ಹುಡುಕಿ

ಉಕ್ರೇನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯ ಮಹಾಧರ್ಮಾಧ್ಯಕ್ಷರಾದ ಸ್ವಿಯಾಟೋಸ್ಲಾವ್ ಶೆವ್ಚುಕ್ ಉಕ್ರೇನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯ ಮಹಾಧರ್ಮಾಧ್ಯಕ್ಷರಾದ ಸ್ವಿಯಾಟೋಸ್ಲಾವ್ ಶೆವ್ಚುಕ್ 

ಮಹಾಧರ್ಮಾಧ್ಯಕ್ಷರಾದ ಶೆವ್ಚುಕ್: ಕ್ಷಮೆ ಮತ್ತು ಸಮನ್ವಯತೆ ಯುರೋಪಿನ ಜನರ ಐತಿಹಾಸಿಕ ನೋವನ್ನು ಗುಣಪಡಿಸಬಲ್ಲವು

ಕೀವ್‌ನಲ್ಲಿ ಮಹಾಧರ್ಮಾಧ್ಯಕ್ಷರಾದ ಪಾಲ್ ರಿಚರ್ಡ್ ಗ್ಯಾಲಘರ್ ಅವರು ಉಕ್ರೇನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರನ್ನು ಭೇಟಿಯಾದರು. ವ್ಯಾಟಿಕನ್ ವಾರ್ತೆ ಜೊತೆ ಮಾತನಾಡಿದ ಅವರು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವಿಶೇಷ ಪ್ರತಿನಿಧಿಯನ್ನು ಹಾಗೂ ಇತ್ತೀಚೆಗೆ ಭೇಟಿ ನೀಡಿದ ಕಾರ್ಡಿನಲ್ ಜುಪ್ಪಿ ಅವರನ್ನು ಸ್ವಾಗತಿಸಿದ ಸಂತೋಷವನ್ನು ಹಂಚಿಕೊಂಡರು. “ಜಗದ್ಗುರುಗಳ ವಿಶೇಷ ಪ್ರತಿನಿಧಿಗಳೊಂದಿಗೆ ಪ್ರಾರ್ಥಿಸುವುದು ಎಂದರೆ ಸಾರ್ವತ್ರಿಕ ಧರ್ಮಸಭೆಯೊಂದಿಗೆ ಪ್ರಾರ್ಥಿಸುವಂತೆಯೇ. ಅವರು ನಮ್ಮನ್ನು ಅಪ್ಪಿಕೊಳ್ಳುತ್ತಿರುವ ಧರ್ಮಸಭೆಯ ಗೋಚರ ಸಂಕೇತವಾಗಿದ್ದಾರೆ” ಎಂದು ಅವರು ಹೇಳಿದರು.

ಲೇಖಕರು: ರೊಬೆರ್ಟೊ ಪಾಗ್ಲಿಯಾಲೊಂಗಾ – ಕೀವ್

“ಯುದ್ಧದ ಮಧ್ಯೆಯೇ ನಾವು ಪ್ರಾರ್ಥನೆಯ ಶಕ್ತಿಯನ್ನು ಕಂಡುಕೊಳ್ಳಲು ಸಾಧ್ಯ.” ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ, “ಯುರೋಪಿನ ಜನರ ಐತಿಹಾಸಿಕ ಸ್ಮೃತಿಯನ್ನು ಗುಣಪಡಿಸಲು ನೀಡುವ ಮತ್ತು ಸ್ವೀಕರಿಸುವ ಕ್ಷಮೆಯ ಅಗತ್ಯವಿದೆ.”

ಉಕ್ರೇನ್‌ಗೆ ತಮ್ಮ ಧರ್ಮಸೇವೆಯ ಎರಡನೇ ದಿನದಲ್ಲಿರುವ ಮಹಾಧರ್ಮಾಧ್ಯಕ್ಷರಾದ ಪಾಲ್ ರಿಚರ್ಡ್ ಗ್ಯಾಲಘರ್ ಹಾಗೂ ಉಕ್ರೇನ್‌ನಲ್ಲಿನ ಜಗದ್ಗುರುಗಳ ಅಧಿಕಾರ ಪೀಠದ ರಾಯಭಾರಿಯಾದ ಮಹಾಧರ್ಮಾಧ್ಯಕ್ಷ ವಿಸ್ವಾಲ್ದಾಸ್ ಕುಲ್ಬೋಕಾಸ್ ಅವರನ್ನು ಭೇಟಿಯಾದ ಬಳಿಕ, ಉಕ್ರೇನಿನ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರಾದ ಪರಮಪೂಜ್ಯ ಸ್ವಿಯಾಟೋಸ್ಲಾವ್ ಶೆವ್ಚುಕ್ ಅವರು ವ್ಯಾಟಿಕನ್ ವಾರ್ತೆಗೆ ಈ ಮಾತುಗಳನ್ನು ಹೇಳಿದರು.

