ಪ್ರಭುವಿನ ದಿನದ ಧ್ಯಾನ: ‘ಪ್ರಭು ಯೇಸು ಕ್ರಿಸ್ತರಿಗಿಂತ ಮಿಗಿಲಾಗಿ ಮತ್ತಾವುದಕ್ಕೂ ಆದ್ಯತೆ ನೀಡಬೇಡಿ.'
ಲೇಖಕರು: ವಂ. ಗುರು ಮರಿಯನ್ ನ್ಗುಯೆನ್, OSB*
ಸಂತ ಮತ್ತಾಯರ ಶುಭಸಂದೇಶದ ಹತ್ತನೇ ಅಧ್ಯಾಯವು ಪ್ರಭು ಯೇಸು ಕ್ರಿಸ್ತರು ತಮ್ಮ ಹನ್ನೆರಡು ಶಿಷ್ಯರನ್ನು, ಅನೇಕ ಸಂದರ್ಭಗಳಲ್ಲಿ ಅವರನ್ನು ತಿರಸ್ಕರಿಸಲಿರುವ ಲೋಕದೊಳಗೆ ಕಳುಹಿಸುವಾಗ ನೀಡಿದ ಮಹಾನ್ ಪ್ರೇಷಿತೀಯ ಸಂದೇಶವಾಗಿದೆ. ಅವರು ಶಿಷ್ಯರನ್ನು ಆರಾಮ, ಯಶಸ್ಸು ಅಥವಾ ಲೋಕಪ್ರಸಿದ್ಧಿಯ ಭರವಸೆಯನ್ನು ನೀಡಿ ಕರೆಯಲಿಲ್ಲ.
ಬದಲಾಗಿ, ಪ್ರಭು ಯೇಸು ಕ್ರಿಸ್ತರು ಒಂದು ರೀತಿಯ ದೈವಿಕ ಪಾರದರ್ಶಕತೆಯನ್ನು ತೋರಿಸುತ್ತಾರೆ. ತಮ್ಮನ್ನು ಅನುಸರಿಸುವುದಕ್ಕೆ ಕೊಡಬೇಕಾದ ನಿಜವಾದ ಬೆಲೆಯನ್ನು ಆರಂಭದಲ್ಲಿಯೇ ಅವರು ಬಹಿರಂಗಪಡಿಸುತ್ತಾರೆ. ತಪ್ಪು ನಿರೀಕ್ಷೆಗಳ ಆಧಾರದ ಮೇಲೆ ಯಾರೂ ಶಿಷ್ಯತ್ವವನ್ನು ಸ್ವೀಕರಿಸಬಾರದು ಎಂಬುದು ಅವರ ಆಶಯವಾಗಿತ್ತು.
ಆದರೆ ಇಂದಿನ ಶುಭಸಂದೇಶವು ಕೇವಲ ಶಿಷ್ಯತ್ವದ ಬೆಲೆಯನ್ನು ಮಾತ್ರ ವಿವರಿಸುವುದಿಲ್ಲ; ಅದರ ಆಳವಾದ ಉದ್ದೇಶವನ್ನೂ ಪ್ರಕಟಿಸುತ್ತದೆ. ಪ್ರಭು ಯೇಸು ಕ್ರಿಸ್ತರ ಈ ಮಾತುಗಳ ಕೇಂದ್ರದಲ್ಲಿ ಒಂದು ಪ್ರಶ್ನೆ ಅಡಗಿದೆ: “ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರಿ?”
