‘ಪೂಜ್ಯ ಜಗದ್ಗುರು ಲಿಯೋ ಅವರ ಭೇಟಿ ನಮಗೆ ಅಪೂರ್ವ ಕ್ಷಣ’
ಲೇಖಕರು: ಡಲ್ಸೆ ಅರೌಜೋ
“ವೃದ್ಧಾಪ್ಯವು ಒಂದು ಮಹಾನ್ ಆಶೀರ್ವಾದ. ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆಯುವುದು ಅದ್ಭುತ... ಜೀವನಕ್ಕೆ ಬೆಲೆ ಕೊಡೋಣ”. ಇದು ಜಿಯಾರ್ಜಿನಾ ಮ್ವಾಂಡುಂಬಾ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಂಗೋಲಾ ಜನರಿಗೆ ನೀಡಿದ ಸಂದೇಶವಾಗಿದೆ. ಅವರು ಕಳೆದ ಏಳು ವರ್ಷಗಳಿಂದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಈ ವೃದ್ಧಾಶ್ರಮವನ್ನು ಅವರು ಪರಿಚಯಿಸುತ್ತಾ, ವೃದ್ಧರೊಂದಿಗೆ ಕೆಲಸ ಮಾಡುವ ನಿಜವಾದ ಸಂತೋಷದಿಂದ ಆ ವರ್ಷಗಳು ಹೇಗೆ ಕಳೆದವು ಎಂಬುದು ಅವರಿಗೆ ತಿಳಿಯದೇ ಹೋಗಿದೆ.
ಬಾಲ್ಯ ಸಂಬಂಧಿತ ಸಾಮಾಜಿಕ ಸೇವೆಯಲ್ಲಿ ತರಬೇತಿ ಪಡೆದಿರುವ ಅವರನ್ನು, ಆಗಿನ ಪ್ರಾಂತ್ಯ ಗವರ್ನರ್ ಡ್ಯಾನಿಯಲ್ ಎಫ್. ನೆಟೋ ಅವರು, 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮತ್ತು ಅಂಗೋಲಾ ಸರ್ಕಾರಕ್ಕೆ ಸೇರಿದ ಈ ವೃದ್ಧಾಶ್ರಮವನ್ನು ನಿರ್ವಹಿಸಲು ಸೂಕ್ತ ವ್ಯಕ್ತಿಯಾಗಿ ಆಯ್ಕೆ ಮಾಡಿದರು.
ಧರ್ಮಸಭೆಯೊಂದಿಗೆ ಉತ್ತಮ ಸಂಬಂಧ
ಮ್ವಾಂಡುಂಬಾ ಅವರು, ಧರ್ಮಸಭೆಯೊಂದಿಗೆ ತಮ್ಮ ಉತ್ತಮ ಸಂಬಂಧವನ್ನು ಒತ್ತಿಹೇಳುತ್ತಾರೆ. ಧರ್ಮಸಭೆ ನಿವಾಸಿಗಳಿಗೆ ಆಧ್ಯಾತ್ಮಿಕ ಬೆಂಬಲವನ್ನು ನೀಡುವುದರ ಜೊತೆಗೆ, ಸಂಸ್ಥೆಯ ನಿರ್ವಹಣೆಗೆ ಸಹಾಯವಾಗುವ ದಾನ ಸಹ ನೀಡುತ್ತದೆ. ಸಂಘಟನೆಗಳು ಮತ್ತು ಉಪಕಾರಿಗಳಿಂದಲೂ ಹಣಕಾಸಿನ ಸಹಾಯ ದೊರೆಯುತ್ತದೆ, ಆದರೆ ಅಗತ್ಯಕ್ಕಿಂತ ಕಡಿಮೆಯಿದ್ದರೂ, ಮುಖ್ಯವಾಗಿ ಸರ್ಕಾರದ ಮಾಸಿಕ ಅನುದಾನವೇ ಈ ವೃದ್ಧಾಶ್ರಮವನ್ನು ನಡೆಸಲು ಸಹಾಯ ಮಾಡುತ್ತದೆ.
