ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಯೆಹೂದ್ಯರನ್ನು ರಕ್ಷಿಸಿದ ಸಾವಿರಾರು ಪೋಲಿಷ್ ಧಾರ್ಮಿಕ ಸನ್ಯಾಸಿನಿಯರ ಸ್ಮರಣೆ
ವ್ಯಾಟಿಕನ್ ವರದಿ
ಮರಣದಂಡನೆ ಭೀತಿಯ ನಡುವೆಯೂ, ದ್ವಿತೀಯ ವಿಶ್ವಯುದ್ಧದ ಅವಧಿಯಲ್ಲಿ ಸಾವಿರಾರು ಪೋಲಿಷ್ ಧಾರ್ಮಿಕ ಸನ್ಯಾಸಿನಿಯರು, ಗುರುಗಳು ಮತ್ತು ಇತರ ಧಾರ್ಮಿಕರು ಯೆಹೂದ್ಯ ಮಕ್ಕಳಿಗೂ, ವಯಸ್ಕರಿಗೂ ಆಶ್ರಯ ನೀಡಿದರು. ಜರ್ಮನ್ ಆಕ್ರಮಣದಲ್ಲಿದ್ದ ಪೋಲ್ಯಾಂಡ್ನಲ್ಲಿ ಯೆಹೂದ್ಯರನ್ನು ಅಡಗಿಸಿ ಇಡುವವರು ಪತ್ತೆಯಾದರೆ ನಾಜಿಗಳಿಂದ ಮರಣದಂಡನೆ ವಿಧಿಸಲಾಗುತ್ತಿತ್ತು. ಮಾರ್ಚ್ 24ರಂದು ಈ ರೀತಿಯಾಗಿ ಯೆಹೂದ್ಯರನ್ನು ರಕ್ಷಿಸಿದ ಪೋಲಿಷ್ ನಾಗರಿಕರ ಸ್ಮರಣಾ ದಿನ ಆಚರಿಸಲಾಗುತ್ತದೆ.
ಸ್ಮರಣೆಯ ದಿನ ಮತ್ತು ಅದರ ಅರ್ಥ
ಈ ದಿನವು 1944ರಲ್ಲಿ ಮಾರ್ಕೋವಾ ಪ್ರದೇಶದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತದೆ. ಅಲ್ಲಿ ಜರ್ಮನ್ ಆಕ್ರಮಣಕಾರರು ಉಲ್ಮಾ ಕುಟುಂಬದ ಜೋಝೆಫ್, ವಿಕ್ಟೋರಿಯಾ ಮತ್ತು ಅವರ ಏಳು ಮಕ್ಕಳನ್ನು ಹಾಗೂ ಅವರು ಅಡಗಿಸಿದ್ದ ಯೆಹೂದ್ಯರನ್ನು ಹತ್ಯೆ ಮಾಡಿದರು. ಈ ಘಟನೆ ಸಹಾಯ ಮಾಡಿದವರ ಮೇಲೆ ನಡೆದ ಕ್ರೂರ ಪ್ರತೀಕಾರದ ಸಂಕೇತವಾಗಿ ಇಂದು ಉಳಿದಿದೆ.
ಇಂದಿನ ಸ್ಮರಣೆ ಹೆಚ್ಚಿನ ಅರ್ಥವನ್ನು ಹೊಂದಿದೆ. ಸಂಘಟಿತ ಭಯದ ಮಧ್ಯೆಯೂ ಸಾವಿರಾರು ಜನರು ಸಾಮಾನ್ಯ ಸಹಾನುಭೂತಿಗಿಂತ ಮೀರಿದ ನಿರ್ಧಾರಗಳನ್ನು ತೆಗೆದುಕೊಂಡರು. ಇಂತಹ ನಿರ್ಧಾರಗಳಿಗೆ ದಯೆಯ ಜೊತೆಗೆ ತಮ್ಮ ಜೀವವನ್ನೇ ಅಪಾಯಕ್ಕೆ ಒಳಪಡಿಸುವ ಸಿದ್ಧತೆ ಅಗತ್ಯವಿತ್ತು.
