ಪ್ರಭುವಿನ ದಿನದ ಧ್ಯಾನ: “ನಾವು ಪ್ರತಿರೋಧಿಸುವ ಬೆಳಕು, ನಾವು ಹುಡುಕುವ ಪ್ರೀತಿ”
ಲೇಖಕರು: ವಂ. ಗುರು ಮರಿಯನ್ ನ್ಗುಯೆನ್, OSB*
ಸಂತ ಯೋವಾನ್ನರ ಶುಭಸಂದೇಶ 3:16–18ರಲ್ಲಿ ಪ್ರಭು ಯೇಸು ಕ್ರಿಸ್ತರು ಹೇಳುವ ವಾಕ್ಯಗಳನ್ನು ಧ್ಯಾನಿಸುವುದು ಎಂದರೆ, ಮಾನವನ ಪ್ರತಿಯೊಂದು ಪ್ರತಿಕ್ರಿಯೆಗಿಂತಲೂ ಮುಂಚೆ ದೇವರ ಪ್ರೀತಿಯ ಮುಂದಾಳತ್ವವೇ ಕಾರ್ಯನಿರ್ವಹಿಸುವ ಒಂದು ಮಹಾರಹಸ್ಯದೊಳಗೆ ಪ್ರವೇಶಿಸುವುದಾಗಿದೆ: “ದೇವರು ಲೋಕವನ್ನು ದಂಡಿಸಲು ತಮ್ಮ ಪುತ್ರರನ್ನು ಕಳುಹಿಸಲಿಲ್ಲ; ಬದಲಾಗಿ, ಲೋಕವು ಅವರ ಮೂಲಕ ರಕ್ಷಿಸಲ್ಪಡಲೆಂದು ಕಳುಹಿಸಿದರು.”
ಪರಮ ಪವಿತ್ರ ತ್ರಿತ್ವದ ಈ ಮಹಾಪರ್ವದಲ್ಲಿ, ಈ ವಾಕ್ಯಗಳು ಯಾವುದೋ ಅಮೂರ್ತ ತತ್ವವನ್ನು ಬೋಧಿಸುವುದಿಲ್ಲ; ಬದಲಾಗಿ ದೇವರ ಜೀವಂತ ಕಾರ್ಯವನ್ನು ನಮಗೆ ಅನಾವರಣಗೊಳಿಸುತ್ತವೆ: ಪ್ರೀತಿಸಿ ತಮ್ಮ ಪುತ್ರರನ್ನು ಕಳುಹಿಸುವ ತಂದೆ ದೇವರು, ನಮ್ಮ ಮಾನವ ಸ್ಥಿತಿಯೊಳಗೆ ಪ್ರವೇಶಿಸಿ ನಮ್ಮನ್ನು ಸ್ವಸ್ಥಗೊಳಿಸುವ ಪುತ್ರರಾದ ಪ್ರಭು ಕ್ರಿಸ್ತರು, ಮತ್ತು ಈ ರಕ್ಷಕ ಬೆಳಕನ್ನು ಸ್ವೀಕರಿಸಿ ಫಲಕೊಡುವಂತೆ ಮಾನವ ಹೃದಯವನ್ನು ತೆರೆಯುವ ಪವಿತ್ರಾತ್ಮರು.
ಇಲ್ಲಿ ಪ್ರಕಟವಾಗುವುದು ರಕ್ಷಣೆಗೆ ನಂತರ ಸೇರಿಸಲಾದ ಒಂದು ಸಿದ್ಧಾಂತವಲ್ಲ; ಪ್ರಭು ಕ್ರಿಸ್ತರಲ್ಲಿ ಗೋಚರವಾದ ದೇವರ ಸ್ವಂತ ಜೀವವೇ ಆಗಿದೆ — ಹೊರಗೆ ಹರಿದು ಹೋಗುವ, ಕಳೆದುಹೋದವರನ್ನು ಹುಡುಕುವ ಮತ್ತು ಗಾಯಗೊಂಡವರನ್ನು ದೇವರೊಂದಿಗಿನ ಸಹಭಾಗಿತ್ವಕ್ಕೆ ಸೆಳೆಯುವ ಪ್ರೀತಿ.
