ಹುಡುಕಿ

2026.02.14 Basilica Annunciazione Nazaret 2026.02.14 Basilica Annunciazione Nazaret  (Copyright (c) 2020 Roni Ben Ishay/Shutterstock. No use without permission.)

ವಾಕ್ಯವು ಜೀವಂತವಾದ ಸ್ಥಳ

ವಂ. ಗುರು ಫ್ರಾನ್ಸೆಸ್ಕೊ ಪಟ್ಟನ್, OFM-ನಜರೇತ್ ನಗರದ ಕುರಿತು ಚಿಂತನೆ

ವಂ. ಗುರು ಫ್ರಾನ್ಸೆಸ್ಕೊ ಪಟ್ಟನ್, OFM

ನಜರೇತ್, (ಹೀಬ್ರೂ ಭಾಷೆಯಲ್ಲಿ ನಾತ್ಸ್ರಾತ್ ಮತ್ತು ಅರಬಿಯಲ್ಲಿ ಅನ್-ನಾಸಿರಾ), ಗಲಿಲಾಯದ ಬೆಟ್ಟಗಳ ನಡುವೆ ನೆಲೆಸಿರುವ ಸಂಕೀರ್ಣ ಮತ್ತು ಮನೋಹರ ನಗರವಾಗಿದೆ. ಸುಮಾರು 80,000 ಜನಸಂಖ್ಯೆಯುಳ್ಳ ಈ ನಗರವು ಇಸ್ರಾಯೇಲ್ ರಾಜ್ಯದೊಳಗಿನ ಅತಿ ದೊಡ್ಡ ಅರಬ್ ನಗರ ಎಂಬ ವಿಶೇಷತೆಯನ್ನು ಹೊಂದಿದೆ. ಇದರ ಜನಸಂಖ್ಯಾ ರೂಪುರೇಷೆ ವಿಶಿಷ್ಟವಾದ ಧಾರ್ಮಿಕ ವೈವಿಧ್ಯವನ್ನು ತೋರಿಸುತ್ತದೆ: ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗ ಕ್ರೈಸ್ತರು. ಅವರಲ್ಲಿ ಗ್ರೀಕ್ ಆರ್ಥಡಾಕ್ಸ್ ವಿಶ್ವಾಸಿಗಳು (ಅವರೇ ಸುಮಾರು ಅರ್ಧದಷ್ಟು), ಲ್ಯಾಟಿನ್ ವಿಧಿಯ ಕಥೋಲಿಕರು (ರೋಮನ್ ಕ್ಕಥೋಲಿಕರು), ಗ್ರೀಕ್ ಮೆಲ್ಕೈಟ್‌ಗಳು, ಮರೋನೈಟ್‌ಗಳು, ಕಾಪ್ಟ್‌ಗಳು, ಆಂಗ್ಲಿಕನ್‌ಗಳು ಮತ್ತು ಲೂಥರನ್‌ಗಳು ಸೇರಿದ್ದಾರೆ. ಸ್ಥಳೀಯ ಲ್ಯಾಟಿನ್ ಧರ್ಮಕೇಂದ್ರದ ದೇವಾಲಯವು (1620ರಿಂದ ಇರುವದು) ಪವಿತ್ರ ಭೂಮಿಯಲ್ಲಿನ ಅತಿ ದೊಡ್ಡ ಧರ್ಮಕೇಂದ್ರದ ದೇವಾಲಯವಾಗಿದ್ದು, 9,000 ವಿಶ್ವಾಸಿಗಳನ್ನು ಹೊಂದಿದೆ. ದುರದೃಷ್ಟವಶಾತ್, ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಜನರು ಅರಬ್ ಭಾಷಿಕ ಸಮುದಾಯದೊಳಗಿನ ಅಪರಾಧ ಮತ್ತು ಹಿಂಸೆಯಿಂದ ಸಂಕಷ್ಟ ಅನುಭವಿಸಿದ್ದಾರೆ. ಇದರಿಂದ ಅರಬ್ ಭಾಷಿಕ ಸಮುದಾಯಗಳಲ್ಲಿ ಭದ್ರತೆಯನ್ನು ಖಚಿತಪಡಿಸುವಲ್ಲಿ ಪೊಲೀಸ್ ಹಸ್ತಕ್ಷೇಪದ ಕೊರತೆಯ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ನಡೆದಿವೆ.

ನಗರ ಯೋಜನೆಯ ದೃಷ್ಟಿಯಿಂದ, ನಜರೇತ್ ಪ್ರಾಮುಖ್ಯವಾಗಿ ಯಹೂದಿ ಜನರು ವಾಸಿಸುವ ಆಧುನಿಕ ನಗರವಾದ ನೋಫ್ ಹಗಲಿಲ್‌ನೊಂದಿಗೆ ಒಂದೇ ನಗರ ಸಮೂಹದಂತೆ ರೂಪುಗೊಂಡಿದೆ. (ಹೀಬ್ರೂದಲ್ಲಿ ಇದರ ಅರ್ಥ “ಗಲಿಲಾಯದ ನೋಟ”; ಇದನ್ನು ಮೊದಲು ನಾತ್ಸ್ರಾತ್ ಇಲ್ಲೀತ್, ಅಂದರೆ “ಮೇಲಿನ ನಜರೇತ್” ಎಂದು ಕರೆಯಲಾಗುತ್ತಿತ್ತು.) ನಗರವು ಸ್ವಲ್ಪ ಅಸಮಂಜಸವಾಗಿ ವಿಸ್ತರಿಸಿಕೊಂಡಿದ್ದರೂ, ರಕ್ಷಣೆಯ ಅರ್ಥವ್ಯವಸ್ಥೆಯಲ್ಲಿ ಇದರ ಮಹತ್ವದ ಕಾರಣದಿಂದಾಗಿ, ಮಧ್ಯಯುಗದ ಯಾತ್ರಿಕರು ಇದನ್ನು ಕರೆಯುತ್ತಿದ್ದಂತೆ, ಇದು ಇಂದಿಗೂ “ಗಲಿಲಾಯದ ಮುತ್ತು” ಆಗಿಯೇ ಉಳಿದಿದೆ.