ಆಕ್ರಮಣದ ವಾಸ್ತವಿಕತೆಯಲ್ಲಿ ಧಾರ್ಮಿಕ ಸನ್ಯಾಸಿನಿಯರು
ಮರಣದ ನಿರಂತರ ಭೀತಿಯ ನಡುವೆಯೂ ಅನೇಕ ಧಾರ್ಮಿಕ ಸಂಘಗಳು ಯೆಹೂದ್ಯರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ಸನ್ಯಾಸಿನಿಯರು ಮಠಗಳನ್ನು ಆಶ್ರಯ ಕೇಂದ್ರಗಳಾಗಿ ಬಳಸಿದರು. ಅನಾಥಾಶ್ರಮಗಳು, ವಸತಿ ಶಾಲೆಗಳು ಮತ್ತು ಆರೈಕೆ ಕೇಂದ್ರಗಳು ಗುಪ್ತ ಆಶ್ರಯ ಕೇಂದ್ರಗಳಾಗಿ ಮಾರ್ಪಟ್ಟವು. ಈ ಕಾರ್ಯ ಧೈರ್ಯ, ಕೌಶಲ್ಯ, ನಿಯಮಶೀಲತೆ ಮತ್ತು ಸಂಪೂರ್ಣ ಗೌಪ್ಯತೆಯನ್ನು ಬೇಡುತ್ತಿತ್ತು. ಯಾವುದೇ ತಪ್ಪು ಜೀವಕ್ಕೆ ಅಪಾಯ ತರಬಹುದಿತ್ತು.
ಪವಿತ್ರ ಕುಟುಂಬದ ಸನ್ಯಾಸಿನಿಯರ ಸಾಕ್ಷ್ಯ
ವಾರ್ಸಾ ನಗರದ ಚೆರ್ನಿಯಾಕೋವ್ಸ್ಕಾ ರಸ್ತೆಯಲ್ಲಿದ್ದ ಪವಿತ್ರ ನಜರೇತ್ ಕುಟುಂಬದ ಸನ್ಯಾಸಿನಿಯರು ಯೆಹೂದ್ಯ ಬಾಲಕಿಯರನ್ನು ಅಡಗಿಸಿ, ಆಕ್ರಮಣಕಾರರು ನಿಷೇಧಿಸಿದ್ದ ಗುಪ್ತ ಶಿಕ್ಷಣವನ್ನೂ ನೀಡುತ್ತಿದ್ದರು.
ಈ ಸಮುದಾಯವನ್ನು ಸಹೋದರಿ ಯುತಾಲಿಯಾ ಜಡ್ವಿಗಾ ವಿಸ್ಮೋಂಟ್ ಮುನ್ನಡೆಸುತ್ತಿದ್ದರು. ಆಕ್ರಮಣದ ಅವಧಿಯಲ್ಲಿಯೂ ಅವರು ಸಂಸ್ಥೆಯನ್ನು ಉಳಿಸಿಕೊಂಡರು. ಅವರ ನಿರ್ಧಾರಗಳು ಆಶ್ರಯ ನೀಡುವುದಷ್ಟೇ ಅಲ್ಲ, ಸಂಶಯ ಹುಟ್ಟದಂತೆ ದಿನನಿತ್ಯದ ಜೀವನವನ್ನು ನಿಖರವಾಗಿ ವ್ಯವಸ್ಥೆ ಮಾಡುವುದನ್ನೂ ಒಳಗೊಂಡಿತ್ತು.
ಯೆಹೂದ್ಯರನ್ನು ರಕ್ಷಿಸಿದ ಸೇವೆಗೆ, ಅವರಿಗೆ ಮರಣಾನಂತರ “ರೈಟಿಯಸ್ ಅಮಾಂಗ್ ದ ನೇಷನ್ಸ್” ಗೌರವ ನೀಡಲಾಯಿತು. 2024ರಲ್ಲಿ ಮಠದ ಕಟ್ಟಡದ ಮೇಲೆ ಸ್ಮಾರಕ ಫಲಕವನ್ನು ಸ್ಥಾಪಿಸಿ, ಈ ಇತಿಹಾಸವನ್ನು ಮತ್ತೆ ಸಾರ್ವಜನಿಕ ಸ್ಮರಣೆಗೆ ತರಲಾಗಿದೆ.
