ಪ್ರಭುವಿನ ದಿನದ ಧ್ಯಾನ: ‘ಸಂದಣಿಯಿಂದ ಸರಿದು ಸಂಧಿ’
ಲೇಖಕರು:ವಂ.ಗುರು ಮರಿಯನ್ ನ್ಗುಯೆನ್, OSB
ಒಬ್ಬ ವ್ಯಕ್ತಿಯ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕೂ, ಆ ವ್ಯಕ್ತಿ ನಿಜವಾಗಿ ಯಾರೆಂಬುದನ್ನು ಅರಿತುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಅಭಿಪ್ರಾಯಗಳು, ತೀರ್ಪುಗಳು ಮತ್ತು ವ್ಯಾಖ್ಯಾನಗಳಿಂದ ತುಂಬಿರುವ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೂ, ವಿರೋಧಾಭಾಸವೆಂದರೆ, ಇಷ್ಟೊಂದು ಮಾತುಗಳೇ ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ನಿಜವಾಗಿ ಗುರುತಿಸುವುದನ್ನು ಇನ್ನಷ್ಟು ಕಷ್ಟಕರವಾಗಿಸುತ್ತವೆ.
ಬಹುಶಃ ಇದೇ ಕಾರಣದಿಂದ ಫಿಲಿಪ್ಪನ ಸೆಜರೇಯದಲ್ಲಿ ಯೇಸು ತಮ್ಮ ಶಿಷ್ಯರಿಗೆ ಕೇಳಿದ ಪ್ರಶ್ನೆ ಆಳವಾಗಿದೆ: “ಜನರು ನರಪುತ್ರನನ್ನು ಯಾರೆಂದು ಹೇಳುತ್ತಾರೆ?” ಶಿಷ್ಯರು ಜನಸಮೂಹದ ನಡುವೆ ಹರಿದಾಡುತ್ತಿದ್ದ ಉತ್ತರಗಳನ್ನು ನೀಡುತ್ತಾರೆ: ಸ್ನಾನಿಕ ಯೊವಾನ್ನ, ಎಲೀಯ, ಯೆರೆಮೀಯ ಅಥವಾ ಪ್ರವಾದಿಗಳಲ್ಲಿ ಒಬ್ಬರು. ಯೇಸು ಮಹತ್ವದ ವ್ಯಕ್ತಿ ಎಂಬುದನ್ನು ಜನಸಮೂಹ ಗುರುತಿಸುತ್ತದೆ. ಆದರೆ ಅವರು ಈಗಾಗಲೇ ತಿಳಿದಿರುವ ವ್ಯಕ್ತಿಗಳ ಸಾಲಿನಲ್ಲಿ ಯೇಸುವನ್ನು ಇರಿಸಲು ಪ್ರಯತ್ನಿಸುತ್ತಾರೆ.
ಆಗ ಯೇಸು ಆ ಪ್ರಶ್ನೆಯನ್ನು ವೈಯಕ್ತಿಕವಾಗಿಸುತ್ತಾರೆ: “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಸಿಮೋನ ಪೇತ್ರನು, “ನೀವು ಕ್ರಿಸ್ತರು, ಜೀವಂತ ದೇವರ ಪುತ್ರರು” ಎಂದು ಉತ್ತರಿಸುತ್ತಾನೆ. ಈ ಅರಿವು ಸಾರ್ವಜನಿಕ ಅಭಿಪ್ರಾಯದಿಂದಾಗಲಿ ಅಥವಾ ಮಾನವ ತರ್ಕದಿಂದಾಗಲಿ ಬಂದದ್ದಲ್ಲ ಎಂದು ಯೇಸು ಅವನಿಗೆ ತಿಳಿಸುತ್ತಾರೆ: “ಮಾಂಸವೂ ರಕ್ತವೂ ಇದನ್ನು ನಿನಗೆ ಪ್ರಕಟಿಸಲಿಲ್ಲ; ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನು ನಿನಗೆ ಪ್ರಕಟಿಸಿದ್ದಾರೆ” (ಮತ್ತಾಯ 16:17).
