ಬಮೆಂಡಾದ ಸಂತ ಜೋಸೆಫರ ಕ್ಯಾಥೆಡ್ರಲ್‌ನಲ್ಲಿ ಜಗದ್ಗುರು ಲಿಯೋರವರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಮೆಂಡಾದ ಸಂತ ಜೋಸೆಫರ ಕ್ಯಾಥೆಡ್ರಲ್‌ನಲ್ಲಿ ಜಗದ್ಗುರು ಲಿಯೋರವರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

“ಧರ್ಮವನ್ನು ಸೈನಿಕ ಅಥವಾ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವವರಿಗೆ ಶಾಪವಾಗಲಿ,” ಎಂದು ಬಮೆಂಡಾದಲ್ಲಿ ಜಗದ್ಗುರುಗಳು ಹೇಳಿದ್ದಾರೆ.

ಕ್ಯಾಮರೂನ್‌ನ ಬಮೆಂಡಾದಲ್ಲಿ ಶಾಂತಿಗೆ ಸಮರ್ಪಿತ ಸಭೆಯಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು “ಯುದ್ಧದ ಮಾಲೀಕರು” ಎಂಬವರ ವಿರುದ್ಧ ಎಚ್ಚರಿಕೆ ನೀಡಿದರು. ಅವರು “ನಾಶಮಾಡಲು ಒಂದು ಕ್ಷಣ ಸಾಕು, ಆದರೆ ಮರುನಿರ್ಮಿಸಲು ಬಹುಪಾಲು ಜೀವನವೇ ಸಾಕಾಗುವುದಿಲ್ಲ” ಎಂಬ ಸತ್ಯವನ್ನು ಒಪ್ಪಿಕೊಳ್ಳದಂತೆ ನಟಿಸುತ್ತಾರೆ ಎಂದು ಹೇಳಿದರು. ಜೊತೆಗೆ, ಅವರು ಶಸ್ತ್ರಾಸ್ತ್ರಗಳ ಮೇಲೆ ಕೋಟ್ಯಾಂತರ ಹಣ ಖರ್ಚುಮಾಡಿ, ಜನರು ಗುಣಮುಖರಾಗಲು ಸಹಾಯ ಮಾಡಲು ಏನೂ ಮೀಸಲಿಡುವುದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು

ವ್ಯಾಟಿಕನ್ ವರದಿ

ಕ್ಯಾಮರೂನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸ್ವಲ್ಪ ವಿರಾಮ ಕಂಡುಬಂದ ಈ ಸಮಯದಲ್ಲಿ, ಜಗದ್ಗುರು XIVನೇ ಲಿಯೋರವರು ತಮ್ಮ ಕ್ಯಾಮರೂನ್ ಭೇಟಿಯ ಎರಡನೇ ದಿನದಲ್ಲಿ ಉತ್ತರ ಪಶ್ಚಿಮ ಭಾಗದಲ್ಲಿರುವ ಇಂಗ್ಲಿಷ್ ಮಾತನಾಡುವ ನಗರವಾದ ಬಮೆಂಡಾಗೆ ಪ್ರಯಾಣಿಸಿದರು. ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ, ಅವರು ಬಮೆಂಡಾ ಮಹಾಧರ್ಮಪ್ರಾಂತ್ಯದ ಕೇಂದ್ರವಾದ ಸಂತ ಜೋಸೆಫರ ದೇವಾಲಯಕ್ಕೆ ತೆರಳಿ, ಅಲ್ಲಿ ಶಾಂತಿಯ ಸಭೆಯಲ್ಲಿ ಭಾಗವಹಿಸಿದರು. ಪ್ರಾರ್ಥನೆಯ ಕೆಲವು ಕ್ಷಣಗಳ ನಂತರ, ಜಗದ್ಗುರುಗಳು ಮತ್ತು ಆರ್ಚ್‌ಬಿಷಪ್ ಆಂಡ್ರೂ ಎಂಕಿಯಾ ಫುವಾನ್ಯರವರು ದೇವಾಲಯಕ್ಕೆ ಪ್ರವೇಶಿಸಿದರು.

ಅಲ್ಲಿ ವಿವಿಧ ಧರ್ಮ ಹಾಗೂ ಸಮುದಾಯಗಳ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮ್ಯಾಂಕಾನ್‌ನ ಪರಂಪರೆಯ ಮುಖ್ಯಸ್ಥ ಫೋನ್ ಫ್ರು ಆಸಾಹ್ ಅಂಗ್ವಾಫೋರ್ IV, ಪ್ರೆಸ್‌ಬೈಟೇರಿಯನ್ ಧರ್ಮ ಸಭೆಯ ನಿವೃತ್ತ ನಾಯಕ ಫೋಂಕಿ ಸ್ಯಾಮುವೆಲ್ ಫೋರ್ಬಾ, ಬುವೇಯ ಕೇಂದ್ರ ಮಸೀದಿಯ ಇಮಾಮ್ ಮೊಹಮ್ಮದ್ ಅಬೂಬಕರ್, ಧಾರ್ಮಿಕ ಸಹೋದರಿ ಕಾರಿನ್ ತಂಗಿರಿ ಮಾಂಗು ಮತ್ತು ಸ್ಥಳಾಂತರಗೊಂಡ ಕುಟುಂಬದ ಸದಸ್ಯರು ತಮ್ಮ ಸಾಕ್ಷ್ಯಗಳನ್ನು ನೀಡಿದ್ದಾರೆ. ಈ ಅನುಭವಗಳು ಸಮುದಾಯದ ನೋವು ಹಾಗೂ ಸಹನೆಯ ಕಥೆಯನ್ನು ವ್ಯಕ್ತಪಡಿಸಿದವು.

