ಹುಡುಕಿ

ವಂ. ಗುರು ಜಾಕ್ ಹಾಮೆಲ್ ವಂ. ಗುರು ಜಾಕ್ ಹಾಮೆಲ್ 

ಫಾದರ್ ಜಾಕ್ ಹಾಮೆಲ್ ಅವರ ಹತ್ಯೆ: ಕ್ರೈಸ್ತರು ಮತ್ತು ಮುಸ್ಲಿಮರನ್ನು ತಲ್ಲಣಗೊಳಿಸಿದ ದುರಂತ

ಹತ್ತು ವರ್ಷಗಳ ಹಿಂದೆ, 2016ರ ಜುಲೈ 26ರಂದು, ಉತ್ತರ ಫ್ರಾನ್ಸ್‌ನ ಸೈಂಟ್-ಎಟಿಯೆನ್-ದು-ರುವ್ರೇ ಧರ್ಮಕೇಂದ್ರದ ಗುರು ಜಾಕ್ ಹಾಮೆಲ್ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸುತ್ತಿದ್ದಾಗ ಹತ್ಯೆಗೀಡಾದರು. ತಮ್ಮನ್ನು ಇಸ್ಲಾಮಿಕ್ ಸ್ಟೇಟ್ ಎಂದು ಕರೆದುಕೊಳ್ಳುತ್ತಿದ್ದ ಸಂಘಟನೆಗೆ ನಿಷ್ಠೆ ಘೋಷಿಸಿದ್ದ ಇಬ್ಬರು ಭಯೋತ್ಪಾದಕರು ಅವರ ಕಂಠ ಸೀಳಿದರು. ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿದ್ದ ವಿಶ್ವಾಸಿಗಳಲ್ಲೊಬ್ಬರು ಸಹ ಗಂಭೀರವಾಗಿ ಗಾಯಗೊಂಡರು.

ಲೇಖಕರು: ಜೀನ್-ಚಾರ್ಲ್ಸ್ ಪುಟ್ಜೋಲು

2016ರ ಜುಲೈ 26ರಂದು ತಮ್ಮ ದೇವಾಲಯದಲ್ಲೇ ಹತ್ಯೆಗೀಡಾದ ಫಾದರ್ ಜಾಕ್ ಹಾಮೆಲ್ ಅವರ ಹತ್ಯೆಯ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಫ್ರಾನ್ಸ್‌ನಲ್ಲಿ ಹಲವು ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಸೈಂಟ್-ಎಟಿಯೆನ್-ದು-ರುವ್ರೇಯಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಪರಸ್ಪರ ತಿಳಿವಳಿಕೆಯನ್ನು ಬೆಳೆಸುವ ಅಂತರ್ಧರ್ಮೀಯ ಕಾರ್ಯಕ್ರಮಗಳು, ಪ್ರದರ್ಶನಗಳು, ಪ್ರಾರ್ಥನಾ ಕೂಟಗಳು ಹಾಗೂ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫ್ರಾನ್ಸ್ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಜೀನ್-ಮಾರ್ಕ್ ಅವೆಲಿನ್ ಅವರು ಭಾನುವಾರ ನಡೆಯುವ ಪವಿತ್ರ ಬಲಿ ಪೂಜೆಯ ಅಧ್ಯಕ್ಷತೆ ವಹಿಸಲಿದ್ದು, ಅದನ್ನು ಫ್ರಾನ್ಸ್‌ನ ಸಾರ್ವಜನಿಕ ದೂರದರ್ಶನ ವಾಹಿನಿಗಳು ನೇರ ಪ್ರಸಾರ ಮಾಡಲಿವೆ.

