ದಕ್ಷಿಣ ಫ್ರಾನ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾಡ್ಗಿಚ್ಚು (ANSA) ದಕ್ಷಿಣ ಫ್ರಾನ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾಡ್ಗಿಚ್ಚು (ANSA)  (ANSA)

ದಕ್ಷಿಣ ಯುರೋಪ್‌ನಲ್ಲಿ ಕಾಡ್ಗಿಚ್ಚಿನ ಸಂತ್ರಸ್ತರೊಂದಿಗೆ ಧರ್ಮಸಭೆಯ ಸಹಯಾನ

ಫ್ರಾನ್ಸ್, ಸ್ಪೇನ್ ಮತ್ತು ಗ್ರೀಸ್‌ನಲ್ಲಿ ಭೀಕರ ಕಾಡ್ಗಿಚ್ಚು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಧರ್ಮಸಭೆಗಳು ಪ್ರಾಯೋಗಿಕ ನೆರವು ನೀಡುವುದರ ಜೊತೆಗೆ, ತಮ್ಮ ಮನೆಗಳು ಮತ್ತು ಜೀವನೋಪಾಯವನ್ನು ಕಳೆದುಕೊಂಡ ಸ್ಥಳಾಂತರಿತ ಸಮುದಾಯಗಳಿಗೆ ಮಾನಸಿಕ ಬೆಂಬಲವನ್ನೂ ನೀಡುತ್ತಿವೆ.

ಲೇಖಕರು:ಜೀನ್ ಚಾರ್ಲ್ಸ್ ಪುಟ್ಜೊಲು, ಪ್ಯಾಟ್ರಿಸಿಯಾ ಯ್ನೆಸ್ಟ್ರೋಜಾ ಮತ್ತು ಫ್ರಾನ್ಸೆಸ್ಕಾ ಮೆರ್ಲೊ

ದಕ್ಷಿಣ ಯುರೋಪ್‌ನಾದ್ಯಂತ ವ್ಯಾಪಿಸುತ್ತಿರುವ ಕಾಡ್ಗಿಚ್ಚಿನಿಂದ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯುವಂತಾಗಿದ್ದು, ಕಾಡುಗಳು ಬೂದಿಯಾಗಿ ಮಾರ್ಪಟ್ಟಿವೆ. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದು, ಸಾವಿರಾರು ಕುಟುಂಬಗಳು ತಮ್ಮ ಮನೆಗಳು ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುವ ದುಃಸ್ಥಿತಿಯನ್ನು ಎದುರಿಸುತ್ತಿವೆ. ನೈಋತ್ಯ ಫ್ರಾನ್ಸ್‌ನ ಗಿರೋಂದ್ ಪ್ರದೇಶದಲ್ಲಿ, ದೇಶದ ಅತಿದೊಡ್ಡ ಆಡಳಿತ ವಿಭಾಗವು ಕಳೆದ 50 ವರ್ಷಗಳಲ್ಲೇ ಅತ್ಯಂತ ಭೀಕರ ಕಾಡ್ಗಿಚ್ಚನ್ನು ಕಂಡಿದೆ. 2,20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, 240 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.

ಸ್ಪೇನ್‌ನಲ್ಲಿ, ಮ್ಯಾಡ್ರಿಡ್, ಆವಿಲಾ, ಟೊಲೆಡೊ ಮತ್ತು ಕ್ಯಾಸ್ಟೆಲೋನ್ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 75,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಕ್ಷಣದ ಅಪಾಯ ದೂರವಾದ ಬಳಿಕ, ಬದುಕುಳಿದವರು ತಾವು ಹೊಂದಿದ್ದ ಎಲ್ಲವನ್ನೂ ಕಳೆದುಕೊಂಡಿರುವ ಆಳವಾದ ಮಾನಸಿಕ ಆಘಾತವನ್ನು ಎದುರಿಸಬೇಕಾಗಿದೆ.

ಫ್ರಾನ್ಸ್‌ನ ಧರ್ಮಸಭೆ

ಫ್ರಾನ್ಸ್ ಧರ್ಮಾಧ್ಯಕ್ಷರ ಸಮ್ಮೇಳನದ ಉಪಯಾಜಕ ಸೇವೆ ಮತ್ತು ಐಕ್ಯತೆ ವಿಭಾಗದ ಪ್ರತಿನಿಧಿಯಾದ ವಂ. ಗುರು ಯಾನ್ ಲೆ ಲೇ ಅವರು, ಮನೆಗಳು ಮತ್ತು ಪ್ರಕೃತಿ ಬೆಂಕಿಗೆ ಆಹುತಿಯಾಗುತ್ತಿರುವ ದೃಶ್ಯವು ಮಾನವನ ದುರ್ಬಲತೆ ಹಾಗೂ ಪರಿಸರದ ಮೇಲಿನ ನಮ್ಮ ಅವಲಂಬನೆಯನ್ನು ಸ್ಪಷ್ಟವಾಗಿ ನೆನಪಿಸುತ್ತದೆ ಎಂದು ಹೇಳಿದ್ದಾರೆ. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ "ಲೌದಾತೋ ಸಿ'" ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಅವರು, ಪ್ರಕೃತಿಯ ವಿನಾಶವು ಏಕಾಂಗಿ ಭಾವನೆ ಮತ್ತು ಪರಿತ್ಯಕ್ತತೆಯ ಅನುಭವವನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ಸಂತ್ರಸ್ತರು ಕೇವಲ ತಮ್ಮ ಆಸ್ತಿಪಾಸ್ತಿಗಳನ್ನು ಮಾತ್ರವಲ್ಲ, ತಮ್ಮ ನೆನಪುಗಳು, ಜೀವನೋಪಾಯದ ಸಾಧನಗಳು ಹಾಗೂ ತಮ್ಮ ಊರಿನೊಂದಿಗೆ ಬೆಸೆದುಕೊಂಡಿರುವ ವೈಯಕ್ತಿಕ ಜೀವನದ ಇತಿಹಾಸವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಪೇನ್‌ನ ಧರ್ಮಸಭೆ