ಈ ಬೋಧನೆಯನ್ನು ಸ್ವೀಕರಿಸುವುದು ಎಂದರೆ ತನ್ನನ್ನು ಆರೋಪಗಳ ಕಠಿಣ ಕನ್ನಡಿಯಲ್ಲಿ ನೋಡುವುದಲ್ಲ; ಬದಲಾಗಿ ಅನಾವರಣಗೊಳಿಸುವ ಮತ್ತು ಸ್ವಸ್ಥಗೊಳಿಸುವ ಬೆಳಕಿನಲ್ಲಿ ನೋಡುವುದಾಗಿದೆ. ಅದು ಹೊಗಳುವ ಬೆಳಕಲ್ಲ; ನೋವುಂಟುಮಾಡುವುದಕ್ಕಾಗಿಯೇ ನೋವುಂಟುಮಾಡುವ ಬೆಳಕೂ ಅಲ್ಲ. ಅದು ಒಡೆದುಹೋಗಿರುವುದನ್ನು ತೋರಿಸುತ್ತದೆ, ಹೀಗೆ ಅದು ಪುನಃಸ್ಥಾಪಿಸಲ್ಪಡಬಹುದು. ನಿರಂತರ ಸ್ವಯಂ-ನಿರ್ಮಾಣ ಮತ್ತು ಆತಂಕಭರಿತ ಸ್ವಯಂ-ಸಮರ್ಥನೆಗಳಿಂದ ರೂಪುಗೊಂಡಿರುವ ಇಂದಿನ ಸಂಸ್ಕೃತಿಯಲ್ಲಿ, ಈ ವಾಕ್ಯಗಳು ನಮ್ಮ ಭ್ರಮೆಗಳನ್ನು ಬಯಲಿಗೆಳೆಯುತ್ತವೆ, ಆದರೆ ನಮ್ಮನ್ನು ಅವಮಾನಗೊಳಿಸುವುದಿಲ್ಲ.
ಅವು ಲೋಕವನ್ನು ಮುಖ್ಯವಾಗಿ ಅಪರಾಧಿಯನ್ನು ನ್ಯಾಯಾಧೀಶನ ದೃಷ್ಟಿಯಿಂದ ಸಮೀಪಿಸದ ದೇವರನ್ನು ನಮಗೆ ತೋರಿಸುತ್ತವೆ; ಬದಲಾಗಿ, ಪುತ್ರರಾದ ಪ್ರಭು ಕ್ರಿಸ್ತರಲ್ಲಿ ನಮ್ಮ ಸ್ಥಿತಿಯೊಳಗೆ ಪ್ರವೇಶಿಸಿ ಅದನ್ನು ಒಳಗಿನಿಂದಲೇ ಸ್ವಸ್ಥಗೊಳಿಸುವವರಾಗಿ ಮತ್ತು ಪವಿತ್ರಾತ್ಮರಲ್ಲಿ ಆ ಸ್ವಸ್ಥತೆಯನ್ನು ನಾವು ಸ್ವೀಕರಿಸುವಂತೆ ಮಾಡುವವರಾಗಿ ಪ್ರಕಟಿಸುತ್ತವೆ.
ಸಂತ ಆಗಸ್ಟಿನ್ ಪ್ರಭು ಕ್ರಿಸ್ತರಲ್ಲಿರುವ ಈ ದೈವಿಕ ಮನೋಭಾವವನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತಾರೆ. ಸಂತ ಯೋವಾನ್ನರ ಶುಭಸಂದೇಶದ ಮೇಲಿನ ತಮ್ಮ ವ್ಯಾಖ್ಯಾನಗಳಲ್ಲಿ, ಅವರು ಪ್ರಭುವನ್ನು ನ್ಯಾಯವಾದಿಗಿಂತ ಹೆಚ್ಚಾಗಿ ದೈವಿಕ ವೈದ್ಯರಾಗಿ ಚಿತ್ರಿಸುತ್ತಾರೆ: ಪ್ರಭು ಕ್ರಿಸ್ತರು ರೋಗಿಗಳಿಗೆ ಹಾನಿ ಮಾಡಲು ಬರುವುದಿಲ್ಲ, ಅವರನ್ನು ಸ್ವಸ್ಥಗೊಳಿಸಲು ಬರುತ್ತಾರೆ; ಮತ್ತು ದುರಂತವು ಔಷಧಿಯ ಕೊರತೆಯಲ್ಲ, ಅದನ್ನು ತಿರಸ್ಕರಿಸುವುದರಲ್ಲಿದೆ.