ಈ ಘಟನೆಗಳ ನೆನಪನ್ನು ಯುವ ಪೀಳಿಗೆಗಾಗಿ ಉಳಿಸಿಕೊಳ್ಳುವುದು ಮುಖ್ಯವಾಗಿರುವಂತೆಯೇ, ಕಳೆದ ಹತ್ತು ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂಬಂಧಗಳು ಅಭಿವೃದ್ಧಿ ಹೊಂದಿವೆ ಎಂಬುದನ್ನು ಗುರುತಿಸುವುದೂ ಅಗತ್ಯವಾಗಿದೆ. ಆದಾಗ್ಯೂ, ಇನ್ನೂ ಸಾಕಷ್ಟು ಕಾರ್ಯ ಬಾಕಿಯಿದ್ದು, ಪರಸ್ಪರ ಅಪನಂಬಿಕೆಯನ್ನು ರಾಜಕೀಯ ಮತ್ತು ಸೈದ್ಧಾಂತಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಅಪಾಯವೂ ಉಳಿದಿದೆ. ಈ ಹಿನ್ನೆಲೆಯಲ್ಲಿ ವ್ಯಾಟಿಕನ್ ವಾರ್ತಾ ಸಂಸ್ಥೆ, ಫ್ರಾನ್ಸ್ ಧರ್ಮಾಧ್ಯಕ್ಷರ ಸಮ್ಮೇಳನದ ಮುಸ್ಲಿಮರೊಂದಿಗಿನ ಸಂಬಂಧಗಳ ರಾಷ್ಟ್ರೀಯ ಸೇವೆಯ ನಿರ್ದೇಶಕರಾದ ಡೊಮಿನಿಕನ್ ಧರ್ಮಗುರು ಫಾ. ಜೀನ್-ಫ್ರಾಂಸುವಾ ಬೂರ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

ಫಾದರ್ ಜೀನ್-ಫ್ರಾಂಸುವಾ ಬೂರ್ ಅವರೇ, ಫಾದರ್ ಹಾಮೆಲ್ ಅವರ ಹತ್ಯೆಯು ಕ್ರೈಸ್ತ–ಮುಸ್ಲಿಂ ಸಂವಾದವನ್ನು ಹೇಗೆ ಮುಂದುವರಿಸಿತು?

ಫ್ರಾನ್ಸಿನಲ್ಲಿ, ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂವಾದವು 2016ರ ಮೊದಲೇ ಕೇವಲ ಸೌಹಾರ್ದ ಸಂಬಂಧಗಳಿಗೆ ಸೀಮಿತವಾಗಿರಲಿಲ್ಲ. ಈ ಸಂಬಂಧವು ಈಗಾಗಲೇ 1950ರ ದಶಕದಲ್ಲಿಯೇ ಬೆಳೆಯಲು ಆರಂಭಿಸಿತ್ತು. ಫ್ರಾನ್ಸ್ ಧರ್ಮಸಭೆಯು 1973ರಲ್ಲೇ ಮುಸ್ಲಿಮರೊಂದಿಗಿನ ಸಂಬಂಧಗಳಿಗಾಗಿ ವಿಶೇಷ ಕಚೇರಿಯನ್ನು ಸ್ಥಾಪಿಸಿತ್ತು. ಇದರಿಂದ ಈ ಕಾರ್ಯದಲ್ಲಿ ತೊಡಗಿದ್ದ ಕಥೋಲಿಕ ಕ್ರೈಸ್ತರಿಗೆ ಇಸ್ಲಾಂ ಧರ್ಮದ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಮುಸ್ಲಿಂ ಇತಿಹಾಸದ ಸಂಕೀರ್ಣತೆ ಹಾಗೂ ಇಸ್ಲಾಮಿಕ್ ಧರ್ಮದ ಆಂತರಿಕ ಸ್ವರೂಪವನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ ನಿಜವಾದ ತಿರುವಿನ ಬಗ್ಗೆ ಮಾತನಾಡುವುದಾದರೆ, ಅದನ್ನು 2001ರ ಸುಮಾರಿಗೆ ಗುರುತಿಸಬೇಕು. ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಗಳು ಆಳವಾದ ಜಾಗೃತಿಯನ್ನು ಉಂಟುಮಾಡಿದವು. ಆ ಕ್ಷಣದಿಂದಲೇ ಕೆಲವು ಚಳವಳಿಗಳು ಏಕೆ ಭಯೋತ್ಪಾದಕ ಹಿಂಸೆಯನ್ನು ಆಯ್ಕೆ ಮಾಡುತ್ತವೆ ಎಂಬ ಪ್ರಶ್ನೆಗಳು ಉದ್ಭವಿಸಿದವು ಮತ್ತು ವ್ಯಾಪಕವಾದ ಚಿಂತನಾ ಪ್ರಕ್ರಿಯೆ ಆರಂಭವಾಯಿತು.

