ಏಪ್ರಿಲ್ 20ರಂದು ಲುವಾಂಡಾದ ಫಾತಿಮಾ ಮಾತೆಯ ಧರ್ಮಕೇಂದ್ರದಲ್ಲಿ ಧರ್ಮಾಧ್ಯಕ್ಷರು, ಯಾಜಕರು, ಉಪಯಾಜಕರು, ಧಾರ್ಮಿಕ ಸೇವಕ-ಸೇವಕಿಯರೊಂದಿಗೆ ಹಾಗೂ ಸೇವಾ ಕಾರ್ಯಕರ್ತರೊಂದಿಗೆ ಪೂಜ್ಯ ಜಗದ್ಗುರು ನಡೆಸಿದ ಸಭೆಯಲ್ಲಿ  ವಂ. ಗುರು ಸಮೀರ್ ಅಲ್ರಫೈನ್ ಏಪ್ರಿಲ್ 20ರಂದು ಲುವಾಂಡಾದ ಫಾತಿಮಾ ಮಾತೆಯ ಧರ್ಮಕೇಂದ್ರದಲ್ಲಿ ಧರ್ಮಾಧ್ಯಕ್ಷರು, ಯಾಜಕರು, ಉಪಯಾಜಕರು, ಧಾರ್ಮಿಕ ಸೇವಕ-ಸೇವಕಿಯರೊಂದಿಗೆ ಹಾಗೂ ಸೇವಾ ಕಾರ್ಯಕರ್ತರೊಂದಿಗೆ ಪೂಜ್ಯ ಜಗದ್ಗುರು ನಡೆಸಿದ ಸಭೆಯಲ್ಲಿ ವಂ. ಗುರು ಸಮೀರ್ ಅಲ್ರಫೈನ್  

ಅಂಗೋಲದಲ್ಲಿ ಸುಡಾನಿನ ಯಾಜಕ: ಸುಡಾನಿಗೆ ಪೂಜ್ಯ ಜಗದ್ಗುರುವಿನ ಶಾಂತಿಯ ಸಂದೇಶದ ಅಗತ್ಯವಿದೆ

ಪೂಜ್ಯ ಜಗದ್ಗುರು ಲಿಯೋ ಅವರ ಅಪೋಸ್ತೋಲಿಕ ಯಾತ್ರೆಯ ಸಮಯದಲ್ಲಿ ಶಾಂತಿಯ ಕುರಿತು ಅವರು ಸತತವಾಗಿ ನೀಡಿದ ಕೋರಿಕೆಗಳ ಹಿನ್ನೆಲೆದಲ್ಲಿ, ಅಂಗೋಲಾದಲ್ಲಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಡಾನಿನ ಯಾಜಕರಾದ ವಂ. ಗುರು ಸಮೀರ್ ಅಲ್ರಫೈನ್ ಅವರು ಸುಡಾನಿನ ಗಂಭೀರ ಪರಿಸ್ಥಿತಿಯತ್ತ ಹೊಸದಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷವು ಸಾವಿರಾರು ಜನರ ಜೀವವನ್ನು ಕಳೆದು, ಲಕ್ಷಾಂತರ ಜನರನ್ನು ಸ್ಥಳಚ್ಯುತಗೊಳಿಸಿದೆ.

ಲೇಖಕರು: ಕ್ಲಾಡಿಯಾ ಟೊರೆಸ್ – ಕಿಲಾಂಬಾ, ಆಂಗೋಲಾ

ಹಳೆಯ ವಿಭಜನೆಗಳು ಅಳಿದು, ದ್ವೇಷ ಮತ್ತು ಹಿಂಸಾಚಾರ ಮಾಯವಾಗಿ, ನ್ಯಾಯ ಹಾಗೂ ಪರಸ್ಪರ ಹಂಚಿಕೆಯ ಹೊಸ ಸಂಸ್ಕೃತಿಯ ಮೂಲಕ ಭ್ರಷ್ಟಾಚಾರ ನಿವಾರಣೆಯಾಗುವಂತಹ ದೇಶವನ್ನು ನಿರ್ಮಿಸಲು ಸಾಧ್ಯವಿದೆ.

ಏಪ್ರಿಲ್ 19ರಂದು ಕಿಲಾಂಬಾದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಹೇಳಿದ ಈ ಮಾತುಗಳು, ಅಂಗೋಲಾದಲ್ಲಿ 13 ವರ್ಷಗಳಿಂದಿರುವ ಸುಡಾನಿನ ಯಾಜಕರಾದ ವಂ. ಗುರು ಸಮೀರ್ ಅಲ್ರಫೈನ್ ಅವರ ಮನಸ್ಸಿನಲ್ಲಿ ಆಳವಾಗಿ ಪ್ರತಿಧ್ವನಿಸಿವೆ.