ಉಕ್ರೇನ್‌ನ ಲ್ಯಾಟಿನ್ ಸಂಪ್ರದಾಯದ ಕಥೋಲಿಕ ಧರ್ಮಸಭೆಯ ರಚನೆಗಳು ಪುನಃ ಆರಂಭವಾಗಿ 35 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಭಾನುವಾರ ಬೆರ್ಡಿಚಿವ್‌ನ ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ಪುಣ್ಯಕ್ಷೇತ್ರದಲ್ಲಿ ನಡೆಯಲಿರುವ ಆಚರಣೆಗಳಲ್ಲಿ ಪಾಲ್ಗೊಳ್ಳಲು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವಿಶೇಷ ಪ್ರತಿನಿಧಿಯಾಗಿ ಮಹಾಧರ್ಮಾಧ್ಯಕ್ಷ ಗ್ಯಾಲಘರ್ ಆಗಮಿಸಿದ್ದಾರೆ. ಅವರು ಶುಕ್ರವಾರ ಸಂಜೆ ಲ್ವೀವ್ ಮತ್ತು ಕೀವ್ ನಡುವಿನ ರಿವ್ನೆಯಲ್ಲಿರುವ ಸಂತ ಎರಡನೇ ಜಾನ್ ಪಾಲ್ ಧರ್ಮಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಕೀವ್ ತಲುಪಿದರು.

ಪೂಜ್ಯರೇ, ಈ ಸಂದರ್ಭದಲ್ಲಿ ಒಟ್ಟಾಗಿ ಪ್ರಾರ್ಥಿಸುವುದು ಹಾಗೂ ಮಹಾಧರ್ಮಾಧ್ಯಕ್ಷ ಗ್ಯಾಲಘರ್ ಮತ್ತು ಕೆಲವೇ ದಿನಗಳ ಹಿಂದೆ ಭೇಟಿ ನೀಡಿದ ಕಾರ್ಡಿನಲ್ ಜುಪ್ಪಿ ಅವರಂತಹ ಜಗದ್ಗುರುಗಳ ಪ್ರತಿನಿಧಿಗಳ ಮೂಲಕ ಅವರ ಸಾನ್ನಿಧ್ಯವನ್ನು ಅನುಭವಿಸುವುದು ಎಷ್ಟು ಮಹತ್ವದ್ದಾಗಿದೆ?

