ಹುಡುಕಿ

Pope Leo XIV visits Equatorial Guinea

ಆಫ್ರಿಕಾದ ಹತ್ತನೇ ದಿನ: ಬಾಟಾದಲ್ಲಿ ಮಳೆಯಲ್ಲಿನ ನೃತ್ಯ

ಆಫ್ರಿಕಾದಲ್ಲಿ ತನ್ನ ಪ್ರೇಷಿತರ ಪ್ರಯಾಣದ ಕೊನೆಯ ಪೂರ್ಣ ದಿನದಲ್ಲಿ, ಜಗದ್ಗುರು XIV ನೇ ಲಿಯೋರವರು ಖಂಡದ ಎರಡನೇ ಅತಿ ದೊಡ್ಡ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, “ದೇವರ ಪ್ರೀತಿಯಿಂದ ಯಾರೂ ಹೊರತಾಗಿಲ್ಲ” ಎಂದು ಕೈದಿಗಳಿಗೆ ತಿಳಿಸಿ, ಬಾಟಾದ ಯುವಕರು ಮಳೆಯಲ್ಲೇ ನೃತ್ಯ ಮಾಡುವ ದೃಶ್ಯವನ್ನು ಸಂತೋಷದಿಂದ ವೀಕ್ಷಿಸಿದರು.

ವ್ಯಾಟಿಕನ್ ವರದಿ

ಆಫ್ರಿಕಾದಲ್ಲಿ ಜಗದ್ಗುರು ಲಿಯೋರವರ ಕೊನೆಯ ಪೂರ್ಣ ದಿನ ಬುಧವಾರ ರಾತ್ರಿ ಕಾವ್ಯಾತ್ಮಕ ಅಂತ್ಯವನ್ನು ಕಂಡಿತು ಉಷ್ಣವಲಯದ ಭಾರೀ ಮಳೆಯ ನಡುವೆ ಸಾವಿರಾರು ಯುವಕರು ಕ್ರೀಡಾಂಗಣದಲ್ಲಿ ಹಾಡುತ್ತಾ ನೃತ್ಯ ಮಾಡಿದರು.

ಇಕ್ವೇಟೋರಿಯಲ್ ಗಿನಿಯಾದ ಅತಿ ದೊಡ್ಡ ನಗರವಾದ ಬಾಟಾದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ, ಜಗದ್ಗುರುಗಳು ಯುವಕರು ಮತ್ತು ಕುಟುಂಬಗಳೊಂದಿಗೆ ಸಭೆಗೆ ದಶಲಕ್ಷಾಂತರ ಜನರು ಕೂಡಿದ್ದರು. ಅಷ್ಟರಲ್ಲಿ ಆಕಾಶವೇ ತೆರೆಯಿತು. ಕೆಲವರು ಕ್ರೀಡಾಂಗಣದ ಮೇಲ್ಚಾವಣಿಯಡಿಯಲ್ಲಿ ಆಶ್ರಯಕ್ಕಾಗಿ ಓಡಿದರೆ, ಇನ್ನು ಕೆಲವರು ಭಾರೀ ಮಳೆಯಲ್ಲೇ ಉಳಿದು, ಜಗದ್ಗುರುಗಳ ಆಗಮನವನ್ನು ಕಾಯುತ್ತಾ ಗುಂಪಾಗಿ ನೃತ್ಯ ಮಾಡಿದರು.