ಅವರು ಲುವಾಂಡಾದ ರೆಡೆಂಪ್ಟೋರಿಸ್ ಮಾತರ್ ಸೆಮಿನರಿಯಲ್ಲಿ ಯಾಜಕತ್ವದ ತರಬೇತಿ ಪಡೆದ ನಂತರ ನಾಲ್ಕು ವರ್ಷಗಳ ಹಿಂದೆ ಯಾಜಕರಾಗಿ ಅಭಿಷೇಕಗೊಂಡರು. ಇದು ನವಬೋಧಕಪಥ ಮಾರ್ಗಕ್ಕೆ ಸೇರಿದ ಮಿಷನರಿ ಮತ್ತು ಮಹಾಧರ್ಮಪ್ರಾಂತ್ಯದ ಸೆಮಿನರಿಯಾಗಿದೆ. ಪ್ರಸ್ತುತ ಅವರು ಲುವಾಂಡಾ ಮಹಾಧರ್ಮಪ್ರಾಂತ್ಯದಲ್ಲಿ ಧರ್ಮಪ್ರಾಂತ್ಯ ಯಾಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುವಾರ್ತಾ ಪ್ರಚಾರಕ್ಕೆ ಅಡಚಣೆಗಳು

ಏಪ್ರಿಲ್ 20ರಂದು ಲುವಾಂಡಾದ ಫಾತಿಮಾ ಮಾತೆಯ ಧರ್ಮಕೇಂದ್ರದಲ್ಲಿ ಧರ್ಮಾಧ್ಯಕ್ಷರು, ಯಾಜಕರು, ಉಪಯಾಜಕರು, ಧಾರ್ಮಿಕ ಸೇವಕ-ಸೇವಕಿಯರೊಂದಿಗೆ ಹಾಗೂ ಸೇವಾ ಕಾರ್ಯಕರ್ತರೊಂದಿಗೆ ಪೂಜ್ಯ ಜಗದ್ಗುರು ನಡೆಸಿದ ಸಭೆಯ ಸಂದರ್ಭದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಂ. ಗುರು ಸಮೀರ್ ಅಲ್ರಫೈನ್ ಅವರು, ಪೂಜ್ಯ ಜಗದ್ಗುರುವಿನ ಭೇಟಿ ಅಂಗೋಲಾ ಸಮಾಜವನ್ನು ಬಲಪಡಿಸಲು ಸಹಾಯಕವಾಗಬಹುದು ಎಂದು ಹೇಳಿದರು.

ದೇಶವು ಸಾಮಾಜಿಕ ಅನ್ಯಾಯ ಮತ್ತು ಬಡತನದೊಂದಿಗೆ ಹೋರಾಡುತ್ತಿದೆ ಎಂದು ಅವರು ವಿವರಿಸಿ, ಹೊಸ ಪಂಥಗಳು ಸುವಾರ್ತಾ ಪ್ರಚಾರಕ್ಕೆ ವಿಶೇಷ ಸವಾಲಾಗಿವೆ ಎಂದು ಸೂಚಿಸಿದರು, ಏಕೆಂದರೆ ಅವು “ಕುಟುಂಬಗಳಲ್ಲಿ ಭೇದಗಳನ್ನು ಉಂಟುಮಾಡುತ್ತವೆ.”

“ಪೇತ್ರನಾಗಿ ಪವಿತ್ರ ತಂದೆಯವರು ನಮ್ಮನ್ನು ನಂಬಿಕೆಯಲ್ಲಿ ದೃಢಪಡಿಸಲು ನಮಗೆ ಅಗತ್ಯ.”  ಪೂಜ್ಯ ಜಗದ್ಗುರುವಿನ ಸಾನ್ನಿಧ್ಯ “ಜನರಿಗೆ ಬಹಳ ಸಂತೋಷವನ್ನೂ” ಮತ್ತು “ಅಪಾರ ಕೃಪೆಯನ್ನೂ” ತರುತ್ತದೆ ಎಂದು ಅವರು ಸೇರಿಸಿದರು.

ನಂತರ ವಂ. ಗುರು ಅಲ್ರಫೈನ್ ಅವರು ಪೂಜ್ಯ ಜಗದ್ಗುರು ಲಿಯೋ ಅವರ ಶಾಂತಿಯ ಸಂದೇಶದ ಕುರಿತು ಮಾತನಾಡಿ, “ನಿಮಗೆ ತಿಳಿದಿರುವಂತೆ, ಅಂಗೋಲಾ ಯುದ್ಧದ ಇತಿಹಾಸದಿಂದ ಬಂದಿದೆ,” ಎಂದು ಅವರು ಕಿಲಾಂಬಾದಲ್ಲಿ ನೀಡಿದ ಪವಿತ್ರ ಬಲಿಪೂಜೆಯ ಉಪದೇಶವನ್ನು ನೆನಪಿಸಿದರು. ಈಗ ಅಂಗೋಲಾಕ್ಕೆ “ಸಹೋದರತ್ವದ ಮನೋಭಾವ” ಮತ್ತು “ಕ್ರೈಸ್ತ ಆತ್ಮ” ಇನ್ನಷ್ಟು ಅಗತ್ಯವಾಗಿದೆ ಎಂದು ಅವರು ಒತ್ತಿಹೇಳಿದರು.