ಯುದ್ಧದ ಸಮಯದಲ್ಲಿ ನಾವು ಪ್ರಾರ್ಥನೆಯ ಅರ್ಥ ಮತ್ತು ಅದರ ಶಕ್ತಿಯನ್ನು ಮರುಶೋಧಿಸುತ್ತೇವೆ. ಒಟ್ಟಾಗಿ ಪ್ರಾರ್ಥಿಸುವುದು ಎಂದರೆ ಗಾಯಗಳು ಗುಣವಾಗಲು ಆರಂಭವಾಗುವ ಸ್ಥಳವನ್ನು ಕಂಡುಕೊಳ್ಳುವುದಾಗಿದೆ. ಪ್ರಾರ್ಥನೆಯು ನೋವಿನಲ್ಲಿರುವ ವ್ಯಕ್ತಿಯ ಹೃದಯವನ್ನು ತಲುಪುವ ಪವಿತ್ರಾತ್ಮರ ಗುಣಪಡಿಸುವ ಅನುಗ್ರಹದ ಮುಲಾಮಾಗಿದೆ. ಒಟ್ಟಾಗಿ ಪ್ರಾರ್ಥಿಸುವುದು ಎಂದರೆ ವರಗಳನ್ನು ಹಂಚಿಕೊಳ್ಳುವುದೂ ಆಗಿದೆ. ಪ್ರಭು ಯೇಸು ಕ್ರಿಸ್ತರು ಹೇಳಿದಂತೆ, “ನನ್ನ ಹೆಸರಿನಲ್ಲಿ ಇಬ್ಬರು ಅಥವಾ ಮೂವರು ಕೂಡಿರುವಲ್ಲಿ ನಾನು ಅವರ ಮಧ್ಯದಲ್ಲಿದ್ದೇನೆ.” ಆದರೆ ಜಗದ್ಗುರುಗಳ ವಿಶೇಷ ಪ್ರತಿನಿಧಿಗಳೊಂದಿಗೆ ಪ್ರಾರ್ಥಿಸುವುದು ಎಂದರೆ ಸಾರ್ವತ್ರಿಕ ಧರ್ಮಸಭೆಯ ಹೃದಯದೊಂದಿಗೆ ಪ್ರಾರ್ಥಿಸುವುದಾಗಿದೆ; ಅದು ಜಗದ್ಗುರುಗಳೊಂದಿಗೇ ಪ್ರಾರ್ಥಿಸುವಂತಾಗಿದೆ. ಅದು ತಂದೆಯ ಅಪ್ಪುಗೆಯನ್ನು ಅನುಭವಿಸುವಂತಾಗಿದೆ. ಆದ್ದರಿಂದ ಕಾರ್ಡಿನಲ್ ಜುಪ್ಪಿ ಮತ್ತು ಮಹಾಧರ್ಮಾಧ್ಯಕ್ಷ ಗ್ಯಾಲಘರ್ ಅವರ ಸಾನ್ನಿಧ್ಯವು, ಸಾರ್ವತ್ರಿಕ ಕಥೋಲಿಕ ಧರ್ಮಸಭೆಯು ನಮ್ಮನ್ನು ಅಪ್ಪಿಕೊಂಡು ನಮಗಾಗಿ ಪ್ರಾರ್ಥಿಸುತ್ತಿದೆ ಎಂಬುದರ  ಸಂಕೇತವಾಗಿದೆ.

ಉಕ್ರೇನ್‌ನ ಯುದ್ಧದ ಸಂದರ್ಭದಲ್ಲಿ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ವಿವಿಧ ಕಥೋಲಿಕ ಸಮುದಾಯಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ?

ಉಕ್ರೇನ್‌ನಲ್ಲಿ ನಾವು ಒಂದೇ ರೀತಿಯ ದುರಂತಗಳನ್ನು ಹಾಗೂ ಒಂದೇ ರೀತಿಯ ಧಾರ್ಮಿಕ ಮತ್ತು ಮಾನವೀಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇದು ಕಥೋಲಿಕರಿಗೆ ಮಾತ್ರ ಸೀಮಿತವಲ್ಲ; ನಮ್ಮ ಆರ್ಥೊಡಾಕ್ಸ್ ಸಹೋದರ-ಸಹೋದರಿಯರು, ಪ್ರೊಟೆಸ್ಟೆಂಟ್‌ಗಳು, ಯೆಹೂದ್ಯರು ಮತ್ತು ಮುಸ್ಲಿಮರೊಂದಿಗೆ ಸಹ ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇವರೆಲ್ಲರೂ ಈ ವರ್ಷ ತಮ್ಮ 30ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಅಖಿಲ ಉಕ್ರೇನಿಯನ್ ಧರ್ಮಸಭೆಗಳ ಮಂಡಳಿಯ ಸದಸ್ಯರಾಗಿದ್ದಾರೆ. ಒಟ್ಟಾಗಿ ಕಾರ್ಯನಿರ್ವಹಿಸುವುದು ಎಂದರೆ ಅಕ್ಷರಶಃ ಜೀವಗಳನ್ನು ಉಳಿಸುವುದಾಗಿದೆ. ಕೆಲವೊಮ್ಮೆ ಕ್ರೈಸ್ತ ಪ್ರೀತಿಯು ಪಂಗಡ ಮತ್ತು ಆರಾಧನಾ ಸಂಪ್ರದಾಯಗಳ ಎಲ್ಲ ಗಡಿಗಳನ್ನು ಮೀರಿ ಹೋಗುತ್ತದೆ. ಬೈಜಾಂಟೈನ್ ಸಂಪ್ರದಾಯ ಮತ್ತು ಲ್ಯಾಟಿನ್ ಸಂಪ್ರದಾಯದ ಕಥೋಲಿಕರಾದ ನಾವು—ಸಂತ ಎರಡನೇ ಜಾನ್ ಪಾಲ್ ಹೇಳುತ್ತಿದ್ದಂತೆ ಎಲ್ಲರನ್ನೂ ಅಪ್ಪಿಕೊಳ್ಳುವ, ಗುಣಪಡಿಸುವ, ರಕ್ಷಿಸುವ ಮತ್ತು ಸೇವೆ ಮಾಡುವ ಕಥೋಲಿಕ ಪ್ರೀತಿಯ ನೈಜ ಸಾಕ್ಷ್ಯವನ್ನು ಒಟ್ಟಾಗಿ ನೀಡಲು ಸಾಧ್ಯವಾಗಿದೆ.

