2016ರಲ್ಲಿ ಏಡನ್ನಲ್ಲಿ ಹತ್ಯೆಯಾದ ಮಿಷನರೀಸ್ ಆಫ್ ಚಾರಿಟಿ ಸಹೋದರಿಯರ ಸ್ಮರಣ
ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS
2026ರ ಮಾರ್ಚ್ 4ರಂದು ದಕ್ಷಿಣ ಅರೇಬಿಯಾದ ಪ್ರೇಷಿತ ಧರ್ಮಕ್ಷೇತ್ರ, 2016ರಲ್ಲಿ ಯೆಮೆನ್ನ ಏಡನ್ ನಗರದಲ್ಲಿ ಹತ್ಯೆಯಾದ ಮಿಷನರೀಸ್ ಆಫ್ ಚಾರಿಟಿಯ ನಾಲ್ಕು ಸಹೋದರಿಯರನ್ನು ಸ್ಮರಿಸಿತು. ಅವರ ವಿಶ್ವಾಸ ಇಂದಿಗೂ ಧೈರ್ಯ ಮತ್ತು ಆಶೆಯನ್ನು ಪ್ರೇರೇಪಿಸುತ್ತಿದೆ ಎಂದು ತಿಳಿಸಲಾಯಿತು.
ರುವಾಂಡಾದ ಸಹೋದರಿ ರೆಜಿನೆಟ್ ಮತ್ತು ಸಹೋದರಿ ಮಾರ್ಗರಿಟಾ, ಭಾರತದ ಸಹೋದರಿ ಅನ್ಸೆಲ್ಮಾ ಹಾಗೂ ಕೀನ್ಯಾದ ಸಹೋದರಿ ಜುಡಿತ್ ಅವರನ್ನು ಜಿಹಾದಿ ಗುಂಪೊಂದು ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ಮಿಷನರೀಸ್ ಆಫ್ ಚಾರಿಟಿ ನಡೆಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದಾಗ ಈ ಘಟನೆ ನಡೆದಿತ್ತು.
ದಾಳಿಕೋರರು ವಿವಿಧ ರಾಷ್ಟ್ರಗಳ ಮತ್ತು ಧರ್ಮಗಳ 12 ಸಿಬ್ಬಂದಿಯನ್ನು ಹತ್ಯೆ ಮಾಡಿದರು. ಬಡವರಿಗೂ ವೃದ್ಧರಿಗೂ ಸೇವೆ ಸಲ್ಲಿಸಲು ಸ್ಥಾಪಿಸಲಾದ ಸ್ಥಳವನ್ನೇ ಅವರು ಗುರಿಯಾಗಿಸಿದ್ದರು.
ಅದೇ ದಾಳಿಯಲ್ಲಿ ಸಮುದಾಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಲೇಶಿಯನ್ ಗುರುಗಳಾದ ವಂ. ಟಾಮ್ ಉಳುನ್ನಲಿಲ್ ಅವರನ್ನು ಅಪಹರಿಸಲಾಗಿತ್ತು. ಅವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದು, 2017ರ ಸೆಪ್ಟೆಂಬರ್ನಲ್ಲಿ ಬಿಡುಗಡೆಗೊಂಡರು. ಈ ಭೀಕರ ಘಟನೆ ನಡೆದಿದ್ದರೂ ಸಹೋದರಿಯರ ಕರುಣೆ ಮತ್ತು ಸೇವೆಯ ಪರಂಪರೆ ಯೆಮೆನ್ನಲ್ಲಿ ಧರ್ಮಸಭೆಯ ಕಾರ್ಯದ ಮೂಲಕ ಇನ್ನೂ ಪ್ರಕಾಶಿಸುತ್ತಿದೆ.
ಭರವಸೆಯ ಸಂದೇಶ
ವ್ಯಾಟಿಕನ್ನ ಫಿಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ದಕ್ಷಿಣ ಅರೇಬಿಯಾದ ಪ್ರೇಷಿತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪೂಜ್ಯಪೌಲೊ ಮಾರ್ಟಿನೆಲ್ಲಿ ಈ ಸ್ಮರಣೆಯ ಸಲುವಾಗಿ ಅಬುಧಾಬಿಯ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದರು.
“ಇಡೀ ಗಲ್ಫ್ ಪ್ರದೇಶವು ಗಂಭೀರ ಸಂಘರ್ಷವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ಇದು ಭರವಸೆಯ ಒಂದು ಸಂಕೇತವಾಗಿದೆ,” ಎಂದು ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಹೇಳಿದರು.
