ಶಾಂತಿ ಇಲ್ಲದ ಮಕ್ಕಳಿಗೆ ಸಿಸ್ಟಿನ್ ಚಾಪೆಲ್ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮವನ್ನು ಪೋಪ್ ಅರ್ಪಿಸಿದರು
ವ್ಯಾಟಿಕನ್ ವರದಿ
“ಗಾನವಿಲ್ಲದೆ ಕ್ರಿಸ್ಮಸ್ ಇಲ್ಲ.”
ಈ ಮಾತುಗಳೊಂದಿಗೆ ಜಗದ್ಗುರು XIVನೇ ಲಿಯೋ ರವರು ಜನವರಿ 3ರ ಸಂಜೆ ಮಿಕೇಲಾಂಜೆಲೊರವರ ಭಿತ್ತಿಚಿತ್ರಗಳ ನೆರಳಿನಲ್ಲಿ ನಡೆದ ಪಾಂಟಿಫಿಕಲ್ ಸಿಸ್ಟಿನ್ ಚಾಪೆಲ್ ಗಾಯನಮಂಡಳಿಯ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.
ಸಂಗೀತದ ಭಾಷೆ
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ವಂದಿಸಿದ ಜಗದ್ಗುರು, ಕ್ರಿಸ್ಮಸ್ನ ರಹಸ್ಯಕ್ಕೆ ಸಂಗೀತ ಮತ್ತು ಗಾಯನದ ಭಾಷೆಯ ಮೂಲಕ ಮನಸ್ಸಿಗೆ ಮಾತ್ರವಲ್ಲ, ಹೃದಯಕ್ಕೂ ಮಾತಾಡಬಲ್ಲ ಭಾಷೆಯ ಮೂಲಕ ಶ್ರೋತರನ್ನು ಕರೆದುಕೊಂಡು ಹೋಗಿದಕ್ಕಾಗಿ ಗಾಯನಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ಸಂಗೀತವು ಕ್ರಿಸ್ಮಸ್ ಹಬ್ಬಕ್ಕೆ ಸೇರಿಸಲಾದ ಅಲಂಕಾರವಲ್ಲ, ಅದು ಅದರ ಅಸ್ತಿತ್ವದ ಅವಿಭಾಜ್ಯ ಭಾಗವೇ ಎಂದು ಅವರು ವಿವರಿಸಿದರು.
ಲೋಕದ ಎಲ್ಲೆಡೆ, ಪ್ರತಿಯೊಂದು ಭಾಷೆಯಲ್ಲೂ ಮತ್ತು ಪ್ರತಿಯೊಂದು ರಾಷ್ಟ್ರದಲ್ಲೂ, ಬೆತ್ಲೆಹೇಮಿನ ಘಟನೆ ಸಂಗೀತ ಮತ್ತು ಹಾಡಿನೊಂದಿಗೆ ಆಚರಿಸಲ್ಪಡುತ್ತದೆ, ಎಂದು ಅವರು ಹೇಳಿದರು. ಇದಕ್ಕಿಂತ ಬೇರೆ ಆಗಲಾರದು, ಏಕೆಂದರೆ ಕನ್ಯಾ ಮರಿಯಮ್ಮನವರು ರಕ್ಷಕರಿಗೆ ಜನ್ಮ ನೀಡಿದಾಗ, ಆಕಾಶದಲ್ಲಿದ್ದ ದೇವದೂತರು ದೇವರಿಗೆ ಮಹಿಮೆ, ಭೂಮಿಯಲ್ಲಿ ಶಾಂತಿ ಎಂದು ಹಾಡಿದರು ಎಂದು ಸುವಾರ್ತೆಯೇ ನಮಗೆ ತಿಳಿಸುತ್ತದೆ ಎಂದರು.
ಮೊದಲ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮವನ್ನು ಸ್ಮರಿಸುತ್ತಾ, ಜಗದ್ಗುರು ಲಿಯೋರವರು ಆ ರಾತ್ರಿ ಬೆತ್ಲೆಹೇಮಿನ ಕುರಿಗಾಹಿಗಳನ್ನು ಪ್ರೇಕ್ಷಕರು ಮತ್ತು ಸಾಕ್ಷಿಗಳು ಎಂದು ನೆನಪಿಸಿಕೊಂಡರು. ಅವರು ದೇವರನ್ನು ಮಹಿಮೆಪಡಿಸಿ ಸ್ತುತಿಸುತ್ತಾ ಮರಳಿದರು. ಅವರು ಹಾಡುತ್ತಾ, ಬಹುಶಃ ಸರಳವಾದ ವಾದ್ಯಗಳನ್ನು ಊದುತ್ತಾ ಹೀಗೆ ಮಾಡಿರಬಹುದು ಎಂದು ಕಲ್ಪಿಸಿಕೊಳ್ಳಲು ನನಗೆ ಇಷ್ಟ, ಎಂದು ಜಗದ್ಗುರುಗಳು ಹೇಳಿದರು.