ಬಾಂಬ್ ದಾಳಿಗಳು ಮತ್ತು ಯುದ್ಧ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಜನರ ಪ್ರಮುಖ ಅಗತ್ಯಗಳೇನು?

ಅಗತ್ಯಗಳು ಅಪಾರವಾಗಿವೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಉಕ್ರೇನ್‌ನಲ್ಲಿ ಸುಮಾರು 50 ಲಕ್ಷ ಜನರು ಮಾನವೀಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ಲಭ್ಯವಿರುವ ಸಂಪನ್ಮೂಲಗಳು ಕೇವಲ 20 ಲಕ್ಷ ಜನರಿಗೆ ಮಾತ್ರ ನೆರವು ನೀಡಲು ಸಾಕಾಗುತ್ತವೆ. ಆದರೆ ಕೀವ್ ನಗರದ ಮೇಯರ್ ಒಮ್ಮೆ ನನಗೆ ಹೇಳಿದಂತೆ, ಜನರಿಗೆ ಧರ್ಮಸಭೆಯಿಂದ ಬಟ್ಟೆ, ರೊಟ್ಟಿ ಮತ್ತು ಆಹಾರಕ್ಕಿಂತಲೂ ಹೆಚ್ಚಾಗಿ ಬೇಕಾಗಿರುವುದು ಭರವಸೆಯ ಒಂದು ಮಾತು.

ಲಕ್ಷಾಂತರ ಉಕ್ರೇನಿಯನ್ನರ ಅಪಾರ ದುಃಖದ ಈ ಸಮಯವು ಹೊಸ ಶುಭಸಂದೇಶ ಪ್ರಚಾರದ ಕಾಲವೂ ಆಗಿದೆ. ಇದು ಕೈರೋಸ್ ಅಂದರೆಆಳವಾದ ಮನಃಪರಿವರ್ತನೆಯ ಕ್ಷಣವಾಗಿದೆ. ಇದು ದೇವರಿಗಾಗಿ ಉಂಟಾಗಿರುವ ಹಸಿವು ಮತ್ತು ದಾಹವಾಗಿದೆ. ಈ ಗಾಯಗಳನ್ನು ಗುಣಪಡಿಸುವುದು ಹಾಗೂ ದೇವರಿಗಾಗಿ ಹಸಿವು-ದಾಹ ಹೊಂದಿರುವವರಿಗೆ ಜೀವಂತ ರೊಟ್ಟಿ ಅಂದರೆ ಪವಿತ್ರ ಪರಮ ಪ್ರಸಾದವನ್ನು, ಮತ್ತು ದೇವರ ವಾಕ್ಯವನ್ನು ನೀಡುವುದು ಪ್ರಭು ಯೇಸು ಕ್ರಿಸ್ತರ ಧರ್ಮಸಭೆಗೆ ಮಾತ್ರ ಸಾಧ್ಯ.

ಮಹಾಧರ್ಮಾಧ್ಯಕ್ಷ ಗ್ಯಾಲಘರ್ ಅವರೊಂದಿಗಿನ ಭೇಟಿಯಲ್ಲಿ ನೀವು ಸಮನ್ವಯತೆ ಮತ್ತು ಕ್ಷಮೆಯ ಬಗ್ಗೆ ಚರ್ಚಿಸಿದ್ದೀರಿ. ಇಂತಹ ಕಠಿಣ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಕ್ರೈಸ್ತರು ಈ ಎರಡು ಮಹಾನ್ ವರಗಳ ಸಾಕ್ಷಿಗಳಾಗಿಯೂ ಪ್ರಚಾರಕರಾಗಿಯೂ ಹೇಗೆ ಇರಬಹುದು?