ಅವತಾರವೇ ಪುತ್ರರಾದ ಪ್ರಭು ಕ್ರಿಸ್ತರ ಮೂಲಕ ವ್ಯಕ್ತವಾದ ತಂದೆಯ ಸಮೀಪತೆಯಾಗಿದೆ. ದೇವರು ಗಾಯಗೊಂಡ ಮಾನವಕುಲದಿಂದ ದೂರವಿರುವುದಿಲ್ಲ; ಅದನ್ನು ಪುನಃಸ್ಥಾಪಿಸಲು ಹತ್ತಿರ ಬರುತ್ತಾರೆ. ಆದ್ದರಿಂದ ಶಿಲುಬೆಯು ಮೊದಲನೆಯದಾಗಿ ದೈವಿಕ ಶಿಕ್ಷೆಯ ಅಭಿವ್ಯಕ್ತಿಯಲ್ಲ; ಅದು ಸಂಕಟದಲ್ಲಿರುವ ಲೋಕದೊಂದಿಗೆ ದೇವರ ಐಕ್ಯತೆಯ ಆಳವಾಗಿದೆ. ಪವಿತ್ರಾತ್ಮರು ನಮ್ಮೊಳಗೆ ಕಾರ್ಯನಿರ್ವಹಿಸುವ ದೇವರ ಗುಪ್ತ ಕಾರ್ಯವಾಗಿದ್ದು, ಆ ರಕ್ಷಕ ಸಮೀಪತೆಯನ್ನು ಹೃದಯದ ಆಳದಲ್ಲಿ ಪರಿಣಾಮಕಾರಿಯಾಗಿಸುತ್ತಾರೆ.
ಆದ್ದರಿಂದ, ಪ್ರಭು ಯೇಸು ಕ್ರಿಸ್ತರು ಖಂಡನೆಯ ಬಗ್ಗೆ ಮಾತನಾಡುವಾಗ, ಹೊರಗಿನಿಂದ ಹೇರಲ್ಪಟ್ಟ ಶಿಕ್ಷೆಯ ಬಗ್ಗೆ ಮೊದಲು ವಿವರಿಸುವುದಿಲ್ಲ; ಬದಲಾಗಿ ಬೆಳಕಿನಿಂದ ದೂರ ಸರಿಯುವ ಹೃದಯದ ಒಳಗಿನ ನಾಟಕವನ್ನು ವಿವರಿಸುತ್ತಾರೆ. ಕೆಲವೇ ವಚನಗಳ ನಂತರ ಪವಿತ್ರ ಯೋವಾನ್ನರು ಹೀಗೆ ಹೇಳುತ್ತಾರೆ: “ಇದೇ ತೀರ್ಪು: ಬೆಳಕು ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕಿಗಿಂತ ಕತ್ತಲನ್ನೇ ಹೆಚ್ಚಾಗಿ ಪ್ರೀತಿಸಿದರು” (ಯೋವಾನ್ನ 3:19).
ತೀರ್ಪು ದೈವ ಪ್ರಕಟನೆಗೆ ನಂತರ ಸೇರಿಸಲ್ಪಟ್ಟ ಸಂಗತಿಯಲ್ಲ; ಅದು ಪ್ರಕಟಣೆಯೊಳಗೇ ಸಂಭವಿಸುತ್ತದೆ. ಬೆಳಕು ಲೋಕಕ್ಕೆ ಬಂದಿದೆ, ಮತ್ತು ಮಾನವ ಹೃದಯವು ಅದಕ್ಕೆ ಉತ್ತರಿಸಲೇಬೇಕು. ರಕ್ಷಿಸುವುದೇ ತೀರ್ಪು ನೀಡುತ್ತದೆ, ಏಕೆಂದರೆ ಅದು ನಾವು ಏನನ್ನು ಪ್ರೀತಿಸುತ್ತೇವೆ ಮತ್ತು ಏನನ್ನು ಪ್ರತಿರೋಧಿಸುತ್ತೇವೆ ಎಂಬುದನ್ನು ಅನಾವರಣಗೊಳಿಸುತ್ತದೆ.
