ಸಂತ ಪೇತ್ರರ ಚೌಕ. ಸಂತ ಪೇತ್ರರ ಚೌಕ.  (ANSA)

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ತ್ರಿತ್ವದಲ್ಲಿ ನಾವು ನಮ್ಮ ನಿಜವಾದ ನೆಲೆಯನ್ನು ಕಂಡುಕೊಳ್ಳುತ್ತೇವೆ.

ಪರಮಪವಿತ್ರ ತ್ರಿತ್ವದ ಮಹೋತ್ಸವದ ಸಂದರ್ಭದಲ್ಲಿ, ತ್ರಿಕಾಲ ಪ್ರಾರ್ಥನೆಗಾಗಿ ಸೇರಿದ್ದ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ತ್ರಿತ್ವಸ್ವರೂಪ ದೇವರ ಜೀವನವು “ಆಗಾಗ್ಗೆ ಅಶಾಂತವಾಗಿರುವ ನಮ್ಮ ಹೃದಯಕ್ಕೆ ಶಾಂತಿಯನ್ನು ನೀಡುತ್ತದೆ” ಎಂದು ನೆನಪಿಸಿದರು.

ವ್ಯಾಟಿಕನ್ ವರದಿ

ಪರಮಪವಿತ್ರ ತ್ರಿತ್ವದ ಮಹೋತ್ಸವವನ್ನು ಆಚರಿಸುತ್ತಾ, ಜಗದ್ಗುರು XIVನೇ ಲಿಯೋರವರು ತಮ್ಮ ಸಾಪ್ತಾಹಿಕ ತ್ರಿಕಾಲ ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಸಾವಿರಾರು ಭಕ್ತರೊಂದಿಗೆ ಸೇರಿದರು. ತ್ರಿತ್ವಸ್ವರೂಪ ದೇವರ ರಹಸ್ಯದ ಕುರಿತು ಚಿಂತನೆ ನಡೆಸಿದ ಅವರು, ಯೇಸು ಕ್ರಿಸ್ತನ ಮೂಲಕ ನಮಗೆ ನೀಡಲ್ಪಟ್ಟ ದೇವರ ಜೀವದಿಂದ ಆರಂಭವಾದ ನಮ್ಮ ಜೀವನಯಾತ್ರೆಯನ್ನು ಮರುಪರಿಶೀಲಿಸಲು ಈ ಹಬ್ಬವು ನಮಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.

ಈ ಜೀವನವು, ಜಗದ್ಗುರುಗಳ ಮಾತಿನಂತೆ, “ನಮ್ಮನ್ನು ತನ್ನೊಳಗೆ ಸೆಳೆಯುವ, ಚೈತನ್ಯಮಯವಾದ, ಅಕ್ಷಯವಾದ ಮತ್ತು ನಂಬಿಕೆಯಿಂದ ಕೂಡಿದ ಐಕ್ಯತೆಯ ಸಂಬಂಧವಾಗಿದೆ.” ತಂದೆ ಮತ್ತು ಪುತ್ರರನ್ನು ಒಂದಾಗಿಸುವ ಪವಿತ್ರಾತ್ಮನು ನಮ್ಮ ಹೃದಯಗಳಲ್ಲಿ ನೆಲೆಸಿದ್ದಾರೆ. ಇದರ ಮೂಲಕ, ಧರ್ಮ ಸಭೆ “ಐಕ್ಯತೆಯ ಸಂಸ್ಕಾರವಾಗಿ, ಭೇಟಿ, ಪ್ರೀತಿ ಮತ್ತು ಜೀವದ ಸ್ಥಳವಾಗಿ ರೂಪುಗೊಳ್ಳುತ್ತದೆ. ಅಲ್ಲಿ ಸ್ವರ್ಗ ಮತ್ತು ಭೂಮಿ ಈಗಾಗಲೇ ಒಂದಕ್ಕೊಂದು ಸ್ಪರ್ಶಿಸುತ್ತವೆ” ಎಂದು ಅವರು ವಿವರಿಸಿದರು.

ಇಂದಿನ ಹಬ್ಬದ ಸತ್ಯ

ದಿನದ ಸುವಾರ್ತೆಯ ಕುರಿತು ಚಿಂತನೆ ನಡೆಸಿದ ಜಗದ್ಗುರುಗಳು, ಯೇಸುವಿನತ್ತ ಆಕರ್ಷಿತರಾಗಿದ್ದ ನಿಕೋದೇಮನ ವ್ಯಕ್ತಿತ್ವದ ಕಡೆಗೆ ಗಮನ ಹರಿಸಿದರು. ಯೇಸು ಯಾರು ಎಂಬುದನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಅವನು ಬಹಳ ಉತ್ಸುಕನಾಗಿದ್ದರೂ, ಇತರರಿಗೆ ಕಾಣಿಸಿಕೊಳ್ಳದಂತೆ ರಾತ್ರಿ ಸಮಯದಲ್ಲಿ ಯೇಸುವನ್ನು ಭೇಟಿಯಾಗಲು ಬಂದರು.