2001ರ ಆ ಆರಂಭಿಕ ಜಾಗೃತಿಯ ನಂತರ ಮತ್ತು 2010ರ ದಶಕದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಬಳಿಕ ಏನು ಬದಲಾಯಿತು?

ಉದಾಹರಣೆಗೆ, ಮುಸ್ಲಿಮರಲ್ಲಿ ಆಳವಾದ ಆಘಾತ ಉಂಟಾಯಿತು. ಅವರಲ್ಲಿ ಅನೇಕರಿಗೆ ಇದು ಅತ್ಯಂತ ನೋವಿನ ಸಂಗತಿಯಾಗಿತ್ತು. ಏಕೆಂದರೆ ಹಿಂದಿನ ಪೀಳಿಗೆಯಿಂದ ಅವರಿಗೆ ಹಿಂಸೆ ಅಥವಾ ಅರಾಜಕತೆಯನ್ನು ಪ್ರೋತ್ಸಾಹಿಸುವ ಇಸ್ಲಾಂನ ಯಾವುದೇ ತಿಳುವಳಿಕೆ ದೊರೆತಿರಲಿಲ್ಲ. ಜಿಹಾದಿ ಮತ್ತು ಭಯೋತ್ಪಾದಕ ಚಳವಳಿಗಳು ಅಸ್ತಿತ್ವದಲ್ಲಿವೆ ಎಂಬ ಅರಿವು ಅವರಿಗೆ ಅಕಸ್ಮಾತ್ತಾಗಿ ಉಂಟಾಯಿತು. ಫಾದರ್ ಹಾಮೆಲ್ ಅವರ ಹತ್ಯೆಯ ನಂತರ ಉನ್ನತ ಮಟ್ಟದ ಮುಸ್ಲಿಂ ನಿಯೋಗಗಳು ಫ್ರಾನ್ಸ್‌ಗೆ ಬಂದವು. ಅವರು ಪ್ಯಾರಿಸ್‌ನಲ್ಲಿ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿ, ಸೈಂಟ್-ಎಟಿಯೆನ್-ದು-ರುವ್ರೇಗೆ ತೆರಳಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು ಹಾಗೂ ಈ ದಾಳಿಯನ್ನು ಸಾರ್ವಜನಿಕವಾಗಿ ಖಂಡಿಸಿದರು.

ಹಿಂಸೆಯನ್ನು ತಿರಸ್ಕರಿಸಿದ ಆ ಮುಸ್ಲಿಮರು ಸಂವಾದವನ್ನು ಉತ್ತೇಜಿಸುವಲ್ಲಿ ಒಂದು ರೀತಿಯಲ್ಲಿ ಮುಂದಾಳತ್ವ ವಹಿಸಿದರೇ?