ಮಟಿಲ್ಡಾ ಗೆಟರ್ ಮತ್ತು ಸಹಾಯದ ಜಾಲ
ಫ್ರಾನ್ಸಿಸ್ಕನ್ ಸನ್ಯಾಸಿನಿಯರ “ಫ್ಯಾಮಿಲಿ ಆಫ್ ಮೇರಿ” ಸಂಘವು ವ್ಯಾಪಕ ರಕ್ಷಣಾ ಕಾರ್ಯಗಳನ್ನು ನಡೆಸಿತು.
ಮದರ್ ಮಟಿಲ್ಡಾ ಗೆಟರ್ ಅವರ ನೇತೃತ್ವದಲ್ಲಿ ಸುಮಾರು 750 ಜನರಿಗೆ ಸಹಾಯ ಒದಗಿಸಲಾಯಿತು. ಇದರಲ್ಲಿ ವಾರ್ಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಯೆಹೂದ್ಯ ಮಕ್ಕಳು ಸೇರಿದ್ದರು.
ಸನ್ಯಾಸಿನಿಯರು ಕೇವಲ ಆಶ್ರಯ ನೀಡುವುದಕ್ಕಿಂತ ಹೆಚ್ಚು ಕಾರ್ಯಗಳನ್ನು ನಿರ್ವಹಿಸಿದರು. ಅವರು ನಕಲಿ ಗುರುತಿನ ವ್ಯವಸ್ಥೆ ಮಾಡಿ ಮತ್ತು ದೀರ್ಘಕಾಲದ ಆರೈಕೆಯನ್ನು ಒದಗಿಸಿದರು. ಅಪಾಯ ಎದುರಾದಾಗ ಮಕ್ಕಳನ್ನು ಸ್ಥಳಾಂತರಿಸುವ ವ್ಯವಸ್ಥೆಯನ್ನೂ ಅವರು ರೂಪಿಸಿದರು.
ಮದರ್ ಗೆಟರ್ ಅವರಿಗೆ ಸಹ “ರೈಟಿಯಸ್ ಅಮಾಂಗ್ ದ ನೇಷನ್ಸ್” ಗೌರವ ನೀಡಲಾಗಿದೆ. ಯೆಹೂದ್ಯರ ರಕ್ಷಣೆಯಲ್ಲಿ ಧಾರ್ಮಿಕ ಮಹಿಳೆಯರ ಪಾತ್ರವನ್ನು ಪ್ರತಿನಿಧಿಸುವ ಪ್ರಮುಖ ವ್ಯಕ್ತಿಯಾಗಿ ಅವರು ಗುರುತಿಸಲ್ಪಟ್ಟಿದ್ದಾರೆ.
ಎರಡು ಸಾವಿರ ಸನ್ಯಾಸಿನಿಯರು
ವಾರ್ಸಾದಲ್ಲಿ ನಡೆದ ಈ ಕಾರ್ಯ ದೇಶದಾದ್ಯಂತ ವ್ಯಾಪಿಸಿದ್ದ ಒಂದು ದೊಡ್ಡ ಚಳುವಳಿಯ ಭಾಗವಾಗಿತ್ತು. ಶೋಧಕರ ಅಂದಾಜು ಪ್ರಕಾರ, ವಿವಿಧ ಸಂಘಗಳ 2,000ಕ್ಕೂ ಹೆಚ್ಚು ಸನ್ಯಾಸಿನಿಯರು ಯೆಹೂದ್ಯರಿಗೆ ಸಹಾಯ ಮಾಡಿದರು. ಯುದ್ಧದ ನಂತರ ಅವರ ಕಾರ್ಯವನ್ನು ಸಂಪೂರ್ಣವಾಗಿ ದಾಖಲಿಸುವುದು ಕಷ್ಟವಾಗಿದೆ.