ಸುಡಾನಿನಲ್ಲಿ ಶಾಂತಿಗಾಗಿ ಮನವಿ

ವಂ. ಗುರು ಸಮೀರ್ ಅಲ್ರಫೈನ್ ಅವರು, ಅಂಗೋಲಾದಲ್ಲಿ ಪೂಜ್ಯ ಜಗದ್ಗುರು ಮಾಡಿದ ಶಾಂತಿಯ ಕೋರಿಕೆಗಳು ಇತರೆ ಆಫ್ರಿಕಾ ದೇಶಗಳಿಗೂ—ಅವರ ಸ್ವದೇಶವಾದ ಸುಡಾನಿಗೂ—ವಿಸ್ತರಿಸುತ್ತವೆ ಎಂದು ಹೇಳಿದರು. ಅಲ್ಲಿ ನಡೆಯುತ್ತಿರುವ ಸಂಘರ್ಷವು ಲಕ್ಷಾಂತರ ಜನರನ್ನು ಸ್ಥಳಚ್ಯುತಗೊಳಿಸಿದ್ದು, ಜಾಗತಿಕ ಗಮನದಿಂದ ಬಹುತೇಕ ಹೊರಗಿರುವ ಮಾನವೀಯ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.

“ಸುಡಾನಿನ ಬಗ್ಗೆ ಹೆಚ್ಚು ಜನರು ಮಾತನಾಡುವುದಿಲ್ಲ,” ಎಂದು ಅವರು ಹೇಳಿದರು. “ಈ ಕಾಲದಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಉದ್ವಿಗ್ನತೆ ಮತ್ತು ಯುದ್ಧ ಪರಿಸ್ಥಿತಿಗಳು ಇವೆ ಎಂಬುದು ನಮಗೆ ತಿಳಿದಿದೆ; ಆದರೆ ಸುಡಾನಿಗೆ ಇನ್ನಷ್ಟು ಗಮನ ಅಗತ್ಯ.”

ಅದರ ಕಾರಣದಿಂದ ಅವರು ಪೂಜ್ಯ ಜಗದ್ಗುರುವಿನ ಸತತ ಶಾಂತಿಯ ಕೋರಿಕೆಗಳನ್ನು ಮೆಚ್ಚಿದರು. “ಪೂಜ್ಯ ಜಗದ್ಗುರು ‘ಯುದ್ಧ ಬೇಡ, ಇನ್ನೆಂದಿಗೂ ಯುದ್ಧ ಬೇಡ’ ಎಂದು ಹೇಳಿದ್ದಾರೆ. ಸುಡಾನಿಗೆ ಬೇಕಾಗಿರುವುದು ಇದೇ,” ಎಂದು ಯಾಜಕರು ಒತ್ತಿಹೇಳಿದರು.

“ಸುಡಾನವು ದೀರ್ಘಕಾಲದಿಂದ ಯುದ್ಧಗಳಿಂದ ಬಳಲುತ್ತಿದೆ, ಕಳೆದ ಮೂರು ವರ್ಷಗಳ ಸಂಘರ್ಷದಿಂದ “15 ಮಿಲಿಯನ್‌ಕ್ಕಿಂತ ಹೆಚ್ಚು ಜನರು” ನಿರಾಶ್ರಿತರಾಗಿದ್ದಾರೆ ಎಂದು ಅವರು ಸೂಚಿಸಿದರು. “ಹಲವರು ಸಂಕಷ್ಟ ಅನುಭವಿಸುತ್ತಿದ್ದಾರೆ, ಹಲವರು ಸಾವನ್ನಪ್ಪುತ್ತಿದ್ದಾರೆ,” ಮತ್ತು ಇನ್ನು ಹಲವರು “ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ” ಬದುಕುತ್ತಿದ್ದಾರೆ ಎಂದು ವಂ. ಗುರು ಅಲ್ರಫೈನ್ ಹೇಳಿದರು. “ಸುಡಾನಿಗೆ ನಿಜವಾಗಿಯೂ ನಿಮ್ಮ ಗಮನ, ನಿಮ್ಮ ಸಹಾಯ ಮತ್ತು ನಿಮ್ಮ ಪ್ರಾರ್ಥನೆಯ ಅಗತ್ಯವಿದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಏಪ್ರಿಲ್ 2026, 22:23