ಹುಡುಕಿ

Il Papa, la pace in Ucraina � urgente, non pu� essere rinviata

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ಈ ತಪಸ್ಸು ಕಾಲದಲ್ಲಿ ನಿಮ್ಮ ಜೀವನವನ್ನು ಅನನ್ಯ ಕಲಾಕೃತಿಯಾಗಿ ರೂಪಿಸಿರಿ

ತಪಸ್ಸು ಕಾಲದ ಮೊದಲ ಭಾನುವಾರದಂದು ನೀಡಿದ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು, ಈ ಪವಿತ್ರ ತಪಸ್ಸು ಕಾಲವು ಭಕ್ತರಿಗೆ ತಮ್ಮನ್ನು ಪ್ರಭುವು ಶುದ್ಧೀಕರಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು. ಈ ಕಾಲವು ದೇವರೊಂದಿಗೆ ಇನ್ನಷ್ಟು ಸಮನ್ವಯದಿಂದ ಸಹಕರಿಸಲು ಮತ್ತು ಆ ಮೂಲಕ ತಮ್ಮ ಜೀವನವನ್ನು ಅನನ್ಯವಾದ ಕಲಾಕೃತಿಯಾಗಿ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ತಪಸ್ಸು ಕಾಲದ ಮೊದಲ ಭಾನುವಾರದಂದು ವ್ಯಾಟಿಕನ್‌ನಲ್ಲಿ ನಡೆದ ಮಧ್ಯಾಹ್ನದ ತ್ರಿಕಾಲ ಪ್ರಾರ್ಥನಾ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಭಕ್ತರಿಗೆ, ಪ್ರಭುವು ನಿಮ್ಮನ್ನು ಶುದ್ಧೀಕರಿಸಿ, ಪವಿತ್ರಗೊಳಿಸಿ, ಅನನ್ಯವಾದ ಕಲಾಕೃತಿಯನ್ನಾಗಿ ರೂಪಿಸಲಿ ಎಂದು ಕರೆದರು.

ತಮ್ಮ ಭಾಷಣದಲ್ಲಿ ಅವರು ಸುವಾರ್ತೆಯಲ್ಲಿ ಸಂತ ಮತ್ತಾಯನ ಪ್ರಕಾರದ ಭಾಗವನ್ನು ನೆನಪಿಸಿದರು (ಮತ್ತಾಯ 4:1–11). ಯೇಸು ಅರಣ್ಯಕ್ಕೆ ತೆರಳಿ ದೆವ್ವದಿಂದ ಪರೀಕ್ಷಿಸಲ್ಪಟ್ಟ ಘಟನೆಯನ್ನು ಅವರು ಉಲ್ಲೇಖಿಸಿದರು. ನಲ್ವತ್ತು ದಿನಗಳ ಉಪವಾಸದ ನಂತರ, ದೇಹದ ಹಸಿವಿನ ಮೂಲಕವೂ ಹಾಗೂ ದೆವ್ವದ ಪರೀಕ್ಷೆಗಳ ಮೂಲಕವೂ ಕ್ರಿಸ್ತನು ತನ್ನ ಮಾನವೀಯತೆಯ ಭಾರವನ್ನು ಅನುಭವಿಸಿದನು. ನಾವು ನಮ್ಮ ಜೀವನಯಾತ್ರೆಯಲ್ಲಿ ಎದುರಿಸುವ ಅದೇ ಹೋರಾಟವನ್ನು ಆತನು ಅನುಭವಿಸಿದನು, ಎಂದು ಜಗದ್ಗುರುಗಳು ಹೇಳಿದರು. ಆದರೆ ಕೆಟ್ಟವನನ್ನು ತಿರಸ್ಕರಿಸುವ ಮೂಲಕ, ನಾವೂ ಸೈತಾನನ ಮೋಸ ಮತ್ತು ಬಲೆಯನ್ನೂ ಜಯಿಸಬಹುದು ಎಂಬುದನ್ನು ಯೇಸು ತೋರಿಸಿದನು ಎಂದು ಅವರು ತಿಳಿಸಿದರು.