ಶತಮಾನಗಳ ಮೌನ ಮತ್ತು ಸುವಾರ್ತೆಯ ಆರಂಭ

ನಜರೇತ್ ಹಳೆಯ ಒಡಂಬಡಿಕೆಯ ಪುಟಗಳಲ್ಲಿ ಕಾಣಿಸದು; ಹಾಗೆಯೇ ಸಾಂಪ್ರದಾಯಿಕ ಇತಿಹಾಸಕಾರರ ಬರಹಗಳಲ್ಲಿಯೂ ಕಾಣಿಸದು ಎಂಬುದು ಗಮನಾರ್ಹವಾಗಿದೆ. ಮೂಲಗಳಲ್ಲಿ ಕಾಣಿಸದಿರುವ ಈ ಸಂಗತಿ, ಪ್ರಾಚೀನ ಕಾಲದಲ್ಲಿ ಈ ಗ್ರಾಮಕ್ಕೆ ವಿಶೇಷ ಪ್ರಾಮುಖ್ಯತೆ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದಲೇ, ಯೋವಾನ್ನು ಸುವಾರ್ತೆಯಲ್ಲಿ ನತಾನಿಯೇಲ್ ಅನುಮಾನದಿಂದ ಕೇಳುತ್ತಾನೆ: “ನಜರೇತಿನಿಂದ ಒಳ್ಳೆಯದೇನಾದರೂ ಬರಬಹುದೇ?” (ಯೋವಾನ್ನ 1:46)

ಆದರೆ, ಹೊಸ ಒಡಂಬಡಿಕೆಯೊಂದಿಗೆ ಈ ನಗರವು ವಿಶ್ವ ಇತಿಹಾಸದಲ್ಲಿಯೂ ಮತ್ತು ಸರ್ವೋಪರಿ ರಕ್ಷಣೆಯ ಇತಿಹಾಸದಲ್ಲಿಯೂ ಶಕ್ತಿಯಾಗಿ ಪ್ರವೇಶಿಸಿತು. ಘೋಷಣೆಯ ಗವಿಯಲ್ಲಿನ ಬಲಿಪೀಠದ ಎದುರಿನ ಪ್ರಾಚೀನ ಶಾಸನದಲ್ಲಿ ಹೀಗೆ ಬರೆಯಲಾಗಿದೆ: “ಇಲ್ಲಿ ವಾಕ್ಯವು ದೇಹಧಾರಿಯಾಯಿತು.” ದೇವರ ಅವತಾರದ ಅದ್ಭುತ ಇಲ್ಲಿಯೇ ಸಂಭವಿಸಿತು; ನಮ್ಮಿಂದ ದೇವರನ್ನು ಪ್ರತ್ಯೇಕಿಸಿದ್ದ ಅನಂತ ಅಂತರವನ್ನು ಇಲ್ಲಿಯೇ ತುಂಬಿಸಲಾಯಿತು. ಇಲ್ಲಿಯೇ, ಪವಿತ್ರ ಕನ್ಯಾ  ಮರಿಯಾಳ ಗರ್ಭದಲ್ಲಿ, ಯೇಸುವಿನ ಗರ್ಭಧಾರಣೆಯ ಕ್ಷಣದಿಂದಲೇ ದೈವತ್ವದ ಪೂರ್ಣತೆ ದೇಹದಲ್ಲಿ ವಾಸಿಸಲು ಆರಂಭಿಸಿತು (ಕೊಲೊಸ್ಸೆಯರಿಗೆ 2:9). ಯೇಸು ತನ್ನ ಭೂಲೋಕ ಜೀವನದ ಮೊದಲ 30 ವರ್ಷಗಳಲ್ಲಿ ಹೆಚ್ಚಿನ ಭಾಗವನ್ನು ಇಲ್ಲಿಯೇ, ಅಪ್ರಸಿದ್ಧ, ಅಂಚಿನ ಮತ್ತು  ತಿರಸ್ಕೃತವಾದ ಒಂದು ಗ್ರಾಮದಲ್ಲಿ, ಮರೆಯಾಗಿರುವ ಜೀವನದಲ್ಲಿ ಕಳೆದರು. ಲೂಕ, ಮತ್ತಾಯ ಮತ್ತು ಮಾರ್ಕ ಸುವಾರ್ತೆಗಳು ಆತನ ದೈನಂದಿನ ಜೀವನದ ಕೆಲವು ವಿವರಗಳನ್ನು ತಿಳಿಸುತ್ತವೆ: ತನ್ನ ತಾಯಿ-ತಂದೆಯರಿಗೆ ವಿಧೇಯತೆಯನ್ನು (ಲೂಕ 2:51), ಜ್ಞಾನ, ವಯಸ್ಸು ಮತ್ತು ಕೃಪೆಯಲ್ಲಿ ಬೆಳವಣಿಗೆಯನ್ನು (ಲೂಕ 2:40, 52) ಮತ್ತು “ಬಡಗಿಯ ಮಗ” ಎಂಬಂತೆ ಅವನ ಕೈಕೆಲಸವನ್ನು (ಮತ್ತಾಯ 13:55; ಮಾರ್ಕ 6:3). ಈ 30 ಸಾಮಾನ್ಯ ವರ್ಷಗಳು ನಗರದ ಪ್ರತಿಯೊಂದು ಭಾಗವನ್ನೂ ಪವಿತ್ರ ಸ್ಥಳವನ್ನಾಗಿ ಮಾಡಿವೆ: ದೇವಪುತ್ರನು ಬೆಳೆದ ಸ್ಥಳ, ಆತನು ಧರ್ಮಗ್ರಂಥಗಳನ್ನು ಓದಲು ಮತ್ತು ಪ್ರಾರ್ಥಿಸಲು ಕಲಿತ ಸ್ಥಳ, ಕೆಲಸ ಮಾಡಲು ಕಲಿತ ಸ್ಥಳ. ಇದನ್ನೆಲ್ಲಾ ಆತನು ಪ್ರಥಮ ಶತಮಾನದ ಯಹೂದಿ ಕುಟುಂಬದೊಳಗೆ ಅನುಭವಿಸಿದರು; ತನ್ನ ಜನರ ಪರಂಪರೆ ಮತ್ತು ಧಾರ್ಮಿಕತೆಯೊಳಗೆ ಆತನನ್ನು ಪರಿಚಯಿಸಿದ ಕುಟುಂಬ ಅದು.

