ಹುಡುಕಿ

2025ರಲ್ಲಿ ಚಿಯಾಂಗ್ ಮಾಯ್‌ನಲ್ಲಿ ಜೂಬಿಲಿಯನ್ನು ಉದ್ಘಾಟಿಸುತ್ತಿರುವ ಧರ್ಮಾಧ್ಯಕ್ಷ ಅರ್ಪೊಂಡ್ರತನಾ (ಚಿಯಾಂಗ್ ಮಾಯ್ ಧರ್ಮಕ್ಷೇತ್ರ) 2025ರಲ್ಲಿ ಚಿಯಾಂಗ್ ಮಾಯ್‌ನಲ್ಲಿ ಜೂಬಿಲಿಯನ್ನು ಉದ್ಘಾಟಿಸುತ್ತಿರುವ ಧರ್ಮಾಧ್ಯಕ್ಷ ಅರ್ಪೊಂಡ್ರತನಾ (ಚಿಯಾಂಗ್ ಮಾಯ್ ಧರ್ಮಕ್ಷೇತ್ರ)  (Diocese of Chiang Mai)

ಥಾಯ್ಲೆಂಡ್: ಜೀವಂತ ಮತ್ತು ವೈವಿಧ್ಯಮಯ ಧರ್ಮಸಭೆಗೆ ನೂತನ ಧರ್ಮಾಧ್ಯಕ್ಷರು

ಥಾಯ್ಲೆಂಡ್‌ನ ಧರ್ಮಾಧ್ಯಕ್ಷ ಪೀಟರ್ ಸುಫೋಟ್ ರೋಕ್ಸುಜಾರಿತ್ ಅವರನ್ನು ಚಿಯಾಂಗ್ ಮಾಯ್ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಪದಗ್ರಹಣಗೊಳಿಸಲಾಯಿತು. ಥಾಯ್ಲೆಂಡ್‌ನಾದ್ಯಂತದ ಧರ್ಮಾಧ್ಯಕ್ಷರು ಸಹಬಲಿಪೂಜೆ ಅರ್ಪಿಸಿದ ಈ ಪವಿತ್ರ ಬಲಿಪೂಜೆಯಲ್ಲಿ ಥಾಯ್ಲೆಂಡ್‌ನ ಜಗದ್ಗುರುಗಳ ಅಧಿಕಾರ ಪೀಠದ ರಾಯಭಾರಿ ಹಾಗೂ ಧರ್ಮಪ್ರಚಾರದ ವಿಭಾಗದ ಸಹಾಯಕ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಯೂ ಉಪಸ್ಥಿತರಿದ್ದರು.

ಲೇಖಕರು: ಇಮ್ಮಾನುವೆಲ್ ಕ್ರೂಸ್

ಇಂದು ಬೆಳಗ್ಗೆಯೇ ಸಾವಿರಾರು ಜನರು ಚಿಯಾಂಗ್ ಮಾಯ್ ಪ್ರಧಾನ ದೇವಾಲಯಕ್ಕೆ ಆಗಮಿಸಿ ಧರ್ಮಕ್ಷೇತ್ರದ ಐದನೇ ಧರ್ಮಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾದರು. ಧರ್ಮಾಧ್ಯಕ್ಷ ಪೀಟರ್ ಸುಫೋಟ್ ರೋಕ್ಸುಜಾರಿತ್ ಅವರನ್ನು ಮಹಾಧರ್ಮಾಧ್ಯಕ್ಷ ಫ್ರಾನ್ಸಿಸ್ ಕ್ಸೇವಿಯರ್ ವಿರಾ ಅರ್ಪೊಂಡ್ರತನಾ ಅವರು ಸೇಕ್ರೆಡ್ ಹಾರ್ಟ್ ಶಾಲೆಯ ಹೊರಾಂಗಣ ಪ್ರಾಂಗಣದಲ್ಲಿ ಅಧಿಕೃತವಾಗಿ ಪದಗ್ರಹಣಗೊಳಿಸಿದರು.