ಪ್ರತಿಯೊಬ್ಬರೂ ತಮಗೆ ಸಂಪೂರ್ಣವಾಗಿ ಗೋಚರವಾಗುವ ಭಯವನ್ನು ಅನುಭವಿಸುತ್ತಾರೆ; ಆದರೆ ಪವಿತ್ರ ಶುಭಸಂದೇಶವು ನಮಗೆ ಬೋಧಿಸುವುದೇನೆಂದರೆ, ಪ್ರಭು ಕ್ರಿಸ್ತರಲ್ಲಿ ಇಂತಹ ಬಹಿರಂಗವಾಗುವಿಕೆ ಖಂಡನೆಯಲ್ಲ, ಕರುಣೆಯಾಗಿದೆ. ಪ್ರಭು ಕ್ರಿಸ್ತರೊಂದಿಗಿನ ಭೇಟಿಯೇ ಒಂದು ನಿರ್ಣಾಯಕ ಕ್ಷಣ, ಏಕೆಂದರೆ ಪುತ್ರರು ತಂದೆಯಿಂದ ಕಳುಹಿಸಲ್ಪಟ್ಟ ಬೆಳಕಾಗಿದ್ದಾರೆ. ಆ ಬೆಳಕು ಅನಾವರಣಗೊಳಿಸುತ್ತದೆ ಮತ್ತು ಆಹ್ವಾನಿಸುತ್ತದೆ; ಪವಿತ್ರಾತ್ಮರು ಮೌನವಾಗಿ ಹೃದಯವನ್ನು ತೆರೆಯುವ ಕೃಪೆಯನ್ನು ದಯಪಾಲಿಸುತ್ತಾರೆ, ಆದರೂ ಅದು ಇನ್ನೂ ಪ್ರತಿರೋಧಿಸಬಹುದು.
ನಂಬಿಕೆಯನ್ನು ತಿರಸ್ಕರಿಸುವವರನ್ನು ಯಾವುದೇ ಕಾರಣವಿಲ್ಲದೆ ಹೊರಗಿಡಲ್ಪಟ್ಟವರಂತೆ ಚಿತ್ರಿಸಲಾಗಿಲ್ಲ; ಬದಲಾಗಿ ಜೀವದ ಮೂಲದಿಂದ ಸ್ವಯಂಪ್ರೇರಿತವಾಗಿ ದೂರ ಸರಿಯುವವರಂತೆ ಚಿತ್ರಿಸಲಾಗಿದೆ. ಇದು ಜವಾಬ್ದಾರಿಯನ್ನು ಕಡಿಮೆ ಮಾಡಲು ಅಲ್ಲ; ಅದನ್ನು ಇನ್ನಷ್ಟು ನಿಖರವಾಗಿ ಹೆಸರಿಸಲು. ಮಾನವ ಹೃದಯವು ತನ್ನದೇ ಸ್ವಸ್ಥತೆಯನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂದರ್ಭದಲ್ಲಿ ಪಾಪವು ಕೇವಲ ಹೊರಗಿನ ನಿಯಮ ಉಲ್ಲಂಘನೆಯಲ್ಲ; ನಿಜವಾದ ಬೆಳಕಿಗಿಂತ ಕಡಿಮೆ ಬೆಳಕನ್ನು ಆಯ್ಕೆಮಾಡುವ ಅಸ್ತವ್ಯಸ್ತ ಇಚ್ಛಾಶಕ್ತಿಯ ತಿರುವಾಗಿದೆ.
ಈ ತಿರಸ್ಕಾರ ಏಕೆ ಮುಂದುವರಿಯುತ್ತದೆ? ಸಂತ ಆಗಸ್ಟಿನ್ ಅದರ ಮೂಲವನ್ನು ಅಹಂಕಾರದಲ್ಲಿ ಕಾಣುತ್ತಾರೆ — ದೇವರ ಮೇಲೆ ಅವಲಂಬಿತವಾಗದೆ ಸ್ವಯಂಪೂರ್ಣನಾಗಿರಬೇಕೆಂಬ, ತನ್ನನ್ನು ತಾನೇ ನಿರ್ವಚಿಸಿಕೊಳ್ಳಬೇಕೆಂಬ ಆಳವಾದ ಮತ್ತು ಸೂಕ್ಷ್ಮ ಬಯಕೆಯಲ್ಲಿ.
