ಜಗದ್ಗುರು XIV ನೇ ಲಿಯೋ ರವರು ಸಂತ ಮರಿಯಾ ಡೆಲ್ಲಾ ಪ್ರೆಸೆಂಟಜಿಯೋನ್‌ನ ರೋಮಿನ ಧರ್ಮ ಕೇಂದ್ರಗಳಿಗೆ ಭೇಟಿ ನೀಡಿದರು ಜಗದ್ಗುರು XIV ನೇ ಲಿಯೋ ರವರು ಸಂತ ಮರಿಯಾ ಡೆಲ್ಲಾ ಪ್ರೆಸೆಂಟಜಿಯೋನ್‌ನ ರೋಮಿನ ಧರ್ಮ ಕೇಂದ್ರಗಳಿಗೆ ಭೇಟಿ ನೀಡಿದರು  (ANSA)

ಜಗದ್ಗರುಗಳ ರೋಮ್ ಧರ್ಮ ಕೇಂದ್ರಗಳಿಗೆ ಭೇಟಿ: ಪ್ರತಿಯೊಬ್ಬರೂ ಶಾಂತಿ ಮತ್ತು ಸೌಹಾರ್ದದ ನಿರ್ಮಾತೃರಾಗಬಹುದು

ಜಗದ್ಗುರು ಲಿಯೋರವರು ರೋಮ್ ನಗರದ ಅಂಚಿನಲ್ಲಿರುವ ಧರ್ಮ ಕೇಂದ್ರಗಳಿಗೆ ತಮ್ಮ ಧರ್ಮಾಧ್ಯಕ್ಷರ ಭೇಟಿಗಳನ್ನು ಮುಂದುವರಿಸುತ್ತಿದ್ದಾರೆ. ಈ ಬಾರಿ ಅವರು ಟೊರೆವೆಕ್ಕಿಯಾ ಪ್ರದೇಶದಲ್ಲಿರುವ ಸಾಂಟಾ ಮಾರಿಯಾ ಡೆಲ್ಲಾ ಪ್ರೆಸೆಂಟಜಿಯೋನ್ ಧರ್ಮ ಕೇಂದ್ರಗಳಿಗೆ ಭೇಟಿ ನೀಡಿದರು.ಫೆಬ್ರವರಿ ಮಧ್ಯಭಾಗದಿಂದ ಬಳಿಕ ರೋಮ್‌ನ ಧರ್ಮ ಕೇಂದ್ರಗಳಿಗೆ ಅವರು ನೀಡುತ್ತಿರುವ ಇದು ನಾಲ್ಕನೇ ಭೇಟಿಯಾಗಿದೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ರೋಮ್ ನಗರದ ಪಶ್ಚಿಮ ಭಾಗದ ಟೊರೆವೆಕ್ಕಿಯಾ ಪ್ರದೇಶದಲ್ಲಿರುವ ಸಂತ ಮರಿಯಾ ಡೆಲ್ಲಾ ಪ್ರೆಸೆಂಟಜಿಯೋನ್ ಧರ್ಮ ಕೇಂದ್ರಕ್ಕೆ ಭಾನುವಾರ ಮಧ್ಯಾಹ್ನ ಧರ್ಮಾಧ್ಯಕ್ಷೀಯ ಭೇಟಿ ನೀಡಿದರು. ತಪಸ್ಸು ಕಾಲದ ಅಂಗವಾಗಿ ರೋಮ್‌ನ ಧರ್ಮ ಕೇಂದ್ರಗಳಿಗೆ ಅವರು ನೀಡುತ್ತಿರುವ ಭೇಟಿಗಳಲ್ಲಿ ಇದು ಒಂದು ಪ್ರಮುಖ ಭೇಟಿಯಾಗಿದೆ. ಧರ್ಮ ಸಭೆ ಹೊರಗಿನ ಮೈದಾನದಲ್ಲಿ ಧರ್ಮ ಕೇಂದ್ರದ ಸದಸ್ಯರು, ಕುಟುಂಬಗಳು, ಮೊದಲ ಪರಮ ಪ್ರಸಾದ ಸ್ವೀಕಾರಕ್ಕೆ ಸಿದ್ಧರಾಗುತ್ತಿರುವ ಮಕ್ಕಳು, ಸ್ಕೌಟ್ ಹಾಗೂ ಯುವಕ ಸಂಘಗಳ ಸದಸ್ಯರು ಜಗದ್ಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಧರ್ಮ ಕೇಂದ್ರದ ವಂ. ಸ್ವಾಮಿ ಪೌಲೋ ಸ್ಟಕ್ಕಿಯೊಟ್ಟಿ ಹಾಗೂ ರೋಮ್ ಧರ್ಮಪ್ರಾಂತ್ಯದ ವಿಕಾರ್ ಕಾರ್ಡಿನಲ್ ಬಾಲ್ಡೋ ರೇನಾ ಮತ್ತು ಅಗ್ರಿಜೆಂಟೊದ ನಿವೃತ್ತ ಆರ್ಚ್‌ಬಿಷಪ್ ಕಾರ್ಡಿನಲ್ ಫ್ರಾನ್ಚೆಸ್ಕೊ ಮೊಂಟೆನೆಗ್ರೋ ಕೂಡ ಜಗದ್ಗುರುಗಳನ್ನು ಸ್ವಾಗತಿಸಿದರು.

