ಜಗದ್ಗುರು XIV ನೇ ಲಿಯೋರವರು: ಧರ್ಮಶಾಸ್ತ್ರವು ಧರ್ಮ ಸಭೆಯ ಗುರಿಯನ್ನು ಮುಂದಕ್ಕೆ ಸಾಗಿಸಲು ಸೇವೆ ಮಾಡುತ್ತದೆ
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ವ್ಯಾಟಿಕನ್ನಲ್ಲಿ ಸೋಮವಾರ ಪುಗ್ಲಿಯಾದ ಧರ್ಮಶಾಸ್ತ್ರ ಮಹಾವಿದ್ಯಾಲಯ ಮತ್ತು ಕಾಲಾಬ್ರಿಯಾದ ಧರ್ಮಶಾಸ್ತ್ರ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ, ಧರ್ಮಶಾಸ್ತ್ರವು ಸುವಾರ್ತೆಯ ಘೋಷಣೆಗೆ ಸೇವೆ ಮಾಡುತ್ತದೆ ಆದ್ದರಿಂದ ಅದು ಧರ್ಮ ಸಭೆಯ ಗುರಿಯ ಅವಿಭಾಜ್ಯ ಮತ್ತು ಮೂಲಭೂತ ಭಾಗವಾಗಿದೆ ಎಂದು ಹೇಳಿದರು. ಶಿಕ್ಷಣವು ಕೇವಲ ವಿದ್ಯಾವಿಧಿ ಪೂರೈಸಲು ಅಲ್ಲ, ಧೈರ್ಯದಿಂದ ಆಳವಾದ ಸಮುದ್ರಕ್ಕೆ ಹೊರಡುವ ನಾವಿಕರಂತೆ ನಂಬಿಕೆಯ ಯಾತ್ರೆಯನ್ನು ಕೈಗೊಳ್ಳಲು ಸಹಾಯಕವಾಗಬೇಕು ಎಂದು ಅವರು ತಿಳಿಸಿದರು.
ಪುಗ್ಲಿಯಾ ಮತ್ತು ಕಾಲಾಬ್ರಿಯಾ ಸಮುದ್ರ ತೀರ ಪ್ರದೇಶಗಳೆಂದು ಉಲ್ಲೇಖಿಸಿದ ಜಗದ್ಗುರುಗಳು, 2017ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಲಾ ಸಿವಿಲ್ಟಾ ಕ್ಯಾಟೋಲಿಕಾ ಪತ್ರಿಕೆಯ ಬರಹಗಾರರಿಗೆ ನೀಡಿದ ಸಂದೇಶವನ್ನು ನೆನಪಿಸಿದರು ಮುಕ್ತ ಸಮುದ್ರದಲ್ಲೇ ಇರಿ ಸುರಕ್ಷಿತ ಬಂದರುಗಳಲ್ಲಿ ಅಡಗಿಕೊಳ್ಳಬೇಡಿ. ಇಂದಿನ ಸಂದರ್ಭಗಳಲ್ಲಿ ನಂಬಿಕೆಯನ್ನು ಘೋಷಿಸಲು ಮತ್ತು ಸಂಸ್ಕೃತಿಯಲ್ಲಿ ಆವರಿಸಲು ಈ ಮನೋಭಾವ ಅತ್ಯಾವಶ್ಯಕವೆಂದು ಅವರು ಒತ್ತಿ ಹೇಳಿದರು.
ಈ ಧರ್ಮಶಾಸ್ತ್ರ ಯಾತ್ರೆ ಎರಡು ದಿಕ್ಕುಗಳಲ್ಲಿ ಸಾಗುತ್ತದೆ ಎಂದು ಜಗದ್ಗುರುಗಳು ವಿವರಿಸಿದರು. ಒಂದು ಕಡೆ ದೇವರ ರಹಸ್ಯದ ಆಳವನ್ನು ಅನ್ವೇಷಿಸುವುದು ಮತ್ತೊಂದೆಡೆ ಇತಿಹಾಸದ ವಿವಿಧ ಸಂದರ್ಭಗಳಲ್ಲಿ ಸುವಾರ್ತೆಯನ್ನು ಘೋಷಿಸಲು ಹೊಸ ರೂಪಗಳು ಮತ್ತು ಭಾಷೆಗಳನ್ನು ಹುಡುಕುವುದು. ಧರ್ಮಶಾಸ್ತ್ರವು ಕೆಲ ಪರಿಣಿತರಿಗಷ್ಟೇ ಸೀಮಿತವಲ್ಲ ಎಲ್ಲರೂ ನಂಬಿಕೆಯ ರಹಸ್ಯವನ್ನು ಆಳವಾಗಿ ಗ್ರಹಿಸಿ ಸಮಾಜ ಮತ್ತು ಸಂಸ್ಕೃತಿಯಲ್ಲಿ ಸುವಾರ್ತೆಯ ಸಂದೇಶವನ್ನು ಉತ್ಸಾಹದಿಂದ ಸಾಗಿಸಲು ಸಿದ್ಧರಾಗಬೇಕು ಎಂದರು.