ಇದು ತನ್ನದೇ ಮೂಲವಾಗಿರಬೇಕೆಂಬ ಪುರಾತನ ಪ್ರಲೋಭನೆಯಾಗಿದೆ. ಈ ಮನೋಭಾವದಿಂದ ನೋಡಿದಾಗ, ಕೃಪೆಯು ವರಕ್ಕಿಂತಲೂ ಬೆದರಿಕೆಯಂತೆ ಕಾಣಬಹುದು, ಏಕೆಂದರೆ ಅದು ನಮ್ಮನ್ನು ನಾವು ರಕ್ಷಿಸಿಕೊಳ್ಳಲಾರದೆಂಬ ಸತ್ಯವನ್ನು ಅನಾವರಣಗೊಳಿಸುತ್ತದೆ. ಪ್ರಭು ಕ್ರಿಸ್ತರನ್ನು ಪ್ರತಿರೋಧಿಸುವುದು ಅನೇಕ ಬಾರಿ ನಿರಾಸಕ್ತಿಯಲ್ಲ; ನಿಯಂತ್ರಣವನ್ನು ಬಿಟ್ಟುಕೊಡಲು ನಡೆಯುವ ಹೋರಾಟವಾಗಿದೆ.
ಆದರೂ ಈ ಪ್ರತಿರೋಧದ ಕೆಳಗೆ ಸಂತ ಆಗಸ್ಟಿನ್ ಇನ್ನೂ ಸ್ಪಷ್ಟವಾಗಿ ಕಾಣಲು ಸಹಾಯ ಮಾಡುವ ಮತ್ತೊಂದು ಸತ್ಯವಿದೆ: ಮಾನವ ಹೃದಯವು ತಟಸ್ಥವಲ್ಲ; ಅದು ದೇವರ ಕಡೆಗೆ ಕ್ರಮಬದ್ಧವಾಗಿದೆ. ಅದು ದೂರ ಸರಿದಾಗಲೂ ತನ್ನ ದಿಕ್ಕನ್ನು ಕಳೆದುಕೊಳ್ಳುವುದಿಲ್ಲ. ತನ್ನ ಮೂಲದ ಗುರುತನ್ನು ತನ್ನೊಳಗೆ ಹೊತ್ತುಕೊಂಡಿದ್ದು, ತನಗೆ ವಿಶ್ರಾಂತಿ ದೊರೆಯುವ ದೇವರ ಕಡೆಗೆ ಮರಳಿ ಸೆಳೆಯುವ ಒಂದು ಆಂತರಿಕ ಆಕರ್ಷಣೆಯನ್ನು ಹೊಂದಿದೆ.
ನಮ್ಮ ಆತಂಕಗಳು ಮತ್ತು ಅಶಾಂತಿಗಳು ಕೇವಲ ಭಾವನಾತ್ಮಕ ಸ್ಥಿತಿಗಳಲ್ಲ; ನಾವು ಇನ್ನೂ ನಮ್ಮ ನಿಜವಾದ ಗುರಿಯನ್ನು ತಲುಪಿಲ್ಲ ಎಂಬ ಸೂಚನೆಗಳಾಗಿವೆ. ನಾವು ದೇವರೊಂದಿಗಿನ ಸಹಭಾಗಿತ್ವಕ್ಕಾಗಿ ಸೃಷ್ಟಿಸಲ್ಪಟ್ಟಿದ್ದೇವೆ; ಅದಕ್ಕಿಂತ ಕಡಿಮೆ ಯಾವುದೂ ನಮಗೆ ಶಾಂತಿಯನ್ನು ನೀಡಲಾರದು.
ಹಾಗಾದರೆ ಸ್ವಸ್ಥತೆಯೊಳಗೆ ಪ್ರವೇಶಿಸುವುದು ಎಂದರೆ ತನ್ನನ್ನು ತಾನೇ ತಿರಸ್ಕರಿಸಿಕೊಳ್ಳುವುದಲ್ಲ; ಸತ್ಯದೊಳಗೆ ಹೆಜ್ಜೆಯಿಡುವುದಾಗಿದೆ. ವಿನಯವೆಂದರೆ ಆಡಂಬರವನ್ನು ಬಿಟ್ಟು ದೇವರ ಮುಂದೆ ಯಾವುದೇ ಮುಖವಾಡವಿಲ್ಲದೆ ನಿಲ್ಲುವ ಧೈರ್ಯ. ಜೀವನವನ್ನು ನಾವು ಸೃಷ್ಟಿಸಿಕೊಳ್ಳಲಾರವು, ಅಥವಾ ನಮ್ಮನ್ನು ನಾವು ವಿಮೋಚಿಸಿಕೊಳ್ಳಲಾರವು ಎಂಬ ಸತ್ಯವನ್ನು ಅಂಗೀಕರಿಸುವುದು.
