ಏಷ್ಯಾದಾದ್ಯಂತ ಸೇತುವೆಗಳನ್ನು ನಿರ್ಮಿಸುವ ಸಹಪ್ರಯಾಣದ ಧರ್ಮಸಭೆಯ ಕನಸನ್ನು ಹಂಚಿಕೊಂಡ FABC ಪ್ರತಿನಿಧಿಗಳು
ಲೇಖಕರು: ಗ್ಯಾಬ್ರಿಯೆಲ್ ಅಬ್ದಿ ಸುಸಾಂತೊ - ಜಕಾರ್ತಾ
ಇಪ್ಪತ್ತಕ್ಕೂ ಹೆಚ್ಚು ಚರ್ಚಾ ಮೇಜುಗಳ ಸುತ್ತ ಆರಂಭವಾದ ಸಂವಾದಗಳು, ಅಂತಿಮವಾಗಿ ಏಷ್ಯಾದ ಧರ್ಮಸಭೆಯ ಭವಿಷ್ಯದ ಕುರಿತಾದ ಒಂದು ಸಾಮೂಹಿಕ ದೃಷ್ಟಿಕೋನವಾಗಿ ರೂಪುಗೊಂಡವು.
ಗುರುವಾರ ಮಧ್ಯಾಹ್ನ (ಜುಲೈ 23), ಏಷ್ಯಾದ ಧರ್ಮಾಧ್ಯಕ್ಷರ ಸಮ್ಮೇಳನಗಳ ಒಕ್ಕೂಟದ (FABC) 12ನೇ ಪೂರ್ಣಾಧಿವೇಶನದ ಪ್ರತಿನಿಧಿಗಳು ತಮ್ಮ ಮೇಜು-ಸಂಭಾಷಣೆಗಳ ಫಲಿತಾಂಶಗಳನ್ನು ಮಂಡಿಸಿದರು. ಏಷ್ಯಾದಾದ್ಯಂತದ ಸ್ಥಳೀಯ ಧರ್ಮಸಭೆಗಳಲ್ಲಿ ಮೂಡಿಬರುತ್ತಿರುವ ಆಶೆಗಳು, ಹೋರಾಟಗಳು ಹಾಗೂ ಆಕಾಂಕ್ಷೆಗಳ ವಿಶಾಲ ಚಿತ್ರಣವನ್ನು ಅವರು ನೀಡಿದರು. ಪ್ರತಿ ಚರ್ಚಾ ಮೇಜು ವಿಭಿನ್ನ ರಾಷ್ಟ್ರೀಯ ಸನ್ನಿವೇಶಗಳು ಮತ್ತು ಧಾರ್ಮಿಕ ಸೇವೆಯ ವಾಸ್ತವತೆಗಳನ್ನು ಪ್ರತಿಬಿಂಬಿಸಿದ್ದರೂ, ಒಂದು ಗಮನಾರ್ಹ ಒಮ್ಮತ ಹೊರಹೊಮ್ಮಿತು: ಹೆಚ್ಚುತ್ತಿರುವ ವಿಭಜನೆಯಿಂದ ಗುರುತಿಸಲ್ಪಡುತ್ತಿರುವ ಜಗತ್ತಿನಲ್ಲಿ ಏಷ್ಯಾದ ಧರ್ಮಸಭೆಯು ಹೆಚ್ಚು ವಿಶ್ವಾಸಾರ್ಹ ಸೇತುವೆ ನಿರ್ಮಿಸುವ ಧರ್ಮಸಭೆಯಾಗಲು ಕರೆಯಲ್ಪಟ್ಟಿದೆ.