ವೃದ್ಧರು ಖಾಲಿ ಜಾಗದಲ್ಲಿ ಕೃಷಿಯನ್ನು ಹವ್ಯಾಸವಾಗಿ ಮತ್ತು ತಮ್ಮ ಜೀವನೋಪಾಯಕ್ಕೆ ಕೊಡುಗೆ ನೀಡುವ ಮಾರ್ಗವಾಗಿ ನಡೆಸುತ್ತಾರೆ. ಆದರೆ ಆಹಾರದಿಂದ ಆರೋಗ್ಯ ಸೇವೆಯವರೆಗೆ ಅವರಿಗೆ ಅಗತ್ಯವಿರುವ ಎಲ್ಲವನ್ನೂ ಈ ವೃದ್ಧಾಶ್ರಮವೇ ಒದಗಿಸುತ್ತದೆ. ವಾಸ್ತವವಾಗಿ, ಆಶ್ರಮದ ಆರೋಗ್ಯ ಕೇಂದ್ರವು ಸಮೀಪದ ಗ್ರಾಮಗಳ ನಿವಾಸಿಗಳಿಗೆ ಸಹ ಸೇವೆ ಸಲ್ಲಿಸುತ್ತದೆ.
ಮಹಿಳೆಯರ ಮತ್ತು ಪುರುಷರಂತೆ ಎರಡು ವಿಭಾಗಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಈ ವೃದ್ಧಾಶ್ರಮವು, ಪೂಜ್ಯ ಜಗದ್ಗುರುವಿನ ಭೇಟಿಗಾಗಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕಿ ಬಹುಕಾಲದಿಂದ ಕೇಳುತ್ತಿದ್ದ ಕೆಲವು ಸೌಲಭ್ಯಗಳು— ಸೌರಿಮೊ ನಗರದ ವಿದ್ಯುತ್ ಸಂಪರ್ಕ (ಜನರೇಟರ್ ಬದಲಿಗೆ) ಮತ್ತು ಪೈಪ್ ಮೂಲಕ ನೀರು—ಈಗ ವಾಸ್ತವವಾಗಿದ್ದು, ಜೀವನವನ್ನು ಸುಲಭಗೊಳಿಸುತ್ತಿವೆ ಎಂದು ಜಿಯಾರ್ಜಿನಾ ಅವರು ಹೇಳುತ್ತಾರೆ. ಇದನ್ನೇ ಅವರು ಪೂಜ್ಯ ಜಗದ್ಗುರುವಿನ ಭೇಟಿಯಿಂದ ಬಂದ ಆಶೀರ್ವಾದವೆಂದು ನೋಡುತ್ತಾರೆ: “ಸ್ವರ್ಗದಿಂದ ಬಿದ್ದ ಆಶೀರ್ವಾದದಂತೆ, ಈಗಲೇ ನಾವು ಸಂತೋಷದಲ್ಲಿದ್ದೇವೆ!”
ಮೂಢನಂಬಿಕೆ ಮತ್ತು ಕುಟುಂಬದ ತಿರಸ್ಕಾರ
ಈ ವೃದ್ಧಾಶ್ರಮವು ಸೌರಿಮೊ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಇರುವ 74 ವೃದ್ಧ ನಿವಾಸಿಗಳಲ್ಲಿ 42 ಜನ ಮಹಿಳೆಯರು; ಅವರ ವಯಸ್ಸು 60ರಿಂದ 93ರವರೆಗೆ ಇದ್ದರೂ, ದೈಹಿಕವಾಗಿ ಅತಿ ದುರ್ಬಲ ಸ್ಥಿತಿಯಲ್ಲಿ ಇಲ್ಲಿಗೆ ಬರುವುದರಿಂದ ಕೆಲವೊಮ್ಮೆ ಅವರು ಇನ್ನೂ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಕುಟುಂಬದವರು ಅವರನ್ನು ಮೂಢನಂಬಿಕೆಗಳ ಆಧಾರದ ಮೇಲೆ ಆರೋಪಿಸಿ ತಳ್ಳಿಹಾಕುವಾಗ, ಅವರು ಅನುಭವಿಸುವ ಹಿಂಸೆಯಿಂದ ರಕ್ಷಣೆಗಾಗಿ ಪೊಲೀಸರು ಅವರನ್ನು ಇಲ್ಲಿ ಕರೆತರುತ್ತಾರೆ.