ಇತಿಹಾಸದ ಅಡಿಪಾಯಗಳು: ಪುರಾತತ್ತ್ವ ಸಾಕ್ಷ್ಯಗಳು

ಪ್ರಾಚೀನ ನಜರೇತ್ ಗ್ರಾಮದ ಒಂದು “ಪುನರ್‌ನಿರ್ಮಾಣ” 19ನೇ ಮತ್ತು 20ನೇ ಶತಮಾನಗಳಲ್ಲಿ ನಡೆದ ಪುರಾತತ್ತ್ವ ಅಧ್ಯಯನಗಳ ಮೂಲಕ ಸಾಧ್ಯವಾಯಿತು. ವಿಶೇಷವಾಗಿ ಸಹೋದರ ಬೆನೆಡಿಕ್ಟ್ ವ್ಲಾಮಿಂಕ್, OFM, (1892), ವಂ. ಗುರು ಪ್ರೊಸ್ಪೆರೊ ವಿಯೋದ್, OFM, (1907-1909), ವಂ. ಗುರು ಬೆಲ್ಲಾರ್ಮಿನೋ ಬಗಾಟ್ತಿ, OFM, (1955) ಮತ್ತು ವಂ. ಗುರು ಯೂಜೆನಿಯೊ ಅಲಿಯಾತ್ತಾ, OFM, ಇವರ ಪರಿಶೋಧನೆಗಳು ಮಹತ್ವದ್ದಾಗಿವೆ — ಇವರು ಜೆರುಸಲೇಮಿನ ಸ್ಟುಡಿಯಂ ಬಿಬ್ಲಿಕುಮ್ ಫ್ರಾನ್ಸಿಸ್ಕಾನಮ್‌ಗೆ ಸೇವೆ ಸಲ್ಲಿಸಿದ ಕಿರಿಯ ಗುರುಗಳ ತಲೆಮಾರಿನ ಪುರಾತತ್ತ್ವಜ್ಞರು. ಅವರ ಪ್ರಕಟಣೆಗಳೇ ಈ ಸ್ಥಳದ ಪುರಾತತ್ತ್ವ ಜ್ಞಾನದ ಪ್ರಮುಖ ನೆಲೆ. 

ಕ್ರಿಸ್ತನ ಕಾಲದಲ್ಲಿ ನಜರೇತ್ ಒಂದು ಗುಡ್ಡದ ಇಳಿಜಾರಿನಲ್ಲಿ, ನೈಸರ್ಗಿಕ ಜಲಾನಯನ ಪ್ರದೇಶದೊಳಗೆ, ಈಗ ಪವಿತ್ರಾಲಯ ಮತ್ತು ಫ್ರಾನ್ಸಿಸ್ಕನ್ ಆಶ್ರಮ ಇರುವ ಪ್ರದೇಶದಲ್ಲೇ ನೆಲೆಗೊಂಡಿದೆ. ಉತ್ಖನನ ಕಾರ್ಯಗಳಲ್ಲಿ ಆ ಕಾಲಕ್ಕೆ ಹೊಂದುವ: ಕಲ್ಲಿನ ಮನೆಗಳು, ಬಂಡೆಯಲ್ಲಿ ತೋಡಿದ ಗುಹೆಗಳು, ಒಳ ಮೆಟ್ಟಿಲುಗಳು, ನೀರಿನ ಕೊಳಗಳು ಮತ್ತು ಧಾನ್ಯ ಸಂಗ್ರಹ ಗುಂಡಿಗಳನ್ನು ಒಳಗೊಂಡ ಗ್ರಾಮೀಣ ವಸತಿ ಪ್ರದೇಶ ಹೊರಬಂದಿತು.  ಕ್ರಿಸ್ತ ಪೂರ್ವದ ಬರಹಗಳಲ್ಲಿ ನಜರೇತ್ ಉಲ್ಲೇಖವಾಗಿಲ್ಲದಿದ್ದರೂ, ಮಣ್ಣಿನ ಪಾತ್ರೆಗಳ ಅವಶೇಷಗಳು ಕ್ರಿ.ಪೂ. ದ್ವಿತೀಯ ಸಹಸ್ರಮಾನದಿಂದಲೇ ಇಲ್ಲಿ ವಾಸಸ್ಥಳ ನಿರಂತರವಾಗಿ ಅಸ್ತಿತ್ವದಲ್ಲಿದ್ದುದನ್ನು ಸೂಚಿಸುತ್ತವೆ.

ಘೋಷಣೆಯ ಗವಿ ಈ ವಸತಿ ಸ್ಥಳದ ಮಧ್ಯದಲ್ಲೇ ಇದೆ. ಇಲ್ಲಿ ಧರ್ಮಸಭೆಯ ಅಸ್ತಿತ್ವದ ಮೊದಲ ವರದಿ ತಡವಾಗಿ, ಸುಮಾರು 570 ಕ್ರಿ.ಶ. ವೇಳೆಗೆ, ಪಿಯಾಚೆಂಝಾದ ಯಾತ್ರಿಕನ ಬರಹದಲ್ಲಿ ಕಾಣುತ್ತದೆ: “ಪವಿತ್ರ ಮನೆ ಒಂದು ಬಸಿಲಿಕೆಯಾಗಿದ್ದು, ಮರಿಯಾಳ ವಸ್ತ್ರಗಳ ಕಾರಣ ಅನೇಕ ಕೃಪೆಗಳು ಅಲ್ಲಿ ಲಭಿಸುತ್ತವೆ.” ಪಿಯಾಚೆಂಝಾದ ಆ ಯಾತ್ರಿಕನು ನಜರೇತ್‌ನ ಮಹಿಳೆಯರ ಬಗ್ಗೆ ಕುತೂಹಲಕರ ಮಾಹಿತಿಯನ್ನೂ ನೀಡುತ್ತಾನೆ: ಅವರೆಲ್ಲಾ ಅತ್ಯಂತ ಸುಂದರಿಯರು ಎಂದು ಪರಿಗಣಿಸಲ್ಪಟ್ಟವರು; ತಮ್ಮ ಸೌಂದರ್ಯದ ಕಾರಣವಾಗಿ ಅವರು ಪವಿತ್ರ ಕನ್ಯಾ ಮರಿಯಾಳೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು ಭಾವಿಸುತ್ತಿದ್ದರು.