ಪ್ರಭು ಯೇಸು ಕ್ರಿಸ್ತರ ಆರಂಭದ ಮಾತುಗಳು ಶುಭಸಂದೇಶಗಳಲ್ಲಿಯೇ ಅತ್ಯಂತ ಸವಾಲಿನ ಮಾತುಗಳಾಗಿವೆ: “ತಂದೆ ಅಥವಾ ತಾಯಿಯನ್ನು ನನಗಿಂತ ಹೆಚ್ಚು ಪ್ರೀತಿಸುವವನು ನನಗೆ ಯೋಗ್ಯನಲ್ಲ. ಮಗ ಅಥವಾ ಮಗಳನ್ನು ನನಗಿಂತ ಹೆಚ್ಚು ಪ್ರೀತಿಸುವವನೂ ನನಗೆ ಯೋಗ್ಯನಲ್ಲ” (ಮತ್ತಾಯ 10:37). ಮೊದಲ ನೋಟಕ್ಕೆ ಈ ಮಾತುಗಳು ಕಠಿಣವಾಗಿ ತೋರಬಹುದು. ಆದರೆ ಪ್ರಭು ಯೇಸು ಕ್ರಿಸ್ತರು ನಮ್ಮ ಕುಟುಂಬವನ್ನು ಕಡಿಮೆ ಪ್ರೀತಿಸಬೇಕೆಂದು ಆಜ್ಞಾಪಿಸುತ್ತಿಲ್ಲ. ಬದಲಾಗಿ, ಅವರನ್ನು ಬಿಟ್ಟು ಬೇರೆ ರೀತಿಯಲ್ಲಿ ಅಲ್ಲ, ಅವರ ಮೂಲಕವೇ ಎಲ್ಲರನ್ನೂ ಪ್ರೀತಿಸುವಂತೆ ಅವರು ನಮ್ಮನ್ನು ಕರೆಯುತ್ತಾರೆ. ಪ್ರಭು ಯೇಸು ಕ್ರಿಸ್ತರು ನಮ್ಮ ಶ್ರೇಷ್ಠ ಪ್ರೀತಿಯಾದಾಗ ಮಾತ್ರ ಪ್ರತಿಯೊಂದು ಮಾನವೀಯ ಪ್ರೀತಿಗೂ ಸರಿಯಾದ ಸ್ಥಾನ ದೊರೆಯುತ್ತದೆ.
ಸಂತ ಬೆನೆಡಿಕ್ಟ್ ತಮ್ಮ ನಿಯಮಾವಳಿಯ ಕೊನೆಯಲ್ಲಿ ಇದೇ ಸತ್ಯವನ್ನು ವ್ಯಕ್ತಪಡಿಸುತ್ತಾರೆ. ಸನ್ಯಾಸ ಜೀವನದ ಎಲ್ಲಾ ಪ್ರಾಯೋಗಿಕ ಅಂಶಗಳನ್ನು ವಿವರಿಸಿದ ಬಳಿಕ, ಅವರು ಕ್ರೈಸ್ತ ಶಿಷ್ಯತ್ವದ ಪರಮ ಗುರಿಯನ್ನು ಹೀಗೆ ತಿಳಿಸುತ್ತಾರೆ: “ಪ್ರಭು ಯೇಸು ಕ್ರಿಸ್ತರಿಗಿಂತ ಮಿಗಿಲಾಗಿ ಯಾವುದಕ್ಕೂ ಆದ್ಯತೆ ನೀಡಬಾರದು; ಅವರು ನಮ್ಮೆಲ್ಲರನ್ನೂ ನಿತ್ಯಜೀವದತ್ತ ಕೊಂಡೊಯ್ಯಲಿ” (RB 72:11–12). ಇದು ಕೇವಲ ಸನ್ಯಾಸಿಗಳ ಆದರ್ಶವಲ್ಲ; ಇಂದಿನ ಶುಭಸಂದೇಶದ ಹೃದಯವೂ ಇದೇ ಆಗಿದೆ. ಪ್ರಭು ಯೇಸು ಕ್ರಿಸ್ತರು ಮೊದಲ ಸ್ಥಾನವನ್ನು ಪಡೆದಾಗ ಮಾತ್ರ ಉಳಿದ ಎಲ್ಲ ಪ್ರೀತಿಗಳು ಶುದ್ಧವಾಗುತ್ತವೆ, ಬಲಗೊಳ್ಳುತ್ತವೆ ಹಾಗೂ ತಮ್ಮ ಯೋಗ್ಯ ಸ್ಥಾನವನ್ನು ಪಡೆಯುತ್ತವೆ.