ಅವರು ಔಪಚಾರಿಕವಾಗಿ ಮುಂದಾಳತ್ವ ವಹಿಸಿದರು ಎಂದು ನಾನು ಹೇಳುವುದಿಲ್ಲ. ಆದರೆ ಈಗಾಗಲೇ ಅಸ್ತಿತ್ವದಲ್ಲಿದ್ದ ಸಂವಾದವನ್ನು ಹೊಸ ಹಂತಕ್ಕೆ ಕೊಂಡೊಯ್ಯುವುದು ಅಗತ್ಯವೆಂಬುದನ್ನು ಅವರು ಅರಿತುಕೊಂಡರು. ಆ ಸಂವಾದದಲ್ಲಿ ಸಾಮಾನ್ಯವಾಗಿ ಕ್ರೈಸ್ತರೇ ಹೆಚ್ಚು ಸಕ್ರಿಯರಾಗಿದ್ದರು. ಸೌದಿ ಅರೇಬಿಯಾದ ವಹಾಬಿ ಸಂಪ್ರದಾಯದ ಜಾಗತಿಕ ಪ್ರತಿನಿಧಿಯಾಗಿರುವ ಮುಸ್ಲಿಂ ವರ್ಲ್ಡ್ ಲೀಗ್‌ನ ಪ್ರಧಾನ ಕಾರ್ಯದರ್ಶಿಯವರೂ ಸಹ ಸೈಂಟ್-ಎಟಿಯೆನ್-ದು-ರುವ್ರೇಗೆ ಬಂದರು. ಅವರು ಮಹಾಧರ್ಮಾಧ್ಯಕ್ಷ ಡೊಮಿನಿಕ್ ಲೆಬ್ರೂನ್ ಅವರೊಂದಿಗೆ ಸ್ಮರಣಾರ್ಥ ಜಾಗರಣೆಯಲ್ಲಿ ಭಾಗವಹಿಸಿದರು. ಈ ಧಾರ್ಮಿಕ ನಾಯಕರು ತಾವು ಇಸ್ಲಾಮಿನ ಒಂದು ಸಂಪ್ರದಾಯವಾದಿ ಧೋರಣೆಯನ್ನು ಪ್ರತಿನಿಧಿಸುತ್ತಿದ್ದರೂ, ವಿಭಿನ್ನ ಸಂದೇಶವನ್ನು ಸಾರುವುದು ಅತ್ಯಗತ್ಯ ಎಂಬುದನ್ನು ಅರ್ಥಮಾಡಿಕೊಂಡಿದ್ದರು.

ಕ್ರೈಸ್ತರಲ್ಲಿಯೂ ಇತರರನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವ ಮನೋಭಾವದಿಂದ ಅಪನಂಬಿಕೆಯ ಗೋಡೆಗಳು ಸುಲಭವಾಗಿ ನಿರ್ಮಾಣವಾಗುವುದಿಲ್ಲವೇ? 

ಇಂತಹ ದುರಂತಗಳ ನಂತರ ಸಾಮಾನ್ಯ ಜನರು ಎದ್ದು ನಿಂತು, ಈ ರೀತಿಯ ಹಿಂಸೆ ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವುದನ್ನು ನಾವು ನೋಡುತ್ತೇವೆ. ಮುಸ್ಲಿಮರಲ್ಲಿಯೂ, ಕ್ರೈಸ್ತರಲ್ಲಿಯೂ, ಅಲ್ಲದೆ ಯಾವುದೇ ಧರ್ಮವನ್ನು ಅನುಸರಿಸದವರಲ್ಲಿಯೂ ಇದೇ ಮನೋಭಾವವನ್ನು ಕಾಣುತ್ತೇವೆ. ಅವರು ಈ ರೀತಿಯ ಉಗ್ರವಾದವನ್ನು ತಿರಸ್ಕರಿಸುತ್ತಾರೆ. ಅವರಲ್ಲಿ ಅನೇಕರು ಸಂವಾದಕ್ಕಾಗಿ ಕಾರ್ಯನಿರ್ವಹಿಸುವ ಸಂಘಟನೆಗಳಿಗೆ ಸೇರಬೇಕೆಂಬ ಅರಿವು ಮೂಡಿಸಿಕೊಂಡಿದ್ದಾರೆ ಮತ್ತು ತಮ್ಮ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸುತ್ತಿದ್ದಾರೆ. ಉದಾಹರಣೆಗೆ, ಕೊಮೊರೊಸ್ ಮೂಲದ ಒಬ್ಬ ಮುಸ್ಲಿಂ ಫಾದರ್ ಹಾಮೆಲ್ ಅವರು ತಮ್ಮ ದೇವಾಲಯದಲ್ಲಿ ಪ್ರವಚನ ನೀಡುತ್ತಿರುವ ಚಿತ್ರವನ್ನು ಬಿಡಿಸಿ ಉಡುಗೊರೆಯಾಗಿ ನೀಡಿದ ಘಟನೆ ನನ್ನನ್ನು ವಿಶೇಷವಾಗಿ ಸ್ಪರ್ಶಿಸಿತು. ಮುಸ್ಲಿಮರು ಸೈಂಟ್-ಎಟಿಯೆನ್-ದು-ರುವ್ರೇ ಸಮಾಧಿಯಲ್ಲಿ ಇರುವ ಫಾದರ್ ಹಾಮೆಲ್ ಅವರ ಸಮಾಧಿಗೆ ಬಂದು ಹೂಗಳನ್ನು ಅರ್ಪಿಸಿದರು.