ಇದನ್ನು ಅರಿಯುವುದು ಎಂದರೆ, ನಾನು ಹಿಂದೆ ಕತ್ತಲನ್ನು ಆಯ್ಕೆಮಾಡಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವುದು. ಇದು ನಿರಾಶೆಯಲ್ಲ; ಇದು ಸ್ವಸ್ಥತೆಯ ಆರಂಭವಾಗಿದೆ — ಔಷಧಿಯು ತನ್ನ ಕೆಲಸವನ್ನು ಮಾಡಲು ಅವಕಾಶ ನೀಡುವುದು ಮತ್ತು ಪವಿತ್ರಾತ್ಮರು ಹೃದಯವನ್ನು ತೆರೆದು, ತಂದೆಯು ಪುತ್ರರಾದ ಪ್ರಭು ಕ್ರಿಸ್ತರ ಮೂಲಕ ನೀಡಿರುವ ವರವನ್ನು ಸ್ವೀಕರಿಸುವಂತೆ ಮಾಡುವುದು.
ಆ ಹಂತದಲ್ಲಿ ರಕ್ಷಣೆಯು ಇನ್ನು ಅಮೂರ್ತ ಕಲ್ಪನೆಯಾಗಿರುವುದಿಲ್ಲ. ಅದು ಜೀವಂತ ದೇವರೊಂದಿಗಿನ ಸಹಭಾಗಿತ್ವವಾಗುತ್ತದೆ. ತಂದೆಯಿಂದ ಪುತ್ರರ ಮೂಲಕ ಪವಿತ್ರಾತ್ಮರಲ್ಲಿ ಶಾಶ್ವತವಾಗಿ ಹರಿಯುವ ಪ್ರೀತಿಯು ಮಾನವನನ್ನು ತನ್ನೊಳಗೆ ಸೆಳೆಯಲು ಆರಂಭಿಸುತ್ತದೆ. ದೈವಿಕ ವೈದ್ಯರಾದ ಪ್ರಭು ಕ್ರಿಸ್ತರು ಗಾಯದ ಹೊರಗೆ ನಿಲ್ಲುವುದಿಲ್ಲ; ಅದರೊಳಗೆ ಪ್ರವೇಶಿಸುತ್ತಾರೆ, ಹೀಗೆ ಸ್ವಸ್ಥಗೊಳಿಸುವಿಕೆ ಒಳಗಿನಿಂದಲೇ ಆರಂಭವಾಗುತ್ತದೆ.
ತೀರ್ಪು ನೀಡುವ ಬೆಳಕೇ ಸ್ವಸ್ಥಗೊಳಿಸುವ ಬೆಳಕಾಗಿದೆ, ಏಕೆಂದರೆ ಅದು ನಾವು ಯಾರು ಎಂಬ ಸತ್ಯವನ್ನೂ, ನಾವು ಏನಾಗಲು ಸೃಷ್ಟಿಸಲ್ಪಟ್ಟಿದ್ದೇವೆ ಎಂಬ ಸತ್ಯವನ್ನೂ ಅನಾವರಣಗೊಳಿಸುತ್ತದೆ. ಈ ಬೆಳಕಿನಲ್ಲಿ ಉಳಿಯುವುದೇ ಈಗಾಗಲೇ ಪರಮ ಪವಿತ್ರ ತ್ರಿತ್ವದ ಜೀವನವನ್ನು ಆರಂಭಿಸುವುದಾಗಿದೆ.
ವಾಷಿಂಗ್ಟನ್ನ ಲೇಸಿಯಲ್ಲಿರುವ ಸಂತ ಮಾರ್ಟಿನ್ ಮಠದ ಮಠಾಧಿಪತಿ ವಂ. ಮರಿಯನ್ ನ್ಗುಯೆನ್
ಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).