“ಮಿಷನರೀಸ್ ಆಫ್ ಚಾರಿಟಿಯ ಸಹೋದರಿಯರು ತಮ್ಮ ಜೀವವನ್ನು ಅರ್ಪಿಸಿದರು. ಅವರಲ್ಲಿ ಕೆಲವರು ಇನ್ನೂ ಯೆಮೆನ್ನಲ್ಲಿ ಇದ್ದು ಯಾವುದೇ ಭೇದಭಾವವಿಲ್ಲದೆ ಅತ್ಯಂತ ಬಡವರನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಡೆತಡೆಗಳನ್ನು ಮೀರುವ ಕ್ರಿಸ್ತನ ಪ್ರೀತಿಗೆ ಅವರು ಸಾಕ್ಷಿಯಾಗುತ್ತಿದ್ದಾರೆ,” ಎಂದು ಅವರು ಹೇಳಿದರು. ಅವರ ಉದಾಹರಣೆ ನಮಗೂ ಶಾಂತಿಯ ದೂತರಾಗಿ ಬದುಕಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.
ಎಲ್ಲೆಗಳಿಲ್ಲದ ಸೇವೆ
ಆ ಸಹೋದರಿಯರು ತಮ್ಮ ಜೀವನವನ್ನು ವೃದ್ಧರು ಮತ್ತು ರೋಗಿಗಳನ್ನು ನೋಡಿಕೊಳ್ಳಲು ಸಮರ್ಪಿಸಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಆಗಿದ್ದರು. ಅವರ ಸೇವೆಯ ಉದ್ದೇಶ ಇತರರನ್ನು ಮತಾಂತರಗೊಳಿಸುವುದು ಅಲ್ಲ. ಅತ್ಯಂತ ಅಗತ್ಯದಲ್ಲಿರುವವರಿಗೆ ಸೇವೆ ಸಲ್ಲಿಸುವುದು ಎಂಬ ಬದ್ಧತೆಯೇ ಅವರ ಕಾರ್ಯಕ್ಕೆ ಪ್ರೇರಣೆಯಾಗಿತ್ತು.
ಅವರ ಕರುಣೆ ಮತ್ತು ವಿನಯ ಸ್ಥಳೀಯ ಸಮುದಾಯದ ಮೆಚ್ಚುಗೆಗೆ ಪಾತ್ರವಾಯಿತು. ಧರ್ಮ ಅಥವಾ ಹಿನ್ನೆಲೆಯ ಭೇದವಿಲ್ಲದೆ ಜನರಿಗೆ ಸೇವೆ ಸಲ್ಲಿಸಿದ ಅವರ ಕಾರ್ಯವನ್ನು ಎಲ್ಲರೂ ಗೌರವಿಸಿದರು. ಮಿಷನರೀಸ್ ಆಫ್ ಚಾರಿಟಿಯ ಆತ್ಮವು ಅವರ ಸೇವೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅತ್ಯಂತ ಬಡವರಿಗೆ ಸೇವೆ ಮಾಡಲು ಸಂತ ತೆರೆಸಾ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು ಎಂದು ಧರ್ಮಾಧ್ಯಕ್ಷರು ಹೇಳಿದರು. ಯೆಮೆನ್ನಲ್ಲಿ ವೃದ್ಧಾಶ್ರಮವನ್ನು 1992ರಲ್ಲಿ ಸರ್ಕಾರದ ವಿನಂತಿಯ ಮೇರೆಗೆ ಆರಂಭಿಸಲಾಯಿತು. ಇದು 1973ರಲ್ಲಿ ಆರಂಭವಾದ ಅವರ ಸೇವೆಯನ್ನು ಮುಂದುವರಿಸಿದೆ.
ದಾಳಿಯ ನಂತರ ಸಹೋದರಿಯರ ಕೆಲವು ಛಾಯಾಚಿತ್ರಗಳು ಹರಿದಾಡಿದವು. ತಮ್ಮ ಧಾರ್ಮಿಕ ವಸ್ತ್ರಗಳ ಮೇಲೆ ಅಡುಗೆಗೃಹದ ಎಪ್ರಾನ್ ಧರಿಸಿಕೊಂಡ ಸ್ಥಿತಿಯಲ್ಲಿಯೇ ಅವರು ಮೃತಪಟ್ಟಿರುವುದು ಆ ಚಿತ್ರಗಳಲ್ಲಿ ಕಂಡುಬಂತು.