ತಕ್ಷಣವೇ ಪ್ರಭು ಯೇಸು ಕ್ರಿಸ್ತರು ಇಂತಹ ಆದ್ಯತೆಯ ಅರ್ಥವನ್ನು ವಿವರಿಸುತ್ತಾರೆ: “ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಅನುಸರಿಸದವನು ನನಗೆ ಯೋಗ್ಯನಲ್ಲ” (ಮತ್ತಾಯ 10:38). ಗಮನಾರ್ಹ ಸಂಗತಿಯೆಂದರೆ, ಅವರು ಕಲ್ವಾರಿಯ ಘಟನೆಗಿಂತ ಬಹಳ ಮುಂಚೆಯೇ ಶಿಲುಬೆಯ ಕುರಿತು ಮಾತನಾಡುತ್ತಾರೆ. ಹೀಗೆ ಹೇಳುವ ಮೂಲಕ, ತಮ್ಮ ಪಾಡು ಇತಿಹಾಸದ ಒಂದು ದುರಂತಕರ ಆಕಸ್ಮಿಕವಲ್ಲ; ಅದು ಪಿತನ ವಿಮೋಚನಾ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಅಂಗೀಕರಿಸಿದ ಪರಿಪೂರ್ಣ ನೆರವೇರಿಕೆಯಾಗಿದೆ ಎಂಬುದನ್ನು ಪ್ರಭು ಯೇಸು ಕ್ರಿಸ್ತರು ಪ್ರಕಟಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ತಮ್ಮ ಸಂಪೂರ್ಣ ಆತ್ಮಾರ್ಪಣೆಯ ಪ್ರೀತಿಯೇ ಪ್ರತಿಯೊಬ್ಬ ಶಿಷ್ಯನ ಜೀವನದ ಮಾದರಿಯಾಗಬೇಕು ಎಂದು ಅವರು ಬೋಧಿಸುತ್ತಾರೆ. ಆದ್ದರಿಂದ, ಶಿಲುಬೆಯು ಕೇವಲ ಯಾತನೆಯ ಸಾಧನವಲ್ಲ; ಅದು ನಿಜವಾದ ಪ್ರೀತಿಯ ರೂಪವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಪ್ರಭು ಯೇಸು ಕ್ರಿಸ್ತರನ್ನು ಪ್ರೀತಿಸುವುದು ಎಂದರೆ, ಪ್ರತಿದಿನವೂ ನಮ್ಮ ಸ್ವಂತ ಇಚ್ಛೆ, ಮಹತ್ವಾಕಾಂಕ್ಷೆ, ಸುಖಸೌಕರ್ಯಗಳು ಮತ್ತು ಸ್ವಾರ್ಥಪರ ಆಸೆಗಳನ್ನು ತ್ಯಜಿಸುವುದಾಗಿದೆ. ಸಂತ ಗ್ರೆಗೊರಿ ಅವರ ಪ್ರಕಾರ, ಪ್ರಭು ಯೇಸು ಕ್ರಿಸ್ತರು ತಮ್ಮ ಶಿಷ್ಯರನ್ನು ಮುಂಚಿತವಾಗಿಯೇ ಸಿದ್ಧಗೊಳಿಸುತ್ತಾರೆ. ಏಕೆಂದರೆ, ಉದಾರ ಮನಸ್ಸಿನಿಂದ ಆರಂಭಿಸುವುದಕ್ಕಿಂತ, ಆರಂಭದ ಉತ್ಸಾಹ ಕಡಿಮೆಯಾದಾಗಲೂ ನಿಷ್ಠೆಯಿಂದ ಕೊನೆಯವರೆಗೂ ಸ್ಥಿರವಾಗಿ ಉಳಿಯುವುದೇ ದೊಡ್ಡ ಸವಾಲಾಗಿದೆ. ಪ್ರತಿದಿನದ ಶಿಲುಬೆಯು ಹುತಾತ್ಮತ್ವದಷ್ಟು ನಾಟಕೀಯವಾಗಿರದೆ ಇರಬಹುದು; ಆದರೆ ಅದು ನಮ್ಮ ಅಹಂಕಾರ, ಸ್ವಇಚ್ಛೆ ಮತ್ತು ಪ್ರಭು ಯೇಸು ಕ್ರಿಸ್ತರ ಮಾರ್ಗಕ್ಕಿಂತ ನಮ್ಮದೇ ಮಾರ್ಗವನ್ನು ಆರಿಸಿಕೊಳ್ಳುವ ಬಯಕೆಯನ್ನು ನಿರಂತರವಾಗಿ ತ್ಯಜಿಸುವುದಾಗಿದೆ.
