ಬರ್ಲಿನ್‌ನಲ್ಲಿ ಶನಿವಾರ ನಡೆದ ವಾರ್ಷಿಕ ಕ್ರಿಸ್ಟೊಫರ್ ಸ್ಟ್ರೀಟ್ ಡೇ LGBTQ+ ಮೆರವಣಿಗೆಯ ಸಮೀಪ ಜನಸಮೂಹಕ್ಕೆ ಡಿಕ್ಕಿ ಹೊಡೆದ ವಾಹನವನ್ನು ಸ್ಥಳದಿಂದ ತೆರವುಗೊಳಿಸಸುತ್ತಿರುವುದು. (AFP ಅಥವಾ ಪರವಾನಗಿದಾರರು) ಬರ್ಲಿನ್‌ನಲ್ಲಿ ಶನಿವಾರ ನಡೆದ ವಾರ್ಷಿಕ ಕ್ರಿಸ್ಟೊಫರ್ ಸ್ಟ್ರೀಟ್ ಡೇ LGBTQ+ ಮೆರವಣಿಗೆಯ ಸಮೀಪ ಜನಸಮೂಹಕ್ಕೆ ಡಿಕ್ಕಿ ಹೊಡೆದ ವಾಹನವನ್ನು ಸ್ಥಳದಿಂದ ತೆರವುಗೊಳಿಸಸುತ್ತಿರುವುದು. (AFP ಅಥವಾ ಪರವಾನಗಿದಾರರು)  (AFP or licensors)

ಜರ್ಮನಿಯ ರಾಜಧಾನಿಯಲ್ಲಿ ನಡೆದ ದಾಳಿಯನ್ನು ಖಂಡಿಸಿದ ಬರ್ಲಿನ್ ಮಹಾಧರ್ಮಾಧ್ಯಕ್ಷರು

ಬರ್ಲಿನ್‌ನಲ್ಲಿ ನಡೆದ LGBTQ+ ಕಾರ್ಯಕ್ರಮವೊಂದರಲ್ಲಿ ಮಿನಿವ್ಯಾನ್ ವೇಗವಾಗಿ ಜನಸಮೂಹದೊಳಗೆ ನುಗ್ಗಿದ ಘಟನೆಯ ಬಳಿಕ, ಸ್ಥಳೀಯ ಧರ್ಮಸಭೆ, ಜರ್ಮನಿಯ ನಾಯಕರು ಹಾಗೂ ಯುರೋಪಿಯನ್ ಒಕ್ಕೂಟದ ಅಧಿಕಾರಿಗಳು ದ್ವೇಷವನ್ನು ಖಂಡಿಸಿ, ಸ್ವಾತಂತ್ರ್ಯದ ರಕ್ಷಣೆಗೆ ಕರೆ ನೀಡಿದ್ದಾರೆ.

ಲೇಖಕರು: ರಾಬರ್ಟೊ ಪಾಗ್ಲಿಯಲೋಂಗಾ

"ಎಂತಹ ಭಯಾನಕ ಘಟನೆ! ದ್ವೇಷವು ಎಂದಿಗೂ ಗೆಲ್ಲಬಾರದು."

ಜುಲೈ 25ರ ಶನಿವಾರ ಸಂಜೆ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನಡೆದ ದಾಳಿಯ ಕುರಿತು, ಜರ್ಮನ್ ಕಥೋಲಿಕ ಸುದ್ದಿಸಂಸ್ಥೆ KNAಗೆ ಬರ್ಲಿನ್‌ನ ಮಹಾಧರ್ಮಾಧ್ಯಕ್ಷರಾದ ಹೈನರ್ ಕೊಚ್ ಈ ಮಾತುಗಳನ್ನು ಹೇಳಿದರು. ನಗರದ LGBTQ+ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ಗುಂಪಿನೊಳಗೆ ಮಿನಿವ್ಯಾನ್ ಅತಿವೇಗವಾಗಿ ನುಗ್ಗಿದ ಪರಿಣಾಮ, ಒಬ್ಬರು ಮೃತಪಟ್ಟಿದ್ದು ಸುಮಾರು ಮೂವತ್ತು ಮಂದಿ ಗಾಯಗೊಂಡಿದ್ದಾರೆ.

ಭಯ ಮತ್ತು ವಿಭಜನೆಯನ್ನು ಹರಡುವವರ ವಿರುದ್ಧ ಯುರೋಪಿಯನ್ ಒಕ್ಕೂಟದ ಐಕ್ಯತೆ

ಈ ಘಟನೆಯನ್ನು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳೂ ಖಂಡಿಸಿದ್ದಾರೆ. ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಜರ್ಮನ್ ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಂದೇಶದಲ್ಲಿ, "ಬರ್ಲಿನ್‌ನ ಕ್ರಿಸ್ಟೊಫರ್ ಸ್ಟ್ರೀಟ್ ಡೇ ಮೆರವಣಿಗೆಯಲ್ಲಿ ನಡೆದ ದಾಳಿಯ ಸಂತ್ರಸ್ತರಿಗೆ ಹಾಗೂ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಪ್ರತಿಯೊಬ್ಬರೂ ಭಯವಿಲ್ಲದೆ ಬದುಕಲು, ಪ್ರೀತಿಸಲು ಮತ್ತು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಬೇಕು" ಎಂದು ಹೇಳಿದ್ದಾರೆ.