ಸ್ಪೇನ್‌ನ ಗೆಟಾಫೆ ಧರ್ಮಕ್ಷೇತ್ರದ ವಕ್ತಾರ ಅಲ್ವಾರೊ ದೆ ಜುವಾನಾ ಅವರ ಪ್ರಕಾರ, ಕೆಲವರಿಗೆ ತಮ್ಮ ಬಳಿ ಇದ್ದ ಎಲ್ಲವೂ ಕಳೆದುಹೋಗಿದೆ ಎಂಬ ಭಾವನೆ ಮೂಡಿದ್ದರೆ, ಇನ್ನೂ ಕೆಲವರು ಭರವಸೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಮ್ಯಾಡ್ರಿಡ್‌ನ ನೈಋತ್ಯ ಭಾಗದಿಂದ ಸ್ಥಳಾಂತರಗೊಂಡವರಲ್ಲಿ ಅನೇಕರು ವಲಸೆ ಕುಟುಂಬಗಳಾಗಿದ್ದು, ಅವರು ಯಾವಾಗ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ ಅಥವಾ ತಮ್ಮ ಮಕ್ಕಳ ಭವಿಷ್ಯ ಏನಾಗಲಿದೆ ಎಂಬುದರ ಬಗ್ಗೆ ಅನಿಶ್ಚಿತತೆಯಲ್ಲಿದ್ದಾರೆ. ಎರಡೂ ದೇಶಗಳ ಧರ್ಮಸಭೆಗಳು ಆಹಾರ, ಆಶ್ರಯ ಹಾಗೂ ಮಾನಸಿಕ ನೆರವನ್ನು ಒದಗಿಸುತ್ತಿವೆ. ಕರಿತಸ್ ಸಿಬ್ಬಂದಿಯ ಪ್ರಕಾರ, ಸಂತ್ರಸ್ತರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ, ತಮ್ಮ ಭಯ ಮತ್ತು ಅನಿಶ್ಚಿತತೆಯನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುವುದೇ ಈಗಿನ ಅತ್ಯಂತ ಪ್ರಮುಖ ಅಗತ್ಯವಾಗಿದೆ.

ವಂ. ಗುರು ಲೆ ಲೇ ಅವರು, ಈ ಅನುಭವವನ್ನು ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಕ್ಕೆ ಹೋಲಿಸಿದ್ದು, ಇದರಿಂದ ಚೇತರಿಸಿಕೊಳ್ಳಲು ಸಮಯ, ಜೊತೆಗಿರುವಿಕೆ ಮತ್ತು ಆತ್ಮೀಯ ಸಾನ್ನಿಧ್ಯ ಅಗತ್ಯವೆಂದು ಹೇಳಿದ್ದಾರೆ. ಮುಂದಿನ ದೀರ್ಘಕಾಲೀನ ಸವಾಲು ಮನೆಗಳು, ಜೀವನೋಪಾಯ ಮತ್ತು ಸಮುದಾಯದ ಬಾಂಧವ್ಯವನ್ನು ಪುನರ್‌ನಿರ್ಮಿಸುವುದರ ಜೊತೆಗೆ, ತಮ್ಮ ಮೂಲ ನೆಲೆಯನ್ನು ಶಾಶ್ವತವಾಗಿ ತೊರೆಯಬೇಕಾಗುವ ಪರಿಸ್ಥಿತಿಯನ್ನು ಎದುರಿಸುತ್ತಿರುವ ನಿವಾಸಿಗಳಿಗೆ ಬೆಂಬಲ ನೀಡುವುದಾಗಿದೆ.

ಪೂರ್ವದತ್ತ ಹರಡುತ್ತಿರುವ ಕಾಡ್ಗಿಚ್ಚು

ಇದೇ ವೇಳೆ, ಕಾಡ್ಗಿಚ್ಚಿನ ತುರ್ತು ಪರಿಸ್ಥಿತಿ ಪೂರ್ವದತ್ತವೂ ವ್ಯಾಪಿಸುತ್ತಿದೆ. ಗ್ರೀಸಿನಲ್ಲಿ ಬಲವಾದ ಗಾಳಿಯಿಂದ ಕ್ರೀಟ್ ಮತ್ತು ಲೆಸ್ವೋಸ್ ದ್ವೀಪಗಳಲ್ಲಿ ಭೀಕರ ಕಾಡ್ಗಿಚ್ಚುಗಳು ವ್ಯಾಪಿಸುತ್ತಿದ್ದು, ಹೆಚ್ಚಿನ ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮೂರು ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಕ್ರೀಟ್‌ನಲ್ಲಿ ಬೆಂಕಿಯ ಮಧ್ಯೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ನಿವಾಸಿಗಳು ಮತ್ತು ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮನೆಗಳು, ಕೃಷಿಭೂಮಿಗಳು ಹಾಗೂ ಆಲಿವ್ ತೋಟಗಳಿಗೆ ಹಾನಿ ಉಂಟುಮಾಡುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

30 ಜುಲೈ 2026, 17:42