ಅವರು ನಿರ್ಮಿಸಿದ ರಕ್ಷಣಾ ಜಾಲವು ಏಕೈಕ ವ್ಯವಸ್ಥೆಯಲ್ಲ, ಆದರೆ ಪರಸ್ಪರ ನಂಬಿಕೆ, ಸಹಕಾರ ಮತ್ತು ತ್ವರಿತ ಪ್ರತಿಕ್ರಿಯೆಯ ಮೇಲೆ ಆಧಾರಿತವಾಗಿತ್ತು. ಇದರಿಂದ ಬದುಕುವ ಅವಕಾಶ ಕಡಿಮೆ ಇದ್ದ ಅನೇಕ ಜನರನ್ನು ರಕ್ಷಿಸಲು ಸಾಧ್ಯವಾಯಿತು.
ಶಾಶ್ವತ ಸಾಕ್ಷ್ಯ
ಇಂದಿನ ಸ್ಮರಣೆ ಕೇವಲ ಇತಿಹಾಸವನ್ನು ನೆನಪಿಸುವುದಲ್ಲ. ಅತೀವ ಪರಿಸ್ಥಿತಿಗಳಲ್ಲಿ ರೂಪುಗೊಂಡ ಮಾನವೀಯ ಮೌಲ್ಯಗಳನ್ನು ಇದು ಬೆಳಗಿಸುತ್ತದೆ. ಈ ಧಾರ್ಮಿಕ ಮಹಿಳೆಯರ ಕಥೆ, ನೆರೆಯವರ ಮೇಲಿನ ಪ್ರೀತಿ ಹೇಗೆ ನಿಶ್ಶಬ್ದವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಪೋಲಿಷ್ ಧಾರ್ಮಿಕರು ಯೆಹೂದ್ಯರಿಗೆ ನೀಡಿದ ಸಹಾಯ
ಲ್ಯೂಬ್ಲಿನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಅಬ್ರಹಾಂ ಜೆ. ಹೆಶೆಲ್ ಕೇಂದ್ರದ ಅಧ್ಯಯನದ ಭಾಗವಾಗಿ, ಪೋಲಿಷ್ ಧಾರ್ಮಿಕರು ಯೆಹೂದ್ಯರಿಗೆ ನೀಡಿದ ಸಹಾಯ ಕುರಿತು ಇಂಗ್ಲಿಷ್ ಭಾಷೆಯ ಮೊದಲ ಗ್ರಂಥವನ್ನು ಪ್ರಕಟಿಸಲಾಗಿದೆ. “ಪೋಲಿಷ್ ಕಥೋಲಿಕ ಗುರುಗಳಿಂದ ಯುದ್ಧಕಾಲದಲ್ಲಿ ಯೆಹೂದ್ಯರ ರಕ್ಷಣೆ” (Wartime Rescue of Jews by the Polish Catholic Clergy) ಎಂಬ ಎರಡು ಸಂಪುಟಗಳ ಈ ಕೃತಿ, ಕೆ.ಯು.ಎಲ್ ಪ್ರಕಾಶನದಿಂದ ಪ್ರಕಟವಾಗಿದ್ದು, ವಕೀಲ ರಿಶಾರ್ಡ್ ಟಿಂಡಾರ್ಫ್ ಅವರು ರಚಿಸಿದ್ದಾರೆ. ಇದು ಉಚಿತವಾಗಿ ಆನ್ಲೈನ್ನಲ್ಲಿ ಲಭ್ಯವಿದೆ: https://tiny.pl/s8xxn5vc
ಈ ಕೃತಿ 1,200ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದ್ದು, ಹೋಲೋಕಾಸ್ಟ್ ಸಮಯದಲ್ಲಿ ಸನ್ಯಾಸಿನಿಯರು ಮತ್ತು ಗುರುಗಳು ರಕ್ಷಿಸಿದ ಯೆಹೂದ್ಯರ ಸಾಕ್ಷ್ಯಗಳನ್ನು ಒಳಗೊಂಡಿದೆ. ಇದಲ್ಲದೆ, ಸಾವಿರಾರು ಸ್ಥಳಗಳ ಮತ್ತು ರಕ್ಷಿಸಿದವರ ಹಾಗೂ ರಕ್ಷಿಸಲ್ಪಟ್ಟವರ ಹೆಸರುಗಳ ಸೂಚಿಯನ್ನೂ ಒಳಗೊಂಡಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).