ಆದರೆ ಯೇಸು ನಿಕೋದೇಮನನ್ನು ಆತ್ಮೀಯವಾಗಿ ಸ್ವಾಗತಿಸಿ, ಒಬ್ಬ ವಯಸ್ಕನೂ ಸಹ ಹೊಸದಾಗಿ ಜನಿಸಬಹುದು ಎಂದು ಹೇಳುವ ಮೂಲಕ ಅವರನ್ನು ಆಶ್ಚರ್ಯಗೊಳಿಸಿದರು. ಹೀಗೆ ನಿಕೋದೇಮನು ದೇವರು ತನ್ನ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಬಲ್ಲನೆಂಬುದನ್ನು ಅರಿತುಕೊಂಡನು.

ಯೇಸು ಪವಿತ್ರಾತ್ಮನ ಕುರಿತು ಮಾತನಾಡುತ್ತಿದ್ದಾಗ, ನಿಕೋದೇಮನ “ಅಂತರಂಗದ ಕತ್ತಲೆಯು ಸತ್ಯದ ಬೆಳಕಿನಿಂದ ಪ್ರಕಾಶಮಾನವಾಯಿತು — ಇದೇ ಸತ್ಯವು ಇಂದು ನಾವು ಆಚರಿಸುತ್ತಿರುವ ಈ ಮಹೋತ್ಸವದ ಮೂಲಕ ಧರ್ಮಸಭೆಯಾದ್ಯಂತ ಪ್ರತಿಧ್ವನಿಸುತ್ತಿದೆ.” ಆ ಸತ್ಯವೇನೆಂದರೆ: “ದೇವರು ಲೋಕವನ್ನು ಎಷ್ಟೋ ಪ್ರೀತಿಸಿದರು, ತನ್ನ ಏಕೈಕ ಪುತ್ರನನ್ನು ದಾನವಾಗಿ ಕೊಟ್ಟರು. ಆತನನ್ನು ನಂಬುವ ಪ್ರತಿಯೊಬ್ಬನೂ ನಾಶವಾಗದೆ ನಿತ್ಯಜೀವವನ್ನು ಹೊಂದಲೆಂದು” (ಯೋಹಾನ 3:16). ಹಾಗೆಯೇ, “ದೇವರು ತನ್ನ ಪುತ್ರನನ್ನು ಲೋಕವನ್ನು ಖಂಡಿಸಲು ಕಳುಹಿಸಲಿಲ್ಲ, ಬದಲಾಗಿ ಲೋಕವು ಆತನ ಮೂಲಕ ರಕ್ಷಿಸಲ್ಪಡಲೆಂದು ಕಳುಹಿಸಿದನು” (ಯೋಹಾನ 3:17).

ನಾವು ಎಲ್ಲರೂ ಐಕ್ಯತೆಗಾಗಿ ಸೃಷ್ಟಿಸಲ್ಪಟ್ಟವರು

ಜಗದ್ಗುರು ಲಿಯೋರವರು ವಿವರಿಸಿದಂತೆ, ತಂದೆ, ಪುತ್ರ ಮತ್ತು ಪವಿತ್ರಾತ್ಮರನ್ನು ಒಳಗೊಂಡ ತ್ರಿತ್ವದ ರಹಸ್ಯದಲ್ಲಿ “ನಾವು ನಮ್ಮ ಮನೆಯನ್ನು ಕಂಡುಕೊಳ್ಳುತ್ತೇವೆ,” ಹೇಗೆ ನಿಕೋದೇಮನು ಯೇಸುವಿನ ಸಾನ್ನಿಧ್ಯದಲ್ಲಿ ತನ್ನ ನೆಲೆಯನ್ನು ಕಂಡುಕೊಂಡನೋ ಹಾಗೆಯೇ. ದೇವರ ಜೀವನವು ಮನಸ್ಸನ್ನು ಸೆಳೆಯುವಂತದ್ದು. “ಅದು ಆಗಾಗ್ಗೆ ಅಶಾಂತವಾಗಿರುವ ನಮ್ಮ ಹೃದಯಕ್ಕೆ ಶಾಂತಿಯನ್ನು ನೀಡುತ್ತದೆ ಮತ್ತು ಪವಿತ್ರಾತ್ಮನ ಸಂತೋಷದಲ್ಲಿ ನಮ್ಮ ಸಹೋದರ ಸಹೋದರಿಯರನ್ನು ಭೇಟಿಯಾಗಲು ನಮಗೆ ಅವಕಾಶ ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.