ಈ ಪವಿತ್ರ ಬಲಿಪೂಜೆಯಲ್ಲಿ ಥಾಯ್ಲೆಂಡ್‌ನ ವಿವಿಧ   ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು, ಥಾಯ್ಲೆಂಡ್‌ನ ಜಗದ್ಗುರುಗಳ ಅಧಿಕಾರ ಪೀಠದ ರಾಯಭಾರಿ ಮಹಾಧರ್ಮಾಧ್ಯಕ್ಷ ಪೀಟರ್ ಬ್ರಯಾನ್ ವೆಲ್ಸ್, ಧರ್ಮಪ್ರಚಾರದ ವಿಭಾಗದ ಸಹಾಯಕ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಮಹಾಧರ್ಮಾಧ್ಯಕ್ಷ ಸ್ಯಾಮುಯೆಲೆ ಸಂಗಲ್ಲಿ, ಥಾಯ್ಲೆಂಡ್ ಹಾಗೂ ನೆರೆಯ ರಾಷ್ಟ್ರಗಳಿಂದ ಆಗಮಿಸಿದ್ದ ನೂರಾರು ಧರ್ಮಗುರುಗಳು ಹಾಗೂ ಚಿಯಾಂಗ್ ಮಾಯ್‌ನ ವಿವಿಧ ಧರ್ಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಹೊರಾಂಗಣ ಪ್ರಾಂಗಣದಲ್ಲಿ ಆಸನಗಳು ತುಂಬಿಹೋದ ಕಾರಣ, ಹೆಚ್ಚಿನ ವಿಶ್ವಾಸಿಗಳು ಪ್ರಧಾನ ದೇವಾಲಯ, ಶಾಲೆಯ ಭೋಜನಾಂಗಣ ಹಾಗೂ ಶಿಶುವಿಹಾರದ ಪ್ರಾಂಗಣಗಳಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಗಳ ಮೂಲಕ ನೇರಪ್ರಸಾರದಲ್ಲಿ ಸಮಾರಂಭವನ್ನು ವೀಕ್ಷಿಸಿದರು.

ಈ ಪದಗ್ರಹಣದೊಂದಿಗೆ 2024ರ ಜೂನ್ 27ರಿಂದ ಖಾಲಿಯಾಗಿದ್ದ ಧರ್ಮಾಧ್ಯಕ್ಷರ ಹುದ್ದೆ ತುಂಬಿತು. ಅಂದು ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಆಗಿನ ಚಿಯಾಂಗ್ ಮಾಯ್ ಧರ್ಮಾಧ್ಯಕ್ಷರಾಗಿದ್ದ ಧರ್ಮಾಧ್ಯಕ್ಷ ವಿರಾ ಅವರನ್ನು ಬ್ಯಾಂಕಾಕ್‌ನ ಪ್ರೇಷಿತ ಆಡಳಿತಾಧಿಕಾರಿಯಾಗಿ ನೇಮಿಸಿದ್ದರು. ಇದರ ಪರಿಣಾಮವಾಗಿ ಅವರು ಎರಡು ಧರ್ಮಕ್ಷೇತ್ರಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. 2025ರ ಮಾರ್ಚ್ 2ರಂದು ಅವರು ಅಧಿಕೃತವಾಗಿ ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷರಾಗಿ ಪದಗ್ರಹಣಗೊಂಡರೂ, ಇಂದಿನವರೆಗೆ ಚಿಯಾಂಗ್ ಮಾಯ್ ಧರ್ಮಕ್ಷೇತ್ರದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಇಂದು ಅವರು ಧರ್ಮಕ್ಷೇತ್ರದ ನೂತನ ಕುರುಬನಿಗೆ ಧಾರ್ಮಿಕ ನಾಯಕತ್ವದ ದಂಡವನ್ನು ಹಸ್ತಾಂತರಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದವರಿಗೆ ಈ ದಿನವು ಹೊಸ ನಿರೀಕ್ಷೆ ಮತ್ತು ಶಾಂತ ಭರವಸೆಯ ದಿನವಾಗಿತ್ತು. ಚಿಯಾಂಗ್ ಮಾಯ್‌ನ ಸಾಮಾನ್ಯ ವಿಶ್ವಾಸಿಯಾದ ಬ್ಯಾಂಕ್ ಅವರು, ಧರ್ಮಸಭೆಯಿಂದ ದೂರವಾಗಿರುವವರನ್ನು ನೂತನ ಧರ್ಮಾಧ್ಯಕ್ಷರು ಮತ್ತೆ ಧರ್ಮಸಭೆಯತ್ತ ಕರೆತರಲಿ ಎಂದು ಆಶಿಸಿದರು. ಸಣ್ಣ ಪ್ರಯತ್ನಗಳ ಮೂಲಕವೂ ವಿಶ್ವಾಸವನ್ನು ಪುನರುಜ್ಜೀವನಗೊಳಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ನೆರೆಯ ಚಿಯಾಂಗ್ ರೈಯಿಂದ ಬಂದಿದ್ದ ಕೊಲಂಬಿಯಾದ ಧರ್ಮಗುರು ವಂ. ಗುರು ಜುವಾನ್ ಪಾಬ್ಲೊ ಕೂಡ ಇದೇ ರೀತಿಯ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