ಈ ವರದಿ ಮಂಡನೆಗೆ ಮುನ್ನ ಹಲವಾರು ಗಂಟೆಗಳ ಕಾಲ ಕಾರ್ಡಿನಲ್ಗಳು, ಧರ್ಮಾಧ್ಯಕ್ಷರು, ಧರ್ಮಗುರುಗಳು, ದೇವ ಸೇವಕ-ಸೇವಕಿಯರು ಹಾಗೂ ಸಾಮಾನ್ಯ ವಿಶ್ವಾಸಿ ಪ್ರತಿನಿಧಿಗಳು ಸಣ್ಣ ಗುಂಪುಗಳಲ್ಲಿ ಎರಡು ಪ್ರಮುಖ ಪ್ರಶ್ನೆಗಳ ಕುರಿತು ಚಿಂತನೆ ನಡೆಸಿದರು. ಸೇತುವೆ ನಿರ್ಮಿಸುವ ಧರ್ಮಸಭೆಯಾಗಿ ಇಂದಿನ ಭೌಗೋಳಿಕ-ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಾಸ್ತವತೆಗಳಿಗೆ ಧರ್ಮಸಭೆಯು ಹೇಗೆ ಸ್ಪಂದಿಸಬೇಕು? ಸ್ಥಳೀಯ ಧರ್ಮಸಭೆಗಳು ಇನ್ನಷ್ಟು ಧರ್ಮಪ್ರಚಾರಕ ಮತ್ತು ಸಹಪ್ರಯಾಣದ ಧರ್ಮಸಭೆಗಳಾಗಲು ಯಾವ ರೀತಿಯ ಪರಿವರ್ತನೆ ಅಗತ್ಯ? ವಿಭಿನ್ನ ಧ್ವನಿಗಳಲ್ಲಿ ವ್ಯಕ್ತವಾದ ಉತ್ತರಗಳು ಏಷ್ಯಾ ಒಂದು ನಿರ್ಣಾಯಕ ಘಟ್ಟದಲ್ಲಿದೆ ಎಂಬ ಸಾಮಾನ್ಯ ಅರಿವನ್ನು ಬಿಂಬಿಸಿದವು.
ಧರ್ಮಸಭೆಯ ಧರ್ಮಪ್ರಚಾರದ ಕರೆ
ಏಷ್ಯಾದಾದ್ಯಂತ ಪ್ರತಿನಿಧಿಗಳು ಯುದ್ಧ, ರಾಜಕೀಯ ಧ್ರುವೀಕರಣ, ಆಕ್ರಮಣಕಾರಿ ರಾಷ್ಟ್ರೀಯತೆ, ಧಾರ್ಮಿಕ ಉಗ್ರವಾದ, ಬಲವಂತದ ವಲಸೆ, ಪರಿಸರ ಹಾನಿ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಸಂವಹನಗಳಿಂದ ಉಂಟಾಗುತ್ತಿರುವ ತ್ವರಿತ ಬದಲಾವಣೆಗಳೊಂದಿಗೆ ಹೋರಾಡುತ್ತಿರುವ ಸಮಾಜಗಳನ್ನು ವಿವರಿಸಿದರು. ವಿಭಜಿತ ಕುಟುಂಬಗಳು, ಸಂಸ್ಥೆಗಳ ಮೇಲಿನ ಕುಸಿಯುತ್ತಿರುವ ವಿಶ್ವಾಸ, ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿರುವ ತಪ್ಪು ಮಾಹಿತಿ ಹಾಗೂ ಹೆಚ್ಚೆಚ್ಚು ವಿಭಜಿತವಾಗುತ್ತಿರುವ ಜಗತ್ತಿನಲ್ಲಿ ಬದುಕಿನ ಅರ್ಥವನ್ನು ಹುಡುಕುತ್ತಿರುವ ಯುವಜನರ ಬಗ್ಗೆಯೂ ಅನೇಕರು ಪ್ರಸ್ತಾಪಿಸಿದರು.
ಆದರೂ, ಈ ವರದಿಗಳು ಗಮನಾರ್ಹ ಭರವಸೆಯಿಂದ ಕೂಡಿದ್ದವು. ಈ ವಾಸ್ತವತೆಗಳು ಧರ್ಮಸಭೆಯ ಭವಿಷ್ಯವನ್ನು ನಿರ್ಧರಿಸಲು ಬಿಡುವ ಬದಲು, ಅವುಗಳನ್ನು ಧರ್ಮಸಭೆಯ ಧರ್ಮಪ್ರಚಾರದ ಕರೆಯನ್ನು ನವೀಕರಿಸುವ ಅವಕಾಶಗಳಾಗಿ ಪ್ರತಿನಿಧಿಗಳು ಪುನಃ ಪುನಃ ವಿವರಿಸಿದರು.