ಇದರಿಂದಲೇ ಪ್ರಭು ಯೇಸು ಕ್ರಿಸ್ತರ ಈ ವಿರೋಧಾಭಾಸದ ವಾಕ್ಯಕ್ಕೆ ನಾವು ಬರುತ್ತೇವೆ: “ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು” (ಮತ್ತಾಯ 10:39). ಇಲ್ಲಿ ಪ್ರಭು ಯೇಸು ಕ್ರಿಸ್ತರು ಆತ್ಮರಕ್ಷಣೆಯ ಮಾನವ ಸಹಜ ಪ್ರವೃತ್ತಿಯನ್ನೇ ತಲೆಕೆಳಗಾಗಿಸುತ್ತಾರೆ.
ನಾವು ನಿಯಂತ್ರಣ, ಮಾನ್ಯತೆ ಅಥವಾ ಭದ್ರತೆಯನ್ನು ಎಷ್ಟೇ ಬಿಗಿಯಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿದರೂ, ಜೀವನವು ಅಷ್ಟೇ ನಮ್ಮ ಕೈಯಿಂದ ಜಾರಿಹೋಗುತ್ತದೆ. ಆದರೆ ತನ್ನೆಲ್ಲವನ್ನೂ ಪ್ರಭು ಯೇಸು ಕ್ರಿಸ್ತರಿಗೆ ಒಪ್ಪಿಸುವವನು, ಆತ್ಮಾರ್ಪಣೆಯ ಪ್ರೀತಿಯಿಂದ ಮಾತ್ರ ದೊರೆಯುವ ನಿಜವಾದ ಸ್ವಾತಂತ್ರ್ಯ ಮತ್ತು ಆನಂದವನ್ನು ಕಂಡುಕೊಳ್ಳುತ್ತಾನೆ.
ಕ್ಲೇರ್ವೋದ ಸಂತ ಬೆರ್ನಾರ್ಡ್ ಅವರ ಪ್ರಕಾರ, ಈ ಆಮೂಲಾಗ್ರ ಶಿಷ್ಯತ್ವವು ಸಾಮಾನ್ಯವಾಗಿ ಅಸಾಧಾರಣ ಶೌರ್ಯದ ಕಾರ್ಯಗಳ ಮೂಲಕ ವ್ಯಕ್ತವಾಗುವುದಿಲ್ಲ; ಬದಲಾಗಿ ದಯೆ ಮತ್ತು ಪ್ರೀತಿಯ ಸಾಮಾನ್ಯ ಕಾರ್ಯಗಳ ಮೂಲಕ ಬದುಕಲ್ಪಡುತ್ತದೆ. ಪ್ರಭು ಯೇಸು ಕ್ರಿಸ್ತರು ಶಿಲುಬೆಯ ಮಹಾ ರಹಸ್ಯವನ್ನು ನಮ್ಮ ದೈನಂದಿನ ಜೀವನದ ಅತ್ಯಂತ ಸರಳ ಕ್ಷಣಗಳಿಗೆ ತರುತ್ತಾರೆ: “ಯಾರಾದರೂ ಶಿಷ್ಯನಾಗಿರುವ ಕಾರಣದಿಂದ ಈ ಚಿಕ್ಕವರಲ್ಲಿ ಒಬ್ಬನಿಗೆ ಒಂದು ಲೋಟ ತಣ್ಣನೆಯ ನೀರನ್ನು ಕೊಟ್ಟರೂ, ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಅವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದಿಲ್ಲ” (ಮತ್ತಾಯ 10:42). ಆ ತಣ್ಣನೆಯ ನೀರಿನ ಲೋಟವು, ಎಲ್ಲಕ್ಕಿಂತ ಹೆಚ್ಚಾಗಿ ಪ್ರಭು ಯೇಸು ಕ್ರಿಸ್ತರನ್ನು ಆರಿಸಿಕೊಂಡ ಹೃದಯದ ದೈನಂದಿನ, ಮೌನದ ಅಭಿವ್ಯಕ್ತಿಯಾಗುತ್ತದೆ. ಯಾರಿಗೂ ತಿಳಿಯದ ದಯೆಯ ಕಾರ್ಯಗಳು, ತಾಳ್ಮೆಯ ಮಾತುಗಳು ಮತ್ತು ಗಮನಕ್ಕೆ ಬಾರದ ತ್ಯಾಗಗಳು ಶಿಲುಬೆಯ ದೈನಂದಿನ ಭಾರವಾಗಿ ರೂಪುಗೊಳ್ಳುತ್ತವೆ.
ಇಂದಿನ ಶುಭಸಂದೇಶವು 37ನೇ ವಚನದಿಂದ ಆರಂಭವಾದರೂ, ಅದಕ್ಕಿಂತ ಮುಂಚೆಯೇ ಈ ಅಧ್ಯಾಯದ ಆರಂಭಿಕ ಭಾಗದಲ್ಲಿ ಪ್ರಭು ಯೇಸು ಕ್ರಿಸ್ತರು ತಮ್ಮ ಹನ್ನೆರಡು ಶಿಷ್ಯರನ್ನು ಮುಂದೆ ಎದುರಾಗಲಿರುವ ಸಂಗತಿಗಳಿಗೆ ಸಿದ್ಧಪಡಿಸಿದ್ದರು. ಈಗ ಅವರು ತಮ್ಮ ಮುಂದೆ ಇಡುವ ಬೇಡಿಕೆಗಳು ಪ್ರತ್ಯೇಕ ಆಜ್ಞೆಗಳಲ್ಲ; ಅವು ಒಂದು ಮಹತ್ತರ ವಾಗ್ದಾನದ ಭಾಗವಾಗಿವೆ: ಅವರು ಎಂದಿಗೂ ಏಕಾಂಗಿಯಾಗಿ ಸಂಕಟವನ್ನು ಅನುಭವಿಸುವುದಿಲ್ಲ. ನಮ್ಮ ದುಃಖಗಳಿಗೆ ಪ್ರಭು ಯೇಸು ಕ್ರಿಸ್ತರು ಅಮೂರ್ತ ವಿವರಣೆಗಳನ್ನು ನೀಡುವುದಿಲ್ಲ; ಬದಲಾಗಿ, ನಾವು ನಡೆಯಬೇಕಾದ ಪ್ರತಿಯೊಂದು ಹೆಜ್ಜೆಯನ್ನೂ ತಾವೇ ಮೊದಲೇ ನಡೆದಿದ್ದೇನೆ ಎಂಬ ಭರವಸೆಯನ್ನು ನೀಡುತ್ತಾರೆ. ನಿಮ್ಮನ್ನು ನಿಂದಿಸಲಾಗುತ್ತಿದೆಯೇ ಅಥವಾ ಅಪವಾದ ಹೊರಿಸಲಾಗುತ್ತಿದೆಯೇ? “ಮನೆಯ ಯಜಮಾನನನ್ನೇ ಬೆಲ್ಜೆಬೂಲ್ ಎಂದು ಕರೆದಿದ್ದರೆ, ಅವನ ಮನೆಯವರನ್ನು ಇನ್ನೆಷ್ಟು