"ಇದು ಧರ್ಮಕ್ಷೇತ್ರಕ್ಕೆ ಹೊಸ ಅವಕಾಶವಾಗಿದೆ. ಹೊಸ ಧರ್ಮಾಧ್ಯಕ್ಷರು, ಹೊಸ ಕುರುಬರು ದೊರೆತಿದ್ದಾರೆ. ಸುಮಾರು ಎರಡು ವರ್ಷಗಳಿಂದ ನಾವು ಕುರುಬರಿಲ್ಲದೆ ಇದ್ದೆವು. ಆದ್ದರಿಂದ ಇದು ದೇವರಿಂದ ಬಂದ ಸಂಕೇತವಾಗಿದೆ ಹಾಗೂ ಧರ್ಮಸಭೆ ಇನ್ನೂ ಜೀವಂತವಾಗಿದ್ದು ತನ್ನ ಪಯಣವನ್ನು ಮುಂದುವರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು.

ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಹೊಸ ಧರ್ಮಾಧ್ಯಕ್ಷರು ತಮ್ಮ ಧರ್ಮಾಧ್ಯಕ್ಷೀಯ ಉಂಗುರ ಮತ್ತು ಶಿರಸ್ತ್ರಾಣವನ್ನು ಸ್ವೀಕರಿಸಿದರು. ಬಳಿಕ ಅವರಿಗೆ ಕುರುಬನ ದಂಡ (Crozier) ನೀಡಲಾಯಿತು. ಇದು ಹೊಸ ಹಿಂಡಿನ ಕುರುಬರಾಗಿ ಅವರ ಜವಾಬ್ದಾರಿಯನ್ನು ಸೂಚಿಸುವ ಸಂಕೇತವಾಗಿದೆ.

ಸಾವಿರಾರು ಜನರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಹೆಚ್ಚಿನವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿದ್ದ ವಿವಿಧ ಜನಾಂಗಗಳ ಸದಸ್ಯರಾಗಿದ್ದರು. ಇದು ಚಿಯಾಂಗ್ ಮಾಯ್ ಧರ್ಮಕ್ಷೇತ್ರದ ವೈವಿಧ್ಯಮಯ ಜನಸಂಖ್ಯೆ ಮತ್ತು ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸಿತು.

ಪವಿತ್ರ ಬಲಿಪೂಜೆಯುದ್ದಕ್ಕೂ ಸ್ಥಳೀಯ ಭಾಷೆಗಳಲ್ಲಿ ಕೀರ್ತನೆಗಳು ಮೊಳಗಿದವು. ಬಿಸಿಲು ಮತ್ತು ತೇವಾಂಶದ ನಡುವೆಯೂ ವಿಶ್ವಾಸಿಗಳು ತಾಳ್ಮೆಯಿಂದ, ಗಮನವಿಟ್ಟು ಹಾಗೂ ಸಂತೋಷದಿಂದ ಸಮಾರಂಭದಲ್ಲಿ ಭಾಗವಹಿಸಿದರು. ನೂತನ ಧರ್ಮಾಧ್ಯಕ್ಷರ ಮೊದಲ ಪವಿತ್ರ ಬಲಿಪೂಜೆ ನಾಳೆಗೆ ನಿಗದಿಯಾಗಿರುವುದರಿಂದ, ಇಂದಿನ ಪವಿತ್ರ ಬಲಿಪೂಜೆಗೆ ಮಹಾಧರ್ಮಾಧ್ಯಕ್ಷ ವಿರಾ ಅಧ್ಯಕ್ಷತೆ ವಹಿಸಿದರು.