ಈ ಸಾಕ್ಷ್ಯಗಳನ್ನು ಕೇಳಿದ ಬಳಿಕ, ಜಗದ್ಗುರು ಲಿಯೋರವರು ಜನರೊಂದಿಗೆ ತಮ್ಮ ಧ್ವನಿಯನ್ನು ಸೇರಿಸಿ, ಸಂಕಷ್ಟದ ನಡುವೆಯೂ ದೇವರ ಸಾನ್ನಿಧ್ಯದ ಮೇಲೆ ಅವರ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು. “ಶಾಂತಿಯನ್ನು ಘೋಷಿಸುವ ದೂತನ ಕಾಲುಗಳು ಎಷ್ಟು ಸುಂದರ!” ಎಂಬ ಯೆಶಾಯನ ವಾಕ್ಯವನ್ನು ಉಲ್ಲೇಖಿಸಿ, ರಕ್ತದಿಂದ ಕಳಂಕಿತವಾದರೂ ಫಲವತ್ತಾದ ಈ ನೆಲದಲ್ಲಿ ಬದುಕುತ್ತಿರುವ ಬಮೆಂಡಾ ಜನರ ಧೈರ್ಯವನ್ನು ಅವರು ಪ್ರಶಂಸಿಸಿದರು. ಅವರು ಸತತವಾಗಿ ಸದುದ್ದೇಶದ ಮಾರ್ಗದಲ್ಲೇ ಉಳಿದಿರುವುದನ್ನು ಮೆಚ್ಚಿದರು.

ಜಗದ್ಗುರುಗಳು ಕ್ಯಾಮರೂನ್‌ನ ಸಂಘರ್ಷವು ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ ಎಂದು ಸೂಚಿಸಿದರು. ಧಾರ್ಮಿಕ ನಾಯಕರು ಶಾಂತಿಗಾಗಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿರುವುದು ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಆದರೆ, ಧರ್ಮವನ್ನು ತಮ್ಮ ರಾಜಕೀಯ, ಆರ್ಥಿಕ ಅಥವಾ ಸೈನಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಅವರು ತೀವ್ರ ಎಚ್ಚರಿಕೆ ನೀಡಿದರು. ಬಮೆಂಡಾ ಜನರು ಇಂತಹ ಸಂಕಷ್ಟದಲ್ಲಿಯೂ ವಿಶ್ವಕ್ಕೆ ಬೆಳಕಾಗಿದ್ದಾರೆ ಎಂದು ಅವರು ಹೇಳಿದರು.

ಹಿಂಸಾಚಾರದಿಂದ ಗಾಯಗೊಂಡವರನ್ನು  ಜಗದ್ಗುರುಗಳು ವಿಶೇಷವಾಗಿ ಕೃತಜ್ಞತೆಯಿಂದ ಸ್ಮರಿಸಿದರು. “ನಾಶಮಾಡಲು ಒಂದು ಕ್ಷಣ ಸಾಕು, ಆದರೆ ಮರುನಿರ್ಮಿಸಲು ಜೀವನವೇ ಸಾಕಾಗುವುದಿಲ್ಲ” ಎಂದು ಅವರು ಹೇಳಿ, ಶಸ್ತ್ರಾಸ್ತ್ರಗಳ ಮೇಲೆ ಅಪಾರ ಹಣ ವ್ಯಯವಾಗುತ್ತಿರುವುದನ್ನು ಮತ್ತು ಜನರ ಗುಣಮುಖತೆಗೆ ಬೇಕಾದ ಸಂಪನ್ಮೂಲಗಳ ಕೊರತೆಯನ್ನು ಖಂಡಿಸಿದರು. ಈ ಅನ್ಯಾಯವು ನಿರಂತರ ಅಶಾಂತಿ ಮತ್ತು ಮರಣದ ಚಕ್ರವನ್ನು ಮುಂದುವರಿಸುತ್ತಿದೆ ಎಂದರು.

ಕೊನೆಗೆ, ಜಗದ್ಗುರು ಲಿಯೋರವರು ಮಾನವ ಸಹೋದರತ್ವದ ಮಾರ್ಗದಲ್ಲಿ ನಡೆಯುವ ನಿಜವಾದ ಪರಿವರ್ತನೆಗೆ ಕರೆ ನೀಡಿದರು. ಶಾಂತಿ ಹೊಸದಾಗಿ ಸೃಷ್ಟಿಸಬೇಕಾದದ್ದು ಅಲ್ಲ, ಅದು ನಮ್ಮ ನೆರೆಹೊರೆಯವರನ್ನು ಸಹೋದರರು ಮತ್ತು ಸಹೋದರಿಯರಂತೆ ಸ್ವೀಕರಿಸಿದಾಗ ಕಂಡುಬರುವುದಾಗಿದೆ ಎಂದು ಹೇಳಿದರು. ಪರಸ್ಪರ ಪ್ರೀತಿ ಮತ್ತು ಸಹಕಾರದ ಮೂಲಕ ಶಾಂತಿಯ ಮೌನ ಕ್ರಾಂತಿಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಅವರು ಪ್ರೇರೇಪಿಸಿದರು.

16 ಏಪ್ರಿಲ್ 2026, 20:04