ಸಂತ ಜಾನ್ ಕ್ರಿಸೊಸ್ಟಮ್ ಗಮನಿಸುವಂತೆ, ಜನಸಮೂಹ ನೀಡುವ ಉತ್ತರಗಳ ಅಪೂರ್ಣತೆಯನ್ನು ತೋರಿಸುವುದಕ್ಕಾಗಿಯೇ ಯೇಸು ಮೊದಲು ಜನರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳುತ್ತಾರೆ. ಜನಸಮೂಹವು ಯೇಸುವಿನ ಕುರಿತು ಮಾತನಾಡುತ್ತದೆ; ಆದರೆ ಪೇತ್ರನು ಯೇಸುವನ್ನು ನಿಜವಾಗಿ ಗುರುತಿಸುತ್ತಾನೆ. ಪೇತ್ರನ ನಂಬಿಕೆಯ ಘೋಷಣೆ ಕೇವಲ ಇತರರಿಗಿಂತ ಉತ್ತಮವಾದ ಅಭಿಪ್ರಾಯವಲ್ಲ; ಅದು ದೇವರಿಂದ ದೊರೆತ ಪ್ರಕಟಣೆಯ ವರವಾಗಿದೆ. ಕ್ರಿಸೊಸ್ಟಮ್ ಬರೆಯುವಂತೆ, ಕ್ರಿಸ್ತರು ಶಿಷ್ಯರನ್ನು ಇತರರ ಅಭಿಪ್ರಾಯಗಳಿಂದ ಅವರ ಸ್ವಂತ ನಂಬಿಕೆಯ ಘೋಷಣೆಯತ್ತ ಕರೆದೊಯ್ಯುತ್ತಾರೆ (ಹೋಮಿಲಿ 54).
ಇದೇ ಕ್ರೈಸ್ತ ಶಿಷ್ಯತ್ವದ ಹೃದಯವಾಗಿದೆ. ಯೇಸು ಯಾರು, ಧರ್ಮಸಭೆ ಹೇಗಿರಬೇಕು ಮತ್ತು ನಾವು ಯಾರು ಎಂಬುದನ್ನು ನಮಗೆ ಹೇಳಲು ಪ್ರಯತ್ನಿಸುವ ಅನೇಕ ಧ್ವನಿಗಳ ನಡುವೆ ನಾವು ಬದುಕುತ್ತಿದ್ದೇವೆ. ಆದರೆ ನಂಬಿಕೆಯು ಅಂತಿಮವಾಗಿ ಜನಸಮೂಹದ ಧ್ವನಿಯ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ಅದು ನಮ್ಮದೇ ನಂಬಿಕೆಯ ಘೋಷಣೆಯಾಗಬೇಕು: “ನೀವು ಕ್ರಿಸ್ತರು, ಜೀವಂತ ದೇವರ ಪುತ್ರರು.”
ಆದರೆ ಪರಲೋಕದ ತಂದೆಯ ಧ್ವನಿಯನ್ನು ಕೇಳುವುದು ಸುಲಭವಲ್ಲ. ಮಠೀಯ ಪರಂಪರೆಯು ಬಹಳ ಹಿಂದಿನಿಂದಲೇ ‘ಲೊಜಿಸ್ಮೊಯಿ’ — ಅಂದರೆ ಹೃದಯವನ್ನು ಆಕ್ರಮಿಸಿಕೊಂಡು ನಮ್ಮನ್ನು ದೇವರಿಂದ ದೂರ ಸೆಳೆಯಬಹುದಾದ ಆಲೋಚನೆಗಳು ಮತ್ತು ಒಳಪ್ರೇರಣೆಗಳನ್ನು — ಗುರುತಿಸಿದೆ.
ಫಿಲಿಪ್ಪನ ಸೆಜರೇಯದ ಜನಸಮೂಹವು ಹೊರಗಿನ ಅಭಿಪ್ರಾಯಗಳ ಗದ್ದಲವನ್ನು ಪ್ರತಿನಿಧಿಸಿದರೆ, ‘ಲೊಜಿಸ್ಮೊಯಿ’ ನಮ್ಮೊಳಗಿರುವ ಜನಸಮೂಹದಂತಿದೆ. ಪರಸ್ಪರ ಸ್ಪರ್ಧಿಸುವ ಆಲೋಚನೆಗಳು, ಬಯಕೆಗಳು ಮತ್ತು ನಮ್ಮ ಕುರಿತಾದ ನಮ್ಮದೇ ಕಲ್ಪನೆಗಳು ಹೃದಯದಲ್ಲಿ ಎದ್ದುಬಂದು, ದೇವರ ಧ್ವನಿಯನ್ನು ಕೇಳುವ ಮೊದಲೇ “ನೀನು ಯಾರು?” ಎಂಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತವೆ.