ಒಂದು ಶತಮಾನದ ನಂತರ (ಸುಮಾರು 670ರಲ್ಲಿ), ಇನ್ನೋರ್ವ ಯಾತ್ರಿಕನಾದ ಫ್ರಾಂಕ್ ಮೂಲದ ಧರ್ಮಾಧ್ಯಕ್ಷರಾದ ಪೂಜ್ಯ ಅರ್ಕುಲ್ಫ್ ಮತ್ತೊಂದು ಸಾಕ್ಷ್ಯ ನೀಡುತ್ತಾರೆ. “ಇಲ್ಲಿ ಎರಡು ದೊಡ್ಡ ದೇವಾಲಯಗಳು ನಿರ್ಮಿಸಲ್ಪಟ್ಟಿವೆ. ಒಂದು ನಗರದ ಮಧ್ಯದಲ್ಲಿ, ಎರಡು  ಕಮಾನುಗಳ ಮೇಲೆ ನೆಲೆಗೊಂಡಿದ್ದು, ನಮ್ಮ ಪ್ರಭುವೂ ರಕ್ಷಕರೂ ಬೆಳೆದ ಮನೆ ಇದ್ದ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ. ಇನ್ನೊಂದು ದೇವಾಲಯ ಗಬ್ರಿಯೇಲ್ ದೂತ ಪವಿತ್ರ ಮರಿಯಾಳಿಗೆ ಸಂದೇಶ ನೀಡಿದ ಮನೆಯ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ.” ಆದಾಗ್ಯೂ, ಪುರಾತತ್ತ್ವದ ಮಾಹಿತಿಗಳು ಇನ್ನೂ ಹಳೆಯ ಆರಾಧನಾ ಸ್ಥಳಗಳ ಅಸ್ತಿತ್ವವನ್ನೂ ಬಯಲಿಗೆ ತಂದಿವೆ.

ಘೋಷಣೆಯ ಬಸಿಲಿಕಾ: ಯುಗಗಳ ನಡುವಿನ ಸೇತುವೆ

ಇಂದಿನ ಬಸಿಲಿಕಾವನ್ನು ವಾಸ್ತುಶಿಲ್ಪಿ ಜಿಯೋವಾನಿ ಮುಜಿಯೋ ವಿನ್ಯಾಸಗೊಳಿಸಿದ್ದು, 1969ರ ಮಾರ್ಚ್ 25ರಂದು, ಘೋಷಣೆಯ ಮಹೋತ್ಸವದಂದು, ಕಾರ್ಡಿನಲ್ ಗ್ಯಾಬ್ರಿಯೇಲ್-ಮರಿ ಗ್ಯಾರೋನ್ ಅವರು ಪ್ರತಿಷ್ಠಾಪಿಸಿದರು. ಇದು 2,000 ವರ್ಷಗಳ ನಂಬಿಕೆಯನ್ನು ತನ್ನೊಳಗೆ ಹೊತ್ತಿರುವ ಸ್ಮಾರಕವಾಗಿದೆ. ಅದರ ಕಬ್ಬಿಣ-ಸಿಮೆಂಟ್ ವಿನ್ಯಾಸವನ್ನು ತಲೆಕೆಳಗಿನ ಲಿಲ್ಲಿ ಹೂವಿನ ಆಕಾರದಲ್ಲಿ ರೂಪಿಸಲಾಗಿದೆ; ಇದು ಹಿಂದಿನ ಇತಿಹಾಸದ ಪದರಗಳನ್ನು ತನ್ನೊಳಗೆ ಹೊತ್ತಿರುವ ಧನಭಾಂಡಾರವಾಗಿದೆ.

ಅವತಾರದ ರಹಸ್ಯವನ್ನು ಹೊತ್ತಿರುವ ಈ ಪವಿತ್ರಾಲಯದ ಸ್ಪಂದಿಸುವ ಹೃದಯವು ಕೆಳಮಟ್ಟದಲ್ಲಿದೆ. ಆ ಮಟ್ಟದ ದೇವಾಲಯ ಮಂಕು ಬೆಳಕಿನ ವಾತಾವರಣದಲ್ಲಿ ಧ್ಯಾನಕ್ಕೆ ಪ್ರೇರೇಪಿಸುತ್ತದೆ; ಅದರ ಕೇಂದ್ರಬಿಂದು ಘೋಷಣೆಯ ಗವಿ. ಸಂತ ಫ್ರಾನ್ಸಿಸ್ ಇದನ್ನು ಹೀಗೆ ವರ್ಣಿಸುತ್ತಾರೆ: “ಇಲ್ಲಿಯೇ ಸರ್ವಶಕ್ತನಾದ ಪರಲೋಕಪಿತನು ತನ್ನ ದೂತನಾದ ಗಬ್ರಿಯೇಲನ ಮೂಲಕ ಪಿತನ ವಾಕ್ಯವನ್ನು ಪವಿತ್ರ ಮತ್ತು ಮಹಿಮೆಯಿಂದ ತುಂಬಿದ ಕನ್ಯಾ ಮರಿಯಾಳಿಗೆ ಪ್ರಕಟಿಸಿದನು; ಮತ್ತು ಅವಳ ಗರ್ಭದಿಂದ ನಿಜವಾದ ದುರ್ಬಲ ಮಾನವ ದೇಹವನ್ನು ಸ್ವೀಕರಿಸಿದನು.” ಇಲ್ಲಿ ಬೈಜ್ಯಾಂಟೈನ್ ಯುಗದ ಕಮಾನು ಮಂದಿರದ ಅವಶೇಷಗಳು ಗೋಚರಿಸುತ್ತವೆ. ಇನ್ನೂ ಕೆಳಗೆ ನಾಲ್ಕನೇ ಶತಮಾನಕ್ಕೆ ಸೇರಿದ ಆರಾಧನಾ ಕಟ್ಟಡದ ಅವಶೇಷಗಳಿವೆ. ಸಲಮೀಸಿನ ಎಪಿಫಾನಿಯಸ್ (ಸುಮಾರು ಕ್ರಿ.ಶ. 375) ಬರೆಯುವಂತೆ, ಟೈಬೇರಿಯಾಸ್‌ನ ಜೋಸೆಫ್ ಎಂಬ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಸ್ವೀಕರಿಸಿದ ನಂತರ ಯಹೂದ ಮತದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡು, ತನ್ನ ಮೂಲ ಊರಾದ ಸೆಪ್ಪೋರಿಸ್, ನಜರೇತ್ ಮತ್ತು ಕಪೆರ್ನೌಂನಲ್ಲಿಯೂ ದೇವಾಲಯಗಳನ್ನು ಕಟ್ಟಿದನು. ಪುರಾತತ್ತ್ವ ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟ ಅಮೂಲ್ಯ ವಸ್ತುಗಳಲ್ಲಿ ಒಂದು ಗ್ರೀಕ್ ಶಾಸನವುಳ್ಳ ಕಮಾನಿನ ಅಡಿಪಾಯ — “Xe Mapia”, ಅಂದರೆ “Chaire Maria”, ಅಂದರೆ “ಹರ್ಷಿಸು ಮರಿಯಾಳೇ” (ಲೂಕ 1:28) — ಇದಾಗಿದ್ದು, ದೇವದೂತನ ವಂದನೆಯ ಅತ್ಯಂತ ಹಳೆಯ ಪುರಾತತ್ತ್ವ ಸಾಕ್ಷ್ಯವಾಗಿದೆ. ಇದನ್ನು ವಂ. ಗುರು ಬೆಲ್ಲಾರ್ಮಿನೋ ಬಗಾಟ್ತಿ, OFM, ಅವರು 1955ರಲ್ಲಿ ಪತ್ತೆಹಚ್ಚಿದರು.