ಈ ತಿಂಗಳುಗಳು ಉಕ್ರೇನ್‌ನಲ್ಲಿ ಸಂತ ಎರಡನೇ ಜಾನ್ ಪಾಲ್ ಅವರ ಐತಿಹಾಸಿಕ ಭೇಟಿಯ 25ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತವೆ. ಯುರೋಪಿನ ಜನರ ನಡುವೆ ಸಮನ್ವಯತೆವನ್ನು ಬೆಳೆಸುವುದು ತಮ್ಮ ಪೇತ್ರರ ಸೇವೆಯ ಅವಿಭಾಜ್ಯ ಭಾಗವೆಂದು ಅವರು ಪರಿಗಣಿಸಿದ್ದರು. ಯುರೋಪಿನ ಜನರ ಐತಿಹಾಸಿಕ ಸ್ಮೃತಿಯನ್ನು ಗುಣಪಡಿಸಲು ನೆರವಾಗುವುದು ತಮ್ಮ ಕರ್ತವ್ಯವೆಂದು ಅವರೇ ಹೇಳಿದ್ದರು. ವಿಶೇಷವಾಗಿ, ಎರಡನೇ ಮಹಾಯುದ್ಧವು ಉಂಟುಮಾಡಿದ ಗಾಯಗಳು ಇಂದಿಗೂ ನಮ್ಮ ಹೃದಯಗಳಲ್ಲಿ ಆಳವಾಗಿ ಉಳಿದಿವೆ. ಆ ಹಳೆಯ ಗಾಯಗಳಿಗೆ ಈಗ ಉಕ್ರೇನ್‌ನಲ್ಲಿ ನಾವು ಅನುಭವಿಸುತ್ತಿರುವ ಈ ದೇವದೂಷಣೆಯ ಯುದ್ಧದ ಹೊಸ ಗಾಯಗಳೂ ಸೇರಿಕೊಂಡಿವೆ.

ಆದರೆ ಜಗದ್ಗುರು ವೊಯ್ಟಿಲಾ ಅವರು ನಮಗೆ ಯಾವ ಔಷಧಿಯನ್ನು ಬಿಟ್ಟುಹೋದರು? ಐತಿಹಾಸಿಕ ನೋವಿನ ನೆನಪನ್ನು ಗುಣಪಡಿಸುವ ಮುಲಾಮು ‘ಕ್ಷಮೆ’ಯಾಗಿದೆ—ನೀಡುವ ಮತ್ತು ಸ್ವೀಕರಿಸುವ ‘ಕ್ಷಮೆ’ ಎಂದು ಅವರು ನಮಗೆ ಬೋಧಿಸಿದರು. ನಾವೆಲ್ಲರೂ ಪಾಪಿಗಳು. ನಾವು ನಮ್ಮ ನೆರೆಯವರನ್ನು ನೋಯಿಸಿದ್ದೇವೆ ಎಂಬುದು ನಮಗೆ ತಿಳಿದಿದೆ. ನೆರೆಯ ರಾಷ್ಟ್ರಗಳು ತಮ್ಮ ಭೂತಕಾಲದ ಕಾರಣದಿಂದ ಪರಸ್ಪರ ನೋವಿನ ನೆನಪುಗಳನ್ನು ಹೊತ್ತಿರುತ್ತವೆ. ಆದರೆ ನಾವು ಆ ಭೂತಕಾಲದ ಕೈದಿಗಳಾಗಬಾರದು. ಇತಿಹಾಸವನ್ನು ನಾವು ಮರುಬರೆಯಲು ಸಾಧ್ಯವಿಲ್ಲ. ಆದರೆ ಕ್ಷಮೆಯ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯ.

ಆದ್ದರಿಂದ, ನೀಡುವ ಮತ್ತು ಸ್ವೀಕರಿಸುವ ಕ್ಷಮೆಯ ವರವೇ ಯುರೋಪಿನ ಜನರ ಐತಿಹಾಸಿಕ ಸ್ಮೃತಿಯನ್ನು ಗುಣಪಡಿಸುವ ಔಷಧಿಯಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

18 ಜುಲೈ 2026, 18:29