ವಲಸೆ ಮತ್ತು ಶಿಕ್ಷಣ
ಉದಾಹರಣೆಗೆ, ವಲಸೆಯನ್ನು ಕೇವಲ ಮಾನವೀಯ ಸವಾಲಾಗಿ ಮಾತ್ರವಲ್ಲದೆ ದೇವರ ಕೃಪೆಯಿಂದ ದೊರೆತ ಅವಕಾಶವಾಗಿಯೂ ನಿರಂತರವಾಗಿ ಪರಿಗಣಿಸಲಾಯಿತು. ಅನೇಕ ಗುಂಪುಗಳು ಅಭಿಪ್ರಾಯಪಟ್ಟಂತೆ, ವಲಸಿಗರು ತಮ್ಮ ವಿಶ್ವಾಸವನ್ನು ಗಡಿಗಳನ್ನು ದಾಟಿಸಿ ಕೊಂಡೊಯ್ಯುತ್ತಾ ತಾವು ನೆಲೆಸುವ ಎಲ್ಲೆಡೆ ಧರ್ಮಪ್ರಚಾರಕರಾಗುತ್ತಾರೆ. ಅದೇ ವೇಳೆ ಸ್ಥಳೀಯ ಧರ್ಮಸಭೆಗಳು ಅವರನ್ನು ಸ್ವಾಗತಿಸುವ, ಜೊತೆಗಿರುವ ಹಾಗೂ ಐಕ್ಯತೆಯನ್ನು ಬೆಳೆಸುವ ಸ್ಥಳಗಳಾಗಲು ಆಹ್ವಾನಿಸಲ್ಪಟ್ಟಿವೆ. ಅದೇ ರೀತಿ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯು ಅಪಾಯಗಳನ್ನು ಹೊಂದಿದ್ದರೂ, ವಿಶೇಷವಾಗಿ ಯುವಜನರ ನಡುವೆ ಸುವಾರ್ತಾ ಪ್ರಚಾರಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ ಎಂಬುದನ್ನೂ ಗುರುತಿಸಲಾಯಿತು.
ಶಿಕ್ಷಣವು ಏಷ್ಯಾಕ್ಕೆ ಧರ್ಮಸಭೆಯು ನೀಡುತ್ತಿರುವ ಮಹಾನ್ ಕೊಡುಗೆಗಳಲ್ಲಿ ಒಂದಾಗಿ ಹೊರಹೊಮ್ಮಿತು. ಕಥೋಲಿಕ ಶಾಲೆಗಳು, ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಹಾಗೂ ಅಭಿವೃದ್ಧಿ ಸೇವೆಗಳು ಈಗಾಗಲೇ ಪ್ರತಿದಿನವೂ ಸೇತುವೆಗಳನ್ನು ನಿರ್ಮಿಸುತ್ತಿರುವ ಸ್ಥಳಗಳಾಗಿವೆ ಎಂದು ಪುನಃ ಪುನಃ ಗುರುತಿಸಲಾಯಿತು. ಸುವಾರ್ತೆಯಲ್ಲಿ ಬೇರೂರಿದ ಸೇವೆಯ ಮೂಲಕ ಅವು ವಿಭಿನ್ನ ಸಂಸ್ಕೃತಿಗಳು, ಧರ್ಮಗಳು ಹಾಗೂ ಸಾಮಾಜಿಕ ಹಿನ್ನೆಲೆಯ ಜನರನ್ನು ಒಂದಾಗಿಸುತ್ತಿವೆ. ಕಥೋಲಿಕರು ಅಲ್ಪಸಂಖ್ಯಾತರಾಗಿರುವ ದೇಶಗಳಲ್ಲಿ ಈ ಸೇವೆಗಳೇ ಧರ್ಮಸಭೆಯ ಅತ್ಯಂತ ಬಲವಾದ ಹಾಗೂ ವಿಶ್ವಾಸಾರ್ಹ ಸಾಕ್ಷಿಯಾಗಿವೆ ಎಂದು ಅನೇಕ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಧರ್ಮಸಭೆಯೊಳಗಿನ ಕಾರ್ಯ