ಅವರು ಪುಗ್ಲಿಯಾ ಮತ್ತು ಕಾಲಾಬ್ರಿಯಾ ಪ್ರದೇಶಗಳಲ್ಲಿ ಆರಂಭವಾದ ಏಕತಾ ಪ್ರಯಾಣವನ್ನು ಪ್ರಶಂಸಿಸಿ, ವಿಭಿನ್ನ ಸಂಸ್ಥೆಗಳು ಮತ್ತು ರೂಪಣಾ ಮಾರ್ಗಗಳನ್ನು ಒಗ್ಗೂಡಿಸುವ ಈ ಪ್ರಯತ್ನವನ್ನು “ಐತಿಹಾಸಿಕ ಹೆಜ್ಜೆ” ಎಂದು ಕರೆದರು. ಇದು ಧರ್ಮಪ್ರಾಂತ್ಯಗಳ ಮಧ್ಯೆ ಸೌಹಾರ್ದತೆಯನ್ನು ಉತ್ತೇಜಿಸಿ, ಹಳೆಯ ಪ್ರಾದೇಶಿಕ ಸ್ಪರ್ಧೆಗಳನ್ನು ಮೀರಿ, ಏಕತೆ ಮತ್ತು ಸಹೋದರತ್ವದ ಧರ್ಮ ಸಭೆಯ ಜೀವನವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಒಟ್ಟಾಗಿ ಧರ್ಮಶಾಸ್ತ್ರ ಮಾಡುವುದೇ ಮುಖ್ಯ, ಎಂದು ಜಗದ್ಗುರುಗಳು ಹೇಳಿದರು. ಸುರಕ್ಷಿತ ಗಡಿಗಳನ್ನು ಬಿಟ್ಟು ಸಂವಾದ, ಪರಸ್ಪರ ಆಲಿಕೆ ಮತ್ತು ಸಹಭಾಗಿತ್ವದ ಮೂಲಕ ಕಾರ್ಯನಿರ್ವಹಿಸಿದಾಗ ಮಾತ್ರ ಸುವಾರ್ತೆಗೆ ಸೇವೆ ಮಾಡುವ ರೂಪಣೆ ಸಾಧ್ಯ. ಯುವಕರು ಮತ್ತು ಭವಿಷ್ಯದ ಯಾಜಕರು, ಧಾರ್ಮಿಕರು ಮತ್ತು ಕ್ರೈಸ್ತ ಪ್ರಜೆಗಳು ಒಂದಾಗಿ ರೂಪುಗೊಂಡಾಗ, ಸಮುದಾಯಗಳು ಭರವಸೆಯ ಕಾರ್ಯಾಗಾರಗಳಾಗಿ ಬೆಳೆಯುತ್ತವೆ.
ಕೊನೆಗೆ, ಉದ್ಯೋಗದ ಸಂಕಷ್ಟ, ವಲಸೆ, ಅನ್ಯಾಯ ಮತ್ತು ಶೋಷಣೆಗಳಂತಹ ಸಾಮಾಜಿಕ ಸಮಸ್ಯೆಗಳ ನಡುವೆ ಧರ್ಮಶಾಸ್ತ್ರವು ಪ್ರವಾದಿಯ ಧೈರ್ಯವನ್ನು ಬೆಳೆಸಬೇಕು ಎಂದು ಜಗದ್ಗುರುಗಳು ಸೂಚಿಸಿದರು. ಹಿಂತಿರುಗುವ ಪ್ರಲೋಭನೆಗೆ ಮಣಿಯಬೇಡಿ ಉತ್ಸಾಹ ಮತ್ತು ದೃಢಸಂಕಲ್ಪದಿಂದ ಮುಂದೆ ಸಾಗಿರಿ ಎಂದು ಅವರು ಪ್ರೇರಣೆ ನೀಡಿದರು.
