ಹುಡುಕಿ

ITALY-VATICAN-DIPLOMACY-ALGERIA

ಅಲ್ಜೀರಿಯಾದ ಕ್ರೈಸ್ತ ಸಮುದಾಯಕ್ಕೆ ಜಗದ್ಗುರುಗಳು: ಪ್ರಾರ್ಥನೆ, ದಾನಧರ್ಮ ಮತ್ತು ಏಕತೆ ಕ್ರೈಸ್ತ ಸಾನ್ನಿಧ್ಯಕ್ಕೆ ಅವಶ್ಯಕ.

ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾದ ಕ್ರೈಸ್ತ ಸಮುದಾಯವನ್ನು “ಪ್ರಾರ್ಥನೆ, ದಾನಧರ್ಮ ಮತ್ತು ಏಕತೆ”ಯಲ್ಲಿ ನೆಲೆಯೂರಿರಲು ಪ್ರೋತ್ಸಾಹಿಸಿ, ಅವರ ಮೌನ ಸಾಕ್ಷಿಯನ್ನು ಪ್ರಶಂಸಿಸಿ, ಶಾಂತಿ ಮತ್ತು ಸಹೋದರತ್ವದ ಸಂಕೇತವಾಗಿರಲು ಕರೆ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಅಲ್ಜೀರಿಯಾದ “ಅವರ್ ಲೇಡಿ ಆಫ್ ಆಫ್ರಿಕಾ” ಬಸಿಲಿಕಾದಲ್ಲಿ ಅಲ್ಜೀರಿಯಾದ ಕ್ರೈಸ್ತ ಸಮುದಾಯದ ಸದಸ್ಯರನ್ನು ಭೇಟಿಯಾದರು. ಇದು ಅವರ ದೇಶದ ಮೊದಲ ದಿನದ ಕೊನೆಯ ಕಾರ್ಯಕ್ರಮವಾಗಿತ್ತು.

ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಆಳವಾದ ಸಂತೋಷ ಮತ್ತು ಪಿತೃತ್ವದ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಸಮುದಾಯವನ್ನು ಅವರು ಶಾಂತವಾಗಿಯೇ ಇದ್ದರೂ ಅಮೂಲ್ಯವಾದ ಉಪಸ್ಥಿತಿಯೆಂದು ವಿವರಿಸಿದರು, ಇದು ಪ್ರಾಚೀನ ಪರಂಪರೆ ಮತ್ತು ನಂಬಿಕೆಯ ಪ್ರಕಾಶಮಾನ ಸಾಕ್ಷಿಗಳಿಂದ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

1990ರ ದಶಕದಲ್ಲಿ ಅಲ್ಜೀರಿಯಾದಲ್ಲಿ ಹತ್ಯೆಗೀಡಾದ 19 ಧಾರ್ಮಿಕ ಪುರುಷರು ಮತ್ತು ಮಹಿಳೆಯರನ್ನು ಅವರು ವಿಶೇಷವಾಗಿ ಸ್ಮರಿಸಿದರು. ಅವರು ಜನರ ಸಂತೋಷ ಮತ್ತು ದುಃಖಗಳಲ್ಲಿ ಜೊತೆ ನಿಂತರು ಎಂದು ಹೇಳಿ, ಅವರ ರಕ್ತ “ಜೀವಂತ ಬೀಜದಂತೆ ಸದಾ ಫಲ ನೀಡುತ್ತಿದೆ” ಎಂದು ವಿವರಿಸಿದರು.

ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಆಳವಾದ ಇತಿಹಾಸವನ್ನು ಜಗದ್ಗುರುಗಳು ಸ್ಮರಿಸಿದರು. ಸಂತ ಆಗಸ್ಟಿನರ ಉತ್ಸಾಹಭರಿತ ಧ್ವನಿ ಈ ನಾಡಿನಲ್ಲಿ ಮೊಳಗುತ್ತಿತ್ತು ಎಂದು ಹೇಳಿ, ಸಂತ ಮೋನಿಕಾ ಮತ್ತು ಇತರ ಸಂತರ ಉದಾಹರಣೆಯನ್ನು ಉಲ್ಲೇಖಿಸಿದರು.

