SKOREA-AI-LAW-GOVERNANCE SKOREA-AI-LAW-GOVERNANCE  (AFP or licensors)

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕತೆ ಬಳಕೆ ಮತ್ತು ವಿಶ್ವಾಸದ ಕುರಿತು ಧಾರ್ಮಿಕ ಸಹೋದರಿಯರ ಚಿಂತನೆ

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ, ಧಾರ್ಮಿಕ ಸಮುದಾಯಗಳ ಸದಸ್ಯರು ಕೃತಕ ಬುದ್ಧಿಮತ್ತೆ (AI) ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ, ಜ್ಞಾನ, ಹೊಣೆಗಾರಿಕೆ ಮತ್ತು ಮಾನವ ಗೌರವವನ್ನು ಕಾಪಾಡುವ ಅಗತ್ಯವನ್ನು ಒತ್ತಿಹೇಳಿದರು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

“ಕೃತಕ ಬುದ್ಧಿಮತ್ತೆ ಮಾನವ ಸಂವಹನವನ್ನು ಅನುಕರಿಸುತ್ತದೆ; ಆದ್ದರಿಂದ ಅದನ್ನು ಜಾಗ್ರತೆಯಿಂದ ಮತ್ತು ಹೊಣೆಗಾರಿಕೆಯಿಂದ ಬಳಸಬೇಕು,” ಎಂದು ವಂ. ಗುರು ಜೇಮ್ಸ್ ಬಾಂಗ್ ಜೋಂಗ್-ವೂ ಕೃತಕ ಬುದ್ಧಿಮತ್ತೆ ಮತ್ತು ನೈತಿಕತೆ ಕುರಿತು ನೀಡಿದ ವಿಶೇಷ ಉಪನ್ಯಾಸದಲ್ಲಿ ಹೇಳಿದರು.

ಈ ಉಪನ್ಯಾಸ ಫೆಬ್ರವರಿ 24ರಂದು ಸೋಲ್‌ನ ಜೊಂಗ್ದಾಂಗ್ ಫ್ರಾನ್ಸಿಸ್ಕನ್ ಪ್ರಾಧಾನ ದೇವಾಲಯದಲ್ಲಿ ನಡೆಯಿತು.

ಕೊರಿಯಾ ಕಥೋಲಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ವಂ. ಗುರು ಜೇಮ್ಸ್ ಅವರು “ತಂತ್ರಜ್ಞಾನದ ಎದುರು ವಿಶ್ವಾಸ: ಕೃತಕ ಬುದ್ಧಿಮತ್ತೆ ನೈತಿಕತೆ” ಎಂಬ ವಿಷಯದ ಮೇಲೆ ಸುಮಾರು ಎರಡು ಗಂಟೆಗಳ ಉಪನ್ಯಾಸ ನೀಡಿದರು.

ಸುಮಾರು 250 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಲ್ಲಿ ಬಹುತೇಕರು ಧಾರ್ಮಿಕ ಸಹೋದರಿಯರಾಗಿದ್ದು, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನಗಳ ನೈತಿಕ ಪರಿಣಾಮಗಳನ್ನು ಅರಿಯಲು ಧರ್ಮಸಭೆಯೊಳಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಇದು ತೋರಿಸುತ್ತದೆ.

ದೈನಂದಿನ ಜೀವನದ ಭಾಗವಾಗುತ್ತಿರುವ ಕೃತಕ ಬುದ್ಧಿಮತ್ತೆ(AI)

ಕೊರಿಯಾ ಕಥೋಲಿಕ ಟೈಮ್ಸ್ ವರದಿಯ ಪ್ರಕಾರ, ವಂ. ಗುರು ಜೇಮ್ಸ್ ತಮ್ಮ ಉಪನ್ಯಾಸದಲ್ಲಿ ಕೃತಕ ಬುದ್ಧಿಮತ್ತೆ ಈಗಾಗಲೇ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿರುವುದನ್ನು ಉಲ್ಲೇಖಿಸಿದರು. ಅನೇಕ ಧಾರ್ಮಿಕ ಸಮುದಾಯಗಳು ಈಗಾಗಲೇ AI ಉಪಕರಣಗಳನ್ನು ಮಾಹಿತಿ ಹುಡುಕಲು, ವಿಷಯ ರಚಿಸಲು ಮತ್ತು ಸುವಾರ್ತೆ ಘೋಷಣೆಯ ಕಾರ್ಯದಲ್ಲಿ ಸಹಾಯಕ್ಕಾಗಿ ಬಳಸುತ್ತಿರುವುದಾಗಿ ಅವರು ಹೇಳಿದರು.