ತ್ರಿತ್ವವು ನಮಗೆ ಎಲ್ಲರನ್ನೂ ಮತ್ತು ಎಲ್ಲವನ್ನೂ ಪ್ರೀತಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅದರ ಮೂಲಕ, ಪ್ರತಿಯೊಂದು ಸೃಷ್ಟಿಯೂ ಸಂಬಂಧ, ಐಕ್ಯತೆ ಮತ್ತು ಭೇಟಿಗಾಗಿ ನಿರ್ಮಿತವಾಗಿದೆ ಎಂಬುದನ್ನು ನಾವು ಅರಿಯುತ್ತೇವೆ. ಅದೇ ವೇಳೆ, ಧ್ರುವೀಕರಣ, ವೈವಿಧ್ಯದ ವಿರುದ್ಧದ ಮನೋಭಾವ ಮತ್ತು ವಿಭಜನೆಗಳು ಏಕೆ ದುಃಖ, ವಿನಾಶ ಮತ್ತು ಜಗತ್ತಿನಲ್ಲಿ ಶೂನ್ಯತೆಯನ್ನು ಉಂಟುಮಾಡುತ್ತವೆ ಎಂಬುದನ್ನೂ ನಾವು ಅರ್ಥಮಾಡಿಕೊಳ್ಳುತ್ತೇವೆ.

ಇಸ್ರಾಯೇಲಿನ ಮಹಾಯಾಜಕರ ಮಂಡಳಿಯಾದ ಸನ್ಹೆಡ್ರಿನ್‌ನ ಸದಸ್ಯನಾಗಿದ್ದ ನಿಕೋದೇಮನು, ಯೇಸುವಿನ ವಿರುದ್ಧ ದ್ವೇಷಪೂರಿತ ಮಾತುಗಳನ್ನು ಕೇಳಿದಾಗಲೆಲ್ಲ, ಆತನನ್ನು ಖಂಡಿಸುವ ಮೊದಲು ಆತನ ಮಾತುಗಳನ್ನು ಆಲಿಸಬೇಕು ಎಂದು ಎಲ್ಲರಿಗೂ ಸವಾಲು ಹಾಕುತ್ತಿದ್ದನು. ಏಕೆಂದರೆ ಅವರು ಐಕ್ಯತೆಯ ಆತ್ಮವನ್ನು ಸ್ವೀಕರಿಸಿದ್ದರು. ಆ ಆತ್ಮವು ಹೃದಯಗಳನ್ನು ಹೊಸ ಸತ್ಯಗಳತ್ತ ಮತ್ತು ನಿಜವಾದ ನವೀಕರಣದತ್ತ ತೆರೆಯುತ್ತದೆ.

“ಈ ಆತ್ಮವನ್ನು ಸ್ವೀಕರಿಸದವರು ಶೀಘ್ರವೇ ವಯಸ್ಸಾಗುತ್ತಾರೆ, ದುಃಖದಲ್ಲಿ ಮುಳುಗಿ, ಸಂಪೂರ್ಣ ಏಕಾಂಗಿಯಾಗಿರುವಂತೆ ಅನುಭವಿಸುತ್ತಾರೆ ಮತ್ತು ತಮ್ಮ ಹೃದಯದಲ್ಲಿ ಸಂತೋಷವನ್ನು ಕಳೆದುಕೊಳ್ಳುತ್ತಾರೆ” ಎಂದು ಜಗದ್ಗುರು ಲಿಯೋರವರು ಹೇಳಿದರು.

ದೇವರ ಹಬ್ಬ ನಮ್ಮ ಹಬ್ಬವೂ ಆಗಿದೆ

ಮುಂದುವರಿದು ಮಾತನಾಡಿದ ಜಗದ್ಗುರುಗಳು, ಇಂದು ಸಂತೋಷದ ಹಬ್ಬದ ದಿನವಾಗಿದೆ ಎಂದು ಹೇಳಿದರು. ಏಕೆಂದರೆ ದೇವರ ಹಬ್ಬವು ನಮ್ಮ ಹಬ್ಬವೂ ಆಗಿದೆ. ತ್ರಿಕಾಲ ಪ್ರಾರ್ಥನೆಯೊಂದಿಗೆ ಅವರು ಎಲ್ಲರನ್ನೂ ಮರಿಯಮ್ಮನಂತೆ ದೇವರ ಇಚ್ಛೆಗೆ “ಹೌದು” ಎಂದು ಹೇಳುವಂತೆ ಪ್ರೋತ್ಸಾಹಿಸಿದರು.

“ಪರಮಪವಿತ್ರ ತ್ರಿತ್ವದ ಪ್ರೀತಿಗೆ ನಾವು ನೀಡುವ ನಮ್ಮ ‘ಹೌದು’ ಸಹ ಸಮೃದ್ಧ ಫಲವನ್ನು ನೀಡಲಿ” ಎಂದು ಅವರು ಪ್ರಾರ್ಥಿಸಿದರು.

31 ಮೇ 2026, 19:47