ಇಲ್ಲಿಯೇ “ಕೋನೋನನ ಗುಹೆ” ಎನ್ನಲಾಗುವ ಸ್ಥಳವೂ ಇದೆ. ಇದು ನಾಲ್ಕನೇ ಶತಮಾನದ ಅಂತ್ಯದ ವೇಳೆಯಲ್ಲಿ ಜೆರುಸಲೇಮಿನ ಕೋನೋನ ಎಂಬ ಧರ್ಮಸೇವಕನಿಂದ ಅಲಂಕರಿಸಲ್ಪಟ್ಟಿತ್ತು. ಪುಷ್ಪ ಅಲಂಕಾರಗಳಿರುವ ಈ ಸ್ಥಳವು ಮೂರನೇ ಶತಮಾನದ ರಕ್ತಸಾಕ್ಷಿಯ ನೆನಪಿಗೂ ಸಂಬಂಧಿಸಿದೆ; ಅವನ ಹೆಸರು ಕೂಡ ಕೋನೋನವೇ ಆಗಿದ್ದು, ಆತನು ತಾನು ನಜರೇತ್‌ನವನೂ ಕ್ರಿಸ್ತನ ಸಂಬಂಧಿಯೂ ಆಗಿದ್ದೇನೆ ಎಂದು ಧೈರ್ಯದಿಂದ ಘೋಷಿಸಿದ್ದನು.

ಕೆಳಮಟ್ಟಕ್ಕಿಂತ ಭಿನ್ನವಾಗಿ, ಬಸಿಲಿಕಾದ ಮೇಲ್ಮಟ್ಟವು ಬೆಳಕಿನಿಂದ ತುಂಬಿದ್ದು, ಧರ್ಮಸಭೆಯ ತಾಯಿ ಮರಿಯಾಳಿಗೆ ಸಮರ್ಪಿತವಾಗಿದೆ. ಎರಡನೇ ವ್ಯಾಟಿಕನ್ ಮಹಾಸಭೆಯ ಸಮಯದಲ್ಲಿ ನಿರ್ಮಿಸಲ್ಪಟ್ಟ ಈ ಬಸಿಲಿಕಾ, Lumen Gentium ದಸ್ತಾವೇಜಿನ ಎಂಟನೇ ಅಧ್ಯಾಯವಾದ “ಕ್ರಿಸ್ತ ಮತ್ತು ಧರ್ಮಸಭೆಯ ರಹಸ್ಯದಲ್ಲಿ ದೇವರ ತಾಯಿ ಪವಿತ್ರ ಕನ್ಯಾ ಮರಿಯಳು” ಎಂಬ ವಿಷಯದ ಜೀವಂತ ರೂಪವಾಗಿದೆ. ಕಂಚಿನ ಪ್ರವೇಶದ್ವಾರಗಳು “ಸುನ್ನತಿಯ ದೇವಾಲಯ” ಮತ್ತು “ಅನ್ಯಜನಾಂಗಗಳ ದೇವಾಲಯ”ವನ್ನು ಚಿತ್ರಿಸುತ್ತವೆ; ಇದನ್ನು ಲ್ಯಾಟಿನ್ ಶಾಸನಗಳು ಮತ್ತು ಹಳೆಯ ಹಾಗೂ ಹೊಸ ಒಡಂಬಡಿಕೆಯ ಘಟನಾವಳಿಗಳನ್ನು ಚಿತ್ರಿಸುವ ರಿಲೀಫ್ ಶಿಲ್ಪಗಳು ಸ್ಪಷ್ಟಪಡಿಸುತ್ತವೆ. ಒಳಗೆ, ಸಲ್‌ವಾತೋರೆ ಫಿಯುಮೆ ರಚಿಸಿದ ಅಪ್ಸಿನ ಮಹಾ ಮೋಜಾಯಿಕ್ “ಒಂದು, ಪವಿತ್ರ, ಕಥೋಲಿಕ ಮತ್ತು ಅಪೋಸ್ತೋಲಿಕ” ಧರ್ಮಸಭೆಯನ್ನು ಆಚರಿಸುತ್ತದೆ; ಹಿನ್ನಲೆಯಲ್ಲಿ ಮರಿಯಾಳ ಮಧ್ಯಸ್ಥಿಕೆ ಕಾಣುತ್ತದೆ. ತಲೆಕೆಳಗಿನ ಲಿಲ್ಲಿಯ ಆಕಾರದ ಗುಮ್ಮಟವು ನಿರ್ಮಲ ಕನ್ಯೆಗೆ ಸಲ್ಲಿಸಿದ ಗೌರವವಾಗಿದೆ. ಕೆಳಗಿನ ಘೋಷಣೆಯ ಗವಿಯಲ್ಲಿ ತನ್ನ “ಇಗೋ ನಾನಿದ್ದೇನೆ” (ಲೂಕ 1:38) ಎಂಬ ಸಮರ್ಪಣೆಯ ಮೂಲಕ, ಕನ್ಯೆಯ ಮುಖೇನ ಧರ್ಮಸಭೆ ಉಂಟಾಯಿತು; ಮತ್ತು ದೇವಪುತ್ರನಿಗೆ ಮಾನವ ದೇಹವನ್ನು ನೀಡುವ ಮೂಲಕ, ಕ್ರಿಸ್ತನ ದೇಹವಾದ ಧರ್ಮಸಭೆಯ ಆರಂಭವನ್ನೂ ಉದ್ಘಾಟಿಸಿದಳು.

ಗೋಡೆಗಳ ಬದಿಯಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಬಂದ ಮರಿಯಾ ಚಿತ್ರಗಳ ಗ್ಯಾಲರಿಯೊಂದು Magnificat ಪ್ರವಾದನೆಯ ನೆರವೇರಿಕೆಗೆ ಸಾಕ್ಷಿಯಾಗಿದೆ: “ಇಂದಿನಿಂದ ಎಲ್ಲಾ ಪೀಳಿಗೆಗಳೂ ನನ್ನನ್ನು ಧನ್ಯಳೆಂದು ಕರೆಯುವವು” (ಲೂಕ 1:48). ವಿಶೇಷವಾಗಿ ಏಷ್ಯಾ, ಆಫ್ರಿಕಾ ಮತ್ತು ಅಮೇರಿಕಾದಿಂದ ಬಂದ ಚಿತ್ರಗಳಲ್ಲಿ, ಪವಿತ್ರ ಕನ್ಯೆ ಮರಿಯಾಳ ಮುಖವು ವಿವಿಧ ಸಂಸ್ಕೃತಿಗಳ ಲಕ್ಷಣಗಳನ್ನು ತಾಳಿಕೊಂಡಿರುವುದು ಕ್ರೈಸ್ತ ಸಂದೇಶದ ವಿಶ್ವವ್ಯಾಪಕತೆಯನ್ನೂ ಅದರ ಸ್ಥಳೀಕರಣದ ಅಗತ್ಯವನ್ನೂ ತೋರಿಸುತ್ತದೆ.