ಜಗದ್ಗರುಗಳು ಮಕ್ಕಳು ಮತ್ತು ಯುವಕರನ್ನು ಭೇಟಿಯಾಗಿ ಅವರ ಪ್ರಶ್ನೆಗಳು ಮತ್ತು ಪತ್ರಗಳನ್ನು ಆಲಿಸಿದರು. ಯೇಸುವನ್ನು ಹೇಗೆ ಭೇಟಿಯಾಗಲು ಸಿದ್ಧರಾಗಬೇಕು ಮತ್ತು ಕಷ್ಟಕರ ಸಮಯದಲ್ಲಿ ಪರಸ್ಪರ ಹೇಗೆ ಸಹಾಯ ಮಾಡಬೇಕು ಎಂಬುದರ ಬಗ್ಗೆ ಮಕ್ಕಳು ಸಲಹೆ ಕೇಳಿದರು. ಜಗದ್ಗರುಗಳು ಹಿಂಸೆ ಮತ್ತು ವಿಭಜನೆಗಳನ್ನು ತಿರಸ್ಕರಿಸಿ, ಪರಸ್ಪರ ಸಮಾಧಾನ ಮತ್ತು ಏಕತೆಗಾಗಿ ಕೆಲಸ ಮಾಡಬೇಕು ಎಂದು ಮಕ್ಕಳಿಗೆ ಉತ್ತೇಜನ ನೀಡಿದರು. ಪ್ರತಿಯೊಬ್ಬರೂ ಶಾಂತಿಯ ನಿರ್ಮಾತೃರಾಗಬಹುದು ಎಂದು ಅವರು ಹೇಳಿದರು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾದಾಗ ಸಮಾಧಾನ ಸಾಧಿಸಬೇಕು ಮತ್ತು ಬಲಿ ಮಾಡುವಿಕೆ  ಹಾಗೂ ದ್ವೇಷದ ಎಲ್ಲ ರೂಪಗಳನ್ನು ತಿರಸ್ಕರಿಸಬೇಕು ಎಂದು ಅವರು ತಿಳಿಸಿದರು.

ಮೊದಲ ಪರಮ ಪ್ರಸಾದ ಸ್ವೀಕಾರಕ್ಕೆ ಸಿದ್ಧರಾಗುತ್ತಿರುವ ಮಕ್ಕಳೊಂದಿಗೆ ಮಾತನಾಡಿದ ಜಗದ್ಗುರುಗಳು, ತಾವು ಮನೆಬಿಟ್ಟು ಹೊರಡುವ ಮೊದಲು ಓದಿದ ಕ್ವಾಲ್ಕುನೊ ಬುಸ್ಸಾ ಅಲ್ ಟುವೊ ಕುವೋರೆ ಎಂಬ ಪ್ರಾರ್ಥನೆ ಮತ್ತು ವೃತ್ತಿ ಕುರಿತ ಪುಸ್ತಕವನ್ನು ಉಲ್ಲೇಖಿಸಿದರು. ತಮ್ಮ ಹೃದಯಗಳನ್ನು ಕ್ರಿಸ್ತನಿಗೆ ತೆರೆದುಕೊಳ್ಳಲು ಅವರು ಮಕ್ಕಳನ್ನು ಆಹ್ವಾನಿಸಿದರು. ಯೇಸು ಜನರ ಮನೆಗಳಿಗೂ, ಹೃದಯಗಳಿಗೂ ಹಾಗೂ ಜೀವನಕ್ಕೂ ಬರುತ್ತಾನೆ ಎಂದು ಹೇಳಿದ ಜಗದ್ಗುರುಗಳು, ವಿಶ್ವಾಸಿಗಳು ಆತನನ್ನು ಸ್ವಾಗತಿಸಲು ಕರೆಯಲ್ಪಟ್ಟಿದ್ದಾರೆ ಎಂದರು. ಪ್ರಾರ್ಥನೆಯಲ್ಲಿ ಯೇಸುವೊಂದಿಗೆ ಮಾತನಾಡಬೇಕು ಮತ್ತು ದುಃಖದಲ್ಲಿರುವ ಜನರಲ್ಲಿ ಹಾಗೂ ಪ್ರೀತಿ ಮತ್ತು ಸೇವೆಯ ಕಾರ್ಯಗಳಲ್ಲಿ ಆತನನ್ನು ಗುರುತಿಸಬೇಕು ಎಂದು ಅವರು ಹೇಳಿದರು.