ಈಗಾಗಲೇ ಉತ್ಸಾಹದಿಂದ ಕಂಗೊಳಿಸುತ್ತಿದ್ದ ಕ್ರೀಡಾಂಗಣದ ವಾತಾವರಣ, ಜಗದ್ಗುರು ಲಿಯೋರವರು ಕಾಣಿಸಿಕೊಂಡಾಗ ಇನ್ನಷ್ಟು ಉನ್ನತ ಮಟ್ಟ ತಲುಪಿತು. ಜಗದ್ಗುರುಗಳಿಗೆ ಮಾತ್ರವಲ್ಲದೆ, ತಮ್ಮ ನಂಬಿಕೆಯ ಕಥೆಗಳನ್ನು ಹಂಚಿಕೊಳ್ಳಲು ಮತ್ತು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲು ವೇದಿಕೆಯ ಮೇಲೆ ಬಂದ ಸ್ಥಳೀಯರಿಗೂ ಭಾರೀ ಚಪ್ಪಾಳೆಗಳು ಕೇಳಿಬಂದವು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು, “ಇಲ್ಲಿ ಹೊಳೆಯುತ್ತಿರುವ ಅತ್ಯಂತ ಪ್ರಕಾಶಮಾನವಾದ ಬೆಳಕು ನಿಮ್ಮ ಕಣ್ಣುಗಳಲ್ಲಿ, ಮುಖಗಳಲ್ಲಿ, ನಗೆಗಳಲ್ಲಿ ಮತ್ತು ನಿಮ್ಮ ಹಾಡುಗಳಲ್ಲಿ ಕಾಣಿಸುತ್ತದೆ” ಎಂದು ಹೇಳಿದರು. “ನೀವು ಯಾವಾಗಲೂ ಪರಸ್ಪರ ಸೌಹಾರ್ದತೆಯ ಮಾದರಿಯಾಗಿರಿ” ಎಂದು ಪ್ರೋತ್ಸಾಹಿಸಿ, “ಯಾವುದೇ ಪರಿಸ್ಥಿತಿಯಲ್ಲಿಯೂ ಅತ್ಯಂತ ಸಂತೋಷವು ನಾವು ಹೇಗೆ ಕೊಡಬೇಕು ಎಂಬುದನ್ನು ತಿಳಿದುಕೊಳ್ಳುವುದರಿಂದ ಬರುತ್ತದೆ” ಎಂದು ಹೇಳಿದರು.

ದೇವರ ಪ್ರೀತಿಯಿಂದ ಯಾರೂ ಹೊರತಾಗಿಲ್ಲ

ಅಂದು ದಿನದ ಆರಂಭದಲ್ಲೇ ಮಳೆ ಶುರುವಾಯಿತು, ಆಗ ಜಗದ್ಗುರು ಲಿಯೋರವರು ಬಾಟಾದ ಕಾರಾಗೃಹವನ್ನು ಭೇಟಿ ಮಾಡುತ್ತಿದ್ದರು. ಮೊದಲಿಗೆ ಸಣ್ಣ ಮಳೆಯಾಗಿ ಆರಂಭವಾದುದು, ಕೆಲವೇ ನಿಮಿಷಗಳಲ್ಲಿ ಭಾರೀ ಮಳೆಯಾಗಿ ಮಾರ್ಪಟ್ಟಿತು.

“ಕೆಲವು ಸ್ಥಳಗಳಲ್ಲಿ ಮಳೆಯು ದೇವರ ಆಶೀರ್ವಾದದ ಸಂಕೇತವೆಂದು ಹೇಳುತ್ತಾರೆ,” ಎಂದು ಜಗದ್ಗುರುಗಳು ತಮ್ಮ ಭಾಷಣವನ್ನು ಓದುವ ಮುನ್ನ ಹೇಳಿದರು. “ಇದು ನಿಜವಾಗಿಯೂ ಹಾಗೆಯೇ ಆಗಲಿ ಎಂದು ನಾವು ಪ್ರಾರ್ಥಿಸೋಣ.”

ಬಾಟಾದ ಕಾರಾಗೃಹವು ಕಠಿಣ ಪರಿಸ್ಥಿತಿಗಳಿಗೆ ಪ್ರಸಿದ್ಧವಾಗಿದೆ. ಜಗದ್ಗುರುಗಳನ್ನು ಭೇಟಿಯಾದ ಕೈದಿಗಳು ಸರಿಯಾದ ಸಾಲಿನಲ್ಲಿ ನಿಂತಿದ್ದರು ಅವರ ತಲೆಕೂದಲನ್ನು ಕತ್ತರಿಸಲಾಗಿತ್ತು ಮತ್ತು ಅವರು ಧರಿಸಿದ್ದ ಉಡುಪುಗಳ ಬಣ್ಣವು ಅವರು ಮಾಡಿದ ಅಪರಾಧಗಳ ಪ್ರಕಾರ ಬದಲಾಗುತ್ತಿತ್ತು.