ಹೆಚ್ಚಾಗಿ ನಿಂದಿಸುವರು!” (ಮತ್ತಾಯ 10:25). ನಿಮ್ಮ ಕುಟುಂಬದವರೇ ನಿಮ್ಮ ವಿರುದ್ಧ ತಿರುಗಿಕೊಂಡಿದ್ದಾರೆಯೇ ಅಥವಾ ನಿಮ್ಮ ಭಕ್ತಿಯನ್ನು ವಿರೋಧಿಸುತ್ತಿದ್ದಾರೆಯೇ? ಅದನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ; ಏಕೆಂದರೆ “ಒಬ್ಬನ ಶತ್ರುಗಳು ಅವನ ಮನೆಯವರೇ ಆಗುವರು” (ಮತ್ತಾಯ 10:36; ಮಾರ್ಕ 3:21). ಕಷ್ಟದ ಸಮಯದಲ್ಲಿ ನಿಮ್ಮ ಶಕ್ತಿ ಸಾಲದು ಎಂಬ ಭಯವಿದೆಯೇ? ಆಗ ಪ್ರಭು ಯೇಸು ಕ್ರಿಸ್ತರು ಅಗತ್ಯವಾದ ಧೈರ್ಯವನ್ನು ದೇವರೇ ನೀಡುವರು ಎಂದು ಭರವಸೆ ನೀಡುತ್ತಾರೆ: “ಮಾತನಾಡುವುದು ನೀವಲ್ಲ; ನಿಮ್ಮೊಳಗೆ ಮಾತನಾಡುವವರು ಪರಲೋಕದಲ್ಲಿರುವ ನಿಮ್ಮ ಪಿತನ ಆತ್ಮವೇ” (ಮತ್ತಾಯ 10:20).
ಅವರ ನಿಮಿತ್ತ ಮಾಡುವ ಪ್ರತಿಯೊಂದು ತ್ಯಾಗವೂ, ಶಿಷ್ಯನು ತನ್ನ ಗುರುವಿನ ಜೀವನದಲ್ಲೇ ಪಾಲುಗಾರನಾಗುವ ವಿಶೇಷ ಅವಕಾಶವಾಗುತ್ತದೆ. ಲೋಕದ ದೃಷ್ಟಿಯಲ್ಲಿ ಸಂಪೂರ್ಣ ನಷ್ಟವೆಂದು ತೋರುವುದೇ, ಪ್ರಭು ಯೇಸು ಕ್ರಿಸ್ತರಲ್ಲಿ ನಿಜವಾದ ಜೀವನದ ಆರಂಭವಾಗುತ್ತದೆ ಎಂಬುದನ್ನು ಆತನು ಅನುಭವಿಸುತ್ತಾನೆ.
ನಮ್ಮ ಗಾಯಗೊಂಡ ಮಾನವ ಸ್ವಭಾವದ ಕಾರಣದಿಂದ, ಈ ಮಾರ್ಗದಲ್ಲಿ ನಾವು ಅನೇಕ ಬಾರಿ ಎಡವುತ್ತೇವೆ. ನಮಗೇ ತಿಳಿಯದಿದ್ದ ಆಸಕ್ತಿಗಳು ಮತ್ತು ಬಂಧನಗಳು ನಮ್ಮೊಳಗಿರುವುದನ್ನು ನಾವು ಕಂಡುಕೊಳ್ಳುತ್ತೇವೆ. ನಮ್ಮ ಸ್ವಇಚ್ಛೆಯು ಸಂಪೂರ್ಣ ಸಮರ್ಪಣೆಯನ್ನು ವಿರೋಧಿಸುತ್ತದೆ.
