ಜಗದ್ಗರುಗಳು: ತೀವ್ರವಾದದ ಪ್ರಪಂಚದಲ್ಲಿಯೂ ಧರ್ಮಗಳು ಸಹಅಸ್ತಿತ್ವದಲ್ಲಿದ್ದು ಶಾಂತಿಯನ್ನು ಉತ್ತೇಜಿಸಬಹುದು
ವ್ಯಾಟಿಕನ್ ವರದಿ
ಧರ್ಮೀಯ ತೀವ್ರವಾದ, ವಿಭಜನೆ ಮತ್ತು ಸಂಘರ್ಷಗಳಿಂದ ಗುರುತಿಸಲ್ಪಟ್ಟಿರುವ ಇಂದಿನ ಜಗತ್ತಿನಲ್ಲಿ ಸಹ, ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಾಗಿ ಬದುಕುವುದು ಸಾಧ್ಯವೆಂದು ಜಗದ್ಗುರು XIVನೇ ಲಿಯೋರವರು ಹೇಳಿದ್ದಾರೆ. ಆಫ್ರಿಕಾದ ಕ್ರೈಸ್ತ-ಮುಸ್ಲಿಂ ಸಂಬಂಧಗಳ ಕಾರ್ಯಕ್ರಮ (ಪ್ರೋಕ್ಮುರಾ) ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ರೈಸ್ತರು ಮತ್ತು ಮುಸ್ಲಿಮರ ಸಾಮಾನ್ಯ ಸಾಕ್ಷ್ಯವು ಸಹೋದರತ್ವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಪ್ರಶಂಸಿಸಿದರು.
1959ರಲ್ಲಿ ಸ್ಥಾಪಿತವಾದ ಈ ಪ್ಯಾನ್-ಆಫ್ರಿಕನ್ ಸಂಸ್ಥೆಯು ಖಂಡದ ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ಉತ್ತಮ ಸಂಬಂಧಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಇತರ ಧರ್ಮಗಳೊಂದಿಗೆ ಸಂವಾದವನ್ನು ಉತ್ತೇಜಿಸುವಲ್ಲಿ ಅಂತರ್ಧರ್ಮ ಸಂವಾದ ಡಿಕಾಸ್ಟ್ರಿಯ ಸೇವೆಯನ್ನೂ ಜಗದ್ಗುರುಗಳು ಮೆಚ್ಚಿದರು.
ಪೋಪ್ ‘ನೋಸ್ತ್ರಾ ಏಟೇಟೆ’ ಘೋಷಣೆಯನ್ನು ಉಲ್ಲೇಖಿಸಿ, ಕಥೋಲಿಕ ಧರ್ಮ ಸಭೆ ಇತರ ಧರ್ಮಗಳಲ್ಲಿರುವ ಸತ್ಯ ಮತ್ತು ಪವಿತ್ರತೆಯನ್ನು ಗೌರವಿಸುತ್ತದೆ ಎಂದು ಹೇಳಿದರು. ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವವು ಧರ್ಮಗಳ ನಡುವೆ ಒಗ್ಗಟ್ಟಿಗೆ ಪ್ರಮುಖವಾಗಿದ್ದು, ನಿಜವಾದ ಸಹೋದರತ್ವವನ್ನು ನಿರ್ಮಿಸಲು ಹೃದಯಗಳು ಸಂವಾದಕ್ಕೆ ತೆರೆದಿರಬೇಕು ಎಂದು ಅವರು ತಿಳಿಸಿದರು.
ಸಾಮಾನ್ಯ ಹಿತಕ್ಕಾಗಿ ಸಹಕಾರ ಅತ್ಯಂತ ಅಗತ್ಯವೆಂದು ಜಗದ್ಗುರುಗಳು ಒತ್ತಿಹೇಳಿದರು. ಸಂವಾದದ ಮೂಲಕ ಶಾಂತಿ, ನ್ಯಾಯ ಮತ್ತು ಭರವಸೆ ಆಫ್ರಿಕಾ ಮಾತ್ರವಲ್ಲದೆ ಜಗತ್ತಿನ ಎಲ್ಲ ಭಾಗಗಳಲ್ಲೂ ವೃದ್ಧಿಯಾಗಬಹುದು ಎಂದು ಅವರು ಹೇಳಿದರು.
ಧರ್ಮಗಳಿಗೆ ದೊಡ್ಡ ಹೊಣೆಗಾರಿಕೆ ಇದೆ ಎಂದು ಜಗದ್ಗುರುಗಳು ಹೇಳಿದರು ಜನರನ್ನು ಪೂರ್ವಾಗ್ರಹ, ಕೋಪ ಮತ್ತು ದ್ವೇಷದಿಂದ ಮುಕ್ತಗೊಳಿಸಿ, ಸ್ವಾರ್ಥ ಮತ್ತು ಲಾಲಸೆಯನ್ನು ಮೀರಿ ಬದುಕಲು ಸಹಾಯ ಮಾಡಬೇಕು. ಇದರಿಂದ ಮಾನವ ಆತ್ಮ ಮತ್ತು ಭೂಮಿಯನ್ನು ಹಾಳುಮಾಡುವ ದುಷ್ಟ ಗುಣಗಳನ್ನು ತಡೆಹಿಡಿಯಬಹುದು.
ಕೊನೆಗೆ, ಜಗದ್ಗುರುಗಳು ಎಲ್ಲರನ್ನು ಶಾಂತಿಯ ಕರಕುಶಲಕಾರರು, ಭರವಸೆಯ ಸಾಕ್ಷಿಗಳು ಮತ್ತು ನಿಜವಾದ ಸಹೋದರತ್ವದ ನಿರ್ಮಾತೃಗಳಾಗಿ ಮುಂದುವರಿಯಲು ಆಹ್ವಾನಿಸಿದರು.