ಶುದ್ಧೀಕರಿಸಿ ಅರಳಿಸುವ ತಪಸ್ಸು ಕಾಲದ ಪ್ರಕಾಶಮಾನ ಮಾರ್ಗ

ಈ ಘಟನೆಯನ್ನು ಮನನಮಾಡುತ್ತಾ, ತಪಸ್ಸು ಕಾಲವನ್ನು ಪ್ರಕಾಶಮಾನವಾದ ಮಾರ್ಗವಾಗಿ ಕಾಣಬೇಕೆಂದು ಜಗದ್ಗುರುಗಳು ಹೇಳಿದರು. ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮದ ಮೂಲಕ ನಾವು ನಮ್ಮ ಜೀವನವನ್ನು ಅನನ್ಯ ಕಲಾಕೃತಿಯನ್ನಾಗಿ ರೂಪಿಸುವಲ್ಲಿ ಪ್ರಭುವಿನೊಂದಿಗೆ ಹೊಸ ಸಮನ್ವಯವನ್ನು ಸಾಧಿಸಬಹುದು ಎಂದರು. ಇದಕ್ಕಾಗಿ ಪಾಪದ ಕಲೆಗಳನ್ನು ಶುದ್ಧೀಕರಿಸಿ ಗಾಯಗಳನ್ನು ಗುಣಪಡಿಸಲು ಪ್ರಭುವಿಗೆ ಅವಕಾಶ ನೀಡಬೇಕು ಆಗ ನಮ್ಮ ಜೀವನವು ಪ್ರೀತಿಯ ಪೂರ್ಣತೆಗೆ ಅರಳಿ ಬೆಳೆಯುತ್ತದೆ ಅದು ನಿಜವಾದ ಸಂತೋಷದ ಏಕೈಕ ಮೂಲವಾಗಿದೆ.

ಬೇರೆ ಯಾವುದೂ ತೃಪ್ತಿಕರವಾಗುವುದಿಲ್ಲ

ಈ ಮಾರ್ಗವು ಕಠಿಣವಾದದ್ದು ಎಂದು ಜಗದ್ಗುರುಗಳು ಒಪ್ಪಿಕೊಂಡರು. ಸುಲಭವಾದ ತೃಪ್ತಿಯ ಮಾರ್ಗಗಳಿಗೆ ಆಕರ್ಷಿತರಾಗುವ ಅಥವಾ ನಿರಾಶರಾಗುವ ಅಪಾಯ ಸದಾ ಇರುತ್ತದೆ ಎಂದರು. ಯೇಸುವೇ ಎದುರಿಸಿದ ಈ ಪರೀಕ್ಷೆಗಳು, ನಾವು ಸೃಷ್ಟಿಸಲ್ಪಟ್ಟಿರುವ ನಿಜವಾದ ಆನಂದಕ್ಕೆ ಕೇವಲ ದುರ್ಬಲ ಬದಲಾವಣೆಗಳಷ್ಟೇ ಎಂದು ಅವರು ವಿವರಿಸಿದರು. ಅಂತಿಮವಾಗಿ ಅವು ಮಾನವನನ್ನು ಅತೃಪ್ತ, ಅಶಾಂತ ಮತ್ತು ಖಾಲಿ ಸ್ಥಿತಿಯಲ್ಲೇ ಬಿಡುತ್ತವೆ ಎಂದರು.

ಪಶ್ಚಾತ್ತಾಪವು ಶುದ್ಧೀಕರಿಸುತ್ತದೆ

ಜಗದ್ಗುರು VI ನೇ ಪಾಲ್ ರವರು ಬೋಧಿಸಿದಂತೆ, ಪಶ್ಚಾತ್ತಾಪವು ನಮ್ಮ ಮಾನವೀಯತೆಯನ್ನು ದೀನಗೊಳಿಸುವುದಿಲ್ಲ ಬದಲಿಗೆ ಅದನ್ನು ಶ್ರೀಮಂತಗೊಳಿಸಿ, ಶುದ್ಧೀಕರಿಸಿ, ಬಲಪಡಿಸುತ್ತದೆ ಎಂದು ಜಗದ್ಗುರು ಲಿಯೋರವರು ಉಲ್ಲೇಖಿಸಿದರು. ಇದು ದೇವರ ಪ್ರೀತಿ ಮತ್ತು ಸಮರ್ಪಣೆಯ ದಿಕ್ಕಿನಲ್ಲಿ ನಮ್ಮನ್ನು ಮುನ್ನಡೆಸುತ್ತದೆ. ಪಶ್ಚಾತ್ತಾಪವು ನಮ್ಮ ಮಿತಿಗಳನ್ನು ಅರಿಯುವಂತೆ ಮಾಡುತ್ತದೆ ಜೊತೆಗೆ ಅವನ್ನು ಜಯಿಸುವ ಶಕ್ತಿಯನ್ನೂ ನೀಡುತ್ತದೆ, ದೇವರ ಸಹಾಯದಿಂದ ಆತನೊಡನೆ ಹಾಗೂ ಪರಸ್ಪರರೊಡನೆ ಆಳವಾದ ಐಕ್ಯತೆಯಲ್ಲಿ ಬದುಕಲು ನೆರವಾಗುತ್ತದೆ.