ಪರ್ಯಾಯವಾಗಿ ಬಂದ ಇತಿಹಾಸಘಟ್ಟಗಳು

ನಜರೇತ್‌ನ ಇತಿಹಾಸವು ವೈಭವದ ಕ್ಷಣಗಳನ್ನೂ ನಾಶದ ಕ್ಷಣಗಳನ್ನೂ ಅನುಭವಿಸಿದೆ. ಬೈಜ್ಯಾಂಟೈನ್ ಯುಗದ ನಂತರ, ಕ್ರೂಸೇಡರ್‌ಗಳು ಇಲ್ಲಿ ಒಂದು ವಿಶಾಲ ದೇವಾಲಯ (70 x 30 ಮೀಟರ್) ಕಟ್ಟಿದರು; ಅದರ ಗೋಡೆಗಳ ಕೆಲವು ಭಾಗಗಳು ಇಂದಿನ ಕಟ್ಟಡದಲ್ಲಿಯೂ ಸೇರಿಕೊಂಡಿವೆ. ಆದರೆ 1187ರಲ್ಲಿ ಹತ್ತೀನ್ ಯುದ್ಧದಲ್ಲಿ ಕ್ರೈಸ್ತರ ಸೋಲು ಮತ್ತು 1263ರಲ್ಲಿ ಸುಲ್ತಾನ್ ಬೈಬರ್ಸ್‌ನ ವಿನಾಶಕಾರಿ ಆಕ್ರಮಣದಿಂದ ಬಸಿಲಿಕಾ ಶತಮಾನಗಳ ಕಾಲ ಅವಶೇಷಗಳಾಗಿಯೇ ಉಳಿಯಿತು. ಅದರ ಜೀರ್ಣೋದ್ದಾರ ಪವಿತ್ರ ಭೂಮಿಯ ಫ್ರಾನ್ಸಿಸ್ಕನ್ ಸಂರಕ್ಷಣೆಯ ಮೈನರ್ ಫ್ರಿಯರ್ಸ್‌ಗಳ ಧೈರ್ಯ ಮತ್ತು ಹಠದ ಫಲವಾಗಿದೆ. ಅನೇಕ ವಿಫಲ ಪ್ರಯತ್ನಗಳು ಮತ್ತು ಬಲಾತ್ಕೃತ ಹಿಂಜರಿತಗಳ ಬಳಿಕ, ಅವರು 1620ರಲ್ಲಿ ಅಲ್ಲಿಯೇ ಶಾಶ್ವತವಾಗಿ ನೆಲೆಸುವಲ್ಲಿ ಯಶಸ್ವಿಯಾದರು. 1697 ಮತ್ತು 1770ರ ನಡುವೆ, ಫ್ರಿಯರ್ಸ್‌ಗಳು ಆಕ್ರೆಯ ಪಾಷಾನಿಗೆ(ಅಲ್ಲಿನ ಸ್ಥಳೀಯ ಆಡಳಿತಗಾರ) ವಾರ್ಷಿಕ ತೆರಿಗೆ ಪಾವತಿಸಿ ಸಂಪೂರ್ಣ ಗ್ರಾಮವನ್ನೇ ಖರೀದಿಸಿದರು. ಆ ಕಾಲದಲ್ಲಿ ಆಶ್ರಮದ ಸಂರಕ್ಷಕರ ಅಧಿಕೃತ ಬಿರುದು “ನಜರೇತ್‌ನ ದಳಪತಿ” ಆಗಿತ್ತು; ಅವರು ಅಲ್ಲಿನ ಜನರ ನಾಗರಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಕಾರ್ಯ ವಹಿಸಿಕೊಂಡಿದ್ದರು.