ಮುಂದುವರಿದು ಅವರು, "ದ್ವೇಷ ಮತ್ತು ಹಿಂಸಾಚಾರಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ" ಎಂದು ಹೇಳಿದ್ದಾರೆ. ಯುರೋಪಿಯನ್ ಸಂಸತ್ತಿನ ಅಧ್ಯಕ್ಷೆ ರೋಬರ್ಟಾ ಮೆಟ್ಸೊಲಾ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. "ಇಂದು ನಮ್ಮ ಸಂತಾಪಗಳು ಬರ್ಲಿನ್ ದಾಳಿಯ ಸಂತ್ರಸ್ತರು, ಅವರ ಕುಟುಂಬಗಳು ಮತ್ತು ಕ್ರಿಸ್ಟೊಫರ್ ಸ್ಟ್ರೀಟ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೊಂದಿಗಿವೆ. ಸ್ವಾತಂತ್ರ್ಯ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿರುವ ನಮ್ಮ ಯುರೋಪಿನಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಸ್ಥಾನವಿಲ್ಲ. ಭಯ ಮತ್ತು ವಿಭಜನೆಯನ್ನು ಬಿತ್ತಲು ಯತ್ನಿಸುವವರ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಅವರು ಹೇಳಿದರು.

ಶನಿವಾರ ಸಂಜೆ ನಡೆದ ದಾಳಿ

ಸಂಗೀತ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಸಂಭ್ರಮಾಚರಣೆಗಳಿಂದ ಕೂಡಿದ ದಿನದ ನಂತರ, ಬರ್ಲಿನ್ ಭೀತಿಯ ರಾತ್ರಿಯನ್ನು ಅನುಭವಿಸಿತು. ರಾತ್ರಿ ಸುಮಾರು 10 ಗಂಟೆಯ ವೇಳೆಗೆ, ಬಿಳಿ ಬಣ್ಣದ ಮಿನಿವ್ಯಾನ್ ನಗರದ ಟಿಯರ್ಗಾರ್ಟನ್ ಉದ್ಯಾನವನಕ್ಕೆ ಪ್ರವೇಶಿಸಿ ಅಲ್ಲಿ ಸೇರಿದ್ದ ಜನರ ಗುಂಪಿನೊಳಗೆ ನುಗ್ಗಿತು. ಡೆರ್ ಸ್ಪೀಗೆಲ್ ವರದಿಯ ಪ್ರಕಾರ, ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಇನ್ನೂ 16 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.

ಶಂಕಿತ ದಾಳಿಕೋರನನ್ನು ಅಧಿಕಾರಿಗಳು ಗುರುತಿಸಿದ್ದು, ಆತನ ಛಾಯಾಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ. ಅಬ್ದುಲ್ ಬಿ. ಎಂದು ಗುರುತಿಸಲ್ಪಟ್ಟಿರುವ ಈ 21 ವರ್ಷದ ಯುವಕ, 2026ರ ಮೇ ತಿಂಗಳಲ್ಲಿ ಬಾಲಾಪರಾಧಿಗಳ ಕಾರಾಗೃಹದಿಂದ ಬಿಡುಗಡೆಯಾಗಿದ್ದನು ಎಂದು DPA ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವ್ಯಕ್ತಿ ಈಗಾಗಲೇ ಪೊಲೀಸರಿಗೆ ಪರಿಚಿತನಾಗಿದ್ದನು. ಆತ "ತೀವ್ರಗಾಮಿ ಇಸ್ಲಾಮಿಕ್ ವಲಯಗಳೊಂದಿಗೆ" ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಐಎಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆಯ ಬೆಂಬಲಿಗನಾಗಿದ್ದನೆಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಜನರ ಮೇಲೆ ವಾಹನ ಹರಿಸಿದ ನಂತರ ಮಿನಿವ್ಯಾನ್ ಮರಕ್ಕೆ ಡಿಕ್ಕಿ ಹೊಡೆದಾಗ ಆತ ಕಾಲ್ನಡಿಗೆಯಲ್ಲಿ ಪರಾರಿಯಾಗಿದ್ದನು. ಜರ್ಮನ್ ಪೊಲೀಸರು ಭಾನುವಾರ ಈ 21 ವರ್ಷದ ಶಂಕಿತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.