ಈಗ ಧರ್ಮಾಧ್ಯಕ್ಷ ಸುಫೋಟ್ ಅವರು ನಾಲ್ಕು ಪ್ರಾಂತ್ಯಗಳನ್ನು ಒಳಗೊಂಡಿರುವ ಸುಮಾರು 48,013 ಚದರ ಕಿಲೋಮೀಟರ್ ವ್ಯಾಪ್ತಿಯ ಧರ್ಮಕ್ಷೇತ್ರವನ್ನು ಮುನ್ನಡೆಸಲಿದ್ದಾರೆ. ಇದು ಸುಮಾರು ಕೋಸ್ಟಾ ರಿಕಾ ದೇಶದಷ್ಟು ವಿಸ್ತೀರ್ಣ ಹೊಂದಿದ್ದು, ಮಯನ್ಮಾರ್ ಗಡಿಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಕರೇನ್, ಹ್ಮಾಂಗ್, ಲಾಹು, ಅಖಾ ಮತ್ತು ಲಿಸು ಸೇರಿದಂತೆ ಅನೇಕ ಬೆಟ್ಟದ ಬುಡಕಟ್ಟು ಸಮುದಾಯಗಳು ವಾಸಿಸುತ್ತಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ಭಾಷೆ ಮತ್ತು ಸಂಸ್ಕೃತಿ ಇದೆ.

ಅವರ ಧರ್ಮಾಧ್ಯಕ್ಷೀಯ ಧ್ಯೇಯವಾಕ್ಯ "Caritas Omnia Corda Unit" ಅಂದರೆ "ಪ್ರೀತಿಯು ಎಲ್ಲ ಹೃದಯಗಳನ್ನು ಒಂದುಗೂಡಿಸುತ್ತದೆ" ಎಂಬುದು, ಇಂತಹ ವೈವಿಧ್ಯಮಯ   ಧರ್ಮಕ್ಷೇತ್ರಕ್ಕೆ ಅತ್ಯಂತ ಸೂಕ್ತವಾಗಿದೆ.

ಈ ವಿಶಾಲ ಪ್ರದೇಶವು ಅನೇಕ ಸಾಮಾಜಿಕ ಸವಾಲುಗಳನ್ನೂ ಎದುರಿಸುತ್ತಿದೆ. ಬಡತನ, ಶಿಕ್ಷಣದ ಸೀಮಿತ ಅವಕಾಶಗಳು, ಲಿಂಗ ಅಸಮಾನತೆ ಹಾಗೂ ಪೌರತ್ವದ ಕೊರತೆಯಿಂದ ಅನೇಕರು, ವಿಶೇಷವಾಗಿ ಗಡಿಯ ಸಮೀಪದ ಅಲ್ಪಸಂಖ್ಯಾತ ಸಮುದಾಯಗಳು, ಸಂಕಷ್ಟದಲ್ಲಿದ್ದಾರೆ.

ಮಾನವ ಕಳ್ಳಸಾಗಣೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಇನ್ನೂ ಈ ಪ್ರದೇಶದ ಪ್ರಮುಖ ಸಮಸ್ಯೆಗಳಾಗಿವೆ. ಕಥೋಲಿಕ ಧರ್ಮಗುರುಗಳು ಮತ್ತು ಧಾರ್ಮಿಕ ಸಹೋದರಿಯರು ಜನರ ರಕ್ಷಣೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದು, ಕಥೋಲಿಕ ಶಾಲೆಗಳು ಅಪಾಯದಲ್ಲಿರುವ ಮಕ್ಕಳಿಗೆ ಲಭ್ಯವಿರುವ ಕೆಲವೇ ಸುರಕ್ಷಿತ ಆಶ್ರಯಗಳಲ್ಲಿ ಒಂದಾಗಿವೆ.