ಬಸಿಲಿಕಾದಾಚೆ: ಸಂಗ್ರಹಾಲಯ ಮತ್ತು ಸಂತ ಜೋಸೆಫರ ದೇವಾಲಯ

ನಜರೇತ್ ಸಂಕೀರ್ಣವು ಇನ್ನೂ ಅನೇಕ ಇತಿಹಾಸದ ಖಜಾನೆಗಳನ್ನು ನೀಡುತ್ತದೆ. ಪುರಾತತ್ತ್ವ ಸಂಗ್ರಹಾಲಯವು ಕ್ರೂಸೇಡರ್‌ಗಳ ಕಾಲಕ್ಕೆ ಸೇರಿದ ಐದು ರೋಮನ್ ಕಂಬಶಿರೋಭಾಗಗಳನ್ನು ಸಂರಕ್ಷಿಸಿದೆ. ಅವುಗಳನ್ನು ವಂ. ಗುರು ಪ್ರೊಸ್ಪೆರೊ ವಿಯೋದ್, OFM, ಅವರು 1908ರಲ್ಲಿ ಪತ್ತೆಹಚ್ಚಿದರು; ನಗರ ಕುಸಿಯುವ ಮುನ್ನ ಕ್ರೈಸ್ತರು ಅವನ್ನು ಮರಳಿನಡಿ ಮುಚ್ಚಿಹಾಕಿದ್ದರಿಂದ ಅವು ಅತ್ಯಂತ ಉತ್ತಮ ಸ್ಥಿತಿಯಲ್ಲಿ ಉಳಿದಿದ್ದವು. ಅವುಗಳ ಕೆತ್ತನೆಗಳು ಮಧ್ಯಪೂರ್ವದಲ್ಲಿನ ಮಧ್ಯಯುಗೀನ ಕ್ರೂಸೇಡರ್ ಕಲೆಯ ಪ್ರಮುಖ ಸಾಕ್ಷಿಗಳಲ್ಲೊಂದು. ಅವು ಪವಿತ್ರ ಗ್ರಂಥ ಮತ್ತು ಅಪೋಕ್ರಿಫಲ್ ಗ್ರಂಥಗಳ ದೃಶ್ಯಗಳನ್ನು ಚಿತ್ರಿಸುತ್ತವೆ. ಸ್ವಲ್ಪ ದೂರದಲ್ಲೇ ಸಂತ ಜೋಸೆಫರ ದೇವಾಲಯವಿದೆ. ಇದು ಪರಂಪರೆಯ ಪ್ರಕಾರ ಪವಿತ್ರ ಕುಟುಂಬದ ಮನೆ ಮತ್ತು ಕಾರ್ಯಾಗಾರ ಎಂದು ಗುರುತಿಸಲ್ಪಡುವ ಗವಿಗಳು ಮತ್ತು ನೀರಿನ ಕೊಳಗಳ ಮೇಲೆಯೇ ನಿರ್ಮಿಸಲ್ಪಟ್ಟಿದೆ. ಪೂಜ್ಯ ಜಗದ್ಗುರು 6ನೇ ಪೌಲರು ನಜರೇತ್‌ಗೆ ಮಾಡಿದ ಯಾತ್ರೆಯ ಸಂದರ್ಭದಲ್ಲಿ ಇಲ್ಲಿಯೇ ಸುಂದರವಾದ ಭಾಷಣವೊಂದನ್ನು ಮಾಡಿದರು; ಅದರಲ್ಲಿ ಅವರು ಪವಿತ್ರ ಕುಟುಂಬದ “ಶಾಲೆ”ಯ ಕುರಿತು ಮಾತನಾಡಿದರು: ಇಲ್ಲಿ ನಾವು “ಕುಟುಂಬಜೀವನದ ಪಾಠವನ್ನು” ಕಲಿಯುತ್ತೇವೆ — ನಜರೇತ್ ಕುಟುಂಬಜೀವನದ ಅರ್ಥವನ್ನು, ಅದರ ಪ್ರೀತಿಯ ಸಮ್ಮಿಲನವನ್ನು, ಅದರ ಸರಳ ಮತ್ತು ಗಂಭೀರ ಸೌಂದರ್ಯವನ್ನು, ಅದರ ಪವಿತ್ರ ಮತ್ತು ಅಘಾತ್ಯ ಸ್ವಭಾವವನ್ನು, ಅದರ ಮಧುರ ಮತ್ತು ಅಪ್ರತಿಮ ತರಬೇತಿಯನ್ನು, ಸಮಾಜದ ಮಟ್ಟದಲ್ಲಿ ಅದರ ಅಡಿಪಾಯ ಮತ್ತು ಅತೂಲ್ಯ ಪಾತ್ರವನ್ನು ನಮಗೆ ಕಲಿಸಲಿ. ಹಾಗೆಯೇ ಕೆಲಸದ ಪಾಠವನ್ನೂ ಕಲಿಸಲಿ: “ಓ ನಜರೇತ್, ‘ಬಡಗಿಯ ಮಗನ’ ಮನೆಯೇ! ಇಲ್ಲಿ ನಾವು ಮಾನವ ಪರಿಶ್ರಮದ ಕಠಿಣ ಮತ್ತು ವಿಮೋಚಕ ಧರ್ಮವನ್ನು ಅರ್ಥಮಾಡಿಕೊಳ್ಳಲು ಮತ್ತು ಕೊಂಡಾಡಲು ಬಯಸುತ್ತೇವೆ; ಶ್ರಮದ ಘನತೆಯ ಪ್ರಜ್ಞೆಯನ್ನು ಪುನಃಸ್ಥಾಪಿಸಲು, ಕೆಲಸವು ಸ್ವತಃ ಒಂದು ಅಂತ್ಯವಾಗಲು ಸಾಧ್ಯವಿಲ್ಲ ಮತ್ತು ಅದು ಆರ್ಥಿಕ ಮೌಲ್ಯಗಳನ್ನು ಮೀರಿ - ಅದನ್ನು ಪ್ರೇರೇಪಿಸುವ ಮೌಲ್ಯಗಳಿಗೆ ಅನುಗುಣವಾಗಿ ಉಚಿತ ಮತ್ತು ಉತ್ಕೃಷ್ಟವಾಗಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಲು ನಾವು ಬಯಸುತ್ತೇವೆ. ಜಗತ್ತಿನ ಎಲ್ಲಾ ಕಾರ್ಮಿಕರಿಗೂ ವಂದನೆ ಸಲ್ಲಿಸಿ, ಅವರ ಮಹಾನ್ ಮಾದರಿಯಾದ, ಅವರ ದೈವಿಕ ಸಹೋದರಾದ, ಅವರ ಎಲ್ಲಾ ಹಕ್ಕುಗಳ ರಕ್ಷಕರಾದ ಕಪ್ರಭುವಾದ ಕ್ರಿಸ್ತನನ್ನು ಅವರಿಗೆ ತೋರಿಸಲು ಬಯಸುತ್ತೇವೆ!”

ಶಾಂತಿಯ ಸಂದೇಶ ಮತ್ತು ವಿನಂತಿ

ಇಂದು ನಜರೇತ್ ಗಡಿಯೂ ಆಗಿದೆ, ಸಂಗಮವೂ ಆಗಿದೆ. ಪವಿತ್ರ ಭೂಮಿಯಲ್ಲಿ ಕಾಲಕಾಲಕ್ಕೆ ಉದ್ಭವಿಸುವ ಉದ್ವಿಗ್ನತೆಗಳ ನಡುವೆಯೂ, ಈ ನಗರವು ಸಂಸ್ಕೃತಿಗಳೂ ಧರ್ಮಗಳೂ ಮುಖಾಮುಖಿಯಾಗುವ ಸಾಧ್ಯತೆಗೆ ಸಾಕ್ಷಿಯಾಗಿದೆ. ಬಸಿಲಿಕಾದ ಮುಂಭಾಗವು ತನ್ನ ಕಂಚಿನ ಬಾಗಿಲುಗಳು ಮತ್ತು ಕಲ್ಲಿನ ಶಿಲ್ಪಗಳ ಮೂಲಕ ರಕ್ಷಣೆಯ ಇತಿಹಾಸವನ್ನು ಹೇಳುತ್ತದೆ. ಅದರ ಶೃಂಗದಲ್ಲಿ ಯೋವಾನ್ನ ಸುವಾರ್ತೆಯಿಂದ ಪ್ರೇರಿತವಾದ ಕಂಚಿನ ಶಿಲುಬೆ ಮೂಲಕ, ಅವತಾರದ ರಹಸ್ಯವು ಕಲ್ವಾರಿಯಲ್ಲಿನ ನಮ್ಮ ರಕ್ಷಣೆಯ ಪೂರ್ಣತೆಗೆ ಕರೆದೊಯ್ಯುತ್ತದೆ. ಹೀಗೆ, ಕೆಳಮಟ್ಟದಲ್ಲಿ ತನ್ನ “ಇಗೋ ನಾನು” ಎಂಬ ಸಮರ್ಪಣೆಯ ಮೂಲಕ ಮರಿಯಾಳು ರಕ್ಷಕರ ತಾಯಿಯಾಗುತ್ತಾಳೆ (ಲೂಕ 1:26-38), ಮತ್ತು ಮೇಲ್ಮಟ್ಟದಲ್ಲಿ, ಶಿಲುಬೆಯ ಪಾದದಲ್ಲಿ, ಶಿಲುಬೆಗೆ ಹಾಕಲ್ಪಟ್ಟ ತನ್ನ ಪುತ್ರನು ಪ್ರೀತಿಸಿದ ಶಿಷ್ಯನನ್ನು ಸ್ವೀಕರಿಸುವಾಗ, ಧರ್ಮಸಭೆಯ ತಾಯಿಯಾಗುತ್ತಾಳೆ (ಯೋವಾನ್ನ 19:25-27).