ಹತ್ತು ವರ್ಷಗಳ ನಂತರ, ಫಾದರ್ ಹಾಮೆಲ್ ಅವರ ಹತ್ಯೆಯು ಅನೇಕ ಯುವಜನರಿಗೆ ದೂರದ ಮತ್ತು ಅಮೂರ್ತ ಘಟನೆಯಂತೆ ತೋರಬಹುದು. ಅದರ ನೆನಪನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯ?

ಇದು ನಿಜವಾಗಿಯೂ ಅತ್ಯಂತ ದೊಡ್ಡ ಸವಾಲಾಗಿದೆ. ಫಾದರ್ ಹಾಮೆಲ್ ಅವರ ಕಥೆಯಲ್ಲಿ, ಒಬ್ಬ ವ್ಯಕ್ತಿಯ ಮರಣದ ದುರಂತವು ಅವರು ಪ್ರಾರ್ಥನೆಯಲ್ಲಿ ತೊಡಗಿದ್ದಾಗಲೇ ಹತ್ಯೆಯಾಗಿರುವ ಭೀಕರತೆಯಿಂದ ಮತ್ತಷ್ಟು ಗಂಭೀರವಾಗಿದೆ ಎಂಬುದನ್ನು ಮುಸ್ಲಿಮರು ಸ್ಪಷ್ಟವಾಗಿ ಗುರುತಿಸಿದರು. ಆರಾಧನೆಯ ಸಮಯದಲ್ಲಿ ನಡೆದ ಇಂತಹ ಹಿಂಸಾಚಾರದ ಬಗ್ಗೆ ಅನೇಕ ಮುಸ್ಲಿಮರು ತಮ್ಮ ಆಘಾತ ಮತ್ತು ಸಂಪೂರ್ಣ ಅಸಹ್ಯವನ್ನು ವ್ಯಕ್ತಪಡಿಸಿದರು. ಇಂದಿನ ಫ್ರಾನ್ಸ್‌ನ ಅನೇಕ ಯುವ ಕ್ರೈಸ್ತರಲ್ಲಿಯೂ ಅನಿಶ್ಚಿತತೆ ಮತ್ತು ಆತಂಕದ ಭಾವನೆ ಇದೆ. ವಿಶಾಲವಾಗಿ ನೋಡಿದರೆ, ಕ್ರೈಸ್ತರು ಮತ್ತು ಕ್ರೈಸ್ತೇತರರು ಸೇರಿದಂತೆ ಇಡೀ ಫ್ರೆಂಚ್ ಸಮಾಜದಲ್ಲೇ ವ್ಯಾಪಕವಾದ ಆತಂಕವಿದ್ದು, ಅದು ದೇಶದ ರಾಜಕೀಯ ವಾತಾವರಣಕ್ಕೂ ವ್ಯಾಪಿಸಿದೆ. ಆದ್ದರಿಂದಲೇ ಇಂದು ಶಿಕ್ಷಣದ ಸವಾಲು ಅತ್ಯಂತ ಮಹತ್ವದ್ದಾಗಿದೆ.