ಎವಗ್ರಿಯಸ್ ಪೊಂಟಿಕಸ್ ಮತ್ತು ಜಾನ್ ಕ್ಯಾಸಿಯನ್ ಅವರು ಆಧ್ಯಾತ್ಮಿಕ ಜೀವನಕ್ಕೆ ಜಾಗರೂಕತೆ ಅಗತ್ಯವೆಂದು ಅರಿತಿದ್ದರು. ಏಕೆಂದರೆ ನಮ್ಮ ಮನಸ್ಸು ಮತ್ತು ಬಯಕೆಗಳಲ್ಲಿ ನಾವು ಯಾವುದಕ್ಕೆ ಪದೇಪದೇ ಸ್ಥಳ ನೀಡುತ್ತೇವೆಯೋ, ಕ್ರಮೇಣ ಅದೇ ನಮ್ಮನ್ನು ಆಳಲು ಆರಂಭಿಸಬಹುದು (cf. Praktikos, 6–14; Conferences, 5).
ನಮ್ಮ ಕಾಲದಲ್ಲಿ ಈ ಆಂತರಿಕ ಜನಸಮೂಹದ ಅತ್ಯಂತ ಪರಿಚಿತ ರೂಪಗಳೆಂದರೆ ಗಮನಚಂಚಲತೆ ಮತ್ತು ವ್ಯರ್ಥ ಕೀರ್ತಿಯ ಬಯಕೆ. ನಮ್ಮ ಡಿಜಿಟಲ್ ಸಂಸ್ಕೃತಿ ನಿರಂತರವಾಗಿ ನಮ್ಮ ಗಮನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಸಾಮಾಜಿಕ ಮಾಧ್ಯಮಗಳು ಇತರರ ಜೀವನ ಮತ್ತು ಅಭಿಪ್ರಾಯಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಹೀಗೆ ಹೊರಗಿನ ಜನಸಮೂಹವೇ ನಮ್ಮೊಳಗೆ ಸೇರಿಕೊಂಡು, ಹೋಲಿಕೆ ಮತ್ತು ಸ್ವಯಂ-ತೀರ್ಪಿನ ನಿರಂತರವಾದ ಮೆಲುಧ್ವನಿಯಾಗಿ ಮಾರ್ಪಡುತ್ತದೆ. ಇದರ ಪರಿಣಾಮವಾಗಿ ಒಂದು ವಿಚಿತ್ರವಾದ ದಣಿವು ಉಂಟಾಗುತ್ತದೆ: ನಮ್ಮ ಹೊರಗೂ ಒಳಗೂ ನಿರಂತರ ಗದ್ದಲ ಮತ್ತು ಬದಲಾಗುತ್ತಿರುವ ಅಭಿಪ್ರಾಯಗಳಿಂದ ನಾವು ಸುತ್ತುವರಿದಿದ್ದರೂ, ಮೌನ, ಸರಳತೆ ಮತ್ತು ಆಂತರಿಕ ನೆಮ್ಮದಿಗಾಗಿ ಇನ್ನಷ್ಟು ಹಂಬಲಿಸುತ್ತೇವೆ.