ಅಲ್ಜೀರಿಯಾದ ಧರ್ಮ ಸಭೆ ಜೀವನದ ಬಗ್ಗೆ ಮಾತನಾಡಿದ ಜಗದ್ಗುರುಗಳು, ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳಿದರು. ನಾವು ಎಲ್ಲರೂ ಪ್ರಾರ್ಥನೆ ಮಾಡಬೇಕು ಎಂದು ಹೇಳಿ, ಪ್ರಾರ್ಥನೆಯಿಲ್ಲದೆ ಮಾನವನು ಬದುಕಲು ಸಾಧ್ಯವಿಲ್ಲ ಎಂದು ವಿವರಿಸಿದರು. ಪ್ರಾರ್ಥನೆ ಮಾನವನ ಹೃದಯವನ್ನು ಏಕೀಕರಿಸಿ, ಶುದ್ಧಗೊಳಿಸಿ, ಬಲಪಡಿಸುತ್ತದೆ ಎಂದು ಹೇಳಿದರು.

ದಾನಧರ್ಮದ ವಿಷಯದಲ್ಲಿ, ವಿಶೇಷವಾಗಿ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸುವವರ ಕಾರ್ಯವನ್ನು ಅವರು ಮೆಚ್ಚಿದರು. ಈ ಸೇವೆ ಕೇವಲ ಭೌತಿಕ ಸಹಾಯವಷ್ಟೇ ಅಲ್ಲ, ಅದು ಕೃಪೆಯ ಅನುಭವವಾಗಿದ್ದು, ಎಲ್ಲರನ್ನೂ ಬೆಳೆಯಲು ನೆರವಾಗುತ್ತದೆ ಎಂದು ಹೇಳಿದರು.

ಜಗದ್ಗುರುಗಳ ಏಕತೆ ಮತ್ತು ಶಾಂತಿಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದರು. “ನಿಮಗೆ ಶಾಂತಿ ಇರಲಿ” ಎಂಬ ಸುವಾರ್ತೆಯ ಸಂದೇಶವನ್ನು ಉಲ್ಲೇಖಿಸಿ, ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ಸಹಬಾಳ್ವೆ ಬೆಳೆಸುವ ಮಹತ್ವವನ್ನು ವಿವರಿಸಿದರು. ನಂಬಿಕೆ ಜನರನ್ನು ಒಂದಾಗಿಸುತ್ತದೆ, ಆದರೆ ಗೊಂದಲ ಉಂಟುಮಾಡುವುದಿಲ್ಲ ಎಂದು ಹೇಳಿದರು.

ಕೊನೆಯಲ್ಲಿ, ಅಲ್ಜೀರಿಯಾದ ಮರುಭೂಮಿಯನ್ನು ಉದಾಹರಣೆಯಾಗಿ ತೆಗೆದುಕೊಂಡು, ಮರುಭೂಮಿಯಲ್ಲಿ ಯಾರೂ ಒಬ್ಬರೇ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು. ಇದು ಮಾನವರು ಪರಸ್ಪರ ಅವಲಂಬಿತರಾಗಿರುವುದನ್ನು ನೆನಪಿಸುತ್ತದೆ ಎಂದು ಹೇಳಿ, ಪರಸ್ಪರ ಬೆಂಬಲ ಮತ್ತು ಹೃದಯಗಳ ಸೌಹಾರ್ದತೆ ಮೂಲಕ ನಿಜವಾದ ಶಾಂತಿ ಸಾಧ್ಯವೆಂದು ತಿಳಿಸಿದರು.

13 ಏಪ್ರಿಲ್ 2026, 19:05