ಫಾದರ್ ಹಾಮೆಲ್ ಅವರ ಹತ್ಯೆಯ ತಕ್ಷಣದ ನಂತರ ಫ್ರಾನ್ಸ್ ಧರ್ಮಸಭೆಯು ಪ್ರಕಟಿಸಿದ ಸಂವಾದ, ಕ್ಷಮೆ ಮತ್ತು ಸೌಹಾರ್ದತೆಯ ಸಂದೇಶ ಫ್ರಾನ್ಸ್‌ನ ಅಧಿಕಾರಿಗಳನ್ನು ಬಹಳ ಆಶ್ಚರ್ಯಗೊಳಿಸಿತು ಹಾಗೂ ಅವರಿಗೆ ಧೈರ್ಯ ತುಂಬಿತು. ದಶಕಗಳಿಂದ ನಾವು ಫ್ರಾನ್ಸ್‌ನಲ್ಲಿ ಇಸ್ಲಾಂ ಹಾಗೂ ಕ್ರೈಸ್ತ–ಮುಸ್ಲಿಂ ಸಂವಾದದ ಕುರಿತು ದೇವತಾಶಾಸ್ತ್ರೀಯ ಮತ್ತು ಧಾರ್ಮಿಕ ಸೇವೆಯ ಚಿಂತನೆಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಇದು 2016ರಲ್ಲಿ ಆರಂಭವಾದದ್ದಲ್ಲ. ಫಾದರ್ ಹಾಮೆಲ್ ಅವರ ಮರಣಕ್ಕೂ ಅಥವಾ ಮಾರಕ ಸಿದ್ಧಾಂತವನ್ನು ಅಳವಡಿಸಿಕೊಂಡ ಕೆಲ ವ್ಯಕ್ತಿಗಳು ನಡೆಸಿದ ಭಯೋತ್ಪಾದಕ ದಾಳಿಗಳಿಗೂ ಎಲ್ಲಾ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಫ್ರಾನ್ಸ್ ಧರ್ಮಸಭೆಯು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಿತು.

ಈ ದುರಂತಕ್ಕೆ ಹತ್ತು ವರ್ಷಗಳಾದ ನಂತರವೂ ಸಂಪೂರ್ಣ ಶಾಂತಿಯುತ ಅಂತರ್ಧರ್ಮೀಯ ಸಂವಾದಕ್ಕೆ ಯಾವ ಅಡೆತಡೆಗಳು ಉಳಿದಿವೆ?

ಇಂದು ಅಂತರ್ಧರ್ಮೀಯ ಸಂವಾದಕ್ಕೆ ಇರುವ ಅತ್ಯಂತ ದೊಡ್ಡ ಅಡೆತಡೆಯೆಂದರೆ, ಈಗ ಅದಕ್ಕಿಂತ ಹೆಚ್ಚು ತುರ್ತು ಸಮಸ್ಯೆಗಳಿವೆ ಮತ್ತು ಅಂತರ್ಧರ್ಮೀಯ ಸಂವಾದವು ಇನ್ನು ಆದ್ಯತೆಯ ವಿಷಯವಲ್ಲ ಎಂಬ ನಂಬಿಕೆ. ಕೈಚೆಲ್ಲುವ, ರಕ್ಷಣಾತ್ಮಕ ಧೋರಣೆ ಅಳವಡಿಸಿಕೊಳ್ಳುವ ಹಾಗೂ ಕ್ರೈಸ್ತ ಜೀವನ ಅಥವಾ ಸುವಾರ್ತಾ ಪ್ರಚಾರವನ್ನು ಮುಸ್ಲಿಮರ ವಿರುದ್ಧದ ಒಂದು ಕೋಟೆಯಂತೆ ರೂಪಿಸುವ ಪ್ರಲೋಭನೆ ಇದೆ. ಇಂತಹ ಮಾತುಗಳನ್ನು ನಾವು ಕೆಲವೊಮ್ಮೆ ಕೇಳುತ್ತೇವೆ, ಆದರೆ ಎಲ್ಲರಿಂದಲೂ ಅಲ್ಲ. ನಾವು ಇದನ್ನು ಮೀರಿ ಮುಂದೆ ಸಾಗಬೇಕು ಎಂದು ನಾನು ನಂಬುತ್ತೇನೆ. ನಾವು ಪರಸ್ಪರ ಮಾತನಾಡಲು ಹಾಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದೇವೆ ಎಂಬ ವಿಶ್ವಾಸದಿಂದ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂದು ನಾನು ಬಲವಾಗಿ ಪ್ರೋತ್ಸಾಹಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ, ಈಗ ಅಗತ್ಯವಿರುವುದು ನವೀಕೃತ ಪ್ರಯತ್ನ ಮತ್ತು ನವೀಕೃತ ಬದ್ಧತೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

24 ಜುಲೈ 2026, 19:50