ಆದರೆ ಧರ್ಮಸಭೆಯು ಸಮಾಜದಲ್ಲಿ ಸೇತುವೆಗಳನ್ನು ನಿರ್ಮಿಸಬೇಕಾದರೆ, ಪರಿವರ್ತನೆಯು ಮೊದಲು ಧರ್ಮಸಭೆಯೊಳಗೇ ಆರಂಭವಾಗಬೇಕು ಎಂದು ಪ್ರತಿನಿಧಿಗಳು ಒಮ್ಮತ ವ್ಯಕ್ತಪಡಿಸಿದರು. ಒಂದರ ಹಿಂದೆ ಮತ್ತೊಂದು ವರದಿಯು ಗುರುಕೇಂದ್ರಿತ ಮನೋಭಾವದಿಂದ ಸಹಜವಾಬ್ದಾರಿಯತ್ತ, ಅಧಿಕಾರಕೇಂದ್ರಿತ ನಾಯಕತ್ವದಿಂದ ಸೇವಕ ನಾಯಕತ್ವದತ್ತ, ಬಹಿಷ್ಕಾರದಿಂದ ಭಾಗವಹಿಸುವಿಕೆಯತ್ತ ಹಾಗೂ ಮಾತನಾಡುವುದರಿಂದ ಆಲಿಸುವಿಕೆಯತ್ತ ಸಾಗಬೇಕೆಂದು ಕರೆ ನೀಡಿತು. ಸಾಮಾನ್ಯ ವಿಶ್ವಾಸಿಗಳು, ಮಹಿಳೆಯರು, ಯುವಜನರು, ವಲಸಿಗರು, ಮೂಲನಿವಾಸಿ ಸಮುದಾಯಗಳು ಹಾಗೂ ಅಂಚಿನಲ್ಲಿರುವ ಜನರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಕೇವಲ ಆಡಳಿತಾತ್ಮಕ ಸುಧಾರಣೆಯಾಗಿ ಅಲ್ಲದೆ ಸಹಪ್ರಯಾಣದ ಧರ್ಮಸಭೆಯ ಅವಿಭಾಜ್ಯ ಅಭಿವ್ಯಕ್ತಿಯಾಗಿ ಪುನಃ ಪುನಃ ಪ್ರಸ್ತಾಪಿಸಲಾಯಿತು.
ಭವಿಷ್ಯದ ಧರ್ಮಗುರುಗಳನ್ನು ಕೇವಲ ಸಂಸ್ಥೆಗಳ ನಿರ್ವಹಣೆಗಾಗಿ ಮಾತ್ರವಲ್ಲದೆ ಜನರೊಂದಿಗೆ ಜೊತೆಯಾಗಲು, ಸಂವಾದವನ್ನು ಬೆಳೆಸಲು ಹಾಗೂ ವಿವೇಚನೆಯ ಮೂಲಕ ಸಮುದಾಯಗಳಿಗೆ ನಾಯಕತ್ವ ನೀಡಲು ಸಿದ್ಧಗೊಳಿಸುವ ರೀತಿಯಲ್ಲಿ ಗುರುಕುಲಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅನೇಕ ಪ್ರತಿನಿಧಿಗಳು ಒತ್ತಿಹೇಳಿದರು. ಸಹಪ್ರಯಾಣವು ಸಭೆಗಳಲ್ಲಿ ಚರ್ಚೆಯಾಗುವ ಒಂದು ಸಿದ್ಧಾಂತವಾಗಿ ಮಾತ್ರ ಉಳಿಯಬಾರದು; ಅದು ಧರ್ಮಸಭೆಯ ಸಾಮಾನ್ಯ ಜೀವನಶೈಲಿಯಾಗಬೇಕು ಎಂದು ಅವರು ಹೇಳಿದರು.