ಆದರೆ, ಜಿಯಾರ್ಜಿನಾ ಅವರ ಅಭಿಪ್ರಾಯದಲ್ಲಿ, ಇದು ವೃದ್ಧರ ಆರೈಕೆಯ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ಬಳಸಲಾಗುತ್ತಿರುವ ಒಂದು ನೆಪವಾಗುತ್ತಿದೆ. ಆದ್ದರಿಂದ, ಅವರು ಸಮಾಜವನ್ನು ವೃದ್ಧರನ್ನು ಮೌಲ್ಯೀಕರಿಸಲು ಕೋರಿಕೊಂಡು, ಈ “ತಳ್ಳಿಹಾಕಲ್ಪಟ್ಟ” ಜನರ ಬಳಿಗೆ ಪೂಜ್ಯ ಜಗದ್ಗುರುವಿನ ಭೇಟಿ ಒಂದು “ಮಹಾ ಪಾಠ”ವಾಗಿದೆ ಎಂದು ಹೇಳಿದ್ದಾರೆ. ಅವರು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಉತ್ತಮ ಅನುಭವಗಳನ್ನೂ ಹಂಚಿಕೊಳ್ಳುತ್ತಾರೆ.
ಈ ವೃದ್ಧರು ಆಶ್ರಮದಲ್ಲಿ ಸಂತೋಷವಾಗಿದ್ದು, ಪರಸ್ಪರ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ ಮತ್ತು ಎಲ್ಲರೂ ಕಥೋಲಿಕ ಆಗಿರದಿದ್ದರೂ ಸಹ, ಒಟ್ಟಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ. ಆದರೆ, ಅವರು ತಮ್ಮ ಕುಟುಂಬದವರ ಜೊತೆ ಇರಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದ್ದು, ದುರದೃಷ್ಟವಶಾತ್ ಅವರ ಕುಟುಂಬದವರು ಅವರನ್ನು ಭೇಟಿ ಮಾಡಲು ಕೂಡ ಬರುವುದಿಲ್ಲ ಎಂದು ನಿರ್ದೇಶಕಿ ದುಃಖದಿಂದ ತಿಳಿಸುತ್ತಾರೆ.
ವೃದ್ಧಾಶ್ರಮಕ್ಕೆ ಪೂಜ್ಯ ಜಗದ್ಗುರು ಲಿಯೋ ಅವರ ಭೇಟಿ
2026 ಏಪ್ರಿಲ್ 20ರ ಬೆಳಿಗ್ಗೆ ಪೂಜ್ಯ ಜಗದ್ಗುರು ಲಿಯೋ ಅವರ ಈ ವೃದ್ಧಾಶ್ರಮದ ಭೇಟಿ, ಈ ಪುರುಷರು ಮತ್ತು ಮಹಿಳೆಯರಿಗೆ ಮಹಾ ಸಂತೋಷದ ಕ್ಷಣವಾಗಲಿದೆ; ಆ ದಿನ ಅವರು ಗಮನದ ಕೇಂದ್ರವಾಗಿರುವರು. ಈ ಮಹತ್ವದ ಅತಿಥಿಯನ್ನು ಸ್ವಾಗತಿಸಲು ಸಿದ್ಧತೆಗಳು ಪೂರ್ಣ ವೇಗದಲ್ಲಿ ನಡೆಯುತ್ತಿವೆ: ಎಲ್ಲರ ಪರವಾಗಿ ಮಾತನಾಡುವ ಪ್ರತಿನಿಧಿಗಳು, ಹಾಡುಗಳು ಮತ್ತು ಇನ್ನೂ ಕೆಲವು ಅಚ್ಚರಿಗಳು. ಯಾರಿಗೆ ಗೊತ್ತು—ಈ ಭೇಟಿ ಆಶ್ರಮದೊಳಗೆ ಒಂದು