ಆದರೆ AI ಮಾನವ ಭಾಷೆ ಮತ್ತು ಚಿಂತನೆಯ ರೀತಿಯನ್ನು ಅನುಕರಿಸುವ ಸಾಮರ್ಥ್ಯ ಹೊಂದಿರುವುದರಿಂದ, ಮಾನವ ಬುದ್ಧಿಮತ್ತೆ ಮತ್ತು ಯಂತ್ರದಿಂದ ಸೃಷ್ಟಿಯಾದ ಉತ್ತರಗಳ ನಡುವಿನ ವ್ಯತ್ಯಾಸ ಮಂಕಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

“ಕೃತಕ ಬುದ್ಧಿಮತ್ತೆ ಮಾನವ ಸಂವಹನವನ್ನು ಅನುಕರಿಸುತ್ತದೆ; ಆದ್ದರಿಂದ ಅದನ್ನು ಜಾಗ್ರತೆಯಿಂದ ಮತ್ತು ಹೊಣೆಗಾರಿಕೆಯಿಂದ ಬಳಸಬೇಕು,” ಎಂದು ಅವರು ಹೇಳಿದರು.

ನೈತಿಕ ಕಾಳಜಿಗಳು- ನೈಜ ಜಗತ್ತಿನ ಅಪಾಯಗಳು

AI ಬಳಕೆಯ ಅಪಾಯಗಳನ್ನು ವಿವರಿಸಲು ವಂ. ಗುರು ಜೇಮ್ಸ್ ಅವರು ಅಮೇರಿಕಾದ 16 ವರ್ಷದ ಬಾಲಕ ಆಡಮ್ ರೈನ್ ಪ್ರಕರಣವನ್ನು ಉಲ್ಲೇಖಿಸಿದರು. ವರದಿಗಳ ಪ್ರಕಾರ, ದೀರ್ಘಕಾಲ AI ಚಾಟ್‌ಬಾಟ್‌ನೊಂದಿಗೆ ನಡೆಸಿದ ಸಂವಹನದ ಬಳಿಕ ಆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಜಾಗತಿಕ ಚಿಂತೆಗೆ ಕಾರಣವಾಗಿದೆ.

ಆ ಚಾಟ್‌ಬಾಟ್ ಆ ಬಾಲಕನೊಂದಿಗೆ ಭಾವನಾತ್ಮಕವಾಗಿ ಅತಿಯಾದ ಸಂಬಂಧ ಬೆಳೆಸಿಕೊಂಡು ಅವನ ಆತ್ಮಹತ್ಯೆಯ ಚಿಂತನೆಗಳನ್ನು ಮತ್ತಷ್ಟು ಬಲಪಡಿಸಿತೆಂದು ಆರೋಪಿಸಲಾಗಿದೆ. ಈ ಪ್ರಕರಣ ಇನ್ನೂ ಅಮೇರಿಕಾದಲ್ಲಿ ಕಾನೂನು ಪರಿಶೀಲನೆಯಲ್ಲಿದ್ದು, AI ಅಭಿವೃದ್ಧಿ ಮತ್ತು ಬಳಕೆಯ ನೈತಿಕ ಹೊಣೆಗಾರಿಕೆ ಕುರಿತು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ. ಈ ರೀತಿಯ ಉದಾಹರಣೆಗಳು ನೈತಿಕ ಚಿಂತನೆಯ ತುರ್ತು ಅಗತ್ಯವನ್ನು ತೋರಿಸುತ್ತವೆ ಎಂದು ವಂ. ಗುರು ಜೇಮ್ಸ್ ಹೇಳಿದರು.