ಜರ್ಮನ್ ಅಧಿಕಾರಿಗಳ ಪ್ರತಿಕ್ರಿಯೆ

"ಇದು ಅಸಹ್ಯಕರ ಕೃತ್ಯ!" ಎಂದು ಜರ್ಮನಿಯ ಚಾನ್ಸಲರ್ ಫ್ರಿಡ್ರಿಕ್ ಮೆರ್ಝ್ ಅವರು X ಸಾಮಾಜಿಕ ಜಾಲತಾಣದಲ್ಲಿ ಬರೆದು, ಇದನ್ನು "ನಮ್ಮ ಸಮಾಜದ ಮೇಲಿನ ದಾಳಿ" ಎಂದು ಬಣ್ಣಿಸಿದ್ದಾರೆ. "ನಾವು ಮುಕ್ತ ಮತ್ತು ಸ್ವಾತಂತ್ರ್ಯವನ್ನು ಪ್ರೀತಿಸುವ ಸಮಾಜವಾಗಿದ್ದೇವೆ. ಅದನ್ನು ನಾವು ಕಾಪಾಡುತ್ತೇವೆ ಮತ್ತು ರಕ್ಷಿಸುತ್ತೇವೆ. ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ, ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.

ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬರ್ಲಿನ್ ಮೇಯರ್ ಕೈ ವ್ಯಾಗ್ನರ್ ಕೂಡ, "ಇದು ನಮ್ಮ ಮುಕ್ತ ಮತ್ತು ಮುಕ್ತ ಮನೋಭಾವದ ಸಮಾಜದ ಮೇಲಿನ ದಾಳಿಯಾಗಿದೆ" ಎಂದು ಹೇಳಿದರು. "ನಮ್ಮ ಜೀವನಶೈಲಿಯನ್ನು ಹಾಗೂ ನಾವು ಒಟ್ಟಾಗಿ ಬದುಕುವ ರೀತಿಯನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ" ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಜರ್ಮನಿಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳು

ಇತ್ತೀಚಿನ ವರ್ಷಗಳಲ್ಲಿ ಬರ್ಲಿನ್ ಹಲವು ದಾಳಿಗಳು ಮತ್ತು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದೆ. 2025ರ ಫೆಬ್ರವರಿಯಲ್ಲಿ, ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳ ಮೊದಲು, ಹೋಲೋಕಾಸ್ಟ್ ಸ್ಮಾರಕದ ಸಮೀಪ ಸ್ಪೇನ್‌ನ ಪ್ರವಾಸಿಗನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಜಿಹಾದಿ ದಾಳಿಗೆ ಸಂಬಂಧಿಸಿದಂತೆ, ಮಾರ್ಚ್ ಆರಂಭದಲ್ಲಿ ಸಿರಿಯಾದ ಯುವಕನೊಬ್ಬನಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

2016ರ ಡಿಸೆಂಬರ್‌ನಲ್ಲಿ, ಟಿಯರ್ಗಾರ್ಟನ್‌ನ ದಕ್ಷಿಣ ಭಾಗದಲ್ಲಿರುವ ಕ್ರಿಸ್ಮಸ್ ಮಾರುಕಟ್ಟೆಗೆ ಟುನೀಷ್ಯಾದ ವ್ಯಕ್ತಿಯೊಬ್ಬ ಟ್ರಕ್ ನುಗ್ಗಿಸಿ 12 ಮಂದಿಯನ್ನು ಹತ್ಯೆ ಮಾಡಿದ್ದನು. ಆ ದಾಳಿಯೂ ಇದೇ ರೀತಿಯ ಸೈದ್ಧಾಂತಿಕ ಹಿನ್ನೆಲೆಯನ್ನು ಹೊಂದಿತ್ತು.

2024ರ ಕೊನೆಯಲ್ಲಿ, ದೇಶದ ಪೂರ್ವ ಭಾಗದ ಮ್ಯಾಗ್ಡೆಬರ್ಗ್ ನಗರದಲ್ಲಿ ನಡೆದ ಮತ್ತೊಂದು ವಾಹನ ದಾಳಿಯಲ್ಲಿ, ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸೌದಿ ಅರೇಬಿಯಾದ ಮನೋವೈದ್ಯನೊಬ್ಬನಿಗೆ ಜೂನ್ ಅಂತ್ಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇದೇ ವೇಳೆ, ಮೇ ತಿಂಗಳ ಆರಂಭದಲ್ಲಿ, 33 ವರ್ಷದ ಜರ್ಮನ್ ಪ್ರಜೆಯೊಬ್ಬ ಲೈಪ್‌ಝಿಗ್ ನಗರದ ಮಧ್ಯಭಾಗದ ವ್ಯಾಪಾರ ಬೀದಿಯಲ್ಲಿ ಕಾರನ್ನು ಪಾದಚಾರಿಗಳ ಮೇಲೆ ಹರಿಸಿ ಇಬ್ಬರನ್ನು ಹತ್ಯೆ ಮಾಡಿ, ಆರು ಮಂದಿಗೆ ಗಾಯಗೊಳಿಸಿದ್ದನು. ನಂತರ ಆತನನ್ನು ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಜುಲೈ 2026, 10:27