ಆದ್ದರಿಂದಲೇ ಸಂತ ಬೆನೆಡಿಕ್ಟ್ ವಿನಯ, ವಿಧೇಯತೆ, ಸ್ಥಿರತೆ ಮತ್ತು ಜೀವನದ ನಿರಂತರ ಆತ್ಮಿಕ ನವೀಕರಣ (conversatio morum) ಇವುಗಳನ್ನು ಶಿಷ್ಯತ್ವದ ದೈನಂದಿನ ಪಾಠಶಾಲೆಯಾಗಿ ಸೂಚಿಸುತ್ತಾರೆ. ಇವು ನಮ್ಮ ಮೇಲೆ ಹೊರಿಸಲಾದ ಭಾರಗಳಲ್ಲ; ಬದಲಾಗಿ, ಪ್ರಭು ಯೇಸು ಕ್ರಿಸ್ತರು ಕ್ರಮೇಣ ನಮ್ಮ ಪ್ರತಿಯೊಂದು ಆಲೋಚನೆ, ಪ್ರತಿಯೊಂದು ಪ್ರೀತಿ, ಪ್ರತಿಯೊಂದು ನಿರ್ಧಾರ ಮತ್ತು ಪ್ರತಿಯೊಂದು ಕಾರ್ಯದ ಕೇಂದ್ರವಾಗುವಂತೆ ಮಾಡುವ ಪ್ರಾಯೋಗಿಕ ಸಾಧನಗಳಾಗಿವೆ.
ಪ್ರಭು ಯೇಸು ಕ್ರಿಸ್ತರು ಒಂದು ಆಜ್ಞೆಯೊಳಗೆ ಅಡಗಿದ್ದ ಪ್ರಶ್ನೆಯೊಂದಿಗೆ ಆರಂಭಿಸಿದರು: “ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರಿ?” ಪ್ರತಿಯೊಬ್ಬ ಶಿಷ್ಯನು ಈ ಪ್ರಶ್ನೆಗೆ ಕೇವಲ ಮಾತುಗಳಿಂದಲ್ಲ, ತನ್ನ ಪ್ರತಿದಿನದ ಆಯ್ಕೆಗಳ ಮೂಲಕ ಉತ್ತರಿಸುತ್ತಾನೆ—ತಾನು ಹೊರುವ ಶಿಲುಬೆಗಳ ಮೂಲಕ, ತ್ಯಜಿಸುವ ಆಸೆಗಳ ಮೂಲಕ, ಸ್ವಾಗತಿಸುವ ಅಪರಿಚಿತರ ಮೂಲಕ ಮತ್ತು ತಾನು ನೀಡುವ ಒಂದು ಲೋಟ ತಣ್ಣನೆಯ ನೀರಿನ ಮೂಲಕವೂ.
ಪ್ರಭು ಯೇಸು ಕ್ರಿಸ್ತರು ನಿಜವಾಗಿಯೂ ನಮ್ಮ ಶ್ರೇಷ್ಠ ಪ್ರೀತಿಯಾದಾಗ, ಉಳಿದ ಎಲ್ಲ ಪ್ರೀತಿಗಳು ತಮ್ಮ ಯೋಗ್ಯ ಸ್ಥಾನವನ್ನು ಕಂಡುಕೊಳ್ಳುತ್ತವೆ. ಆಗ ಸಂತ ಬೆನೆಡಿಕ್ಟ್ ಅವರ ಅಂತಿಮ ಉಪದೇಶವು ಕೇವಲ ಸನ್ಯಾಸ ಜೀವನದ ಹೃದಯವಾಗಿರದೆ, ಪ್ರತಿಯೊಬ್ಬ ಕ್ರೈಸ್ತನ ಜೀವನದ ಕರೆಯಾಗುತ್ತದೆ: “ಪ್ರಭು ಯೇಸು ಕ್ರಿಸ್ತರಿಗಿಂತ ಮಿಗಿಲಾಗಿ ಯಾವುದಕ್ಕೂ ಆದ್ಯತೆ ನೀಡಬೇಡಿ; ಅವರು ನಮ್ಮೆಲ್ಲರನ್ನೂ ನಿತ್ಯಜೀವದತ್ತ ಕೊಂಡೊಯ್ಯಲಿ” (RB 72:11–12).
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).