ಆದರೆ, ಜಗದ್ಗುರುಗಳು ಮುಂದುವರಿಸುತ್ತಾ ದೈವೀಯ ಸಂಗೀತ ಮತ್ತೊಂದು ಸ್ಥಳದಲ್ಲಿಯೂ ಪ್ರತಿಧ್ವನಿಸಿತು—ಅದು ಇನ್ನೂ ಆಂತರಿಕವಾದ ಸ್ಥಳ. ಮೌನಭರಿತ, ಧ್ಯಾನಮಗ್ನ, ಅತ್ಯಂತ ಸಂವೇದನಾಶೀಲ ಸ್ಥಳ ಅದು ಮರಿಯಮ್ಮನವರ ಹೃದಯ. ಆ ಹೃದಯದಿಂದಲೇ, ಜೀವನದ ಸಂಗೀತದಲ್ಲಿ ದೇವರು ನಮಗೆ ನೀಡಿರುವ ಪಾತ್ರವನ್ನು ನಿಷ್ಠೆಯಿಂದ ಅನುಸರಿಸಲು ಮೌನದಲ್ಲಿ ಕೇಳುವುದನ್ನು ಧರ್ಮ ಸಭೆಯು ಕಲಿಯುತ್ತದೆ ಎಂದು ಅವರು ಹೇಳಿದರು.
ಈ ಸಂಗೀತದ ರೂಪಕವು ಜಗದ್ಗುರು ಲಿಯೋ ರವರ ಪ್ರಾರ್ಥನೆಯಲ್ಲಿ ಸಂಗೀತದ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಶನಿವಾರ ಸಂಜೆ ಕೂಡ ಅವರು ಹಾಜರಿದ್ದ ಎಲ್ಲರನ್ನು ಲ್ಯಾಟಿನ್ ಭಾಷೆಯಲ್ಲಿ ಪ್ರಭುವಿನ ಪ್ರಾರ್ಥನೆಯನ್ನು ಹಾಡುವಂತೆ ಆಹ್ವಾನಿಸಿದರು—ಅವರು ಅದನ್ನು ಹಾಡಿದರು.
ಜಗದ್ಗುರುಗಳು ನಿರ್ದೇಶಕ ಮೈಸ್ಟ್ರೋ ಮೊಂಡ್ಸಿನಿಯರ್ ಮಾರ್ಕೋಸ್ ಪಾವಾನ್, ಪ್ಯೂರಿ ಕಾಂಟೋರಸ್ (ಬಿಳಿ ಧ್ವನಿಗಳು) ಗಾಯನಮಂಡಳಿಯ ಮೈಸ್ಟ್ರೋ ಮಿಶೆಲೆ ಮರಿನೆಲ್ಲಿ, ಹಾಗೂ ಸುಮಾರು 1,500 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂಪೂರ್ಣ ಗಾಯನಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಗಾಯನಮಂಡಳಿ ರೋಮನ್ ರ ಧರ್ಮಾಚರಣೆಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ.
ಶಾಂತಿಯಿಲ್ಲದೆ ಕ್ರಿಸ್ಮಸ್ ಅನುಭವಿಸಿದ ಮಕ್ಕಳಿಗಾಗಿ
ಈ ಸಂಜೆ ಜಗದ್ಗುರು XIVನೇ ಲಿಯೋರವರ ಮಾತುಗಳು ಸಂಗೀತವನ್ನು ಲೋಕದ ಅತ್ಯಂತ ತುರ್ತು ಅಳಲುಗಳೊಂದಿಗೆ ಜೋಡಿಸಿತು. ಈ ಸಂಗೀತ ಕಾರ್ಯಕ್ರಮವು ಲೋಕದ ನೋವನ್ನು ಆಲಿಸುವ ಧರ್ಮ ಸಭೆಯನ್ನು ಪ್ರತಿಬಿಂಬಿಸಿತು, ಜೊತೆಗೆ ಪ್ರಾರ್ಥನೆಯ ರೂಪದಲ್ಲಿ ಸೌಂದರ್ಯಕ್ಕೂ ಜಾಗ ನೀಡಿತು.
ತಮ್ಮ ಭಾಷಣದ ಅಂತ್ಯದಲ್ಲಿ ಜಗದ್ಗುರುಗಳು ಹೇಳಿದರು:
ಲೋಕದ ಅನೇಕ ಭಾಗಗಳಲ್ಲಿ ಬೆಳಕು ಇಲ್ಲದೆ, ಸಂಗೀತ ಇಲ್ಲದೆ, ಮಾನವ ಗೌರವಕ್ಕೆ ಅಗತ್ಯವಿರುವುದೂ ಇಲ್ಲದೆ, ಮತ್ತು ಶಾಂತಿಯಿಲ್ಲದೆ ಈ ಕ್ರಿಸ್ಮಸ್ ಅನ್ನು ಅನುಭವಿಸಿದ ಮಕ್ಕಳಿಗೆ ಈ ಸಂಗೀತ ಕಾರ್ಯಕ್ರಮವನ್ನು ಅರ್ಪಿಸಲು ನಾನು ಇಚ್ಛಿಸುತ್ತೇನೆ.
ಈ ಸಂಜೆ ನಾವು ಸ್ತುತಿಯ ಗಾನಗಳನ್ನು ಅರ್ಪಿಸಿರುವ ಪ್ರಭುವಿನ, ಈ ಪುಟ್ಟ ಮಕ್ಕಳ ಮೌನಧ ಅಳಲನ್ನು ಆಲಿಸಲಿ, ಎಂದು ಅವರು ಪ್ರಾರ್ಥಿಸಿದರು. ಮತ್ತು ಕನ್ಯಾ ಮಾತೆಯ ಮಧ್ಯಸ್ಥಿಕೆಯ ಮೂಲಕ ಲೋಕಕ್ಕೆ ನ್ಯಾಯ ಮತ್ತು ಶಾಂತಿಯನ್ನು ದಯಪಾಲಿಸಲಿ ಎಂದರು.
