮಹತ್ವ ನೀಡಿದೆ. ಈ ಚಳವಳಿಯನ್ನು ಜಗದ್ಗುರು VIನೇ ಪೌಲ , ಸಂತ  ದ್ವಿತೀಯ ಜಾನ್ ಪಾಲ್, ಜಗದ್ಗುರು XVIನೇ ಬೆನೆಡಿಕ್ಟ್  ಮತ್ತು ಜಗದ್ಗುರು ಫ್ರಾನ್ಸಿಸ್ ರವರು ಪ್ರಶಂಸಿಸಿರುವುದನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ಜಗದ್ಗುರು ಫ್ರಾನ್ಸಿಸ್ ರವರು ಇದನ್ನು ಇಡೀ ಧರ್ಮ ಸಭೆಗಾಗಿ ನೀಡಲಾದ ಕೃಪೆಯ ಪ್ರವಾಹ ಎಂದು ವರ್ಣಿಸಿದ್ದರು ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ಕೃಪಾಭರಿತ ಅನುಭವದ ಐದು ಪ್ರಮುಖ ಸ್ತಂಭಗಳನ್ನು ಉಲ್ಲೇಖಿಸಿದರು. ಪವಿತ್ರಾತ್ಮನಲ್ಲಿ ಸ್ನಾನ, ಸ್ತುತಿಯ ಪ್ರಾರ್ಥನೆ, ದೇವರ ವಾಕ್ಯ, ಐಕ್ಯತೆ ಮತ್ತು ದಾನಧರ್ಮ. ಪವಿತ್ರಾತ್ಮನ ವೈಯಕ್ತಿಕ ಅನುಭವವು ವಿಶ್ವಾಸಿಗಳಿಗೆ ದೇವರ ಪ್ರೀತಿಯ ಆಳವಾದ ಅರಿವನ್ನು ನೀಡುತ್ತದೆ ಹಾಗೂ ಅವರನ್ನು ಯೇಸುಕ್ರಿಸ್ತನ ಪ್ರೀತಿಯ ಸಾಕ್ಷಿಗಳಾಗುವಂತೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

ಪ್ರಾರ್ಥನೆಯ ಕುರಿತು ಮಾತನಾಡಿದ ಜಗದ್ಗುರುಗಳು, ಸ್ತುತಿ ಮತ್ತು ಆರಾಧನೆಯು ಕ್ರೈಸ್ತ ಪ್ರಾರ್ಥನೆಯ ಅತ್ಯಗತ್ಯ ಅಂಶಗಳಾಗಿವೆ ಎಂದು ಹೇಳಿದರು. ಪವಿತ್ರ ಗ್ರಂಥವು ವಿಶ್ವಾಸಿಗಳ ಜೀವನಕ್ಕೆ ಬೆಳಕು ಮತ್ತು ಸಾಂತ್ವನದ ಮೂಲವಾಗಿದ್ದು, ಪ್ರತಿದಿನದ ನಿರ್ಧಾರಗಳಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ಅವರು ತಿಳಿಸಿದರು.

ಐಕ್ಯತೆಯ ಕುರಿತು ಮಾತನಾಡಿದ ಜಗದ್ಗುರು ಲಿಯೋರವರು, “ಪವಿತ್ರಾತ್ಮನೇ ಐಕ್ಯತೆಯ ಮೂಲ” ಎಂದು ಹೇಳಿದರು. ವಿವಿಧ ವರದಾನಗಳು, ಸಮುದಾಯಗಳು ಮತ್ತು ಕ್ರೈಸ್ತ ಪಂಗಡಗಳ ನಡುವೆ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಕಾರ್ಯವನ್ನು ಪವಿತ್ರಾತ್ಮನು ನಡೆಸುತ್ತಾನೆ ಎಂದು ಅವರು ಒತ್ತಿಹೇಳಿದರು. ದಾನಧರ್ಮವು ಪವಿತ್ರಾತ್ಮನಲ್ಲಿ ಜೀವಿಸುವ ಜೀವನದ ಅತ್ಯಂತ ಸ್ಪಷ್ಟ ಫಲಗಳಲ್ಲಿ ಒಂದಾಗಿದೆ ಎಂದು ಹೇಳಿದ ಅವರು, ಬಡವರು ಮತ್ತು ದುರ್ಬಲರ ಮೇಲಿನ ಪ್ರೀತಿಯನ್ನು ಸದಾ ಜೀವಂತವಾಗಿಡುವಂತೆ ಸದಸ್ಯರನ್ನು ಪ್ರೋತ್ಸಾಹಿಸಿದರು.

ತಮ್ಮ ಸಂದೇಶದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಕೃಪಾವರದ ನವೀಕರಣದ ಸದಸ್ಯರಿಗೆ ತಮ್ಮ ಧರ್ಮಕ್ಷೇತ್ರಗಳು ಮತ್ತು ಧರ್ಮ ಕೇಂದ್ರಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಸ್ವಯಂಪ್ರಚಾರ, ಅಧಿಕಾರದ ಹಂಬಲ ಅಥವಾ ವೈಯಕ್ತಿಕ ಪ್ರತಿಷ್ಠೆಯ ಹುಡುಕಾಟದಿಂದ ದೂರವಿರಬೇಕು ಎಂದು ಅವರು ಎಚ್ಚರಿಸಿದರು. ಪವಿತ್ರಾತ್ಮನು ಅವರ ವೈಯಕ್ತಿಕ ಹಾಗೂ ಸಮುದಾಯದ ಪಯಣದಲ್ಲಿ ಸದಾ ಬೆಳಕು ಮತ್ತು ಶಕ್ತಿಯ ಮೂಲವಾಗಿರಲೆಂದು ಪ್ರಾರ್ಥಿಸುತ್ತಾ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

30 ಮೇ 2026, 15:10