ಮಕ್ಕಳೊಂದಿಗೆ ನಡೆದ ಭೇಟಿಯ ನಂತರ ಎಲ್ಲರೂ ಸೇರಿ ಪ್ರಭುವಿನ ಪ್ರಾರ್ಥನೆ ಮಾಡಿದರು. ಬಳಿಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳು ಹಾಗೂ ರೋಗಿಗಳನ್ನು ಜಗದ್ಗುರುಗಳು ಭೇಟಿಯಾಗಿ ಆಶೀರ್ವದಿಸಿದರು. ಧರ್ಮ ಸಭೆಯೊಳಗೆ ಪ್ರವೇಶಿಸುವ ಮೊದಲು ಅವರು ವೃದ್ಧರು ಮತ್ತು ರೋಗಿಗಳೊಂದಿಗೆ ಸ್ವಲ್ಪ ಸಮಯ ಕಳೆಯುತ್ತಾ ಅವರ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದರು. ತಮ್ಮೊಂದಿಗೆ ಬಂದಿದ್ದ ಕಾರ್ಡಿನಲ್‌ಗಳ ಬಗ್ಗೆ ಹಾಸ್ಯವಾಗಿ “ಇದು ಒಂದು ಚಿಕ್ಕ ಕಾನ್ಕ್ಲೇವ್‌ನಂತೆ ಕಾಣುತ್ತಿದೆ” ಎಂದು ಅವರು ಹೇಳಿದರು.

ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರುಗಳು ಯೇಸು ಮತ್ತು ಸಮಾರಿಯ ಮಹಿಳೆಯ ಕುರಿತು ಸುವಾರ್ತೆಯ ಘಟನೆ ಕುರಿತು ಧ್ಯಾನಿಸಿದರು. ಈ ಸುವಾರ್ತೆ ಸಮುದಾಯದ ಜೀವನಕ್ಕೂ ಹಾಗೂ ಪ್ರದೇಶದಲ್ಲಿರುವ ಸವಾಲುಗಳಿಗೂ ಸಂಬಂಧಿಸಿದೆ ಎಂದು ಅವರು ಹೇಳಿದರು. ಯುವಕರಲ್ಲಿ ಉದ್ಯೋಗ, ವಾಸಸ್ಥಳ ಮತ್ತು ಸುರಕ್ಷಿತ ಸಾಮಾಜಿಕ ಪರಿಸರಗಳ ಬಗ್ಗೆ ಇರುವ ಅನಿಶ್ಚಿತತೆಗಳನ್ನೂ ಅವರು ಉಲ್ಲೇಖಿಸಿದರು. ಹಲವರು ತಮ್ಮ ಗಾಯಗಳೊಂದಿಗೆ ಹಾಗೂ ಭರವಸೆಯ ಹುಡುಕಾಟದಲ್ಲಿ ಧರ್ಮ ಕೇಂದ್ರಗಳಿಗೆ ಬರುತ್ತಾರೆ ಎಂದು ಹೇಳಿ, ಯೇಸುವಿನ ಸಮೀಪತೆಯನ್ನು ತೋರಿಸಿ ಅವಶ್ಯಕತೆಯಲ್ಲಿರುವವರಿಗೆ ಸಹಾಯ ಮಾಡಲು ಧರ್ಮ ಕೇಂದ್ರದ ಸಮುದಾಯವನ್ನು ಪ್ರೇರೇಪಿಸಿದರು.

ಕೊನೆಯಲ್ಲಿ ಕಾರಿತಾಸ್ ದಾನ ಸಂಸ್ಥೆಯ ಸೇವಕರನ್ನು ಭೇಟಿ ಮಾಡಿದ ಜಗದ್ಗುರುಗಳಿಗೆ ಅವರ ಸೇವೆಗೆ ಧನ್ಯವಾದ ಹೇಳಿದರು. ವಯಸ್ಸು, ರೋಗ, ವಲಸೆ ಅಥವಾ ದಾರಿದ್ರ್ಯದ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ಅವರು ನೀಡುತ್ತಿರುವ ಸಹಾಯವನ್ನು ಅವರು ಪ್ರಶಂಸಿಸಿದರು. ಪ್ರತಿಯೊಬ್ಬರೂ ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟವರು ಹಾಗೂ ದೇವರ ಮಕ್ಕಳು ಎಂಬ ಗೌರವವನ್ನು ಹೊಂದಿದ್ದಾರೆ ಎಂದು ಜಗದ್ಗುರುಗಳು ನೆನಪಿಸಿದರು. ತಪಸ್ಸು ಕಾಲದಲ್ಲಿ ವಿಶ್ವಾಸಿಗಳು ದೇವರ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ನವೀಕರಿಸಿ ತಮ್ಮ ದೀಕ್ಷಾಸ್ನಾನದ ಕೃಪೆಯನ್ನು ಪುನಃ ಕಂಡುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

09 ಮಾರ್ಚ್ 2026, 18:53