“ದೇವರ ಪ್ರೀತಿಯಿಂದ ಯಾರೂ ಹೊರತಾಗಿಲ್ಲ,” ಎಂದು ಜಗದ್ಗುರುಗಳು ಕೈದಿಗಳಿಗೆ ಹೇಳಿದರು. “ನಮ್ಮ ಪ್ರತಿಯೊಬ್ಬರೂ, ನಮ್ಮದೇ ಆದ ಕಥೆಗಳು, ತಪ್ಪುಗಳು ಮತ್ತು ನೋವುಗಳಿದ್ದರೂ, ಪ್ರಭುವಿನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೇವೆ” ಎಂದರು.

ಭರವಸೆಯ ಭವಿಷ್ಯಕ್ಕಾಗಿ ‘ಹಸಿವು’

ಅದೇ ದಿನದ ಮುಂಜಾನೆ, ಜಗದ್ಗುರು ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಪೂರ್ವ ಭಾಗದಲ್ಲಿರುವ ಗ್ಯಾಬೊನ್ ಗಡಿಗೆ ಸಮೀಪದ ಮಂಗೋಮೊ ನಗರವನ್ನು ಭೇಟಿ ಮಾಡಿದರು. ಅಲ್ಲಿ ಅವರು ಆಫ್ರಿಕಾದ ಎರಡನೇ ಅತಿ ದೊಡ್ಡ ದೇವಾಲಯವಾದ ಅಮಲೊಧ್ಭವ ಮಾತೆಯ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದರು. ಅವರು ಆಗಮಿಸಿದಾಗ, ಇಕ್ವೇಟೋರಿಯಲ್ ಗಿನಿಯಾದ ಧ್ವಜದ ಬಣ್ಣಗಳಲ್ಲಿ ಪಟಾಕಿಗಳನ್ನು ಹಚ್ಚಿದರು ಮತ್ತು ಸಾವಿರಾರು ಜನರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ಹಿಂದೆ ಶಾಂತ ಗಡಿನಗರವಾಗಿದ್ದ ಮಂಗೋಮೊ, 1990ರ ದಶಕದಲ್ಲಿ ತೈಲದ ಅನ್ವೇಷಣೆಯಿಂದ ಬದಲಾಯಿತು. ಆದರೂ, ದೇಶದ ಇತರೆ ಭಾಗಗಳಂತೆ, ಈ ಹೊಸ ಸಂಪತ್ತು ಕೆಲವರ ಕೈಯಲ್ಲೇ ಉಳಿದಿದೆ.

ತಮ್ಮ ಉಪದೇಶದಲ್ಲಿ, ದೇವರು ಇಕ್ವೇಟೋರಿಯಲ್ ಗಿನಿಯಾಗೆ “ಅಪಾರವಾದ ಪ್ರಕೃತಿಸಂಪತ್ತು” ನೀಡಿದ್ದಾರೆ ಎಂದು ಜಗದ್ಗುರುಗಳು ಹೇಳಿದರು ಮತ್ತು ಅದನ್ನು ಎಲ್ಲರಿಗೂ ಆಶೀರ್ವಾದವಾಗುವಂತೆ ಪ್ರೇರೇಪಿಸಿದರು.

ಇಕ್ವೇಟೋರಿಯಲ್ ಗಿನಿಯಾದಲ್ಲಿ ಭರವಸೆಯಿಂದ ತುಂಬಿದ ಭವಿಷ್ಯಕ್ಕಾಗಿ ಹಂಬಲವಿದೆ ಎಂದು ಅವರು ಹೇಳಿದರು. ಆದರೆ, ಈ ಭವಿಷ್ಯವನ್ನು ನಾವು ನಿಷ್ಕ್ರಿಯವಾಗಿ ಕಾಯಬೇಕಾದದ್ದಲ್ಲ, ಬದಲಾಗಿ ದೇವರ ಕೃಪೆಯಿಂದ ನಾವು ಸ್ವತಃ ನಿರ್ಮಿಸಬೇಕಾದದ್ದು ಎಂದು ಅವರು ಒತ್ತಿ ಹೇಳಿದರು.

 

22 ಏಪ್ರಿಲ್ 2026, 21:56