ಸಂವಾದ ಮತ್ತು ಸಹಪ್ರಯಾಣ
ಬಹುತೇಕ ಪ್ರತಿಯೊಂದು ವರದಿಯಲ್ಲಿಯೂ ಸಂವಾದವು ಪ್ರಮುಖ ವಿಷಯವಾಗಿ ಮೂಡಿಬಂತು. ಸರ್ಕಾರಗಳು, ಇತರ ಕ್ರೈಸ್ತ ಸಮುದಾಯಗಳು, ಇತರ ಧರ್ಮಗಳ ಅನುಯಾಯಿಗಳು ಅಥವಾ ಸದ್ಭಾವನೆಯ ಜನರೊಂದಿಗಿನ ಸಂಬಂಧಗಳ ಬಗ್ಗೆ ಮಾತನಾಡುವಾಗಲೂ, ಏಷ್ಯಾದ ಅಸಾಮಾನ್ಯ ವೈವಿಧ್ಯತೆಯು ಅಡ್ಡಿಯಲ್ಲ, ಅದು ದೇವರ ವರ ಎಂಬುದನ್ನು ಪ್ರತಿನಿಧಿಗಳು ನಿರಂತರವಾಗಿ ದೃಢಪಡಿಸಿದರು. ಕ್ರೈಸ್ತರು ಅನೇಕ ಕಡೆ ಅಲ್ಪಸಂಖ್ಯಾತರಾಗಿರುವ ಈ ಖಂಡದಲ್ಲಿ, ಸೇತುವೆ ನಿರ್ಮಾಣಕ್ಕೆ ವಿನಯ, ತಾಳ್ಮೆಯ ಆಲಿಸುವಿಕೆ, ಅಂತರ್ಸಾಂಸ್ಕೃತಿಕ ಸ್ನೇಹ ಹಾಗೂ ಸಾಮಾನ್ಯ ಹಿತಕ್ಕಾಗಿ ಸಹಕರಿಸುವ ಮನೋಭಾವ ಅಗತ್ಯವೆಂದು ಅವರು ಹೇಳಿದರು.
ಶಾಂತಿ ಸ್ಥಾಪನೆ, ಪರಿಸರ ಸಂರಕ್ಷಣೆ, ವಲಸೆ, ಕುಟುಂಬ ಜೀವನ, ಮಾನಸಿಕ ಆರೋಗ್ಯ, ಡಿಜಿಟಲ್ ನೈತಿಕತೆ ಹಾಗೂ ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯಂತಹ ವಿಷಯಗಳಲ್ಲಿ ಧರ್ಮಸಭೆಯು ತನ್ನ ಪ್ರವಾದಿಯ ಧ್ವನಿಯನ್ನು ಬಲಪಡಿಸಬೇಕು ಎಂದು ಹಲವು ಗುಂಪುಗಳು ಕರೆ ನೀಡಿದವು. ಜಗತ್ತಿನ ಸಂಕೀರ್ಣತೆಗಳಿಂದ ದೂರ ಸರಿಯುವುದಕ್ಕಿಂತ, ಸುವಾರ್ತೆಯಲ್ಲಿ ದೃಢವಾಗಿ ಬೇರೂರಿರುವ ಕರುಣಾಮಯ ಧರ್ಮಸಭೆಯಾಗಿ ಮಾನವಕುಲದ ಜೊತೆಯಲ್ಲಿ ಸಾಗಬೇಕೆಂದು ಅವರು ಕಲ್ಪಿಸಿಕೊಂಡರು.
ವರದಿ ಮಂಡನೆಯಿಂದ ಹೊರಹೊಮ್ಮಿದ ಅತ್ಯಂತ ಬಲವಾದ ನಂಬಿಕೆಯೆಂದರೆ, ಸಹಪ್ರಯಾಣವು ಕೇವಲ ಒಂದು ಧಾರ್ಮಿಕ ಸೇವೆಯ ವಿಧಾನವಲ್ಲ; ಅದು ಒಂದು ಆಧ್ಯಾತ್ಮಿಕ ಪರಿವರ್ತನೆಯಾಗಿದೆ. ಸತತವಾಗಿ ಪ್ರತಿನಿಧಿಗಳು ಧರ್ಮಸಭೆಯ ಮುಂದಿರುವ ಪಯಣವನ್ನು, ಕೇವಲ ನಿರ್ವಹಣೆಯಿಂದ ಧರ್ಮಪ್ರಚಾರದತ್ತ, ಸ್ವಯಂ ಸಂರಕ್ಷಣೆಯಿಂದ ಧರ್ಮಪ್ರಚಾರದ ಹೊರಮುಖ ಸೇವೆಯತ್ತ, ಧ್ರುವೀಕರಣದಿಂದ ಐಕ್ಯತೆಯತ್ತ ಹಾಗೂ ವೈಯಕ್ತಿಕ ನಾಯಕತ್ವದಿಂದ ದೀಕ್ಷಾಸ್ನಾನ ಪಡೆದ ಎಲ್ಲರ ಹಂಚಿಕೊಂಡ ಜವಾಬ್ದಾರಿಯತ್ತ ಸಾಗುವ ಚಲನೆಯಾಗಿ ವಿವರಿಸಿದರು.