ಆದ್ದರಿಂದ ಮಠೀಯ ಜೀವನದ ಪ್ರತಿಕ್ರಿಯೆ ಕೇವಲ ಗದ್ದಲದಿಂದ ತಪ್ಪಿಸಿಕೊಳ್ಳುವುದಲ್ಲ; ಬದಲಾಗಿ ಪೇತ್ರನಂತೆಯೇ ಎಚ್ಚರಿಕೆಯಿಂದ ಆಲಿಸುವ ಹೃದಯವನ್ನು ಬೆಳೆಸಿಕೊಳ್ಳುವುದಾಗಿದೆ — ಸತ್ಯವನ್ನು ಆಲಿಸಲು, ಸ್ವೀಕರಿಸಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ಸಮರ್ಥವಾದ ಹೃದಯ. ನಮ್ರತೆ, ಮೌನ, ಸ್ಥಿರತೆ, ಪ್ರಾರ್ಥನೆ ಮತ್ತು ಗಮನವಿಟ್ಟು ಆಲಿಸುವಿಕೆಯ ಮೂಲಕ ಮಠೀಯ ಜೀವನವು ಈ ಆಂತರಿಕ ಅವಕಾಶವನ್ನು ಸೃಷ್ಟಿಸುತ್ತದೆ. ನಮ್ಮ ಎದುರಿಗಿರುವ ಮತ್ತೊಬ್ಬ ವ್ಯಕ್ತಿಯಲ್ಲಿ ದೇವರ ಸಾನ್ನಿಧ್ಯವನ್ನು ಗುರುತಿಸುವಷ್ಟು ನಮ್ಮೊಳಗೆ ಮೌನವನ್ನು ಬೆಳೆಸಿಕೊಳ್ಳಲು ಅದು ಕಲಿಸುತ್ತದೆ.
ಸಂತ ಬೆನೆಡಿಕ್ಟ್ ತಮ್ಮ ನಿಯಮಾವಳಿಯ 53ನೇ ಅಧ್ಯಾಯದಲ್ಲಿ ಇದನ್ನು ವಿಶೇಷವಾಗಿ ಸುಂದರವಾಗಿ ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬ ಅತಿಥಿಯನ್ನೂ ಸ್ವತಃ ಕ್ರಿಸ್ತರನ್ನೇ ಸ್ವೀಕರಿಸುವಂತೆ ಸ್ವಾಗತಿಸಬೇಕೆಂದು ಅವರು ಹೇಳುತ್ತಾರೆ: “ಬರುವ ಎಲ್ಲ ಅತಿಥಿಗಳನ್ನೂ ಕ್ರಿಸ್ತರಂತೆಯೇ ಸ್ವೀಕರಿಸಬೇಕು” (RB 53:1). ಪ್ರಾರ್ಥನೆ ಅಥವಾ ಧರ್ಮವಿಧಿಯಲ್ಲಿ ಮಾತ್ರವಲ್ಲ, ತನ್ನ ಮುಂದೆ ನಿಂತಿರುವ ವ್ಯಕ್ತಿಯಲ್ಲಿಯೂ ಕ್ರಿಸ್ತರನ್ನು ಗುರುತಿಸುವಷ್ಟು ಸನ್ಯಾಸಿಯು ಎಚ್ಚರಿಕೆಯಿಂದಿರಬೇಕು.
ಇದು ನಮ್ಮನ್ನು ಮತ್ತೆ ಪೇತ್ರನ ಬಳಿಗೆ ಕರೆದೊಯ್ಯುತ್ತದೆ. ಸರಿಯಾದ ಉತ್ತರ ನೀಡಿದ್ದಕ್ಕಾಗಿ ಯೇಸು ಅವನನ್ನು ಕೇವಲ ಅಭಿನಂದಿಸುವುದಿಲ್ಲ. ತಾವು ಯಾರೆಂಬುದನ್ನು ಪ್ರಕಟಿಸಿದ ತಕ್ಷಣವೇ, ಪೇತ್ರನು ಯಾರೆಂಬುದನ್ನೂ ಯೇಸು ಪ್ರಕಟಿಸುತ್ತಾರೆ: “ನೀನು ಪೇತ್ರನು; ಈ ಬಂಡೆಯ ಮೇಲೆ ನಾನು ನನ್ನ ಧರ್ಮಸಭೆಯನ್ನು ಕಟ್ಟುವೆನು” (ಮತ್ತಾಯ 16:18). ಕ್ರಿಸ್ತರ ಕುರಿತ ಪ್ರಕಟಣೆಯು ತಕ್ಷಣವೇ ಪೇತ್ರನ ಕರೆಯ ಕುರಿತ ಪ್ರಕಟಣೆಗೆ ದಾರಿ ಮಾಡಿಕೊಡುತ್ತದೆ. ಪೇತ್ರನು ಯೇಸು ಯಾರೆಂಬುದನ್ನು ತಿಳಿದುಕೊಳ್ಳುತ್ತಾನೆ; ಅದರ ಪರಿಣಾಮವಾಗಿ ತಾನು ಯಾರೆಂಬುದನ್ನೂ ಅರಿತುಕೊಳ್ಳುತ್ತಾನೆ.