ಅದು ಅವರ ವಿನಯ ಮತ್ತು ಕೈಜೋಡಿಸಿದ ಸೇವೆಯ ಸಂಕೇತವಾಗಿತ್ತು—ಗಾಯಗಳನ್ನು ಸ್ವಚ್ಛಗೊಳಿಸುವುದು, ವೃದ್ಧರಿಗೆ ಆಹಾರ ನೀಡುವುದು ಮತ್ತು ಒಂಟಿತನದಲ್ಲಿರುವ ಹಾಗೂ ನೋವು ಅನುಭವಿಸುತ್ತಿರುವವರನ್ನು ಸಮಾಧಾನಪಡಿಸುವುದು ಅವರ ದೈನಂದಿನ ಸೇವೆಯ ಭಾಗವಾಗಿತ್ತು.
ಸೇವೆ ಮಾಡುವ ಧರ್ಮಸಭೆ
“ಏಡನ್ನಲ್ಲಿ ಹತ್ಯೆಯಾದ ಮಿಷನರೀಸ್ ಆಫ್ ಚಾರಿಟಿ ಸಹೋದರಿಯರ ಸಾಕ್ಷ್ಯ ನಮ್ಮ ಧರ್ಮಸಭೆಯ ಜೀವನವನ್ನು ಇಂದಿಗೂ ಪೋಷಿಸುತ್ತಿದೆ ಮತ್ತು ಪ್ರತಿದಿನವೂ ನಮ್ಮ ವಿಶ್ವಾಸವನ್ನು ಸಂತೋಷ ಮತ್ತು ಬದ್ಧತೆಯೊಂದಿಗೆ ಬದುಕಲು ನಮಗೆ ಪ್ರೇರಣೆ ನೀಡುತ್ತದೆ,” ಎಂದು ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಹೇಳಿದರು.
2016ರ ದಾಳಿಯ ನಂತರ ಧರ್ಮಾಧ್ಯಕ್ಷ ಪೌಲ್ ಹಿಂದರ್ ಮಾಡಿದ ಮನವಿಯನ್ನು ಕೂಡ ಅವರು ಸ್ಮರಿಸಿ, “ಯೆಮೆನ್ ಮತ್ತು ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿ ಮತ್ತು ಹಿಂಸಾಚಾರ ಅಂತ್ಯವಾಗಲಿ ಎಂದು ನಾವು ಈ ನಾಲ್ಕು ರಕ್ತಸಾಕ್ಷಿಗಳ ಮಧ್ಯಸ್ಥಿಕೆಯಲ್ಲಿ ಬೇಡಿಕೊಳ್ಳುತ್ತೇವೆ,” ಎಂದು ಹೇಳಿದರು.
ಸಹೋದರಿಯರು ತಮ್ಮ ಸರಳ ಸೇವಾ ಕಾರ್ಯಗಳನ್ನು ನೆರವೇರಿಸುತ್ತಿರುವಾಗಲೇ ಪ್ರಾಣ ತ್ಯಾಗ ಮಾಡಿದರು. ಅವರ ರಕ್ತಸಾಕ್ಷಿ ಧರ್ಮಸಭೆಯ ಜೀವನವನ್ನು ಇನ್ನೂ ಪೋಷಿಸುತ್ತಿದೆ ಮತ್ತು ವಿಶ್ವಾಸಿಗಳನ್ನು ತಮ್ಮ ವಿಶ್ವಾಸವನ್ನು ಸಂತೋಷ ಮತ್ತು ಬದ್ಧತೆಯೊಂದಿಗೆ ಬದುಕಲು ಪ್ರೇರೇಪಿಸುತ್ತದೆ ಎಂದು ಧರ್ಮಾಧ್ಯಕ್ಷರು ಹೇಳಿದರು.
ಇಂದು ಅವರ ಮಿಷನ್ ಅಂತ್ಯಗೊಂಡಿಲ್ಲ. ಯೆಮೆನ್ನ ಹೋಡೆಡಾ ಮತ್ತು ಸನಾಆ ನಗರಗಳಲ್ಲಿ ಇರುವ ಎರಡು ಸಮುದಾಯಗಳು ಇನ್ನೂ ಬಡವರಿಗೆ ಸೇವೆ ಸಲ್ಲಿಸುತ್ತಿವೆ. ಅವರ ವಿನಯಪೂರ್ಣ ಸೇವೆ ಇಂದಿಗೂ ಭರವಸೆಯ ಶಕ್ತಿಯುತ ಸಂಕೇತವಾಗಿ ಮುಂದುವರಿದಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).