ಈ ಪದಗ್ರಹಣವು ಥಾಯ್ಲೆಂಡ್‌ನ ಕಥೋಲಿಕ ಧರ್ಮಸಭೆ ಎದುರಿಸುತ್ತಿರುವ ವ್ಯಾಪಕ ಬದಲಾವಣೆಗಳ ನಡುವೆಯೂ ನಡೆಯುತ್ತಿದೆ. ಜಾತ್ಯತೀತತೆ ಮತ್ತು ಗ್ರಾಹಕತಾವಾದವು ಯುವಜನರನ್ನು ವಿವಿಧ ಧರ್ಮಗಳಿಂದ ದೂರ ಸೆಳೆಯುತ್ತಿದ್ದು, ಈ ಕುರಿತು ಬೌದ್ಧ, ಕಥೋಲಿಕ ಹಾಗೂ ಮುಸ್ಲಿಂ ನಾಯಕರು ಇತ್ತೀಚಿನ ವರ್ಷಗಳಲ್ಲಿ ಜಂಟಿಯಾಗಿ ಚರ್ಚಿಸಿದ್ದಾರೆ.

ನಗರ ಪ್ರದೇಶಗಳಿಗೆ ನಡೆಯುತ್ತಿರುವ ವಲಸೆಯಿಂದ ಉತ್ತರ ಭಾಗದ ಗ್ರಾಮೀಣ ಧರ್ಮಕೇಂದ್ರಗಳಲ್ಲಿ ವಿಶ್ವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಇದೇ ವರ್ಷ ಚಿಯಾಂಗ್ ಮಾಯ್   ಧರ್ಮಕ್ಷೇತ್ರವು ದಾಖಲೆಯ ಸಂಖ್ಯೆಯಲ್ಲಿ ಹೊಸ ಧರ್ಮಗುರುಗಳನ್ನು ಅಭಿಷೇಕಿಸಿದೆ. ಆದಾಗ್ಯೂ, ಬ್ಯಾಂಕ್ ಹಾಗೂ ವಂ. ಗುರು ಜುವಾನ್ ಪಾಬ್ಲೊ ಅವರ ಮಾತುಗಳು ಸೂಚಿಸಿದಂತೆ ಮತ್ತು ಇಂದಿನ ಜನಸಾಗರವೇ ತೋರಿಸಿದಂತೆ, ಹೊಸ ಆಶಾಭಾವನೆ ಮತ್ತು ವಿಶ್ವಾಸವು ದಿನವಿಡೀ ಸ್ಪಷ್ಟವಾಗಿ ಗೋಚರಿಸಿತು.

ಎರಡು ವರ್ಷಗಳಿಗಿಂತ ಹೆಚ್ಚು ಕಾಲ ತನ್ನ ಕುರುಬರಿಗಾಗಿ ಕಾಯುತ್ತಿದ್ದ ಈ ಧರ್ಮಪ್ರಾಂತ್ಯ ಧರ್ಮಕ್ಷೇತ್ರಕ್ಕೆ, ಜನರಿಂದ ತುಂಬಿದ್ದ ಪ್ರಾಂಗಣಗಳು ಹಾಗೂ ಸಾಂಪ್ರದಾಯಿಕ ವಸ್ತ್ರಗಳಲ್ಲಿ ಭಾಗವಹಿಸಿದ್ದ ವಿಶ್ವಾಸಿಗಳ ಸಂಭ್ರಮವು, "ಧರ್ಮಸಭೆ ಇನ್ನೂ ತನ್ನ ಪಯಣವನ್ನು ಮುಂದುವರಿಸುತ್ತಿದೆ" ಎಂಬ ವಂ. ಗುರು ಜುವಾನ್ ಪಾಬ್ಲೊ ಅವರ ಮಾತಿನ ಅತ್ಯಂತ ನೈಜ ಸಾಕ್ಷಿಯಾಗಿದೆ.

ಇಮ್ಮಾನುವೆಲ್ ಕ್ರೂಸ್ ಅವರು 2015ರಿಂದ ಚಿಯಾಂಗ್ ಮಾಯ್‌ನಲ್ಲಿ ಸಾಮಾನ್ಯ ಧರ್ಮಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

30 ಜುಲೈ 2026, 17:39