ನಮಗೂ ಇದೇ ಅನ್ವಯಿಸುತ್ತದೆ. ನಮ್ಮ ಗುರುತು “ನಾನು ಯಾರಾಗಬೇಕೆಂದು ಬಯಸುತ್ತೇನೆ?” ಎಂಬ ಪ್ರಶ್ನೆಯಿಂದ ಆರಂಭವಾಗುವುದಿಲ್ಲ. ಅದು “ಕ್ರಿಸ್ತರು ಯಾರು?” ಎಂಬ ಪ್ರಶ್ನೆಯಿಂದ ಆರಂಭವಾಗುತ್ತದೆ. ನಾವು ಅವರನ್ನು ಜೀವಂತ ದೇವರ ಪುತ್ರರೆಂದು ಗುರುತಿಸಿದಾಗ, ಅವರಿಂದ ಕರೆಯಲ್ಪಟ್ಟವರು, ಅವರ ಧರ್ಮಸಭೆಯಲ್ಲಿ ಸ್ಥಾನ ಪಡೆದವರು ಮತ್ತು ನಿರ್ದಿಷ್ಟ ಕರೆಯನ್ನು ವಹಿಸಿಕೊಳ್ಳಲು ಆಹ್ವಾನಿಸಲ್ಪಟ್ಟವರು ಎಂಬ ನಮ್ಮ ನಿಜವಾದ ಗುರುತನ್ನು ಅರಿತುಕೊಳ್ಳಲು ಆರಂಭಿಸುತ್ತೇವೆ.
ಪೇತ್ರನು ತನ್ನ ಹೊರಗಿನ ಜನಸಮೂಹದ ಗದ್ದಲವನ್ನು ಮಾತ್ರ ಮೌನಗೊಳಿಸಬೇಕಾಗಿರಲಿಲ್ಲ; ತನ್ನೊಳಗಿನ ಜನಸಮೂಹವನ್ನೂ ಶಾಂತಗೊಳಿಸಬೇಕಾಗಿತ್ತು. ಆಗ ಮಾತ್ರ ಒಂದೇ ಒಂದು ಧ್ವನಿ — ಪರಲೋಕದ ತಂದೆಯ ಧ್ವನಿ — ಸ್ಪಷ್ಟವಾಗಿ ಕೇಳಿಸುತ್ತದೆ ಮತ್ತು ಅದಕ್ಕೆ ಉತ್ತರಿಸಲು ಸಾಧ್ಯವಾಗುತ್ತದೆ. ನಾವೂ ಹಾಗೆಯೇ ಮಾಡಬೇಕು.
ಹಾಗಾದರೆ, ಬಹುಶಃ ಯೇಸು ನಮಗೆ ಕೇಳುತ್ತಿರುವ ಪ್ರಶ್ನೆ ಕೇವಲ “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂಬುದಷ್ಟೇ ಅಲ್ಲ. ಅದರೊಳಗೆ ಇನ್ನೊಂದು ಆಳವಾದ ಪ್ರಶ್ನೆಯೂ ಅಡಗಿದೆ: “ನನ್ನನ್ನು ಸಂಧಿಸಿದ ನಂತರ ನೀನು ಯಾರು?” ಪೇತ್ರನು ಯೇಸು ಯಾರೆಂಬುದನ್ನು ಅರಿತುಕೊಂಡನು; ಆ ಪ್ರಕಟಣೆಯಲ್ಲಿಯೇ ತಾನು ಯಾರಾಗಲು ಕರೆಯಲ್ಪಟ್ಟಿದ್ದಾನೆ ಎಂಬುದನ್ನೂ ಕಂಡುಕೊಂಡನು. ನಾವೂ ಹಾಗೆಯೇ.
ವಂ.ಗುರು ಮರಿಯನ್ ನ್ಗುಯೆನ್, OSB — ಸಂತ ಮಾರ್ಟಿನ್ ಮಠದ ಮಠಾಧಿಪತಿ, ಲೇಸಿ, ವಾಷಿಂಗ್ಟನ್.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).