“ನಾವು ಕೃತಕ ಬುದ್ಧಿಮತ್ತೆಯನ್ನು ತಿರಸ್ಕರಿಸಬೇಕಾಗಿಲ್ಲ,ಆದರೆ ಅದನ್ನು ಹೇಗೆ ಬಳಸಬೇಕು ಎಂಬುದನ್ನು ಅರಿಯಬೇಕು”ಎಂದು ಅವರು ಹೇಳಿದರು,

ಆಧ್ಯಾತ್ಮಿಕ ವಿವೇಕದ ಅಗತ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನಾ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಸಹೋದರಿ ಜಂಗ್ ಯುನ್-ಜಿನ್ ಅವರು ಡಿಜಿಟಲ್ ತಂತ್ರಜ್ಞಾನಗಳ ವೇಗವಾದ ಅಭಿವೃದ್ಧಿ ಆಳವಾದ ಆಧ್ಯಾತ್ಮಿಕ ಜಾಗೃತಿಯನ್ನು ಅಗತ್ಯಪಡಿಸುತ್ತದೆ ಎಂದು ಹೇಳಿದರು.

“ಈ ಬದಲಾವಣೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಇಂದಿನ ಜನರಿಗೆ ಸುವಾರ್ತೆಯ ಸಂದೇಶವನ್ನು ಹೇಗೆ ಸಾರುತ್ತೇವೆ ಎಂಬುದನ್ನು ನಾವು ಚಿಂತಿಸಬೇಕು,” ಎಂದು ಅವರು ಹೇಳಿದರು.

ಮಾನವ ಸೇವೆಗೆ ತಂತ್ರಜ್ಞಾನ

ಇದೇ ವಿಷಯದ ಕುರಿತು ನಡೆದ ಇತರ ಉಪನ್ಯಾಸಗಳಲ್ಲಿಯೂ ವಂ. ಗುರು ಜೇಮ್ಸ್ ಅವರು ಕೃತಕ ಬುದ್ಧಿಮತ್ತೆಯನ್ನು ಮಾನವ ಸೃಜನಶೀಲತೆಯ ಒಂದು ಚಿಹ್ನೆಯಾಗಿ ನೋಡಬಹುದು ಎಂದು ಹೇಳಿದರು.

“ಕೃತಕ ಬುದ್ಧಿಮತ್ತೆ ದೇವರ ಸೃಷ್ಟಿ ಕಾರ್ಯದಲ್ಲಿ ಮಾನವನು ಹೊಣೆಗಾರಿಕೆಯಿಂದ ಪಾಲ್ಗೊಳ್ಳುವ ಸಾಮರ್ಥ್ಯದ ಸಾಕ್ಷಿಯಾಗಿದೆ, ಆದರೆ ಅದು ಸದಾ ಮಾನವನ ಸೇವೆಗೆ ಇರಬೇಕು ಮತ್ತು ಧರ್ಮಸಭೆಯ ಉಪದೇಶಗಳ ಪ್ರಕಾರ ಸಾಮಾನ್ಯ ಹಿತಕ್ಕಾಗಿ ಕೆಲಸ ಮಾಡಬೇಕು. ಯಂತ್ರಗಳು ದೇವರಿಂದ ಮಾನವನಿಗೆ ದೊರೆತ ಸೃಜನಶೀಲತೆಯ ವರಗಳು. ಆದರೆ ಅವು ಸೃಷ್ಟಿಗಳ ಸೃಷ್ಟಿಗಳೇ. ದೇವರ ಸೃಷ್ಟಿಗಳಾದ ನಮಗೆ ದೇವರು ನೀಡಿದ ಸ್ವಾತಂತ್ರ್ಯ ಮತ್ತು ಗೌರವವನ್ನು ಅವು ಎಂದಿಗೂ ಕಸಿದುಕೊಳ್ಳದಂತೆ ನಾವು ಜಾಗರೂಕರಾಗಿರಬೇಕು" ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

14 ಮಾರ್ಚ್ 2026, 18:56