ಚಾಪೆಲ್ ನಿರ್ಮಾಣಕ್ಕೂ ಕಾರಣವಾಗಬಹುದು; ಈಗ ಇಲ್ಲಿ ಆಧ್ಯಾತ್ಮಿಕ ಸೇವೆಯನ್ನು ಸ್ಥಾಯಿ ಯಾಜಕರು ನೀಡುವುದಿಲ್ಲ, ಬದಲಾಗಿ ಭಾನುವಾರಗಳಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲು ಬರುವ ಯಾಜಕರು ಈ ಉದ್ದೇಶಕ್ಕಾಗಿ ಸಿದ್ಧಪಡಿಸಿದ ಸಣ್ಣ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಮಹಿಳೆಯರು ಮತ್ತು ಪುರುಷರಂತೆ ಎರಡು ವಿಭಾಗಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಈ ಕೇಂದ್ರದಲ್ಲಿ, ಪ್ರತಿ ಕೊಠಡಿಗೆ ಮೂರು ಅಥವಾ ಹೆಚ್ಚುಮಟ್ಟಿಗೆ ನಾಲ್ಕು ನಿವಾಸಿಗಳಿದ್ದು, ವೃದ್ಧರ ಆರೈಕೆಗೆ ಇನ್ನಷ್ಟು ಸಿಬ್ಬಂದಿ ಇರಬೇಕೆಂಬುದು ನಿರ್ದೇಶಕಿಯ ಆಶೆಯಾಗಿದೆ. ಪ್ರಸ್ತುತ ಇಲ್ಲಿ ನಿರ್ದೇಶಕಿ, ನಿರ್ವಾಹಕ, ಸಾಮಾಜಿಕ ಕಾರ್ಯಕರ್ತ ಮತ್ತು ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ಮಾತ್ರ ಇದ್ದಾರೆ.
ಆದರೆ, ಮ್ವಾಂಡುಂಬಾ ಅವರನ್ನು ಹೆಚ್ಚು ಕಳವಳಗೊಳಿಸುವುದು ಮೂಢನಂಬಿಕೆಗಳ ಆರೋಪಗಳನ್ನು ಮಾಡಿ ವೃದ್ಧರನ್ನು ತಳ್ಳಿಹಾಕುವ ಈ ಅಸಂಬದ್ಧ ಆಚರಣೆಯನ್ನು ನಿಲ್ಲಿಸುವ ಅಗತ್ಯವಾಗಿದೆ. “ನಾವು ವಿಶ್ವಾಸಿಗಳು,ದೇವಾಲಯಕ್ಕೆ ಹೋಗುವವರು, ದೇವರ ಆಶೀರ್ವಾದವನ್ನು ಮೀರಿ ಯಾವ ಮಾಂತ್ರಿಕ ಶಕ್ತಿಯುಳ್ಳವನು ಗೆಲ್ಲಬಲ್ಲನೆಂದು ನಂಬುವುದು ಭಕ್ತಿಯಲ್ಲ, ಅದು ಅವಿಶ್ವಾಸ!”
ಪೂಜ್ಯ ಜಗದ್ಗುರುವಿನ ಅಂಗೋಲಾ ಭೇಟಿಯ ವಿಷಯವಾದ “ಭರವಸೆಯ ಯಾತ್ರಿಕ, ಸಮಾಧಾನ ಮತ್ತು ಶಾಂತಿ” ಎಂಬ ವಿಷಯದೊಂದಿಗೆ ಈ ಸಮಸ್ಯೆಯ ಸಂಬಂಧದ ಬಗ್ಗೆ ಕೇಳಿದಾಗ, ಜಿಯಾರ್ಜಿನಾ ಅವರು “ಶಾಂತಿ ನಮ್ಮ ಕುಟುಂಬಗಳಿಂದಲೇ ಆರಂಭವಾಗಬೇಕು” ಎಂದು ನೆನಪಿಸುತ್ತಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).