ತಂತ್ರಜ್ಞಾನವನ್ನು ನಿಶ್ಚೇಷ್ಟಗೊಳಿಸಿ, ದೇವರ ವಾಕ್ಯವನ್ನು ಮನನ ಮಾಡಿ

ಈ ಕೃಪೆಯ ಕಾಲದಲ್ಲಿ, ಜಗದ್ಗುರುಗಳು ಹೇಳಿದರು, ಪ್ರಾರ್ಥನೆ ಮತ್ತು ಕರುಣೆಯ ಕಾರ್ಯಗಳೊಂದಿಗೆ ಉದಾರವಾಗಿ ಪಶ್ಚಾತ್ತಾಪವನ್ನು ಅನುಸರಿಸೋಣ. ಕೆಲಕಾಲ ದೂರದರ್ಶನ, ರೇಡಿಯೋ ಮತ್ತು ಮೊಬೈಲ್ ಫೋನ್‌ಗಳನ್ನು ನಿಷ್ಕ್ರಿಯಗೊಳಿಸಿ ಮೌನಕ್ಕೆ ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದರು. ದೇವರ ವಾಕ್ಯವನ್ನು ಮನನ ಮಾಡುವುದು, ಪವಿತ್ರ ಸಂಸ್ಕಾರಗಳಿಗೆ ಸಮೀಪಿಸುವುದು ಮತ್ತು ನಮ್ಮ ಹೃದಯದಲ್ಲಿ ಮಾತನಾಡುವ ಪವಿತ್ರಾತ್ಮನ ಧ್ವನಿಯನ್ನು ಆಲಿಸುವುದು ಅಗತ್ಯವೆಂದರು. ಕುಟುಂಬ, ಉದ್ಯೋಗ ಮತ್ತು ಸಮುದಾಯಗಳಲ್ಲಿ ಪರಸ್ಪರ ಕೇಳಿಕೊಳ್ಳಬೇಕು ವಿಶೇಷವಾಗಿ ಏಕಾಂಗಿ ವೃದ್ಧರು, ಬಡವರು ಮತ್ತು ರೋಗಿಗಳ ಕಡೆ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು.

ತಪಸ್ಸು ಕಾಲದ ಯಾತ್ರೆಯನ್ನು ಮಾತೆ ಮರಿಯಮ್ಮನವರಿಗೆ ಒಪ್ಪಿಸೋಣ

ಅವಶ್ಯಕವಲ್ಲದ ವಸ್ತುಗಳನ್ನು ತ್ಯಜಿಸುವ ಮೂಲಕ ಉಳಿಸುವುದನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದರು. ಸಂತ ಅಗಸ್ಟೀನ್ ರವರು ಬೋಧಿಸಿದಂತೆ, ಈ ರೀತಿಯ ಪ್ರಾರ್ಥನೆ ಸ್ವರ್ಗವನ್ನು ತಲುಪಿ ನಮಗೆ ಶಾಂತಿಯನ್ನು ನೀಡುತ್ತದೆ ಎಂದು ಜಗದ್ಗುರುಗಳು ಉಲ್ಲೇಖಿಸಿದರು. ಕೊನೆಯಲ್ಲಿ, ಪರೀಕ್ಷೆಗಳ ಸಮಯದಲ್ಲಿ ಸದಾ ಸಹಾಯ ಮಾಡುವ  ಕನ್ಯಾ ಮರಿಯಮ್ಮನಿಗೆ ನಮ್ಮ ತಪಸ್ಸು ಕಾಲದ ಯಾತ್ರೆಯನ್ನು ಒಪ್ಪಿಸಿ, ಆಕೆಯ ಸಹಾಯವನ್ನು ಬೇಡಿಕೊಳ್ಳೋಣ ಎಂದು ಅವರು ಪ್ರಾರ್ಥಿಸಿದರು.

22 ಫೆಬ್ರವರಿ 2026, 15:01