ಬಸಿಲಿಕಾದ ರಚನೆಯೇ ಯಾತ್ರಿಕರಿಗೆ, ನಜರೇತ್‌ನಂತಹ ಸಣ್ಣ ಮತ್ತು ಅಪ್ರಸ್ತುತವೆನಿಸಿದ ಸ್ಥಳದಲ್ಲಿ ದೇವಪುತ್ರನ ಅವತಾರ ಸಂಭವಿಸಿರುವುದು  ವಿಮೋಚನೆಯನ್ನು ತೋರಿಸುತ್ತದೆ. ನಜರೇತ್, ಬೆತ್ಲೆಹೆಮ್ ಮತ್ತು ಜೆರುಸಲೇಮ್ ಬೇರ್ಪಡಿಸಲಾಗದವು: ಯೇಸುವಿನ ಅವತಾರ, ಜನನ, ಜೀವನ, ಪಾಡು, ಮರಣ ಮತ್ತು ಪುನರುತ್ಥಾನ ಇವೆಲ್ಲವೂ ದೇವರು ನಮ್ಮನ್ನು ವಿಮೋಚಿಸಿ ತನ್ನ ಮಕ್ಕಳಾಗಿಸಲು ಬಯಸಿದ ಒಂದೇ ರಹಸ್ಯಮಯ ಪ್ರಯಾಣದ ಭಾಗಗಳಾಗಿವೆ. ಸಂತ ಪೌಲರು ನಮಗೆ ನೆನಪಿಸುವಂತೆ, “ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು.ನೀವು ದೇವರ ಮಕ್ಕಳಾಗಿರುವುದರಿಂದಲೇ, “ಅಪ್ಪಾ, ತಂದೆಯೇ,” ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. ” (ಗಲಾತ್ಯರಿಗೆ 4:4-6).

ಪವಿತ್ರ ಭೂಮಿಗೆ ಸಂಬಂಧಿಸಿದ ತನ್ನ ಮಾರ್ಗದರ್ಶಕ ಕೃತಿಯಲ್ಲಿ ವಂ.ಗುರು ಗೈಗರ್, Patrona Germaniae ಅನ್ನು ಚಿತ್ರಿಸುವ ಸೆರಾಮಿಕ್ ಶಿಲ್ಪಪಟದ ಅಳವಡಿಕೆ ಮತ್ತು ಅದರ ಸಂಕೇತಾರ್ಥದ ಬಗ್ಗೆ ವಿಶಿಷ್ಟ ಇತಿಹಾಸಘಟನೆಯನ್ನು ಉಲ್ಲೇಖಿಸುತ್ತಾರೆ: “ತನ್ನ ಉಡುಪಿನ ಮಡಿಲಿನಲ್ಲಿ ಇಬ್ಬರು ಮಕ್ಕಳನ್ನು ಆಶ್ರಯಿಸುವ ಮಡೊನ್ನಾಳ ಚಿತ್ರ ಅದು. ಒಬ್ಬ ಮಗು ಪೂರ್ವದಿಂದ, ಇನ್ನೊಬ್ಬ ಪಶ್ಚಿಮದಿಂದ. ಅವರ ನಡುವೆ ಒಂದು ಗೋಡೆ ಇದೆ; ಆದರೂ ಇಬ್ಬರೂ ತಮ್ಮ ಎದುರುಬದಿಯಿಂದ ಪರಸ್ಪರ ಕೈಚಾಚುತ್ತಾರೆ. ಈ ಚಿತ್ರ ವಿಶೇಷವಾಗಿ ಪ್ರಭಾವಶಾಲಿಯಾಗಿರುವುದು, ಏಕೆಂದರೆ 1989ರ ಅಕ್ಟೋಬರ್‌ನಲ್ಲಿ ಬರ್ಲಿನ್ ಗೋಡೆ ಕುಸಿದದ್ದು, ಆ ಶಿಲ್ಪಪಟವನ್ನು ನಜರೇತ್‌ಗೆ ತಂದ ಕೆಲವು ವಾರಗಳ ನಂತರವೇ.” ನಮ್ಮ ಪ್ರಾರ್ಥನೆಯೂ ನಮ್ಮ ಆಶೆಯೂ ಇದೇ: ಪವಿತ್ರ ಭೂಮಿಯಲ್ಲಿಯೂ ಹಾಗೂ ಜಗತ್ತಿನಾದ್ಯಂತವೂ ದ್ವೇಷದ ಎಲ್ಲಾ ಗೋಡೆಗಳು ಕುಸಿಯಲಿ. ಅದಕ್ಕಾಗಿಯೇ ಮರಿಯಳು ದೇವಪುತ್ರನಿಗೆ ಜನ್ಮ ನೀಡಿ ಲೋಕಕ್ಕೆ ತಂದಳು. ಅದಕ್ಕಾಗಿಯೇ ದೇಹಧಾರಿಯಾದ ದೇವಪುತ್ರನಾದ ನಜರೇತ್‌ನ ಯೇಸು ಶಿಲುಬೆಯ ಮೇಲೆ ಮರಣವನ್ನೂ ಸ್ವೀಕರಿಸಲು ಸಿದ್ಧನಾದನು. ಮತ್ತು ಅದಕ್ಕಾಗಿಯೇ ಆತನು ಧರ್ಮಸಭೆಯನ್ನು ಸ್ಥಾಪಿಸಿದನು (ಎಫೆಸಿಯರಿಗೆ 2:13-20).


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

12 ಮಾರ್ಚ್ 2026, 20:50