ಒಟ್ಟಾಗಿ ನಡೆಯುವ ಸಾಮರ್ಥ್ಯವೇ ಭವಿಷ್ಯವನ್ನು ರೂಪಿಸುತ್ತದೆ
ಕೊನೆಯ ವರದಿಗಳು ಮುಕ್ತಾಯಗೊಂಡಾಗ ಸಭೆಯು ಚಪ್ಪಾಳೆ ಅಥವಾ ಚರ್ಚೆಯ ಮೂಲಕ ಪ್ರತಿಕ್ರಿಯಿಸಲಿಲ್ಲ. ಬದಲಾಗಿ ಪ್ರತಿನಿಧಿಗಳು ಮೌನಕ್ಕೆ ಪ್ರವೇಶಿಸಿದರು. ವರದಿ ಮಂಡನೆಯ ನಂತರ ಸಂಜೆಯ ಪ್ರಾರ್ಥನೆ ನಡೆಯಿತು. ಆ ವೇಳೆ ನಡೆದ ಪ್ರತಿಯೊಂದು ಸಂಭಾಷಣೆ, ಪ್ರತಿಯೊಂದು ಒಳನೋಟ ಮತ್ತು ಪ್ರತಿಯೊಂದು ಭರವಸೆಯನ್ನು ಪವಿತ್ರಾತ್ಮರ ಮಾರ್ಗದರ್ಶನಕ್ಕೆ ಸಭೆಯು ಸಮರ್ಪಿಸಿತು. ಕೇವಲ ವಿಚಾರ ವಿನಿಮಯಕ್ಕೆ ಮೀಸಲಾಗಿದ್ದ ದಿನವಲ್ಲ, ಏಷ್ಯಾದ ಧರ್ಮಸಭೆಗಳ ವೈವಿಧ್ಯಮಯ ಅನುಭವಗಳ ಮೂಲಕ ಮಾತನಾಡುತ್ತಿರುವ ದೇವರ ಧ್ವನಿಯನ್ನು ಒಟ್ಟಾಗಿ ವಿವೇಚಿಸುವ ದಿನಕ್ಕೆ ಇದು ಸೂಕ್ತ ಸಮಾಪ್ತಿಯಾಗಿತ್ತು.
ಆ ಪ್ರಾರ್ಥನೆಯ ಕ್ಷಣದಲ್ಲಿ, ಏಷ್ಯಾದ ಧರ್ಮಸಭೆಯ ಭವಿಷ್ಯವು ಕಾರ್ಯತಂತ್ರಗಳು, ರಚನೆಗಳು ಅಥವಾ ಚರ್ಚೆಗಳ ಶ್ರೀಮಂತಿಕೆಯಿಂದ ರೂಪುಗೊಳ್ಳುವುದಿಲ್ಲ; ಬದಲಾಗಿ ವಿನಮ್ರ ವಿವೇಚನೆಯೊಂದಿಗೆ ಒಟ್ಟಾಗಿ ನಡೆಯುವ ಅದರ ಸಿದ್ಧತೆಯಿಂದ ರೂಪುಗೊಳ್ಳುತ್ತದೆ ಎಂಬುದಕ್ಕೆ ಈ ಪೂರ್ಣಾಧಿವೇಶನವು ತನ್ನ ಅತ್ಯಂತ ಸ್ಪಷ್ಟ ಸಾಕ್ಷಿಯನ್ನು ನೀಡಿತು. ಐಕ್ಯತೆ, ಭಾಗವಹಿಸುವಿಕೆ ಮತ್ತು ಧರ್ಮಪ್ರಚಾರದ ಪಯಣದಲ್ಲಿ ಧರ್ಮಸಭೆಯನ್ನು ನಿರಂತರವಾಗಿ ಮಾರ್ಗದರ್ಶಿಸುತ್ತಿರುವವರು ಪವಿತ್ರಾತ್ಮನೇ ಎಂಬ ವಿಶ್ವಾಸವನ್ನು ಅದು ಪುನರುಚ್ಚರಿಸಿತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).